ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Tuesday 31 January 2012

ಯುವ ಮನಸ್ಸಿನ ಹತ್ತು ಹಲವು ಮುಖಗಳು - 1

ಹರೆಯದ ಗಾಳಕ್ಕೆ ಸಿಕ್ಕ ಮೀನು
------------------------------



ಹೌದು ಆಕೆ ಆಗಷ್ಟೆ ತನ್ನ ಹರೆಯದ ಹುಚ್ಚು ಆಸೆಗಳಿಗೆ ತನ್ನ ಮನಸ್ಸನ್ನು ಪರದೆಯಾಗಿಸಿದ್ದಳು, ಹೆಸರು ಬಿಂದು. ಮೈನೆರೆದು ಏಳೆಂಟು ತಿಂಗಳುಗಳು ಕಳೆದಿದ್ದರಬಹುದು. ಪ್ರಾಯದ ಬಿಸುಪಿಗೆ ಹರೆಯದ ಆಸೆಗಳು ಗರಿಗೆದರಿದ್ದವು. ಕನಸುಗಳಲ್ಲಿಯೂ ಕಚಗುಳಿ ಇಡುವ ಅವಳ ರಾಜಕುಮಾರನ ಕಲ್ಪನೆಗಳು ಅವಳನ್ನು ರೋಮಾಂಚನಗೊಳಿಸುತ್ತಿದ್ದವು. ಆಗಷ್ಟೇ ಹತ್ತನೆ ತರಗತಿ ಓದುತ್ತಿದ್ದರೂ ಕಾಣುವ ಕನಸುಗಳಿಗೇನೂ ಕಡಿಮೆಯಿರಲಿಲ್ಲ. ಅಷ್ಟಲ್ಲದೆ ದ.ರಾ.ಬೇಂದ್ರೆಯವರು ’ಹುಚ್ಚುಕೋಡಿ ಮನಸು, ಹದಿನಾರರ ವಯಸು’ ಎಂದು ಹೇಳಿದ್ದಾರೆಯೇ.

ಮನೆ ಕಡೆ ಆಗರ್ಭ ಶ್ರೀಮಂತರಲ್ಲದಿದ್ದರೂ ಅವಳ ತಂದೆ ಮಗಳಿಗೇನೂ ಕಡಿಮೆ ಮಾಡಿರಲಿಲ್ಲ. ತಂದೆಯದು ಸ್ವಂತ ಉದ್ಯಮವಾದುದ್ದರಿಂದ ತಾಯಿ ಕೂಡ ಅವರಿಗೆ ಹೆಗಲು ಕೊಟ್ಟಿದ್ದಳು. ಈ ಕಾರಣದಿಂದಲೇ ಏನೋ ಬಿಂದುವಿಗೆ ಸ್ವಲ್ಪ ಅತಿಯೆನಿಸುವಷ್ಟೇ ಸ್ವಾತಂತ್ರ್ಯ ಸಿಕ್ಕಿತ್ತು. ಅವಳ ದೇಹದಲ್ಲಾದ ಬದಲಾವಣಿಗೆಗಳು ಆ ಸ್ವಾತಂತ್ರ್ಯವನ್ನು ಸ್ವೇಚ್ಛೆಯಾಗಿಸಿಕೊಳ್ಳೆಂದು ಆಕೆಯನ್ನು ಪ್ರೇರೇಪಿಸುತ್ತಿದ್ದವು. ಕನಸ್ಸಿನಲ್ಲಿನ ರಾಜಕುಮಾರನನ್ನು ಈಗ ಎದುರಿಗೆ ಸಿಗುತ್ತಿದ್ದ ಹುಡುಗರ ಚರ್ಯೆಯಲ್ಲಿ ಹುಡುಕುತ್ತಿದ್ದಳು. ಅವಳ ವಯಸ್ಸಿನ ಅಪ್ರಬುದ್ಧತೆಯೋ ಏನೋ ಸ್ವಲ್ಪ ಸಿನಿಮೀಯ ಹೀರೋಹಿಸಂ ತೋರಿಸಿದ ಹುಡುಗರೆಲ್ಲಾ ಅವಳ ಕನಸಿನ ರಾಜಕುಮಾರನಿಗೆ ತಾಳೆಯಾಗುತ್ತಿದ್ದರು ಅವಳ ಶಾಲೆಯಲ್ಲಿಯೇ ಕಲಿತ ಹಳೆಯ ವಿದ್ಯಾರ್ಥಿ ಮಿಲನ್, ಸ್ವಲ್ಪ ಒರಟು ಸ್ವಭಾವದ ಹುಡುಗ ಆದರೆ ಎತ್ತರದ ನಿಲುವು ಮತ್ತು ಆಕರ್ಷಕ ಮೈಕಟ್ಟು ಹೊಂದಿದ್ದನು. ಅವನಿಗೆ ಕ್ರಿಕೆಟ್ ಎಂದರೆ ಒಂದು ರೀತಿಯ ಹುಚ್ಚು, ತಕ್ಕ ಮಟ್ಟಿಗೆ ಒಳ್ಳೆಯ ಆಟಗಾರನೆ. ಆ ಕ್ರಿಕೆಟ್ ಹುಚ್ಚಿನಿಂದಲೇ ತನ್ನ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿಕೊಂಡು, ಈಗ ಬೀದಿ ಅಲೆಯುತ್ತಿದ್ದ. ಅವನ ಹಿಂದೆ ಅವನಂತವರ ದೊಡ್ಡ ದಂಡೇ ಇತ್ತು. ಅವನಿಂದಾಗಿ ಅವರೆಲ್ಲಾ ಕೆಟ್ಟಿದ್ದರೋ, ಇಲ್ಲ ಅವರೆಲ್ಲರಿಂದಾಗಿ ಅವನು ಕೆಟ್ಟಿದ್ದನೋ ತಿಳಿಯದು.

