ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Thursday 26 November 2015

ನಾನು ಕವಿಯಾಗುಳಿಯುವುದು?


ಮಿಸುಕಾಡುತ್ತಿದ್ದ
ಕವಿತೆಯನ್ನು
ಅರ್ಧಕ್ಕೆ ತುಂಡರಿಸಿ
ಅಪೂರ್ಣವಾಗುಳಿಸಿದ
ಪಾಪಕ್ಕೆ,
ರಟ್ಟೆಯ ಬೆವರು, ಕರುಳ ಹಸಿವು,
ಕಣ್ಣೀರ ಬಿಸುಪು,
ಹುಟ್ಟು ಸಾವು, ಕ್ಲೀಷೆ - ಸಾಂತ್ವನ,
ಆದರದ ಭಾವಗಳು,
ಎಲ್ಲವೂ ಅಸಹಕಾರ ಹೂಡಿ,
ಲೇಖನಿಯಲ್ಲಿಳಿಯುತ್ತಿಲ್ಲ...

ತಿಂಗಳೊಪ್ಪತ್ತಿಗೆ ಮುಗಿದು
ಜೇಬು ಹರಿದ
ಖಾಲಿ ಸಂಬಳಗಳು,
ವ್ಯಾಪಾರದಲ್ಲೇ ಮುಗಿದುಬಿಡುವ
ಒಲವು, ದಾಂಪತ್ಯ,
ಹಸೆ ಹೊಸುಗೆ, ಪೋಲಿತನಗಳು,
ಆಧ್ಯಾತ್ಮ, ಮೌನ, ಧ್ಯಾನ
ಎಂದು ದಿಗಿಲ್ಹತ್ತಿಸಿ
ಭ್ರಮೆಯಾಗುವ ನಕಲಿತನಗಳು,
ಯಾವುವೂ ಸ್ಫುಟವಾಗುತ್ತಿಲ್ಲ,
ಭಾವಸೆಲೆಯಾಗುತ್ತಿಲ್ಲ...

ದೇಹಿ ಎಂದವನ ಹೊಟ್ಟೆ ತುಂಬಿಸದೆ
ಅಭಿಷೇಕಕ್ಕೆ ಎರವಾದ ಹಾಲು,
ಬತ್ತಿದೆದೆಯ ಕಚ್ಚಿ
ಬಾಯೊಣಗಿಸಿಕೊಳ್ಳುವ
ಅಪೌಷ್ಠಿಕ ಮಗು,
ಮಿಷಿನರಿಗಳ ಹಣದ ದಾಹಕ್ಕೆ
ಸೊರಗಿ ಕಣ್ಣೀರು ಹರಿಸುತ್ತ
ಶಿಲುಬೆಗೊರಗಿ ನಿಂತ ಯೇಸು,
ಬುರ್ಖಾದೊಳಗೆ ಕಣ್ಣೀರು ಸುರಿಸುವ
ಇಂಝಮಾಮನ ಆರನೇ ಪತ್ನಿ,
ದಲಿತನನ್ನು ಒಳಗೆ ಕೂಡದ
ಮಹಾಮಹಿಮ ಪರಮಾತ್ಮನ
ದೇವಳಗಳು, ಗೋಮಾತೆ,
ಮನಷ್ಯರನ್ನು ಕೊಂದು ಜಿಹಾದಿಗೆ
ಕುರಾನಿನ ಬಣ್ಣ ಹಚ್ಚುವ
ISIS ಮಹಾತ್ಮರು,
ಯುದ್ಧದ ಅಮಲೇರಿಸಿಕೊಂಡ
ಅಮೇರಿಕದಂತಹ ದೇಶಗಳು,
ಯಾವುವೂ ನನ್ನೊಳಗೆ
ಸಂವೇದನೆ ಹುಟ್ಟಿಸುತ್ತಿಲ್ಲ;
ಕಾವಲು ಪಡೆಗಳ ನಡುವೆ?

ಹೀಗಿರುವಾಗ ಅನಿಸಿದ್ದನ್ನು ಬರೆದು,
ನಾನು ಕವಿಯಾಗುಳಿಯುವುದು
ಕಷ್ಟದ ಮಾತೆ? ಕನಸಿಂದೆದ್ದು
ಮೈ ಚಿವುಟಿಕೊಂಡೆ,
ನಿಜ ನಿಜ ನೋಯುವುದು?

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Saturday 24 October 2015

ಕವಿ ನಾನು; ಕೊಲೆಗಡುಕನಲ್ಲ!


ಕೈಗೆ ಕಟ್ಟಿರುವ
ಬೇಡಿಗಳನ್ನೆಲ್ಲಾ ಬಿಡಿಸಿ
ಬಿಡುಗಡೆ ನೀಡಿ ಸ್ವಾಮಿ,
ನಾನು ಕವಿಯಷ್ಟೆ,
ಕೊಲೆಗಡುಕನಲ್ಲ!

ಗಂಟಲು ಬಿಗಿದು
ಉಸಿರುಗಟ್ಟಿಸಬೇಡಿ
ದಮ್ಮಯ್ಯ;
ಬರೆದುದರಲ್ಲೇ ಉಸಿರಾಡುವ ನಾವು
ಸತ್ಯ ನುಡಿಯುತ್ತೇವೆಂದು
ಭಯವೆ?
ಬನ್ನಿ ನಿಮ್ಮ ಕೆಂಪು ಬಣ್ಣದ
ಕೋವಿಗೆ ಕೊರಳು ಕೊಡಲು
ಸಿದ್ಧರಿದ್ದೇವೆ,
ಕೊಂದುಬಿಡಿ ಬದುಕಿಕೊಳ್ಳುತ್ತೇವೆ!

ಅದಕ್ಕೂ ಮೊದಲೆ ಹೇಳಿಬಿಡುತ್ತೇನೆ,
ನನ್ನ ಸಾವಿನ ಘೋರಿ,
ನಿಮಗೆ ಮಹಲಂತೂ ಅಲ್ಲ...
ನಿಮ್ಮ ಮದ್ದು ಗುಂಡು,
ಕೋವಿ, ಕತ್ತಿಗಳಿಗೆ ಪ್ರತಿಯಾಗಿ
ನನ್ನ ನೀಲಿ ಶಾಯಿ ಹರಿಯುತ್ತದೆ,
ತಾಕತ್ತಿದ್ದರೆ
ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಿ;
ರಕ್ತ ಬೀಜಾಸುರನ
ವಂಶಸ್ಥರು ನಾವು ನಿಮಗೀಗಾಗಲೆ
ಗೊತ್ತಿರಬೇಕಲ್ಲ?
ಈಗಾಗಲೇ ಲಕ್ಷಾಂತರ ಅನಂತ ಮೂರ್ತಿಗಳು,
ಕಲಬುರ್ಗಿಗಳು, ಪನ್ಸಾರೆಗಳ
ಉಪಟಳದಿಂದ ಬಸವಳಿದಿದ್ದೀರಿ?!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Saturday 29 August 2015

ಅದೊಂದು ಕೊರತೆ!


ಅದೊಂದು ಕೊರತೆಯಿದೆ,
ಮನೆಗೆ ತಡವಾಗಿ ಬಂದಾಗ
'ಎಲ್ಲಿ ಹೋಗಿದ್ಯೋ ಇಷ್ಟ್ ಹೊತ್ತು?'
ಎಂದು ರೋಫು ಹಾಕಿ
ಭದ್ರಕಾಳಿಯಾಗುವ ತಂಗಿಯದು,
ಅವಳನ್ನು ಛೇಡಿಸಿ ಅಳಿಸಿ
ಕಿತ್ತಾಡಿ, ಮಾತು ಬಿಟ್ಟು...
ಓಡಿ ಹೋಗಿ ಬಿಗಿದಪ್ಪಿ,
'ಸಾರಿ ಕಣಪ್ಪಿ' ಎಂದು
ಲಲ್ಲೆಗರೆಯುವ ಕನಸು ಕಂಡಾಗೆಲ್ಲಾ
ಕಣ್ಣೀರು ಕೂಡುತ್ತವೆ!

ಅದೊಂದು ಕೊರತೆಯಿದೆ,
ನಾನಿರುವುದೇ ಹೀಗೆ,
ಏನಿವಾಗ? ಹಾಗೆ ಹೀಗೆ
ಎಂದು ಮೊಂಡು ಮಾಡುವಾಗೆಲ್ಲಾ
ನನ್ನ ಮೊಂಡುಗಳನ್ನೆಲ್ಲಾ ಮುದ್ದಿಸಿ
ತಿದ್ದಿ, ತೀಡಿ
ಬದುಕಿನ ದಾರಿ ತೋರುವ,
ಬಿದ್ದಾಗ
ಅಮ್ಮನಿಗಿಂತ ಮೊದಲೇ
ಓಡಿ ಬಂದು ಸಂತೈಸುವ
ಅಕ್ಕನಿಲ್ಲ ಎಂಬುದನ್ನು ನೆನೆವಾಗೆಲ್ಲಾ
ಅದೊಂದು ಕೊರತೆಯಿರುತ್ತದೆ!

ಜಗಳವಾಡಿ ಬೈದು,
ಸೂಕ್ಷ್ಮತೆಗಳನ್ನು ಮೀರಿ
ಆರೊಗೆಂಟಾಗಿ ನಡೆದುಕೊಳ್ಳುವಾಗೆಲ್ಲಾ
ಕಣ್ಣೀರಾಗುವ 'ಅವಳು'
'ನಿನಗೊಬ್ಬಳು ತಂಗಿನೋ, ಅಕ್ಕನೋ ಇರ್ಬೇಕಿತ್ತು'
ಅಂದಾಗೆಲ್ಲಾ ಅನಿಸುತ್ತದೆ,
ಹೌದು ಅದೊಂದು ಕೊರತೆಯಿದೆ,
ಈ ಸಮಪಾಕದ ಬದುಕೊಳಗೆ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Monday 3 August 2015

ಬಯಲ ಬುದ್ಧ!


