ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Saturday 24 October 2015

ಕವಿ ನಾನು; ಕೊಲೆಗಡುಕನಲ್ಲ!


ಕೈಗೆ ಕಟ್ಟಿರುವ
ಬೇಡಿಗಳನ್ನೆಲ್ಲಾ ಬಿಡಿಸಿ
ಬಿಡುಗಡೆ ನೀಡಿ ಸ್ವಾಮಿ,
ನಾನು ಕವಿಯಷ್ಟೆ,
ಕೊಲೆಗಡುಕನಲ್ಲ!

ಗಂಟಲು ಬಿಗಿದು
ಉಸಿರುಗಟ್ಟಿಸಬೇಡಿ
ದಮ್ಮಯ್ಯ;
ಬರೆದುದರಲ್ಲೇ ಉಸಿರಾಡುವ ನಾವು
ಸತ್ಯ ನುಡಿಯುತ್ತೇವೆಂದು
ಭಯವೆ?
ಬನ್ನಿ ನಿಮ್ಮ ಕೆಂಪು ಬಣ್ಣದ
ಕೋವಿಗೆ ಕೊರಳು ಕೊಡಲು
ಸಿದ್ಧರಿದ್ದೇವೆ,
ಕೊಂದುಬಿಡಿ ಬದುಕಿಕೊಳ್ಳುತ್ತೇವೆ!

ಅದಕ್ಕೂ ಮೊದಲೆ ಹೇಳಿಬಿಡುತ್ತೇನೆ,
ನನ್ನ ಸಾವಿನ ಘೋರಿ,
ನಿಮಗೆ ಮಹಲಂತೂ ಅಲ್ಲ...
ನಿಮ್ಮ ಮದ್ದು ಗುಂಡು,
ಕೋವಿ, ಕತ್ತಿಗಳಿಗೆ ಪ್ರತಿಯಾಗಿ
ನನ್ನ ನೀಲಿ ಶಾಯಿ ಹರಿಯುತ್ತದೆ,
ತಾಕತ್ತಿದ್ದರೆ
ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಿ;
ರಕ್ತ ಬೀಜಾಸುರನ
ವಂಶಸ್ಥರು ನಾವು ನಿಮಗೀಗಾಗಲೆ
ಗೊತ್ತಿರಬೇಕಲ್ಲ?
ಈಗಾಗಲೇ ಲಕ್ಷಾಂತರ ಅನಂತ ಮೂರ್ತಿಗಳು,
ಕಲಬುರ್ಗಿಗಳು, ಪನ್ಸಾರೆಗಳ
ಉಪಟಳದಿಂದ ಬಸವಳಿದಿದ್ದೀರಿ?!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