ಇಂತಹ ಹುಡುಗರೇ ಹರೆಯದ ಹುಡುಗಿಯರ ಮನಸ್ಸಿಗೆ ಬೇಗ ಲಗ್ಗೆಯಿಡುವುದೆಂದು ಕಾಣುತ್ತದೆ. ಯಾವುದೋ ಜಗಳದಲ್ಲಿ ಪ್ರಾರಂಭವಾದ ಅವರ ಪರಿಚಯ ಕ್ರಮೇಣ ಆತ್ಮೀಯತೆಯಾಗಿ, ನಂತರದಲ್ಲಿ ಪ್ರೀತಿಯಾಗಿ ಬದಲಾಗಿತ್ತು. ಅವಳಿಗೆ ಅವನ ಆ ಒರಟುತನ, ಆತ ಅವಳಿಗಾಗಿ ಮಾಡಿಕೊಳ್ಳುತ್ತಿದ್ದ ಹೊಡೆದಾಟಗಳು ಅವನಿಗೆ ಅವಳ ಮೇಲಿದ್ದ ಅಗಾಧ ಪ್ರೀತಿಯ ಕುರುಹುಗಳಂತೆ ಭಾಸವಾಗುತ್ತಿದ್ದವು. ಜೊತೆಗೆ ಮೊಬೈಲ್ ನಲ್ಲಿ ಸಂದೇಶಗಳು ಮತ್ತು ಕರೆಗಳು ಸರಾಗವಾಗಿ ಹರಿದಾಡುತ್ತಿದ್ದವು. ಅವರಿಬ್ಬರಿಗೂ ಪ್ರತಿಕ್ಷಣವೂ ಸಂಪರ್ಕದಲ್ಲಿದ್ದೇವೆ ಎನಿಸುವಷ್ಟರ ಮಟ್ಟಿಗೆ ಒಬ್ಬರನೊಬ್ಬರು ಹಚ್ಚಿಕೊಂಡಿದ್ದರು. ಅವರ ಈ ಪ್ರೀತಿಯ ಅಮಲೋ ಏನೋ ಆಕೆ ತನ್ನ ಹತ್ತನೆಯ ತರಗತಿಯನ್ನು ಪಾಸು ಮಾಡಲು ತುಂಬಾ ತ್ರಾಸ ಪಡಬೇಕಾಯ್ತು. ’ಪ್ರೇಮ ಕುರುಡು’ ಎನ್ನುತ್ತಾರೆ ಆದರೆ ಪ್ರೀತಿಯಲ್ಲಿ ಬಿದ್ದವರು ತಮ್ಮ ಸಂಗಾತಿಯ ಕೋರೆಗಳನ್ನು ಗುರ್ತಿಸುವಲ್ಲಿ ಕುರುಡರಾಗುತ್ತಾರೆ. ಅದರಂತೆ ಅವನ ಕೆಟ್ಟ ಚಟಗಳು ಅವಳ ಕಣ್ಣಿಗೆ ಕಾಣಿಸುತ್ತಲೇ ಇರಲಿಲ್ಲ. ಬಿಂದು ಮಿಲನ್’ನ ಮೇಲೆ ತುಂಬಾ ಭಾವನಾತ್ಮಕವಾಗಿ ಅವಲಂಭಿತಳಾಗಿದ್ದಳು. ತನ್ನ ಅಪ್ಪ ಅಮ್ಮ ಸಣ್ಣದಾಗಿ ಗದರಿದರೂ ಸಾಕು, ಅವನ ಸಾಂಗತ್ಯ ಬಯಸುತ್ತಿದ್ದಳು. ಅದು ಹದಿ ಹರೆಯದವರ ಬಲಹೀನತೆ, ಅದಕ್ಕಾಗಿಯೇ ಬೆಳೆದ ಮಕ್ಕಳನ್ನು ತುಂಬಾ ಕಾಳಜಿಯಿಂದ ನಡೆಸಿಕೊಳ್ಳಬೇಕಾಗುತ್ತದೆ. ಆ ಕಾಳಜಿ ಮತ್ತು ಪ್ರೀತಿ ಹೆತ್ತವರಿಂದ ದೊರೆಯದಿದ್ದಾಗ ಮಕ್ಕಳು ಅದನ್ನು ಮತ್ತೊಬ್ಬರಲ್ಲಿ ಹರಸುತ್ತಾರೆ. ಆಗಲೆ ಮಕ್ಕಳು ಹಾದಿ ತಪ್ಪುವ ಸಂಭವ ಜಾಸ್ತಿ.