ಅಮಲೇರಿದ ಬುದ್ಧನಂತೆ
ಕಣ್ಣುಮುಚ್ಚಿ ಕುಳಿತುಬಿಡುತ್ತೇನೆ,
ಕತ್ತಲೆ ರಾತ್ರಿಯಲ್ಲಿ
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು
ಪಹರೆಗೆ ನಿಲ್ಲುವ
ಸಾವಿರ ಆಸೆಗಳಿಗೆ
ನಾನು ಬುದ್ಧ ಎಂಬ ಸುಳ್ಳು ಹೇಳುತ್ತೇನೆ,
ನಿಂತ ನೆಲ ಕುಸಿಯುತ್ತದೆ,
ಆಯ ತಪ್ಪುತ್ತದೆ,
ಪಾಯ ತೋಡುತ್ತಿರುವ ಸಮಾಧಿಗೆ
ಬೆಳಕು ಹಿಡಿದು ನಿಂತ
ನೋವುಗಳನ್ನು ಕೈಯಲ್ಲಿ ಹಿಡಿದು
ಕೊರಳಿಗೆ ಹಾಕಿಕೊಂಡು
ನಗುತ್ತ ನಿಂತಿದ್ದಾನೆ ಬುದ್ಧ,
ಕೊರಳ ಹಾರದ ಸಮೇತ
ಆತ ಅಂಗೂಲಿ ಮಾಲನನ್ನು ಹೋಲುತ್ತಿದ್ದಾನೆ,
ನಾನು ಕೇಳಿದೆ;
ನೀನೇ ಏನು ಬುದ್ಧ ಭಗವಾನ?
ಅಲ್ಲಪ್ಪ ನಾನು ಬರಿಯ ಬುದ್ಧ,
ಅವ ಹೇಳುತ್ತಾನೆ,
ಇದೇನಿದೆ ಇಷ್ಟೋಂದು ನೋವಿನ ಹಾರಗಳು,
ಅಂಗೂಲಿ ಮಾಲನಿಂದ
ಎರವಲು ಪಡೆದೆಯೆ? ನನ್ನ ಮಾತು,
ಅವನೊಬ್ಬನದಷ್ಟೇ ಅಲ್ಲ
ನೋಡು ನಿನ್ನದೂ ಇದೆ,
ಎಂದು ಒಂದನ್ನೆತ್ತಿ ತೋರಿದ,
ಹೌದೌದು,
ಇದನ್ನೆಲ್ಲಾ ಇಟ್ಟುಕೊಂಡು ಏನು ಮಾಡ್ತೀಯೋ ಪುಣ್ಯಾತ್ಮ?
ನಾನು ಬೆರಗಾಗುತ್ತಿದ್ದೆ,
ಒಂದೊಂದು ನೋವಿನ ಹಾರಕ್ಕೂ
ಒಂದೊಂದು ದೀಪದಂತೆ
ಮಾರುತ್ತಿದ್ದೇನೆ,
ನೋವಿನ ಹಾರಗಳಿಂದ
ದೀಪಗಳ ಬತ್ತಿ ಹೊಸೆಯುತ್ತೇನೆ ಎಂದ,
ನಾನು ಮೌನಕ್ಕೆ ಸಿಕ್ಕುತ್ತಲೇ,
ಹೊರಡಲನುಮತಿ ಕೊಡೆನ್ನುತ್ತಾನೆ,
ಕತ್ತಲಾಯಿತು,
ದೀಪ ಹಚ್ಚಿಟ್ಟೆ, ಬುದ್ಧ ಬೆಳಕಾಗಿದ್ದ,
ಊರು ಬೆಳಗುವುದರೊಳಗೆ
ಅವನಿಗೆಷ್ಟು ಕಾಲ ಬೇಕೋ?
ನಾನು ಬಯಲಾದರಷ್ಟೇ
ಅವನಾಗುತ್ತೇನೆಂಬ ಅರಿವಾವರಿಸುತ್ತಿದೆ!


--> ಮಂಜಿನ ಹನಿ

ಚಿತ್ರಕೃಪೆ: ಕೃಷ್ಣ ಗಿಳಿಯಾರ್

Wednesday 8 July 2015

ಎಲ್ಲಾ ಎಂದಿನಂತೆಯೇ ಇದೆ...


ಎಲ್ಲಾ ಎಂದಿನಂತೆಯೇ ಇದೆ,
ಬಿಟ್ಟುಹೋದ
ಕಾಲದ ನಂತರವೂ
ಈ ಮುಖ ಪುಸ್ತಕದ ಹಾಳೆಗಳು
ಮೊದಲಿನಂತೆಯೇ ಇವೆ,
ಕುದಿವ ಕಾವು, ಒಡಲ ಬೇಗೆ,
ಮೈಥುನದ ಹಸಿವು,
ಸಂಜೆಗತ್ತಲ ಜೊಂಪೇರಿಸುವ
ಸುರಪಾನದಮಲು,
ನಶೆ, ನಾಶವಾಗದ ನಶೆಯ ಕಡಲು,
ಬದುಕು ಕಟ್ಟಲಾಗದ ಕರ್ಮಕ್ಕೆ
ತತ್ವಪದವಾಡುವ ಒಳಗುಟ್ಟು,
ಏನೂ ಬದಲಾಗದ ಮುಖದ ಹೊತ್ತಿಗೆ,
ತುತ್ತಿಗೆ ಮೈನವಿರೇಳುವ ಕಂಪನ,
ಏನು ತಾನೆ ಬದಲಾದೀತು?
ನಾನು? ನೀನು ಬಿಟ್ಟು ಹೋದ ಮಾತ್ರಕ್ಕೆ?

ನೋವುಗಳಲ್ಲಿ ನೆನಪಾಗುತ್ತಿದ್ದೆ,
ಬಿಕ್ಕುವಷ್ಟು,
ಕಣ್ಣು ತುಂಬಿ ಉಕ್ಕುವಷ್ಟು,
ಈಗಿಲ್ಲ...
ಹೈಕು ಸಿಗದ ನಿರಾಸೆಗೆ
ಬೀರು ಬಿಟ್ಟು ನೋವು ಕುಡಿದು,
ಮೊಸರನ್ನ ತಿಂದು
ತಣ್ಣಗೆ ಮಲಗಿಬಿಟ್ಟಿದ್ದೆ;
ಅಂತೆಯೇ ಬದುಕು ನಿಲ್ಲದೆ ಹೊರಟುಬಿಡುತ್ತದೆ,
ವರ್ಚುಯಲ್ ಬದುಕಿನ
ಕೊಂಡಿ ಕಳಚುತ್ತಾ ವಾಸ್ತವಕ್ಕೆ,
ಈಗೀಗ ನೀನ್ಯಾರೆಂದೂ ನೆನಪಾಗುವುದಿಲ್ಲ,
ಆಗೊಮ್ಮೆ, ಈಗೊಮ್ಮೆ ಅವಳ ಛೇಡಿಸುವ
ಅಕ್ಕ ಅನ್ಬೇಕಾ ಅವ್ಳ್ನಾ?
ಅನ್ನುವ ಮಾತುಗಳಿಗೆ,
ನಿಂಗವ್ಳ್ಯಾವ ಅಕ್ಕ? ಕೊಡ್ತೀನ್ ನೋಡು
ಎಂಬ ನನ್ನ ಹುಸಿಮುನಿಸ ಹೊರತು...
ಸದ್ಯಕ್ಕೆ ಮುನ್ನುಡಿ, ಬೆನ್ನುಡಿಗಳಿಲ್ಲದ
ಕವನ ಸಂಕಲನವೊಂದು
ಕಪ್ಪು ಕಾಗದದ ಹೂವಾಗುವುದು ತಪ್ಪಿ
ನಿಟ್ಟುಸಿರುಬಿಟ್ಟಿದೆ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Thursday 18 June 2015

ಶೀಲ ಅಶ್ಲೀಲಗಳಾಚೆ


ಶೀಲ ಅಶ್ಲೀಲಗಳನ್ನು ಮೀರಿ
ನಾವು ಬರೆಯುವುದೇ ಹೀಗೆ,
ಖುಷಿಯ ಉಂಡು ಬಡಿಸುವ,
ತಣಿಸಿ ತಣಿಯುವ,
ಉತ್ಕೃಷ್ಟತೆಯ ವ್ಯಸನವಿರದೆ
ಶರಣಾಗುವ
ಪ್ರೇಮ, ಕಾಮಗಳ ಬಗ್ಗೆ
ಬರೆಯುತ್ತೇವೆ,
ಕೂಡದೆ ಪಲ್ಲವಿಸಿ
ಗರ್ಭವಲ್ಲದ ಬೇರೊಂದು
ಪವಿತ್ರ ಸ್ಥಳದಿಂದ ಉದುರಿ ಬಿದ್ದವರೆ
ಕ್ಷಮಿಸಿ,
ನಾವು ಬರೆಯುವುದೇ ಹೀಗೆ!

ಬೆತ್ತಲನ್ನು ಬೆತ್ತಲಾಗಿಯೂ,
ಕತ್ತಲನ್ನು ಕತ್ತಲಾಗಿಯೂ,
ಬೆವರನ್ನು ಬೆವರಾಗಿಯೂ,
ಹರವನ್ನು ಹರವಿದಂತೆಯೂ,
ಬೆದರದೆ, ಚದುರದೆ
ಕಟ್ಟಿಕೊಡುತ್ತೇವೆ,
ಆಧ್ಯಾತ್ಮ, ಶೂನ್ಯ, ಸೊನ್ನೆಗಳಿವೆ
ಕಾಮದಲ್ಲಿ,
ಕೂಡಿಕೆ, ಕಳೆಯುತ್ತವೆ
ಪ್ರೇಮದಲ್ಲಿ
ಎಂಬ ಸುಳ್ಳನಾಡುವುದಿಲ್ಲ,
ಅನುಭವಕ್ಕೆ ಬಂದದ್ದು ಪದ್ಯ,
ಕ್ಷಮಿಸಿ,
ನಾವು ಬರೆಯುವುದೇ ಹೀಗೆ!

ಸಿಕ್ಕಷ್ಟು ಬಾಚಿಕೊಂಡು,
ಆಸೆಯ ಬೀಜಗಳಿಗೆ
ಫಸಲು ಬೆಳೆಯುವ ಕನಸು,
ಭವಿತವ್ಯದ ಬದುಕಿಗೆ
ಕಣ್ಣು ಬಾಯಿ ಬಿಟ್ಟು
ಕಾದು ಕುಳಿತಿರುತ್ತೇವೆ,
ಪ್ರಾಪಂಚಿಕ ಸುಖಗಳಿಗೆ
ಜೋತು ಬಿದ್ದೆವು?
ನೀವು ಆರೋಪಿಸುವುದಾದರೆ,
ಹೌದು,
ನಾವು ವಾಸ್ತವಗಳಿಗೆ
ಬೇರು ಬಿಟ್ಟಿದ್ದೇವೆ,
ಸಸಿಗಳು ಡೌನ್ ಟು ಅರ್ಥ್,
ನಾವು ಬರೆಯುವುದೇ ಹೀಗೆ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Thursday 4 June 2015

ಪದಗಳಿಗೆ ಪದ್ಯ ಕಟ್ಟುವ ಕಿಮ್ಮತ್ತಿಲ್ಲ


ಪದಗಳಿಗೆ ಪದ್ಯ ಕಟ್ಟುವ
ಕಿಮ್ಮತ್ತಿಲ್ಲ,

ಮರಳಿ ಬರುವ ಪದಗಳಿಗೆ
ಅರವತ್ತರ ಅರಳು ಮರಳು,
ನಿನಾದಕ್ಕೆ ಪದ ಹೆಕ್ಕಿ,
ಹುಕ್ಕಿನಲ್ಲಿ ಸಿಕ್ಕಿಸಿ
ಹೊಸೆದ ಸಾಲೊಳಗೆ ಪದ್ಯವೆಲ್ಲಿ?

