ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Thursday 28 January 2016

ಸೋಲೊಪ್ಪಿಕೊಂಡೆವು!


ನಿರಂತರ ಜೀತದ ಧ್ಯಾನಕ್ಕೆ ಮೈಯೊಡ್ಡಿಕೊಂಡೆವು ನಮ್ಮನ್ನು ಕ್ಷಮಿಸಿ, ಚಿಟ್ಟೆಯ ಅಂದವನ್ನು ಸಹಿಸದ ನೀವು ರೆಕ್ಕೆಗಳನ್ನು ಸಿಗಿದಿರಿ, ವಿರೂಪಗೊಂಡರೂ ನಿರ್ಲಿಪ್ತತೆ ನಟಿಸಿದರಾಯ್ತು, ಬಿಟ್ಟುಬಿಡಿ ಸೋಲೊಪ್ಪಿಕೊಂಡೆವು! ತತ್ವ ಸಿದ್ಧಾಂತ ಎಂದು ಬಾಯಿ ಬಡಿದುಕೊಳ್ಳಲು ನಾವೆಷ್ಟರವರು? ಅರೆ ಹೊಟ್ಟೆ ಹಾಕಿದರೂ, ಮುಚ್ಚಿದ ಬಟ್ಟೆಯೊಳಗೆ ಸಾವಿರಾರು ತೂತು ಬಿದ್ದರೂ ರಟ್ಟೆ ತುಂಬಿಸಿಕೊಂಡು ಹೋರಾಟಕ್ಕೆ ನಿಂತದ್ದು ತಪ್ಪೇ, ತಪ್ಪು; ಆದರೆ ನೀವು ನಿಮ್ಮ ಘನತೆ ಮೀರಿ ರೋಹಿತನನ್ನು ಬಾಣಲೆಯಲ್ಲಿ ಉರಿದದ್ದು, ಅವ ಮೇಲೇಳದಂತೆ ಆತ್ಮದ ಕಾಲು ಮುರಿದದ್ದು, ಕಣ್ಣಂಚಿನ ಕಂಬಿನಿಯ ಉಸಿರು ಕದ್ದು ನಿಶಬ್ಧ ಅಡರಿತು, ಇಷ್ಟಕ್ಕೆ ಬಿಡಿ ನಾವು ಸೋಲೊಪ್ಪಿಕೊಂಡೆವು! ಹಿಟ್ಟಿಲ್ಲದ ಅವನು ತನ್ಹೊಟ್ಟೆ ತುಂಬಿಸಿಕೊಳ್ಳುವುದು ಬಿಟ್ಟು ನ್ಯಾಯ, ಶಾಂತಿ, ಸಮಾನತೆ, ಗಾಂಧೀ-ಅಂಬೇಡ್ಕರ್, ಮನುಷ್ಯ ಪ್ರೀತಿ ಎಂದು ಹೊರಟದ್ದು ತಪ್ಪೇ, ಜೀವಕ್ಕಾದರೆ ಜಾತಿ, ಸಾವಿಗೂ ಜಾತಿಯೇ? ಹೋಗಲಿ ಬಿಡಿ, ನಾವು ಸೋಲೊಪ್ಪಿಕೊಂಡೆವು! ಶತ ಶತಮಾನಗಳು ವಿದ್ಯೆ, ವಿವೇಕಗಳನ್ನು ಕಸಿದಿರಿ, ಅಂತಃಸತ್ವ, ಮಾಂಸ ಖಂಡದ ಶಕ್ತಿಯನ್ನು ಬಸಿದಿರಿ, ಮನುಷ್ಯರನ್ನು ಮನುಷ್ಯರೆನಿಸಲು ಬ್ರಿಟೀಷರು ಬರಬೇಕಾಯ್ತು, ಈಗಲೂ ಸಂಸ್ಕೃತದೊಳಗೆ ಬ್ರಾಹ್ಮಣ್ಯ ನಾಜೂಕಾಗಿ ಚಲಾವಣೆಯಾಗುತ್ತದೆ; ಜನಪದರ ಆಚರಣೆಗಳು ಹೇಳ ಹೆಸರಿಲ್ಲದೆ ಮಕಾಡೆ ಮಲಗುತ್ತವೆ, ಅನಾಗರೀಕವೆಂದು ಬೀಗ ಜಡಿಸಿಕೊಂಡು! ಮೀರುವುದಿಲ್ಲ ಬಿಡಿ, ಏರುವುದಿಲ್ಲ ಬಿಡಿ, ನಿಮಗೆ ಜಿಂದಾಬಾದ್, ನಮ್ಮನ್ನು ಬದುಕಲು ಬಿಡಿ, ನಾವು ಸೋಲೊಪ್ಪಿಕೊಂಡೆವು! - ಮಂಜಿನ ಹನಿ