ಕಡಿಮೆ ಅಂಕ ಪಡೆದಿದ್ದ ಕಾರಣ ಕಾಲೇಜ್’ನಲ್ಲಿ ಸೀಟು ಗಿಟ್ಟಿಸಿಕೊಳ್ಳಲು ಪರದಾಡುವಂತಾಯ್ತು. ಕಾಲೇಜ್ ಸೇರಿದ ಮೇಲಂತೂ ಅವಳನ್ನು ಹಿಡಿಯುವವರೇ ಇಲ್ಲದಂತಾಯಿತು. ಕಾಲೇಜ್’ನ ತರಗತಿಗಳಿಗೆ ಗೈರಾಗಿ ಮಿಲನ್’ನೊಂದಿಗೆ ಬೈಕೇರಿ ಕುಳಿತುಬಿಡುತ್ತಿದ್ದಳು. ಮೈಸೂರ್’ನ ಎಲ್ಲಾ ಚಿತ್ರಮಂದಿರಗಳು ಮತ್ತು ಉದ್ಯಾನವನಗಳನ್ನು ಅದಾಗಲೆ ಸಂದರ್ಶಿಸಿ ಆಗಿತ್ತು. ಅವರ ಈ ಪ್ರಣಯದಾಟ ಅವರ ಅಪ್ಪ-ಅಮ್ಮಂದಿರ ಅರಿವಿಗೆ ಬರದಿದ್ದುದೇ ಸೋಜಿಗ. ಇಷ್ಟೆಲ್ಲವುಗಳ ನಡುವೆ ಬಿಂದು ತನ್ನ ಪ್ರಥಮ ಪಿಯೂಸಿಯನ್ನು ಪಾಸ್ ಮಾಡಿದ್ದೇ ಒಂದು ಸಾಧನೆಯಾಗಿತ್ತು. ದ್ವಿತೀಯ ಪಿಯೂಸಿಗೆ ಕಾಲಿಟ್ಟರೂ ಆಕೆಗೆ ಓದಿನ ಬಗ್ಗೆ ಗಾಂಭೀರ್ಯತೆ ಬಂದಿರಲಿಲ್ಲ. ಏನಾದರಾಗಲಿ ಮಿಲನ್’ನೊಂದಿಗೆ ಸುತ್ತುವುದೇ ಸುಖವೆಂದು ಭಾವಿಸಿದ್ದಳು. ಈ ಕಾರಣದಿಂದಾಗಿಯೇ ಆಕೆ ತನ್ನ ಪೂರ್ವಭಾವಿ ಪರೀಕ್ಷೆಗಳನ್ನೂ ತಪ್ಪಿಸಿಕೊಂಡಳು. ’ಆಕೆಯ ಗೈರು ಹಾಜರಿಯ ಬಗ್ಗೆ’ ಪ್ರಾಂಶುಪಾಲರ  ಪೋಸ್ಟ್ ಕಾರ್ಡ್ ಬಿಂದುವಿನ ಮನೆಯಲ್ಲಿ ಅಲ್ಲೋಲ ಕಲ್ಲೋಲವನ್ನೆಬ್ಬಿಸಿತ್ತು. ಯಾವತ್ತೂ ಬಿಂದುವಿನ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕದ ಪೋಷಕರು ಅವಳಿಗೆ ತೀರಾ ಬಿಗಿ ಮಾಡಿದರು. ಆದರೆ ಅವರಿಗೆ ಬಿಂದು ಪ್ರೀತಿಯಲ್ಲಿ ಬಿದ್ದಿರುವುದು ತಿಳಿಯಲಿಲ್ಲ.

ಈ ವಿಷಯದ ಬಗ್ಗೆ ಮಿಲನ್’ನೊಂದಿಗೆ ಮಾತನಾಡಲು ಅವನನ್ನು ಎಡತಾಕಿದಳು. ಅವನು ದೂರದಲ್ಲಿನ ಪ್ರವಾಸಿ ತಾಣಕ್ಕೆ ಹೋಗಿ ಸಾವಕಾಶವಾಗಿ ಮಾತನಾಡುವ ಎಂದು ಒಪ್ಪಿಸಿ, ಅವಳನ್ನು ಕರೆದೊಯ್ದನು. ಅಲ್ಲಿನ ನಿರ್ಜನವಾದ ಪ್ರಶಾಂತ ವಾತಾವರಣ ಅವರ ಮಾತುಕತೆಗೆ ಪ್ರಶಸ್ತವೆನಿಸಿತ್ತು. ಅವಳು ಮನೆಯಲ್ಲಿನ ಬಿಗುವಾದ ವಾತಾವರಣ ತಮ್ಮ ಪ್ರೀತಿಯ ಬಗ್ಗೆ ತಿಳಿಸುವಂತೆ ಮಾಡಿಬಿಡಬಹುದು ಎಂದು ಹೇಳಿ ಕಣ್ಣೀರಾಗಿದ್ದಳು. ತಮ್ಮ ಪ್ರೀತಿಯ ಬಗ್ಗೆ ಅವಳ ಮನೆಯಲ್ಲಿ ತಿಳಿದುಬಿಟ್ಟರೆ ದೊಡ್ಡ ರಾದ್ಧಾಂತವೇ ಆಗಿಬಿಡುತ್ತದೆಂಬುದನ್ನು ಮನಗಂಡ ಮಿಲನ್ ಸಣ್ಣದಾಗಿ ನಡುಗಿದ್ದ. ಆದರೂ ಅದನ್ನು ತೋರಗೊಡದೆ ಅವಳನ್ನು ಅಪ್ಪಿ ಸಂತೈಸುವ ಪ್ರಯತ್ನ ಮಾಡಿದನು. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಇಬ್ಬರೂ ಅಧೀರರಾಗಿಬಿಟ್ಟರು. ಅಂತಹ ಒಂದು ವಿಷಮ ಘಳಿಗೆಯಲ್ಲಿ ಅವರಿಬ್ಬರ ಮನಸ್ಸುಗಳು ಹಳಿ ತಪ್ಪಿದ್ದವು. ಏಕಾಂತದ ತಾಣವಾದ್ದರಿಂದ ಅವರ ದೇಹದ ಹರೆಯದ ಬಿಸುಪಿಗೆ ಬೆವರ ಹನಿಗಳು ಧಾರಾಕಾರವಾಗಿ ಹರಿದಿದ್ದವು. ಎರಡೂ ಮನಸ್ಸುಗಳು ತಮಗೆ ಅರಿವೇ ಇಲ್ಲದೆ ಕಾಲು ಜಾರಿದ್ದವು. ನಂತರದ ದಿನಗಳಲ್ಲಿ ಮಿಲನ್ ಬಿಂದುವಿನೊಂದಿಗೆ ಮಾತನ್ನೇ ಕಡಿಮೆ ಮಾಡಿದ್ದನು. ಈ ಎಲ್ಲಾ ಘಟನೆಗಳಿಂದ ಕಂಗೆಟ್ಟಿದ್ದ ಬಿಂದುವಿಗೆ ತಾನು ಕಾಲು ಜಾರಿದುದರ ಕುರುಹು ತನ್ನ ಗರ್ಭದಲ್ಲಿ ಚಿಗುರೊಡೆಯುತ್ತಿದೆ ಎಂಬ ವಿಷಯ ಸಿಡಿಲೆರಗಿದಂತಾಗಿತ್ತು. ಅವಳ ಮನಸ್ಸು ಖಿನ್ನತೆಗೆ ಜಾರಿಬಿಟ್ಟಿತ್ತು. ಓದೂ ಬೇಡ, ಸುತ್ತುವುದೂ ಬೇಡ, ಜೀವನವೂ ಬೇಡ ಎನಿಸುತ್ತಿತ್ತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಮಿಲನ್ ಕೂಡ ಜೊತೆಗಿರದಿದ್ದುದು ಅವಳನ್ನು ಹೈರಾಣಾಗಿಸಿತ್ತು. ಕಡೆಗೆ ಮನೆಯವರಿಗೆ ಸತ್ಯವನ್ನು ತಿಳಿಸಲೂ ಆಗದೆ, ಎದುರಿಸಲೂ ಆಗದ ಹುಚ್ಚು ಮನಸ್ಸು ಆತ್ಮಹತ್ಯೆಗೆ ಶರಣಾಯಿತು. ವಿಷಯ ತಿಳಿದ ಮಿಲನ್ ಭೂಮಿಗೆ ಕುಸಿದು ಹೋದ, ಆ ಆಘಾತವನ್ನು ತಾಳಲಾರದೆ ತಾನೂ ಆತ್ಮಹತ್ಯೆಗೆ ವಿಫಲ ಯತ್ನ ಮಾಡಿ ಆಸ್ಪತ್ರೆ ಸೇರುವಂತಾಯ್ತು.