ಅಭಿವ್ಯಕ್ತಿಯ ಅಡವಿಟ್ಟು,
ಚೌಕಟ್ಟಿನ ಕೊರಳುಪಟ್ಟಿ
ಬಿಗಿದುಕೊಂಡ ಭಾವಗಳಲಿ,
ನರಳಿ ಸತ್ತ ನೋವಿದೆ,
ಕಟ್ಟಕುಳಿತ ಪದ್ಯವೆಲ್ಲಿ?

ಸಂಜೆಯ ಕೆಂಧೂಳಿನ
ಹಿಂದೆ ಓಡಿ ಬಸವಳಿದು,
ದಾಹಕ್ಕೆ ಬೀರಿಳಿಸಿ
ಎಚ್ಚರ ತಪ್ಪುವಂತೆ ಮತ್ತೇರಿದೆ,
ನಶೆಯೊಳಗೆ ಪದ್ಯವೆಲ್ಲಿ?

ಬಿಡಿಸಿಕೊಂಡು ಹಗುರಾದೆ,
ಅಂಥದೊಂದು ಹುಂಬ ಆಸೆ,
ಸಮಾಜದ ಕಟಕಟೆಯಲಿ
ತೊಡರಿ ಬಿದ್ದ ಅವಮಾನ
ಸ್ವಾತಂತ್ರ್ಯದ ಪದ್ಯವೆಲ್ಲಿ?

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Friday 22 May 2015

ನಾನು ಪದ್ಯ ಮಾರುವುದನ್ನು ಬಿಟ್ಟಿದ್ದೇನೆ,


ಕಟ್ಟು ಕರದಂಟು, ಕೀರೆ
ಕಿಲ್ ಕೀರೆ ಸೊಪ್ಪುಗಳ ನಡುವೆ
ಅಮಾಯಕವಾಗಿ ಬಿದ್ದ
ಬೆವರ ಹನಿ,
ಚಿಲ್ಲರೆ ಕಾಸಿನ ಅಸಹಾಯಕತೆ
ಮತ್ತು
ನೂರು ರೂ ಬಂಧದ ಆಸೆಗೆ
ಹಲ್ಲು ಕಿರಿದ ಒಳಗಿಸೆಗಳು,
ಆಗಾಗ ಒಂದೋ ಎರಡೋ ಕಟ್ಟುಗಳ
ಹೆಚ್ಚುವರಿ
ಕೈ ಬದಲಾವಣೆಗೆ
ಚಲಾವಣೆಯಾಗುವ ಅಯ್ಯನ್, ಅಮ್ಮನ್
ಉವಾಚಗಳು;
ಬೈಗುಳಗಳು ಪದ್ಯಗಳಾಗಿವೆ!

ನೆನ್ನೆ ಬಿದ್ದ ಮಳೆಗೆ
ಹದಕೆ ಬಂದ ಇಳೆಗೆ
ಮಿಲನದ ಸಂಭ್ರಮ,
ಮಳೆ ಗಂಡೋ ಹೆಣ್ಣೋ?
ಇಳೆ ಸಲಿಂಗಿಯೋ?
ಎಂಬ ಜಿಜ್ಞಾಸೆಗಳು,
ಮೊನ್ನೆ ಅಮೇರಿಕಾದ ವಾಷಿಂಗ್ಟನ್ನಲ್ಲಾದ
ಸ್ನೋ ಫಾಲಿಗದೆಷ್ಟು ಜನರ
ಜೀವನ ಅಸ್ತವ್ಯಸ್ತವಾಗಿದೆಯೋ
ಎಂಬ ಆತಂಕಗಳು,
ನಿಗೂಢ ಚರ್ಯೆ ಹೊತ್ತ
ಪಶ್ಚಿಮ ಘಟ್ಟಗಳು,
ಮಂಜು ಹೊತ್ತು ಮಳೆ ಕರೆದಾಗ
ಮಿದುವಾಗುವ ಕವಿ ಹೃದಯ
ಹೆಣ್ಣೋ ಗಂಡೋ?
ಕುತೂಹಲಗಳಿಗೆ ಕವಿತೆ
ಬರೆಯುತ್ತದೆ,
ನಾನವುಗಳನ್ನೆಲ್ಲಾ ಬುಟ್ಟಿಗಾಕಿಕೊಂಡು
ಮಾರಲು ಹೊರಡುತ್ತಿದ್ದೆ!

ಒಂದು ವರ್ಷದಿಂದೀಚೆಗೆ
ಮಹಾನ್ ಆದ ಭವ್ಯ ಭಾರತದ
ಕನಸುಗಳನ್ನು
ಅಪ್ಪಟ ವ್ಯಾಪಾರಿಯೊಬ್ಬ ಮಾರುತ್ತಾನೆ,
ನನಸು ಮಾಡಿಸಿಕೊಳ್ಳಲಾಗದ
ಅಸಹಾಯಕ ಜನ
ಕೊಳ್ಳುತ್ತಾರೆ, ಕೊಳ್ಳುತ್ತಾರೆ...
ಬೀದಿ ಬದಿಯಲ್ಲೇ ಬಿದ್ದ ಬಡತನ,
ನಿರ್ಗತಿಕರ ಅನಾಥತೆ,
ಕರುಳು ಸುತ್ತುವ ಹಸಿವು,
ದುಡಿಯಗೊಡದ ನಿರುದ್ಯೋಗಗಳು
ವಿದೇಶ ಸಂಚಾರಿಯ ಫ್ಲೈಟ್ ಮೋಡಿನಲ್ಲಿ
ಸದ್ದಡಗಿಸುತ್ತವೆ,
ಒಂದು ವರ್ಷವಾದರೂ ಏನೂ ಬದಲಾಗಿಲ್ಲ
ಎಂಬ ಹತಾಶೆಯ ಪದ್ಯವೊಂದಿತ್ತು
ಭಾರೀ ಬೆಲೆ ಬಾಳುವಂಥದ್ದು,
ಈಗೆಲ್ಲಿ, ಮಾರುವುದಿಲ್ಲ!

ಪದ್ಯವನ್ನು ಸಗಟು ಸಗಟು
ಮಾರಿ ಬಂದ ಹಣದಲ್ಲಿ
ಬನ್ನು ಕೂಡ ಕೊಳ್ಳಲಾಗದ
ನಿರಾಸೆಗೆ,
ಮುಟ್ಟಿ ಮುಟ್ಟಿ ಒದ್ದೆಯಾದ
ಖಾಲಿ ಜೇಬು ನೋಡಿಕೊಳ್ಳುವಾಗ
ಅನಿಸುತ್ತದೆ; ಇಲ್ಲಿ
ಕನಸುಗಳನು ಮಾರುವುದು ಮೋಜು,
ವಾಸ್ತವದ
ಪದ್ಯಗಳನ್ನು ಮಾರುವುದು ಜೂಜು,
ಅದಕ್ಕೆ ನಾನು ಪದ್ಯ ಮಾರುವುದನ್ನು ಬಿಟ್ಟಿದ್ದೇನೆ!

- ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Thursday 7 May 2015

ನಾನುಣಬಡಿಸುವ ಪದ್ಯ!


ನಾನುಣಬಡಿಸುವ ಪದ್ಯಕ್ಕೆ
ಹಸಿ ಮಾಂಸದ ಬಿಸಿ ನೆತ್ತರ
ಭಾವಗಳ ಸ್ಪರ್ಶವಿದೆ,
ಓದಬೇಡಿರೆಂದು ಕೈ ಮುಗಿದು
ಕೋರುತ್ತೇನೆ;
ಮುಂದಾಗುವ ಅನಾಹುತಗಳಿಗೆ
ನಾನು ಜವಾಬ್ದಾರನಲ್ಲ,
ಹಸಿದ ಹಲ್ಲುಗಳಿಗೆ
ಮೃದು ಹೃದಯ ಹೊರತಲ್ಲ!

ಹದ್ದಿನ ಸರಹದ್ದು
ಕಣ್ಣುಗಳು ಕಾದು ಕುಳಿತಿವೆ,
ನೋವಿಗೆ, ನೆರಳಿಗೆ,
ವಿರಹಕೆ, ಪ್ರೇಮಕೆ,
ಬಳಲಿದ ಬಂಧಕೆ,
ಇಡಿಯಾಗಿ ಸಿಕ್ಕ ದೇಹಕೆ,
ನರ ನೆತ್ತರು, ಮೂಳೆ ಮಜ್ಜೆಗಳು,
ಯಾವುದಾದರೂ ಸರಿ,
ಹುಲಿ ಹರಿದರೆ ಹಳಸು ಮಾಂಸ,
ಹಸೀದೇ ಸಿಕ್ಕರೆ
ರುಚಿಕಟ್ಟು ಎಳೆಸು ಮಾಂಸ!

ಅವು ಕಚ್ಚಿ ಕತ್ತರಿಸಿದ
ಪದ್ಯ ನಿಮ್ಮೆಡೆಗೆ,
ಕ್ಷಮಿಸಿ ನಿಮಗರಿವಿರದೆ
ನೀವು ನರ ಭಕ್ಷಕರಾಗಿದ್ದೀರಿ,
ನನ್ನ ಪಾಪಗಳ
ವಾರಸುದಾರರಾಗಿದ್ದೀರಿ,
ನೈತಿಕತೆ - ಅನೈತಿಕತೆ
ಮೀರಿದ ಶುದ್ಧ ಭಾವಗಳ
ಮೆರವಣಿಗೆಯಲಿ
ಬಂದು ಹೋದಿರಿ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Tuesday 14 April 2015

ಒಲುಮೆಯ ಮುದ್ದುವಿಗೆ: ಪತ್ರ - ೭


ಪತ್ರ - ೭
--------

ಒಲುಮೆಯ ಮುದ್ದುಗೆ,

ನಿನ್ನ ಸಾನಿಧ್ಯದಲ್ಲಿ ಕರಗುತ್ತಿರುವ ಮೌನದೊಳಗೆಕಣ್ಣ ಭಾಷೆಯ ರುಚಿಕಟ್ಟು ಊಟವನು ಸವಿದ ಹೃದಯದ ಹಸಿವು ಕುಡಿದಷ್ಟೂ ಇಂಗುತ್ತಿಲ್ಲ. ಒಲವಿಗೆ ಮಾತುಮೌನಗಳ ಹಂಗಿಲ್ಲ. ಹಾಗೆ ನೋಡುವುದಾದರೆ ನಿನ್ನ ಹೃದಯದೊಳಗೆ ಕಂಡ ಅಷ್ಟೂ ಕಾವ್ಯದ ಮುಂದೆ ನನ್ನ ಪತ್ರಗಳೂ ನೀರಸ. ಜೀವಂತ ಕಾವ್ಯದ ಮುಂದೆ ಶರಣಾಗುತ್ತಿದ್ದೇನೆಒಲವ ಪರಿಭಾಷೆಯನ್ನು ನಿನ್ನಿಂದ ಕದಿಯುವ ಅತಿಯಾಸೆಯಿಂದ.