ಪೋಷಕರ ಸಣ್ಣಮಟ್ಟಿಗಿನ ಅಜಾಗರೂಕತೆ ಮತ್ತು ಹರೆಯದ ಹುಚ್ಚುಮನಸ್ಸಿನ ದುಡುಕುಗಳು ಎಷ್ಟೆಲ್ಲಾ ಜನರ ನೆಮ್ಮದಿಯನ್ನು ಕಸಿದಿತ್ತು. ಪ್ರೀತಿ ಮಾಡುವುದು ತಪ್ಪಲ್ಲ ಆದರೆ ಹರೆಯದಲ್ಲಿ ಮೂಡುವ ಆಕರ್ಷಣೆಗಳೇ ಪ್ರೀತಿಯಲ್ಲ. ದೇಹದಲ್ಲಿ ಆಗುವ ಹಾರ್ಮೋನ್’ಗಳ ಬದಲಾವಣೆಯಿಂದ ಅಂತಹ ಭಾವಗಳು ಎಲ್ಲರಲ್ಲಿಯೂ ಹುಟ್ಟುವುದು ಸಹಜ, ಆದರೆ ಯುವಮನಸ್ಸುಗಳು ಅದನ್ನೇ ಪ್ರೀತಿಯೆಂದು ಭಾವಿಸಿ ಜೀವನವನ್ನು ಹಾಳು ಮಾಡಿಕೊಳ್ಳುವುದು ಸರಿಯಲ್ಲ. ಹರೆಯದಲ್ಲಿ ಮೂಡುವ ಪ್ರೀತಿಗಳಿಗೆ ಕಾಲನ ಚೌಕಟ್ಟು ನೀಡಿ, ಸಭ್ಯತೆಯ ಎಲ್ಲೆಯನ್ನು ಮೀರದಿರಿ. ಮೊದಲು ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿಯೇ ಇದೆ ಎಂಬ ಅರಿವು ನಿಮಗಿರಲಿ. ನಿಮ್ಮ ಕಾಲುಗಳ ಮೇಲೆ ನೀವು ನಿಂತುಕೊಂಡ ನಂತರವೂ ನಿಮ್ಮ ಪ್ರೀತಿ ಗಟ್ಟಿಯಾಗಿದ್ದರೆ ದಾಂಪತ್ಯಕ್ಕೆ ಅಡಿಯಿಡಿ. ’ಹರೆಯದ ಗಾಳಕ್ಕೆ ಸಿಕ್ಕ ಮೀನುಗಳಾಗಬೇಡಿ’.

- ಪ್ರಸಾದ್.ಡಿ.ವಿ.

Monday 23 January 2012

ಕಾದಿರುವಳೂರ್ಮಿಳೆ



ಇರುವಳೂರ್ಮಿಳೆ ಅಲ್ಲಿ,
ನಿನ್ನದೇ ಧ್ಯಾನದಿ, ಅಯೋಧ್ಯೆಯಲ್ಲಿ,
ಭಾವಗಳು ಸುಳಿ ಸುಳಿದು,
ವಿರಹದ ಬಾಣಲೆಯಲಿ
ಕುದಿ ಕುದಿದು,
ಆವಿಯಾಗದ ನಿರೀಕ್ಷೆ ಹಿಡಿದು,
ಕಾಡುವಳೆ ನಿನ್ನ,
ನೀನಿರಲು ಇಲ್ಲಿ ಕಾನನದಲ್ಲಿ,
ನಿನ್ನಣ್ಣ ಅತ್ತಿಗೆಯ ಬಳಿಯೇ
ಲೋಕೋದ್ಧಾರದಿ ಸ್ವಾರ್ಥವನ್ನು
ತೊರೆದ ಹಮ್ಮಿನಲ್ಲಿ,
ರಾಮರಾಜ್ಯದ ಸ್ಥಾಪನೆಗೆ
ಕಾರಣನಾಗುವೆನೆಂಬ ಭಿಮ್ಮಿನಲ್ಲಿ...

ಮೊನ್ನೆ-ಮೊನ್ನೆ ಮದುವೆಯಾದವಳು,
ಮೊನ್ನೆ ಎಂಬುದು ವರುಷವಾದರೇನು?
ವಯಸ್ಸೆಂಬುದು ದೇಹಕ್ಕಲ್ಲದೆ
ಮನಸ್ಸಿಗಾಗುವುದೇನು?
ಒಮ್ಮೆಯಾದರು ಮಧು ಹೀರಿ
ಸುಖಿಸಲಿಲ್ಲ ಅವಳು,
ಕಾಡವೆ ಅವಳ ಕಾಮ-ವಾಂಛೆಗಳು,
ರಾಮನನುಜ ಲಕ್ಷ್ಮಣನು ನೀನು,
ಧರ್ಮ ಸಂಸ್ಥಾಪನೆಗೆ
ಟೊಂಕ ಕಟ್ಟಿದವನು,
ನಿನ್ನನ್ನೇ ಬೇಡಿ
ವರಿಸಿದ್ದೇ ಅವಳ ತಪ್ಪೇನು?
ಕಾದಿರುವಳೂರ್ಮಿಳೆ ಅಲ್ಲಿ...

ಲಕ್ಷ್ಮಣನಾದರೇನು ನಾನು,
ವಿಧಿಯೆದುರು ತರಗೆಲೆಯು,
ಗಾಳಿ ಬೀಸಿದೆಡೆ ತೂರಿದೆನು..!
ಕಾಡು ಪಾಲಾದನು ಅಣ್ಣ,
ಕಾಯಲವನ ನಾನೂ,
ಇದ್ದುಬಿಡಬೇಕಿತ್ತೆ ತಲೆಕೆರೆಯುತ್ತಾ
ತಮ್ಮ ಭರತನೆದುರು,
ಆತ್ಮಾಭಿಮಾನವ ಅಡವಿಟ್ಟು,
ಅದಕಾಗೇ ಹೊರಟುಬಿಟ್ಟೆ..!
ಆದರೇನು ನಿನ್ನ ನೆನಪು
ಕಾಡಲಿಲ್ಲವೆಂದೇನಲ್ಲ,
ಇತ್ತೊಂದು ನಂಬಿಕೆ
ಕಾಯುವಳೂರ್ಮಿಳೆ ನನಗಾಗಿ
ನಾನವಳ ನಲ್ಲ...

ಕಾಯುತ್ತಿರುವೆ ನೀನಲ್ಲಿ,
ನಿನ್ನ ನೆನೆದು ನಾನೂ ಇಲ್ಲಿ,
ಆಸೆ-ವಾಂಛೆಗಳ ಬೆನ್ನಿಗಿಟ್ಟು,
ನೆನಪು-ಕನಸುಗಳ ಗಾಳಿಗಿಟ್ಟು,
ಕಾಯುತ್ತಿರುವೆ ನಿನಗಾಗಿ ನಾನು,
ಲಕ್ಷ್ಮಣನು, ಊರ್ಮಿಳೆಯ ನಲ್ಲನೂ...

- ಪ್ರಸಾದ್.ಡಿ.ವಿ.

Wednesday 18 January 2012

ಎಲ್ಲಿರುವೆ ನೀ ಮಾಧವಾ



ಮಾಧವನ ಕೊಳಲಿನ ನಾದಕ್ಕೆ
ನರ್ತಿಸುವ ನವಿಲಾದಳು ರಾಧೆ,
ಎಲ್ಲಿರುವೆ ಮಾಧವ ನೀ,
ಕೇಳದೆ ರಾಧೆಯ ಸಾಂಗತ್ಯ ಸುಧೆ...

ಮಾಧವನ ಗಾನ ಮಾಧುರ್ಯದಿ
ಮಂದಗಮನೆಯು ರಾಧೆ,
ಗಂಗೆಯಾಗಿ, ಯಮುನೆಯಾಗಿ, ಕಾವೇರಿಯಾಗಿ,
ಶರಧಿಯ ಸೇರುವ ತವಕದಿ,
ಮಾಧವನ ಸಾಮೀಪ್ಯವರಸುತಾ
ಗೊಲ್ಲ ಗೋಪನ ಸಾನಿಧ್ಯ
ಬಯಸಿಹಳು ಚಿರ ವಿರಹಿ ರಾಧೆ,
ಒಲಿಯಬಾರದೆ ರಾಧೆಗೊಪ್ಪಿ,
ಎಲ್ಲಿಹೋದೆ ಮಾಧವಾ ನೀ,
ಕೇಳದೆ ರಾಧೆಯ ವಿರಹ ಗೀತೆ...

ರಾಧೆ-ಮಾಧವರ ಕೊಳಲಿನಾಟ,
ಪ್ರೇಮಕ್ಕೊಂದು ದಿವ್ಯ ನೋಟ,
ಕೊಳಲ ಗೋಪ ಮಾಧವ,
ಅವನ ಗಾನಸುಧೆಗೆ ನವಿಲು ಅವಳು,
ಇದು ಪ್ರೀತಿಯೊ, ಪ್ರೇಮವೋ,
ಭಕ್ತಿಯೋ, ಮುಕ್ತಿಯೋ,
ಮಾಧವನಿಗೇ ಅವಳು ಸ್ವಂತವು,
ಪ್ರೇಮಕ್ಕೊಲಿದ ರಾಧೆಯವಳು
ಕರುಣೆ ಬಾರದೆ,
ಎಲ್ಲಿರುವೆ ನೀ ಮಾಧವಾ,
ಅವಳ ಅಳಲು ಕೇಳದೆ...