ಪತ್ರಗಳ ಕಡೆಗಾದರೂ ಹೇಳಿ ಬಿಡುತ್ತೇನೆ, 'ಐ ಲವ್ ಯೂ ಮುದ್ದುಲವ್ ಯೂ ಮೋರ್ ದ್ಯಾನ್ ಎನಿ ಒನ್ ಆನ್ ದಿಸ್ ಯೂನಿವರ್ಸ್...ಭುಜಕ್ಕೊರಗಿರುವ ನಿನಗೆ ಮೆತ್ತನೆ ಹಾಸಿಗೆಯಿದೆ ಎದೆಯೊಳಗೆಮಲಗೆನ್ನ ಮನದೊಡತಿಎದೆಯ ಬಡಿತವೇ ನಿನಗೆ 'ಜೋ ಜೋ ಲಾಲಿ'..<3

ಎಂದಿಗೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)

ಒಟ್ಟು ಏಳು ಪತ್ರಗಳು ಫೆಬ್ರವರಿಯಲ್ಲಿ ’ಅವಳ’ನ್ನು ತಲುಪಿವೆ :-)

ಒಲುಮೆಯ ಮುದ್ದುವಿಗೆ: ಪತ್ರ - ೬


ಪತ್ರ - ೬
----------

ಒಲುಮೆಯ ಮುದ್ದುಗೆ,

ನಿನ್ನಲ್ಲೇನೋ ಸಮ್ಮೋಹಿನಿ ವಿದ್ಯೆಯಿರಬಹುದು ಕಣೇ. ಈ ಒಂದು ಕ್ಷಣ ಕ್ಷಣಕೂ ನಾನು ನೀನಾಗಿಬಿಡುವ ತವಕನಾವಾಗಿಬಿಡುವ ಕಾತರ. ನೀನು ನಂಬುವುದಿಲ್ಲಯಾರ್ಯಾರ ಕಣ್ಣಲ್ಲೋ ನೀನು ಕಾಣುವುದಿದೆಈ ಥರದ ಭ್ರಮೆಗೆ ಅದೇನೆನ್ನುವರೋನನಗೆ ಮಾತ್ರ ತೀರದ ಚಡಪಡಿಕೆ. ಒಮ್ಮೆ ಕನ್ನಡಿಯ ಮುಂದೆ ನಿಲ್ಲುತ್ತೇನೆಕನ್ನಡಿಯೊಳಗಿನ ನಿನ್ನ ಪ್ರತಿಫಲನದ ಕಣ್ಣೊಳಗೂ ನೀನೇ ಕಾಣುವಾಗ ನಾನದೆಷ್ಟು ಹಾಳಾಗಿರಬೇಡನೀನೇ ಊಹಿಸು! ನಿನ್ನ ಪ್ರೇಮದಮಲೊಳಗೆ ಮುಳುಗೇಳುವಆ ಹುಚ್ಚು ಹೊಳೆಯೊಳಗೆ ತೇಲಿ ಹೋಗುವ ಧ್ಯಾನ ನನಗೆ. ನನ್ನ ಮನಸುಭಾವ ಮತ್ತು ಎಲ್ಲವನ್ನೂ ನಿನ್ನೊಂದು ನೋಟಮಾತುಸ್ಪರ್ಶಹಾವಭಾವಗಳು ನಿಯಂತ್ರಿಸುತ್ತವೆ. ನಾನು ನನ್ನ ನಿಯಂತ್ರಣದಲ್ಲೇ ಇಲ್ಲಎಂಥ ತಮಾಶೆ ನೋಡುಈ ಮೋಹದ ಕಾಯಿಲೆಗೆ ನಿನ್ನ ಒಪ್ಪಿಗೆಯೊಂದೇ ದಿವ್ಯೌಷಧವೆಂದು ಮನವರಿಕೆಯಾಗಿದೆ. ನನ್ನ ಈ ಬಲೆಯಿಂದ ಪಾರು ಮಾಡ್ತೀಯಾ?

ಈ ಪತ್ರ ಬರಿವಾಗ ನಿನ್ನ ಕಣ್ಣುಗಳನ್ನೇ ದಿಟ್ಟಿಸುತ್ತಾ ಕೂತಿದ್ದೇನೆ. ಅಕ್ಷರಗಳೆಲ್ಲಾ ತಡವರಿಸಿ ಬೀಳುತ್ತಿವೆಪದಗಳು ನೀರಸ ಅನ್ನುಸ್ತಿವೆ. ನಾಳಿನ ಕನಸುಗಳಿಗೆ ಪುಳಕಗೊಳ್ಳುತ್ತಾಪತ್ರವನ್ನು ಮುಗಿಸುತ್ತಿದ್ದೇನೆ. ನನಸುಗಳು ಕನಸುಗಳಿಗಿಂತ ರುಚಿಕಟ್ಟಾಗುವ ಕ್ಷಣಗಳಿಗೆ ಜಾತಕ ಪಕ್ಷಿಯಾಗಿದ್ದೇನೆ.

ಎಂದಿಗೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)

ಒಲುಮೆಯ ಮುದ್ದುವಿಗೆ: ಪತ್ರ - ೫


ಪತ್ರ - ೫
----------

ಒಲುಮೆಯ ಮುದ್ದುಗೆ,

ಇತ್ತೀಚೆಗೆ ಕನಸುಗಳು ಬೀಳ್ತವೆ ಕಣೆಎಷ್ಟ್ ಚೆನ್ನಾಗಿರ್ತವೆ ಗೊತ್ತಾನಂಗೆ ಪ್ರಾಣಿಗಳು ಅಂದ್ರೆ ಅಷ್ಟೇನೂ ಅಕ್ಕರೆ ಇಲ್ಲ ಮತ್ತೆ ಚಿಕ್ಕೋನಿದ್ದಾಗ ಅದ್ಯಾವ್ದೋ ಗೌಜಲಕ್ಕಿ ಮರಿನ ಹಿಡ್ಕೊಂಡ್ ಬಂದು ಸಾಕ್ತೀನಿ ಅಂತ ಸಾಯ್ಸಿದ್ದೆ. ಅದೆಲ್ಲೋ ಒಂಟಿಯಾಗಿದೆ ಮುದ್ದಾದ್ ನಾಯಿ ಮರಿ ಅಂತ ಎತ್ಕೊಂಡ್ ಬಂದು ಸಾಕ್ತೀನಿ ಅಂತ ಆಟ ಕಟ್ಟಿ ಎರ್ಡ್ಮೂರ್ ದಿನ ಊಟ ಹಾಕಿ ನಮ್ ದೊಡ್ಡಮ್ಮ ನಂಗೇ ಗೊತ್ತಿಲ್ದಂಗೆ ಅದ್ರು ಕಟ್ಟು ಬಿಚ್ಚಿ ಊರಾಚೆ ಬಿಟ್ಟು ಬಂದಾಗ ಜೋರಾಗಿ ಕಿರ್ಚಾಡಿ ಅತ್ತಿದ್ದೆ. ಮತ್ತೊಂದ್ಸಲ ಊರಲ್ಲಿರೋ ಮನೆಯ ಹಂಚಿನ ಸಂದಿಲಿ ಗೂಡು ಕಟ್ಟಿ ಮೊಟ್ಟೆಯಿಟ್ಟಿದ್ದ ಅದ್ಯಾವುದೋ ಹಕ್ಕಿಯ ಗೂಡನ್ನು ಮೊಟ್ಟೆಗಳ ಸಮೇತ ಎಗರಿಸಿಕೊಂಡುಬೆಂಕಿ ಹತ್ರ ಕಾವು ಕೊಟ್ಟು ಮರಿಯಾಗುತ್ತಾ ಅಂತ ಕಾಯ್ತಾ ಕೂತಿದ್ದೆ. ಇನ್ನು ತಿಟ್ಟಲ್ಲಿ ನವಿಲು ಬರ್ತವಂತೆ ಅಂತ ನಮ್ಮೂರ್ ಸತೀಶ ಹೇಳ್ದಾಗ ಅವುಗಳ್ನ ಹಿಡ್ಕೊಂಡ್ ಬಂದ್ ಸಾಕೊಳೋಣ ಅಂತ ಅವುಗಳನ್ನ ಹಿಡಿಯೋಕ್ಹೊಗಿ ತರಚು ಗಾಯಗಳ್ನ ಮಾಡ್ಕೊಂಡಿದ್ದೆ. ಹೀಗೆ ನನ್ ಹುಚ್ಚಾಟಗಳಿಂದ ಮನವರಿಕೆಯಾಗಿದ್ದುನಂಗೆ ಪ್ರಾಣಿಗಳನ್ನ ಸಾಕ್ಬೇಕು ಅನ್ನೋ ಆಸೆಗಿಂತ ಅವುಗಳೊಂದಿಗಿನ ಒಡನಾಟದ ಕುತೂಹಲವಿತ್ತೇನೋಇತ್ತೀಚೆಗೆ ನನ್ ಸೋಮಾರಿತನ ಅವುಗಳನ್ನೆಲ್ಲಾ ನಿಗ್ರಹಿಸಿಬಿಟ್ಟಿದೆನನ್ನ ಚೈತನ್ಯ ಶಕ್ತಿಯಾಗಿ ನೀನೊಬ್ಳಿಲ್ದಿದ್ರೆಬದ್ಕೋದೂ ಬೋರನ್ಸಿರೋದು! :-D