- ಪ್ರಸಾದ್.ಡಿ.ವಿ.

Friday 13 January 2012

ಆ ವಿಧಿಯಾಟವ ಬಲ್ಲವರಾರು


ನಾನು ಇಂತಹದ್ದೊಂದು ಲೇಖನ ಬರೆಯುತ್ತೇನೆಂದು ನನ್ನ ಕನಸ್ಸು ಮನಸ್ಸಿನಲ್ಲಿಯು ಎಣಿಸಿರಲಿಲ್ಲ. ನನ್ನ ನಂಬಿಕೆಗಳ ವಾಸ್ತವದ ನೆಲೆಗಟ್ಟನ್ನೆ ಆ ಸಂದರ್ಭ ಅಲ್ಲಾಡಿಸುತ್ತದೆಂದು ನಾನು ಎಂದೂ ಭಾವಿಸಿರಲಿಲ್ಲ. ನೆನ್ನೆ ನನ್ನ ಕಣ್ಣೆದುರೆ ಗತಿಸಿದ ಘಟನೆ ನನ್ನನ್ನು ಈ ಲೇಖನ ಬರೆಯುವವರೆಗೂ ಸರಿಯಾಗಿ ನಿದ್ರಿಸಲು ಬಿಡುತ್ತಿಲ್ಲ.

ನನ್ನ ತಾತನಿಗೆ ಆರೋಗ್ಯ ಕೈಕೊಟ್ಟು ಎರಡು ವರ್ಷವೇ ಸರಿದಿರಬಹುದು. ವಯಸ್ಸಾದ ದೇಹ ರೋಗಗಳ ಕಣಜವೆಂಬಂತೆ. ನನ್ನವ್ವ(ಅಜ್ಜಿ)ನಿಗೆ ಅವಳ ಗಂಡನೇ ದೈವ. ಆ ದೇವತೆಯ ಇಚ್ಛಾಶಕ್ತಿಯೆ ಆಕೆಯ ಗಂಡನ ಪ್ರಾಣವನ್ನು ಹಿಡಿದಿಟ್ಟಿದೆ ಎನಿಸುತ್ತದೆ. ನನ್ನ ಅಮ್ಮ, ಚಿಕ್ಕಮ್ಮಂದಿರು ಮತ್ತು ಮಾವನಿಗೆ ನನ್ನಜ್ಜನನ್ನು ಹೇಗಾದರು ಮಾಡಿ ಉಳಿಸಿಕೊಳ್ಳಬೇಕೆಂಬ ಆಸೆ. ಆದ್ದರಿಂದ ಅಜ್ಜನನ್ನು ಮೈಸೂರಿನ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ದಿನವೂ ಅವರನ್ನು ಕಾಯುತ್ತಿದ್ದಾರೆ. ನಾನು ಭಾವನೆಗಳನ್ನು ಅಪ್ಪಿ ಜೋತಾಡುವ ಮನೋಭಾವದವನಲ್ಲವೇ ಅಲ್ಲ. ವಾಸ್ತವಿಕ ಮತ್ತು ವೈಚಾರಿಕ ನೆಲೆಗಟ್ಟುಗಳೆ ನನ್ನ ಯೋಚನಾಧಾಟಿಯ ಅಡಿಪಾಯಗಳು, ಬಂಧನಗಳು ಮತ್ತು ಸಂಬಂಧಗಳೆಂದರೆ ತುಸು ತಟಸ್ಥನೆ. ಕೆಲವೊಮ್ಮೆ ತುಂಬಾ ಭಾವುಕನಾಗುವುದುಂಟು ಆದರೆ ಅದು ತೀರಾ ವಿರಳ. ನನ್ನ ಯೋಚನಾಧಾಟಿಯೋ ಇಲ್ಲವೆ ತಟಸ್ಥ ಭಾವದ ಉದ್ದಟತನವೋ, "ಅಜ್ಜನಿಗೆ ವಯಸ್ಸಾಯ್ತು, ಮಗನ ಮದುವೆಯನ್ನೂ ನೋಡಿದ್ದಾಯ್ತು ಮೊಮ್ಮಗನನ್ನು ಮುದ್ದಿಸಿದ್ದೂ ಆಯ್ತು, ಅವರು ಹೊರಡುವ ಕಾಲ ಸನ್ನಿಹಿತವಾಯಿತೆಂದರೆ ಹೋಗಲಿ ಬಿಡಿ. ಯಾಕಷ್ಟು ಭಾವುಕರಾಗುತ್ತೀರಿ?" ಎಂದುಬಿಟ್ಟೆ. ಎಲ್ಲರೂ ನನ್ನನ್ನು ಯಾವುದೇ ಭಾವನೆಗಳಿಲ್ಲದ ಬಂಡೆಯೆಂಬಂತೆ ನೋಡಿ, "ಬಾಯಿಗೆ ಬಂದಂತೆ ಹರಟಬೇಡ, ಕಾಲು ಮುರಿಯುತ್ತೇನೆ" ಎಂದು ಅಮ್ಮ ಗದರಿದರು. ನಾನು ನನ್ನಲ್ಲೆ ಇವರಿಗೆ ಬುದ್ಧಿಯಿಲ್ಲ, ಯಾರು ಪುಂಗಿ ಊದಿದರು ಸರಿಯಾಗದವರು ಇವರು ಎಂದು ಸುಮ್ಮನೆ ಹೊರಬಂದೆ. ಅವರ ಭಾವೋತ್ಕಟತೆಯ ಆಳವನ್ನು ವಿಮರ್ಶಿಸುವ ಗೋಜಿಗೂ ಹೊಗಲಿಲ್ಲ ನಾನು.