ಈಗ ವಿಷಯಕ್ಕೆ ಬರ್ತೀನಿ ನನ್ ಕನಸಲ್ಲಿನಾವೆಲ್ಲಾ ಇದ್ವಿ. ಅಂದ್ರೆ ನಾನುಅಪ್ಪಜಿಮಮ್ಮಿಪ್ರಮೋದ ಮತ್ತೆ ನೀನು. ಮೋಸ್ಟ್ಲಿ ಮದ್ವೆ ಆಗಿತ್ತು ಅನ್ಸುತ್ತೆ. ಇಲ್ದಿದ್ರೆ ನೀನೆಲ್ಲಿ ನಮ್ ಮನೇಲಿರ್ತಿದ್ದೆ. ಆಗ ನಮ್ಗಳ ಜೊತೆ ಒಂದು ಲ್ಯಾಬ್ರಡಾರ್ ನಾಯಿ ಮತ್ತೆ ಬಿಳಿ ಬೆಕ್ಕುಗಳೂ ಇದ್ವು. ನಮ್ಮನೆಲಿ ಪ್ರಾಣಿಗಳನ್ನ ಸಾಕೋಕೆ ಏನಾದ್ರೂ ಕೊಂಕು ತೆಗ್ಯೋ ಮಮ್ಮಿಅಸಡ್ಡೆ ತೋರ್ಸೋ ಅಪ್ಪಜಿ ಎಲ್ರೂ ಆ ಪ್ರಾಣಿಗಳನ್ನ ಸಾಕೊಳೋಕೆ ಹೆಂಗ್ ಒಪ್ಕೊಂಡ್ರುನಾನು ಯೋಚ್ನೆ ಮಾಡ್ತೀನಿ ಈಗ.
ನಿಂಗೆ ಇನ್ನೊಂದ್ ಅಚ್ಚರಿ ವಿಷ್ಯ ಹೇಳ್ಬೇಕುಆ ನಾಯಿ ಮತ್ತು ಬೆಕ್ಕುಗಳು ನೀನವತ್ತು ಬೆಳದಿಂಗಳ ರಾತ್ರಿಲಿ ನನ್ ಮಡಿಲಲ್ಲಿ ತಲೆಯಿಟ್ಟು ಹೇಳಿದ್ಯಲ್ಲಾನಿಮ್ ಪಕ್ಕದ್ ಮನೆಯಿಂದ ಕಾಣೆಯಾಗಿವೆ ನಾಯಿಬೆಕ್ಕು ಅಂತ.. ಥೇಟ್ ಹಾಗೇ ಇದ್ವು. ಮೋಸ್ಟ್ಲಿ ನಿನ್ಗೆ ಅದೆಲ್ಲಾ ಇಷ್ಟ ಅಂತನೇ ಮನೆಯವ್ರೆಲ್ಲಾ ಸಾಕೋಕೆ ಒಪ್ಕೊಂಡಿರ್ಬೇಕಲ್ವಾ ಮುದ್ದುನೋಡಿದ್ಯಾ ನಮ್ಮನೆ ಅಂದ್ರೆ ಹೀಗೆಯಾವುದೇ ವಿಷಯ ತಗೊಂಡ್ರೂ ಮೂರ್ ಮೂರ್ ದಿಕ್ಕಲ್ಲಿ ಯೋಚ್ನೆ ಮಾಡ್ತೀವಿ. ಪ್ರೀತಿ ವಿಷ್ಯ ಬಂದ್ರೆ ಮಾತ್ರ ಒಂದೇ ಮಂತ್ರಒಂದೇ ದಿಕ್ಕು. ಈ ದಿನ ನಿನ್ಗೊಂದು ಪ್ರಾಮಿಸ್ ಮಾಡ್ತಿದ್ದೀನಿಪ್ರಪಂಚದ ಪ್ರೀತಿಯನ್ನೆಲ್ಲಾ ನಿನ್ನ ಮಡಿಲಿಗೆ ಸುರಿಯುವ ನಾನುನನ್ನ ಜಗತ್ತಿಗೆ ನಿನ್ನ ರಾಣಿಯಾಗುಸ್ತೀನಿನಿನ್ನ ಪುಟ್ಟ ಜಗತ್ತೊಳಗೆ ನನ್ನನ್ನೊಂದು ಭಾಗವಾಗಿಸ್ಕೋತೀಯಾ? :-)

ಎಂದಿಗೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)

ಒಲುಮೆಯ ಮುದ್ದುವಿಗೆ: ಪತ್ರ - ೪


ಪತ್ರ - ೪
-----------

ಒಲುಮೆಯ ಮುದ್ದುಗೆ,

ಅರಿವಾಗದ ಮೌನದೊಳುಹರಿವ ಧ್ಯಾನದೊಳುನಿನ್ನೊಲವಿನೊರತೆ ಹೃದಯದಿಂದ ಚಿಗಿದುಪುಟಿದು ಕಳೆಗಟ್ಟುತ್ತಿದೆ. ಜಿನುಗಿದ ಒಲವನ್ನು ಚೇಸು ಮಾಡುವ ಧಾವಂತಕ್ಕೆ ಬೀಳುತ್ತೇನೆ. ಆಹಾ! ನನ್ನ ಚಲನೆಯನ್ನು ನಿನಗೆ ನಿರೂಪಿಸುವೆ ಕೇಳುಮಜವಿದೆ. ನಿನ್ನ ಕಣ್ಣೊಳಗಿಂದ ಪುಟಿದ ಒಲವು ಗುಂಡಗೆ ಗೋಳಾಕಾರ ಪಡೆಯುತ್ತದೆಉರುಳುತ್ತದೆ. ಒಂದು ಆಯಕಟ್ಟಿನ ಜಾಗ ನೋಡಿ ತಣ್ಣಗೆ ನಿಂತುಬಿಡುತ್ತದೆ. 'ನನಗೊಂದು ಕೋಲು ಕೊಡಿಭೂಮಿಯನ್ನು ಉರುಳಿಸುತ್ತೇನೆಎಂದ ಆರ್ಕಿಮಿಡೀಸ್ ಒಂದು ರೀತಿಯ ಬೆರಗು ಹುಟ್ಟಿಸುತ್ತಾನೆ. ನಾನೂ ಒಲವನ್ನು ನಡೆಸಲು ಸನ್ನೆ ಹುಡುಕುವೆಆಗ ನಡೆದ ಅಚ್ಚರಿಗಳ ಒಟ್ಟು ಮೊತ್ತವೇ ಈ ಪತ್ರ. ಸ್ವಲ್ಪ ಕಾವ್ಯಾತ್ಮಕವಾಗಿಸಲು ಪ್ರಯತ್ನಿಸಿದ್ದೇನೆನನ್ನ ಆರ್ಟಿಫಿಶಿಯಲ್ ಭಾಷೆಯನ್ನು ಸಹಿಸಿಕೋ!

ಆ ಗೋಳಾಕಾರದ ಒಲವು ಥೇಟು ಸಕ್ಕರೆ ಪಾಕದಲದ್ದಿದಂತೆ ಸವಿಪಾಕವನ್ನು ಸುರಿಸುತ್ತಿದೆ. ನಿಂತ ನಿಲುವಲ್ಲೇ ಕರಗುವ ಐಸ್ಕ್ರೀಮಿನಂತೆ. ಅಲ್ಲಿಂದ್ಹೊರಟ ಒಂದು ಬಿಂದು ಉರುಳಿಉರುಳಿ ಬಿದ್ದು ಕುಡಿಯೊಡೆದು ಹೂವಾಗುತ್ತದೆಹೂವು ಸಿಹಿಯಾಗುತ್ತದೆ. ನಿರ್ಜೀವ ಹೂವು ಫಳ ಫಳ ಹೊಳೆದುಗಾಳಿಗೆ ಗಂಧ ಪೂಸಿಮದುವಣಗಿತ್ತಿಯಾಗಿದೆ. ಚಕಿತ ಕ್ಷಣಗಳ ಹಿಡಿಯಲಾಗದೆಮನ ಚೂರು ಹೊಡೆದು ಬಣ್ಣವಾಗಿದುಂಬಿಚಿಟ್ಟೆಯಾಗಿ ಹೂವನ್ನು ಮುತ್ತುತ್ತಿದೆ. ಮೈಲಿಗೆಯ ಮಿತಿ ಮೀರಿದ ಇದಕೆ ವಿಜ್ಞಾನಿಗಳು ಪರಾಗವೆಂದು ಕರೆದುಬಿಟ್ಟರು. ಹುಟ್ಟುಗಳಿಗೊಂದ್ಹುಟ್ಟು ಕೊಟ್ಟ ಗೋಳ ತನ್ನ ಕಣ್ಣೊರಳಿಸುತ್ತಿದೆ. ಪರಾಗ ನಿರಂತರ ಮತ್ತು ನಿರಾತಂಕ! ಹೂವಿನ ಜಾಡು ಅರಸಿ ಹಾರಿ ಬರುವ ಪಕ್ಷಿಗಳಿಗೂ ಚಿಲಿಪಿಲಿಗುಟ್ಟುವುದನ್ನು ಕಲಿಸುತ್ತಿದೆ ಹೂವ ಗಂಧ. ಒಂದರ ಹೂವ ಕೇಸರಗಳು ಮತ್ತೊಂದಕೆ ಬೆಸೆದು ತರಹೇವಾರಿ ಹೂವುಗಳು ಜೀವತಳೆಯುತ್ತವೆ. ಬಣ್ಣಗಳು ಭಾವತಳೆಯುತ್ತವೆ. ಭೂಮಿ ಜೀವಂತವಾಗುತ್ತದೆ.

ನಿನಗೊಂದು ನಿಜ ಗೊತ್ತಾ ಮುದ್ದುಎಲ್ರೂ ಹೇಳ್ತಾರೆಭೂಮಿ ನಿಂತಿರೋದೆ ಗುರುತ್ವದ ಮೇಲೆಇನ್ನೂ ಕೆಲವರು ಹೇಳ್ತಾರೆ ಭೂಮಿ ನಿಂತಿರೋದು ನಂಬಿಕೆ ಮೇಲೆನಾನು ಹೇಳ್ತೇನೆ, 'ಈ ದುಂಡಾದ ಭೂಮಿ ನಿಂತರೋದು ನಿನ್ನೊಲವ ಮೇಲೆ', ಅದರ ಸೃಷ್ಟಿಯ ಕಾರಣವೂ ನಿನ್ನೊಲವೇಗುಂಡಾದ ಒಲವ ಚಲನೆಗೂ ನಿನ್ನ ಕಣ್ಣೋಟವೇ ಸನ್ನೆ. ಅಷ್ಟೂ ಒಲವನ್ನು ನನ್ನೆದೆಯೊಳಗೆ ಬಚ್ಚಿಟ್ಟುಜೀವನ ಪರ್ಯಂತ ನಿನಗೆ ಎಡೆಯಿಡುತ್ತಿದ್ದೇನೆ. ನಿನ್ನ ಕನಸುಗಳಿಗೆ ರೆಕ್ಕೆಯಾಗುತಿದ್ದೇನೆಸ್ವೀಕರಿಸೆನ್ನ ಒಲವ ಪೂಜೆಗೆ.

ಎಂದೆಂದೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)

ಒಲುಮೆಯ ಮುದ್ದುವಿಗೆ: ಪತ್ರ - ೩


ಪತ್ರ - ೩
-------------

ಒಲುಮೆಯ ಮುದ್ದುಗೆ,

ನೆನ್ನೆ ಯಾಕ್ ಪತ್ರ ಬರೀಲಿಲ್ಲ ಗೊತ್ತಾ ನಿಂಗೆನಾನೊಬ್ಬ ನಿಂಗೋಸ್ಕರ ಕಾಯ್ತಿರ್ತೀನಿ ಅನ್ನೋ ನೆನಪಾದ್ರೂ ಇದ್ಯಾಮೊನ್ನೆ ರಾತ್ರಿ ಎಲ್ಲಾ ಕಾಲ್ ಮಾಡಿ ಸತ್ತಿದ್ದೀನಿಎಷ್ಟ್ ಸಲ ರಿಂಗಾದ್ರೂ ಎತ್ತೋರೇ ಇಲ್ಲ. ಎಲ್ ಹೊಗಿದ್ದೆ ನೀನುಎಷ್ಟ್ ಶತಪಥ ಹಾಕಿದ್ದೀನಿಬೆಳಗಿನ ಜಾವ ನಾಲ್ಕಾದ್ರೂ ನಿದ್ದೆನೇ ಇಲ್ಲ ಈ ಹಾಳಾದ್ ಕಣ್ಣಿಗೆ. ನೀನು ಆರಾಮಾಗಿ ಬಿದ್ಕೊಂಡಿದ್ದೆ ಅಲ್ವಾನಿದ್ದೆ ಬರದ ಆ ಕ್ಷಣಗಳಲಿ ಏನ್ ಮಾಡ್ಲಿ ಅಂತ ತಿಳೀದೆ ನೀನು ನನಗಾಗಿ ಕೊಟ್ಟ ಆ ಕೃಷ್ಣನ ಪೇಂಟಿಂಗ್ ನೋಡ್ತಾ ಕಾಲ ಕಳ್ದಿದ್ದೀನಿ. ಅವ್ನನ್ನ ನೋಡಿದಷ್ಟೂ ನಿನ್ನ ನೆನಪಾಗಿ ಕಣ್ಣೆಲ್ಲಾ ಹನಿಗೂಡ್ತಿತ್ತು. ಅಳ್ತಿರ್ಲಿಲ್ಲ ಆದ್ರೆ ಆ ಭಾವಕ್ಕೇನಂತ ಕರಿಬೇಕೋ ಗೊತ್ತಿಲ್ಲಏನಂತ ಕರಿಬೋದು ಮುದ್ದು ಅದನ್ನಾನಿನ್ ಉತ್ರ ಏನೂಂತ ಗೊತ್ತು ಬಿಡು, ’ಏನೂ ಇಲ್ಲ’ ಹಂಗಂದ್ರೆ, ’ಗೊತ್ತಿಲ್ಲ’, ಏನಿಲ್ಲ ಅಂದ್ರೆ, ’ಏನೇನೂ ಇಲ್ಲ!’.