ಹೀಗೇ ನೆನ್ನೆ ಅಪ್ಪ ಮತ್ತು ಅವ್ವನಿಗೆ ಊಟ ತೆಗೆದುಕೊಂಡು ಹೋಗು ಎಂದು ಹೇಳಿ ಅಮ್ಮ ನನ್ನನ್ನು ಆಸ್ಪತ್ರೆಗೆ ಕಳುಹಿಸಿದರು. ನನಗೂ ಅಜ್ಜನನ್ನು ನೋಡಿ ಎರಡು ದಿನಗಳಾಗಿದ್ದರಿಂದ ಅವರ ಆರೋಗ್ಯದ ಬಗ್ಗೆ ತಿಳಿಯಬಹುದೆಂದು ನಾನೇ ಹೋದೆ.

ನನ್ನಜ್ಜ ಇರುವ ವಾರ್ಡಿನಲ್ಲಿಯೆ ಇನ್ನೊಬ್ಬ ವಯಸ್ಸಾದ ವ್ಯಕ್ತಿ ದಾಖಲಾಗಿದ್ದರು. ವಯಸ್ಸು ೭೫ ದಾಟಿರಬಹುದು. ಆತನಿಗೂ ವಯಸ್ಸಾದ ಕಾರಣ ದೇಹದ ಅಂಗಗಳ ಸಾಮರ್ಥ್ಯ ಕ್ಷೀಣಿಸಿ ಒದ್ದಾಡುತ್ತಿದ್ದರು. ಆದರೆ ನನ್ನ ಅಜ್ಜನಿಗಿಂತ ಅವರ ಆರೋಗ್ಯ ಚೆನ್ನಾಗಿಯೇ ಇತ್ತು. ಅವರಾಗಿಯೆ ತಿಂಡಿ ತಿನ್ನುತ್ತಿದ್ದರು. ಆರಾಮವಾಗಿ ಮಾತನಾಡುತ್ತಾ ಕುಳಿತುಕೊಳ್ಳುತ್ತಿದ್ದರು. ಈ ವಯಸ್ಸಾದವರಿಗೆ ಮಾತು ಜಾಸ್ತಿ. ಅನುಭವ ಪಡೆದಿದ್ದೇವೆಂದು ಎಲ್ಲರಿಗೂ ಧಾರಾಳವಾಗಿ ಧಾರೆ ಎರೆಯುತ್ತಾರೆ. ಆ ವಿಷಯದಲ್ಲಿ ಆ ತಾತನನ್ನು ಅವರ ಮಗ ಬಯ್ಯುವುದೂ ಇತ್ತು. ಅಂದು ಅವರ ಹೆಂಡತಿಯ ಸಹಾಯ ಪಡೆದು ಮೇಲೆದ್ದ ಆ ತಾತ ನೈಸರ್ಗಿಕ ಕರ್ಮಗಳನ್ನು ಮುಗಿಸಲು ಹೋದರು. ಎಲ್ಲವನ್ನೂ ಮುಗಿಸಿ ಹೊರಬಂದವರು ಕೈತೊಳೆದುಕೊಳ್ಳಲು ವಾಶ್ ಬೇಸಿನ್ ಹತ್ತಿರ ನಿಂತಿರಬಹುದೆಂದು ಕಾಣುತ್ತದೆ. ತಕ್ಷಣವೇ ಕುಸಿದು ಬಿದ್ದರು. ನಾವು ನಮ್ಮ ತಾತನ ಬಳಿಯಿದ್ದುದ್ದರಿಂದ ಅದರ ಅರಿವೇ ನಮಗಿರಲಿಲ್ಲ. ಆ ಅಜ್ಜಿ ’ಯಾಕೋ ನಮ್ಮನೆಯವರು ಕುಸಿದು ಕುಳಿತಿದ್ದಾರೆ ಅವರನ್ನು ತಂದು ಮಲಗಿಸಲು ಸಹಕರಿಸಿ’ ಎಂದು ನನ್ನನ್ನು ಮತ್ತು ನಮ್ಮ ಮಾವನನ್ನು ಕರೆದರು. ನಾವು ಮತ್ತಿಬ್ಬರು ವಾರ್ಡ ಬಾಯ್ಸ್ ಸಹಾಯ ಪಡೆದು ಆ ಅಜ್ಜನನ್ನು ತಂದು ಅವರ ಹಾಸಿಗೆಯ ಮೇಲೆ ಮಲಗಿಸಿದೆವು. ಆ ಅಜ್ಜ ತುಂಬಾ ನಿತ್ರಾಣಗೊಂಡಂತೆ ಕಾಣುತ್ತಿದ್ದರು. ನಾವು ಸಾವಧಾನವಾಗಿ ಅವರಿಗೆ ಗಾಳಿ ಹಾಕಿ ಡಾಕ್ಟರ್ ಗೆ ವಿಷಯ ಮುಟ್ಟಿಸಿದೆವು. ಅಯಪ್ಪನ ಸ್ಥಿತಿ ನೋಡಿದ ನಮ್ಮ ಅಜ್ಜಿ ’ಹೋಗಿ ಅವರ ಬಾಯಿಗೆ ನಿಮ್ಮ ಕೈಯಿಂದಲೆ ನೀರು ಬಿಡಿ’ ಎಂದು ಅವರ ಹೆಂಡತಿಗೆ ಹೇಳಿದರು. ನಾನು ಗರಬಡಿದವನಂತೆ ನಿಂತಿದ್ದೆ. ಎರಡು ಗುಟುಕು ನೀರು ಗುಟುಕಿಸಿದ ಆ ಜೀವ ದೇಹವನ್ನು ತೊರೆದಿತ್ತು. ಇದೇ ಮೊದಲು ನಾನು ಒಬ್ಬರು ಸಾಯುವುದನ್ನು ಕಣ್ಣಾರೆ ಕಂಡಿದ್ದು. ಅವರ ಕುಟುಂಬದ ಆಕ್ರಂದನ ನನ್ನ ಮನಸ್ಸನ್ನು ಕಲಕಿತು. ಅವರು ಆ ತಾತನ ಶವವನ್ನು ಆಸ್ಪತ್ರೆಯಿಂದ ಸಾಗಿಸುತ್ತಿದ್ದಂತೆ ನಮ್ಮ ಮನಸ್ಸು ತಡೆಯದೆ ನಮ್ಮ ತಾತನನ್ನು ಮತ್ತೊಂದು ವಾರ್ಡಿಗೆ ವರ್ಗಾಹಿಸಿ ಬಿಟ್ಟೆವು.