ನಿನ್ನ ಸವಿನುಡಿಗೆ ಮುದಗೊಳ್ಳದೆಕಿವಿಯ ಮೇಲೆಲ್ಲಾ ಜೇನು ಸುರಿಯದೆಕಿವಿ ಸುತ್ತಾ ಇರುವೆಗಳು ಮುತ್ತದೆಮನಸಿನ ತುಂಬ ಮಲ್ಲಿಗೆಸಂಪಿಗೆಜಾಜಿಸೇವಂತಿಗೆಸೂರ್ಯಕಾಂತಿಕೇದಿಗೆಯ ಮೊಗ್ಗುಗಳರಳದೆನವಿರಾಗಿ ನರಳದೆಸಾವಿರ ಜೀವದ ಮೇಳ ಕಟ್ಟುವ ಕನಸು ಕಂಗಳು ನನ್ನ ನೋಡದೆಸಾವೂ ಬರದೆ ಜೀವಂತವಿರುವ ನರಕ ನಿನಗ್ಹೇಗೆ ಗೊತ್ತು ಹೇಳುನಾನು ಇದನ್ನೆಲ್ಲಾ ಹೇಳುವಾಗ, ’ಇವನ್ನೆಲ್ಲಾ ನಿನ್ನ ಕಥೆಕವನಗಳಿಗಿಟ್ಕೋನನ್ಹತ್ರ ಹೇಳ್ಬೇಡ’ ಅಂತಂದ್ಬಿಡ್ತಿ. ಆದರೆ ನಿಜಕ್ಕೂ ನನಗೆ ಹೀಗನಿಸುವುದು ನಿನಗೂ ಗೊತ್ತಿರುತ್ತೆ ಅಲ್ವಾಆದ್ರೂ ಯಾಕ್ ಸತಾಯಿಸ್ಬೇಕು?

ನಿದ್ದೆ ಬರದಿದ್ದೆ ಒಳ್ಳೆದಾಯ್ತೇನೋ ನೋಡುಕನಸೊಂದು ಬಿದ್ದಿತ್ತು. ಬೆಳಗಿನ ಜಾವ ನಂಗೆ ಸಕ್ರೆ ನಿದ್ದೆ ಸಮಯ. ನೀನು ಎಬ್ಬುಸ್ತನೇ ಇರ್ತೀಯಾನಾನು ಮಲ್ಗೇ ಇರ್ತೀನಿ. ಎದ್ದೇಳೋ ಟೈಮಾಯ್ತುಆಫೀಸ್ಗೋಗಲ್ವಾನಿನ್ನದು ಏರು ದನಿಯಲ್ದಿದ್ರೂ ಕಿವಿ ಹತ್ರನೇ ಬಂದು ಕೂಗಿದ್ರೆ ಕಿರ್ಚ್ದಂಗನ್ಸಲ್ವಾನಾನು ಹೊದಿಕೆ ಎಳ್ಕೊಂಡ್ ಮಲ್ಕೋಬೇಕುಇನ್ನು ಹತ್ತಿರ ಬಂದು ಕಿವಿ ಕಚ್ಚಿಬಿಟ್ಟೆ. ಅಷ್ಟ್ರಲ್ಲಿ ಹಾಳಾದ್ದು ನಿದ್ದೆ ಬಂದುಬಿಡ್ತು. ನೀನು ಮತ್ತೆ ನನ್ನೊಳ ಸೇರಿ ಹೋದೆ. ಆಮೇಲೆನಿದ್ದೆಯೆಂದರೆ ಸವಿ ನಿದ್ದೆನಿನ್ನೊಲವ ಕನಸುಗಳೇ ಜೋಲಿ.

ಎಂದಿಗೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)

ಒಲುಮೆಯ ಮುದ್ದುವಿಗೆ: ಪತ್ರ - ೨


ಪತ್ರ - ೨
--------------

ಒಲುಮೆಯ ಮುದ್ದುಗೆ,

ಮೊನ್ನೆ ಏನಾಯ್ತು ಗೊತ್ತಾನಿಮ್ಮನೆ ಹಾದಿಲಿ ನಡ್ಕೊಂಡ್ ಬರ್ತಿದ್ದೆ. ಬೆಳದಿಂಗಳ ಮುಂಜಾನೆತಣ್ಣನೆಯ ಬೆಳಗಿನ ಜಾವಚುಮು ಚುಮು ಚಳಿ. ಕಂಡಷ್ಟಗಲದ ಆಕಾಶಕ್ಕೆ ತಾನೊಬ್ಬನೆ ಸುಂದ್ರ ಅನ್ನೋ ಥರ ನಗ್ತಾ ಇದ್ದ ಚಂದಿರ. ಅರೆರೇ ಬೆಳಗಿನ ಜಾವಕ್ಕೂ ಇದ್ದಾನಲ್ಲಾ ಪೋಲಿನಿನ್ನ ಕದಿಯುವ ಸಾಹಸಕ್ಕೆ ಕೈಹಾಕಿರಬಹುದೇ ಅಂತ ಅನುಮಾನ ಬಂತು. ಆದರೆ ನೀನು ನನ್ನವಳೆಂಬ ಆಸರೆಯೊಂದೇ ನನ್ನ ಮುಂದುವರೆಯುವಂತೆ ಮಾಡಿದ್ದು. ಹಾಲ್ನೊರೆ ಉಕ್ಕುಕ್ಕಿ ಭೂಮಿಯ ಮೇಲೆಲ್ಲಾ ಸುರೀತಿದ್ದ. ನಂಗೆ ಆಶ್ಚರ್ಯವೋ ಆಶ್ಚರ್ಯ! ಅಲ್ಲಾ ಇಷ್ಟೆಲ್ಲಾ ಹಾಲ್ನೊರೆ ಸುರೀತಿದ್ದಾನೆ, ’ನಂದಿನಿ ಡೈರಿಯವ್ರು ಹಾಲಿನ್ ರೇಟ್ ಕಮ್ಮಿ ಮಾಡ್ತಾರ ಅಂತ.

ನಾನು ಮುಂದಡಿ ಇಟ್ಟಂತೆಲ್ಲಾ ಅವ್ನೂ ಓಡ್ತಿದ್ದ. ಎಲಾ ಇವ್ನಾ ಯಾಕೋ ಓಡ್ತೀಯಾ ಅಂತ ಅಟ್ಟುಸ್ಕೊಂಡ್ ಹೋದೆ. ನಿಮ್ಮನೆಯಿಂದ ಆ ಗಣಪತಿ ದೇವಸ್ಥಾನ ದಾಟಿಅದ್ರು ಎದುರಿಗಿನ ಪಾರ್ಕು ದಾಟಿಉದ್ದುದ್ದ ರಸ್ತೆ ಬಿಟ್ಟು ಅಂಕುಡೊಂಕನ್ನೆ ಬಳಸುತಾನೆ. ನನ್ಗೂ ಮಾರ್ನಿಂಗ್ ಜಾಗ್ ಆದೀತೆಂದು ಓಡಿದೆಓಡಿದೆ. ಎದುರಿಗೆ ರಾಘವೇಂದ್ರ ಕನ್ವೆನ್ಶನ್ ಹಾಲ್ ಸಿಕ್ತು. ಮೇಲ್ ನೋಡಿದ್ರೆ ಅವ ಇಲ್ಲ. ನನಗೆ ದಾರಿ ಬಿಟ್ಟು ಓಡಿ ಹೋಗಿದ್ದ. ಸಾಕಷ್ಟು ಕನಸುಗಳನ್ನು ಕೊಟ್ಟು.

ನಾನೀಗಅವನ ಮೇಲೆ ನನಗ್ಯಾಕಿಷ್ಟು ಅಸೂಯೆಅವ ನಿನ್ನ ನಿಜಕ್ಕೂ ಕದೀತಿದ್ನಅವನಿಗಷ್ಟು ಧೈರ್ಯವೇನನ್ನ ನಾನೇ ಪ್ರಶ್ನಿಸಿಕೊಳ್ತೇನೆ. ಇಲ್ಲ ಇಲ್ಲ.. ನೀನು ನನ್ನವಳೆಂದುನಾನು ನಿನ್ನವನೆಂದು ನಮ್ಮೆದೆಗಳ ಮೇಲೆ ಕೆತ್ತಿಟ್ಟಾಗಿದೆ! ಆದರೂ ನನಗ್ಯಾಕೆ ನಿನ್ನ ಕಳೆದುಕೊಳ್ಳುವ ಭಯಈ ಬೆಳಗಿನ ಜಾವಕ್ಕೆ ಈ ಪ್ರಶ್ನೆಯೊಂದು ನನ್ನನ್ಯಾಕೆ ನನ್ನಿಂದ ಕಸಿಯುತಿದೆಯೋಚಿಸುತ್ತಾ ಕೂತಿದ್ದೆ. ಆಗ ಹೊಳೆಯಿತುಈ ಥರ ಅನುಭವಿಸಿದ್ದ ಯಾವನೋ ಪುಣ್ಯಾತ್ಮ ಹೇಳಿದ್ದ, "ಶೀ ವಿಲ್ ನೆವರ್ ಬಿ ಯುವರ್ಸ್ಅಂಟಿಲ್ ಯೂ ಫೀಲ್ ಜಲಸ್". ಹೌದುಒಂದು ಕ್ಷಣಕ್ಕೂ ನಾನಿನ್ನ ಕಳೆದುಕೊಳ್ಳಲಾರೆ. ಆ ಚಂದಿರನಂತು ಮಳ್ಳಅಮಾವಾಸ್ಯೆಗೂ ಬೆಳದಿಂಗಳಾಚರಿಸುವ ಅತಿ ಆಸೆಗೆ ಸದಾ ಜಿನುಗುವ ನಿನ್ನ ಕಣ್ಣ ಹೊಳಪ ಕದ್ದೊಯ್ದು ಬಿಡುತ್ತಾನೆ. ನಾನಂತೂ ಸದಾ ಕಾವಲಿಗಿದ್ದೇನೆದೀಪಗಳನೇ ಖರೀದಿಸದ ನನಗೆ ನಿನ್ನ ಕಣ್ಣ ಹೊಳಪಷ್ಟೇ ಆಸರೆ.

ಎಂದಿಗೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)

Sunday 12 April 2015

ಒಲುಮೆಯ ಮುದ್ದುವಿಗೆ: ಪತ್ರ - ೧


ಪತ್ರ - ೧
--------

ಒಲುಮೆಯ ಮುದ್ದುಗೆ,

ನಿಂಗೆ ನನ್ ಪತ್ರ ಅರ್ಥವಾಗುತ್ತೋ, ನಿದ್ರೆನೇ ಬರಿಸುತ್ತೋ ಅನ್ನೋ ಭಯಗಳನ್ನು ಮೀರಿ ಪತ್ರ ಬರೀತಿದ್ದೀನಿ ಸಹಿಸ್ಕೊ. ನಿದ್ರೆ ಬಂದ್ರೆ ತಾಚಿ ಮಾಡು, ನನ್ನ ಪತ್ರ ನಿನ್ನ ತಟ್ಟಿ ಮಲಗಿಸುತ್ತೆ.

ನಿನ್ಜೊತೆ ಅಷ್ಟು ಕೊರೀತೀನಿ, ಆದ್ರೂ ಯಾಕ್ ಪತ್ರ ಬರೀತಿದ್ದೀನಿ ಅಂತ ಆಶ್ಚರ್ಯ ಅಲ್ವಾ? ನಂಗೊತ್ತು! ಇವೆಲ್ಲಾ ನನ್ನೆದೆಯ ಪಿಸುಮಾತುಗಳು. ಕಿವಿಯಲ್ಲಷ್ಟೇ ಪಿಸುಗುಟ್ಟುವ ನನ್ನೊಲವ ಗುಟ್ಟುಗಳು. ನನ್ನೊಳಗೆ ಕುಡಿಯೊಡೆವ ಕನಸುಗಳು, ನಿನಗಾಗಿ ಕಾತರಿಸಿದ ಕ್ಷಣಗಳು, ನಿನಗಾಗಿ ಕಾದಿರುವ ನಾನು, ನನ್ನ ಜಗತ್ತು, ನೀನು, ನಿನ್ನ ಜಗತ್ತು, ಎಲ್ಲವನ್ನೂ ಅಕ್ಷರಕ್ಕಿಳಿಸುತ್ತಿದ್ದೇನೆ. ನಿನ್ನೊಲವ ನೈವೇದ್ಯಕ್ಕೆ ಮುಡಿಪಿಡುತ್ತಿದ್ದೇನೆ.

ಇದೇ ರೀತಿ ಫೆಬ್ರವರಿ ೧೪ರ ವರೆಗೂ ಒಂದಷ್ಟು ಪತ್ರಗಳು ನಿನ್ನನ್ನು ತಲುಪಲಿವೆ. ಅದರಲ್ಲಿ ಕಿವಿಗೊಟ್ಟರಷ್ಟೇ ಕೇಳಿಸುವ ಎದೆಬಡಿತಗಳಿವೆ.

ಹೆಣ್ಣಿನ ಪ್ರೀತಿ ಮತ್ತು ಮನಸ್ಸುಗಳು ಸಮುದ್ರಕ್ಕಿಂತ ಆಳ ಮತ್ತು ನಿಶ್ಚಲವಂತೆ. ನಾವೇ(ಗಂಡಸರು) ನದಿಗಳು, ಚಲನೆಯನ್ನೇ ಪ್ರೀತಿ ಎಂದು ನಂಬಿರುತ್ತೇವೆ. ಅಂಕು, ಡೊಂಕೆನ್ನದೆ ಚಲಿಸುತ್ತಲೇ ಇರುತ್ತೇವೆ. ನೀನು ಸಿಕ್ಕ ಮೇಲೆಯೇ ನನಗಿದರರ್ಥವಾಗುತ್ತಿದೆ. ನಿನ್ನೊಲವೊಳಗೆ ಕರಗಿದಷ್ಟೂ ನಿನಗಿಷ್ಟದ ರುಚಿ ಪಡೆದು ಭೋರ್ಗರೆದು ಉಕ್ಕುತ್ತಿದ್ದೇನೆ, ನಾನಾಗೇ ಉಳಿಯುತ್ತಿದ್ದೇನೆ. ನಿನ್ನ ತೀರ ತಾಕುವವರೆಗೂ ಹೀಗೇ ಇರುತ್ತೇನೆ, ತಾಕಿದ ಮೇಲೂ ಹೀಗೇ ಇರುತ್ತೇನೆ. ನಾನಿರುವಂತೆಯೇ ಒಪ್ಪಿಕೊಂಡು ಅಪ್ಪಿಕೊಂಡಿರುವ ನಿನಗೆ ಋಣಿಯಾಗಿದ್ದೇನೆ.

ಎಂದಿಗೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)


ಪ್ರೇಮಿಗಳ ದಿನದ ವಿಶೇಷಕ್ಕೆ ಬರೆದ ಒಂದಷ್ಟು ಪತ್ರಗಳು, ಫೆಬ್ರವರಿ ತಿಂಗಳಲ್ಲಿ...

Saturday 4 April 2015

ಪದ್ಯದ ಹಣತೆಗಳು


ಪದ್ಯದ ಹಣತೆಗಳು
ಮೆರವಣಿಗೆ ಹೊರಟಿವೆ,
ಹಿಡಿದವರಿಗೆ ಹಿಡಿಯಷ್ಟು,
ಕೊಂಡವರಿಗೆ ಕೊಡದಷ್ಟು,
ಹಿಡಿಗೂ ಸಿಕ್ಕದ,
ಕೊಡಕೂ ದಕ್ಕದ,
ನೋಡು, ನೋಡಲ್ಲಿ
ಪದ್ಯದ ಹಣತೆಗಳು!

ಕಲ್ಯಾಣಿಯಲಿ ಮೀಯದ
ದೀಪಗಳ ಸಾಲು ಸಾಲು
ಭಕುತಿಗೆ ಒಲಿಯದ ಬೆಳಕು,
ನೀಲಗಾರರ ಕಂಠಕ್ಕೆ,
ಮಂಟೆಸ್ವಾಮಿಯ ಪಾದಕ್ಕೆ,
ಮಾದಪ್ಪನ ಗದ್ದುಗೆಗೆ,
ಜನಪದರ ತಂಬೂರಿಗೆ,
ದಿಗ್ಗನೆ ಹತ್ತಿಕೊಂಡು
ಉರಿದಿವೆ,
ಪದ್ಯದ ಹಣತೆಗಳು
ಸರತಿ ಸಾಲಲ್ಲಿ
ಮೆರವಣಿಗೆ ಹೊರಟಿವೆ!

ಪದಗಳಲಿ ಶಬ್ಧ ಮಾಡಿ,
ಭಾವಗಳಲಿ ಶುದ್ಧ ಮಾಡಿ,
ಶೃತಿಗೆ ಬೇಡುವ
ಮಾನವೀಯತೆಯ ದೀಪದೊಳಗೆ
ಲೇಖನಿಯ ಬತ್ತಿ ಹಿಡಿದು
ಮೆರವಣಿಗೆ ಹೊರಟಿವೆ,
ಪದ್ಯದ ಹಣತೆಗಳು!

- ಮಂಜಿನ ಹನಿ

ಚಿತ್ರ ಕೃಪೆ: ಮದನ್.ಸಿ.ಪಿ.

Tuesday 24 March 2015

ಮೊನ್ನೆ ಹೊಳೆದ ಪದ್ಯ!


ಮೊನ್ನೆ ಹೊಳೆದ
ಪದ್ಯವೊಂದಿದೆ,
ಯುಗಾದಿಯ
ವರ್ಷತುಡುಕಿಗೆ,
ಬಿಯರು ಬಾಟಲ
ಕೊನೆಯ ಡ್ರಾಪಿಗೆ,
ಕೈ ಕೊಟ್ಟ ಹುಡುಗಿಯ
ಉಸಿರ ಸದ್ದಿಗೆ,
ಎದೆಯ ಕೊರೆಯುವ
ಹಳಸು ಕನಸಿಗೆ,
ಕೊಳೆತು ನಾರುವ
ಶವದ ಪೂಜೆಗೆ,
ಯಾವೊಂದಕೂ
ಜಪ್ಪಯ್ಯ ಅನ್ನದೆ
ಉಳಿದೇ ಹೋದ
ಪದ್ಯವೊಂದಿದೆ!

ನೆರಳು ಬೆಳಕಿನ
ಆಸೆ ಬಿಸುಪಿಗೆ,
ಕಳಚಿ ಬೀಳದ
ಹೂವು ಹಣ್ಣಿಗೆ,
ಬೆನ್ನು ಬಾಗಿದ
ಪೋಲಿ ಕನಸಿಗೆ,
ದಾಹ ತೀರದ
ತುಟಿಯ ಜೇನಿಗೆ,
ಮಿಡಿದ ನಾಡಿಯ
ಸಡಿಲ ಲಾಡಿಗೆ,
ಬದುಕು ಬೇಡಿದ
ಬತ್ತದಾಸೆಗೆ,
ಯಾವೊಂದಕೂ
ಒಲಿಯದ
ಪದ್ಯವೊಂದಿದೆ!

ಸೋತು ಸೊರಗುವ
ನೋವ ಸೆರೆಗೆ,
ಜೀವ ಕಟ್ಟುವ
ಜಿನನಣತಿಗೆ,
ದೀಪ ಹಚ್ಚುವ
ಬುದ್ಧ ಪ್ರೀತಿಗೆ,
ಭಾರ ಹೆಚ್ಚುವ
ಅಹಮಿನ ಅಣಕೆಗೆ,
ಕದಲದೆ ಇಳಿದ
ಪದ್ಯವೊಂದಿದೆ,
ಬರೆಯಲಾಗದು
ಬದುಕ ಬೇಕು,
ಬದುಕು ಮುಂದಿದೆ!

--> ಮಂಜಿನ ಹನಿ

Saturday 7 March 2015

ಹೆಣ್ಣೆಂದರೆ?!


ಹೆಣ್ಣೆಂದರೆ,
ಒಡಲೊಳಗೆ ಹೆತ್ತುಹೊತ್ತು
ಸಹಿಸಿದ
ಅಮ್ಮನ ನಿಟ್ಟುಸಿರು, ಸೆರಗ ಬೆವರು,
ಅಪ್ಪನ ಒಳಕುದಿಯ
ಉಪಶಮನದ ಗುಳಿಗೆ,
ಮಕ್ಕಳ ಚೈತನ್ಯದ ಚಿಲುಮೆ,
ಸಂಬಂಧಗಳ ಒಲುಮೆ,
ಕಪ್ಪುಮಣ್ಣ ಬನದ ಕರಡಿ,
ಬಿಳಿಯ ಅಳ್ಳೆ, ಹತ್ತಿ ಬೆಳೆ!

ಹೆಣ್ಣೆಂದರೆ,
ಶತಮಾನಗಳ ದಾಟುವ
ಜೀವದ ಕೊಂಡಿ,
ಅಂತಃಕರಣ, ಬತ್ತದೆದೆ,
ಎದೆಯ ಹಾಲ ಸಿಹಿ,
ಸೆರಗಿಗಷ್ಟೇ ಗೊತ್ತಿರುವ
ಅವುಡುಗಚ್ಚಿದವರ ಆತಂಕದ ನೆರಳು,
ಗಂಟಲುಬ್ಬಿ
ಮಾತಾಗದ ಕಣ್ಣೀರು,
ಮಕ್ಕಳ ಬದುಕ ಕಟ್ಟಿದ
ಅಜ್ಜಿಯ ಛಲ,
ಬಡಿದಾಡುವ ಬದುಕ ಬವಣೆ,
ಕಾಮುಕರ ಎಡೆಮುರಿ ಕಟ್ಟಿ,
ಕಾಮದುಂಡೆಗಳ ನುಂಗಿ
ಜಗವ ಪಾಲಿಸುವ
ಉತ್ತನಹಳ್ಳಿಯ ಉರಿಮಾರಿ,
ಉರಿ ಗದ್ದುಗೆಯ ಸಹನೆ!

ಹೆಣ್ಣೆಂದರೆ,
ಮತ್ತೇನೂ ಅಲ್ಲ,
ತನ್ನೊಳಗೆ ಕುದಿಯುವ
ಲಾವಾಗ್ನಿ ಪರ್ವತಗಳ
ತಣಿಸಿ, ತಣ್ಣಗೆ ನಗುವ
ಭೂಮಿಯೊಡಲು!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Monday 2 March 2015

ಲಯಬದ್ಧ - ಒಲವನಾದ


ಕಚ್ಚಿ ಹಿಡಿದಿದೆ ತೊಟ್ಟು ಹೂವನು,
ಹೂವು ಅರಳಲಿ ಜಿಹ್ವೆ ಜೇನು,
ಅಮಲು ತುಂಬಿದ ಮಲ್ಲಿಗೆಯ ದಂಡೆ,
ಮುಡಿಸುವೆ ತಾಳು ಈಗಲೆ ಬಂದೆ!

ನನ್ನ ತೋಳ ತಬ್ಬಲು, ಬಳ್ಳಿ ಮರವ ಹಬ್ಬಲು,
ಸಿರಿ ಮಲ್ಲಿಗೆಯ ಘಮ ಮುಡಿಯ ತುಂಬಲಿ,
ಎದೆಗೆ ಹಬ್ಬಿದೆ ನಲಿವ ಬಳ್ಳಿ;
ಹೇಗೆ ಹೇಳಲಿ ಬರಿಯ ಮಾತಲಿ?

ಮತ್ತೇರಿದ ದುಂಬಿ ಹೂವಿನದರ ಸೋಕಿದೆ,
ಸಾವಕಾಶವಿರಲಿ ಎದೆಯ ಏರಿಳಿತದಿ,
ದಳಗಳಲಿ ಸಿಕ್ಕ ದುಂಬಿಯ ಪ್ರೇಮದುನ್ಮಾದ,
ಲಯಬದ್ಧವಾದಂತಿದೆ ಒಲವ ನಾದ!

--> ಮಂಜಿನ ಹನಿ

ಚಿತ್ರ ಕೃಪೆ: ಗೂಗಲ್ ಅಂತರ್ಜಾಲ

Tuesday 24 February 2015

ದೇವರ ಫರ್ಮಾನು!!


ಮಾನ್ಯ ಜಗದೋದ್ಧಾರಕ ಕರುಣಾಮಯಿ
ದೇವರೆ,
ಈಗಿಂದೀಗಲೇ ಫರ್ಮಾನು ಹೊರಡಿಸು;
ಹಣ್ಣು ಕಾಯಿ ಮಾಡಿಸಿ,
ಅಡ್ಡ ಪಲ್ಲಕ್ಕಿ ಉತ್ಸವಗಳು,
ಎಡೆ ಮಡೆ ಸ್ನಾನಗಳು,
ಭಾಗವತರ ಭಗವದ್ಗೀತೆಗಳು
ಭಕ್ತಿಯಾಗಿ ರಕ್ತದ ಹೊಳೆ ಹರಿಸಿ,
ಸವೆದು, ಸೋರಿ, ರಾಗ - ದ್ವೇಷದ
ಪದವಾಡಿಸಿ, ಮುಗಿದಿವೆ,
ಜೀವ ನಿಲ್ಲುವ ಮೊದಲು
ಪ್ರಪಂಚ ಉಸಿರಾಡುವಂತೆ
ಫರ್ಮಾನು ಹೊರಡಿಸು!

ಕತ್ತಲ ರಾಜ್ಯದಲ್ಲಿ ಹೊಳೆದು ಬಂದವನ
ಪವಾಡವಾಗಿಸಿ,
ನೀರ ಮೇಲೆ ನಡೆಸಿ,
ಉಣ್ಣದವರಿಗೆ ರೊಟ್ಟಿ ಕೊಡಿಸಿ,
ಅವ ದೇವ ಮಾನವನಲ್ಲ,
ಬರೀ ಮನುಷ್ಯತ್ವದ
ಕಾರುಣ್ಯ ಮೂರ್ತಿಯೆಂದರಿತ ಕೂಡಲೆ,
ಶಿಲುಬೆಗೇರಿಸಿ
ಮೊಳೆ ಜಡಿಸಿ ದೇವರಾಗಿಸಿದ್ದಾರೆ;
ಕೋಲ್ಕತ್ತೆಯ ಕೊಳಕು ಬೀದಿಗಳಲ್ಲಿ
ಕುಷ್ಟ ರೋಗಿಗಳನ್ನು ಬಾಚಿ ತಬ್ಬಿದ
ಮದರ್ ತೆರೇಸಾಳನ್ನು
ಕ್ರಿಶ್ವಿಯನ್ನಾಗಿಸಿದವರಿಗೆ
ಕಾರುಣ್ಯವನ್ನು ದಯಪಾಲಿಸಿ
ಫರ್ಮಾನು ಹೊರಡಿಸು!

ಕಡು ಕತ್ತಲೆಯ ಗುಹೆಯೊಳಗೆ
ಮೊಹಮದ್ಪೈಗಂಬರರಿಗೆ
ಒಲಿದು ಬಂದು ಯಾ ಮೌಲಾ,
ಬೆಳದಿಂಗಳ ಅಲ್ಲಾ,
ಜಿಹಾದಿನ ಪಹರೆಯೊಳಗೆ,
ಮುಳುಗೇಳುತ್ತಿರುವ ಜಗಕೆ,
ರಕ್ತದ ಸೋಂಕು ತಗುಲಿ,
ಮನಸೆಲ್ಲಾ ಮಡುಗಟ್ಟಿ,
ಜಾಗತಿಕ ಟೆರರಿಸಂ ಮೈಯಾಗುವ ಮುನ್ನ,
ಕೆಟ್ಟ ಮನಸುಗಳ ಕಣ್ಣಾಗುವ ಮುನ್ನ
ಸಹನೆಯೊಂದು ಕುಡಿಯೊಡೆದು,
ದೇವರ ಅಮೂರ್ತ ರೂಪವೊಂದು
ಎಲ್ಲರೆದೆಗಳಲಿ
ಮನುಷ್ಯತ್ವವಾಗಿ ಚಿಗುರಲಿ;
ಶಪಿಸಿ ಈಗಿಂದೀಗಲೆ
ಫರ್ಮಾನು ಹೊರಡಿಸು!

--> ಮಂಜಿನ ಹನಿ

ಚಿತ್ರ ಕೃಪೆ: ಗೂಗಲ್ ಅಂತರ್ಜಾಲ

Monday 5 January 2015

ಅವಳಂತೆ ಕವಿತೆ!


ನೀನಂದಂತೆ ಬರಿಯ ಖಾಲಿ ಪೋಲಿ
'ಐ ಮಿಸ್ ಯೂ', 'ಐ ಲವ್ ಯೂ' ಮತ್ತು
ಎದೆ ಬಿರಿದ ವಿರಹಗಳನು,
ಕೊತ ಕೊತನೆ ಕುದಿಯುವ
ವಿಷದ ಬಾಣಲೆಯೊಳಗೆ
ಬೇಯಿಸುವ ಸಲುವಾಗೇ
ನನ್ನೊಡಲಿಗೆ ಬೆಂಕಿ ಹಚ್ಚಿಕೊಂಡೆ,
ಆಹಾ, ಎಂಥ ಯಾತನೆ?!
ಆಘ್ರಾಣಿಸಿದಷ್ಟೂ ಕಮಟು ಕಮಟು,
ಹದಕ್ಕೆ ಬೇಯದ
ಹೃದಯ ಬೇಯಿಸುವುದೆಷ್ಟು ಕಷ್ಟ?!

ಅದಕ್ಕೊಂದಿಷ್ಟು ಪ್ರೀತಿ, ಪ್ರೇಮ,
ಮಿಡಿತ, ತುಡಿತ,
ನಗು - ಅಳು, ಖಾಲಿತನ, ಪೋಲಿತನ,
ಆತುರ, ಕಾತುರಗಳ ಜೊತೆಗೆ
ರುಚಿಗೆ ತಕ್ಕಷ್ಟು ಕೋಪ,
ಅಸಹನೆ, ನಿಟ್ಟುಸಿರ ತಾಪ,
ಮಾಂಸ, ಮಜ್ಜೆಗಳು ಉರುವಲಿಗೆ,
ರಕ್ತದ ತರ್ಪಣವಿದೆ
ತುಪ್ಪ ಸುರಿದಂತೆ ಉರಿವ ಬೆಂಕಿಗೆ!

ಕುದ್ದ ಭಾವಗಳು ಒಂದೊಂದಾಗಿ
ಚಿಮ್ಮಿ ಹಾರಿವೆ,
ಒಂದಕ್ಕೆ ಕಣ್ಣು ಹರಿದರೆ,
ಇನ್ನೊಂದು ಅರೆ ಸುಟ್ಟು,
ಮತ್ತೊಂದು ಕೈ ಊನ, ಕಾಲೂನ,
ಸತ್ತ ಭಾವಗಳೇನೂ ಸತ್ತಿರುವುದಿಲ್ಲ,
ಸಾಯುವುದೂ ಇಲ್ಲ,
'ನಾನೇ' ಕುದ್ದೆ, ಖುದ್ದು ಆವಿಯಾದೆ!

- ಮಂಜಿನ ಹನಿ

ಚಿತ್ರ ಕೃಪೆ: ಗೂಗಲ್ ಅಂತರ್ಜಾಲ