ಆ ದೃಶ್ಯ ಕಂಡ ನನ್ನ ಮನಸ್ಸು ಜರ್ಜರಿತಗೊಂಡಿತ್ತು. ಆ ಸಾವು ನನ್ನ ವೈಚಾರಿಕ ಮತ್ತು ವಾಸ್ತವದ ನೆಲೆಗಟ್ಟುಗಳನ್ನು ಅಲುಗಾಡಿಸುತ್ತಿತ್ತು. ’ಅಹಂ ಬ್ರಹ್ಮಾಸ್ಮಿ’ ಹಾಗೇ ಹೀಗೆ ಎಂಬ ಎಷ್ಟೆಲ್ಲಾ ಗಟ್ಟಿ ತಟಸ್ಥ ಭಾವಗಳಿದ್ದ ನಾನೇ ಇಷ್ಟು ಸೂಕ್ಷ್ಮವಾಗಿಬಿಟ್ಟೆನೆ ಎಂದೆನಿಸುತ್ತಿತ್ತು. ಸಾವು ಯಾವಾಗ ಬಂದರೂ ಅದು ಸಾವೇ. ವಯಸ್ಸಾದವರು ಸತ್ತರೆಂದ ಮಾತ್ರಕ್ಕೆ ಅದರಿಂದಾಗುವ ನೋವು ಮತ್ತು ದುಃಖಗಳೇನೂ ಕಡಿಮೆಯಲ್ಲ. ಒಂದು ಸಾವು ಒಂದು ತಲೆಮಾರಿನ ಕೊಂಡಿಯನ್ನು ಕಡಿದಂತೆಯೇ ಸರಿ. ಆ ಜನರೇಷನ್ ಗ್ಯಾಪ್ ನಮ್ಮನ್ನು ಕಾಡುತ್ತಲೇ ಇರುತ್ತದೆ. ’ಈ ಮನುಷ್ಯನ ಜೀವನ ಸಾವು ನೋವುಗಳಿಂದ ಮುಕ್ತವಾಗಿಬಿಡಲಿ ದೇವರೆ’ ಎಂದು ಮೊರೆಯಿಟ್ಟರೂ ಮನಸ್ಸಿಗೆ ಸಮಾಧಾನವಾಗಲಿಲ್ಲ. ಈ ಎಲ್ಲಾ ವಿಷಯಗಳನ್ನು ನನ್ನಮ್ಮನ ಬಳಿ ಹೇಳಿ ಅವಳ ಮಡಿಲಲ್ಲಿ ಮುದುಡಿ ಮಲಗಿದೆ. ಅಮ್ಮ ಎಂದಳು "ಯಾಕೋ ಅಪ್ಪೀ ಚಿಕ್ಕ ಮಗುವಾಗಿಬಿಟ್ಟೆ, ನಮಗೆಲ್ಲಾ ಧೈರ್ಯ ತುಂಬುತ್ತಿದ್ದವನು ನೀನು, ಕಮ್ ಆನ್ ಚಿಯರ್ ಅಪ್ ಮೈ ಡಿಯರ್" ಎಂದು ಸಾಂತ್ವಾನ ಹೇಳಿದ ಮೇಲೆಯೆ ನಾನು ವಾಸ್ತವಕ್ಕೆ ಬಂದದ್ದು.

ಯಾವುದೇ ಸಂಬಂಧವಿಲ್ಲದ, ವಯಸ್ಸಾಗಿ ಸತ್ತ ಯಾರೋ ಒಬ್ಬರ ಸಾವೇ ಇಷ್ಟು ನೋವನ್ನು ಕೊಡುವಾಗ ಅಪಘಾತದಲ್ಲಿಯೊ, ಆತ್ಮಹತ್ಯೆ ಮಾಡಿಕೊಂಡೊ ಇಲ್ಲವೆ ಕೊಲೆಯಾಗುವ ಸಾವುಗಳು ಎಷ್ಟು ನೋವನ್ನು ಕೊಡಬಹುದು?? ಪ್ರಿಯ ಸ್ನೇಹಿತರೆ ನಿಮಗೇನು ನೀವು ಹೋಗಿಬಿಡುತ್ತೀರಿ ಆದರೆ ನಿಮ್ಮ ಸಾವು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಕೊಡುವ ನೋವು ಸಹಿಸಲಸಾಧ್ಯವಾದುದು. ಆದ್ದರಿಂದ ದುಡುಕುವ ಮುನ್ನ, ವಾಹನ ಚಲಾಯಿಸುವಾಗ ಒಮ್ಮೆ ಯೋಚಿಸಿ. ಜೀವನ ಅಮೂಲ್ಯವಾದುದು, ಅದನ್ನು ಮಾತ್ರ ಮರೆಯಬೇಡಿ.

- ಪ್ರಸಾದ್.ಡಿ.ವಿ.

Sunday 8 January 2012

ಬದುಕಾಯ್ತು ಮೂರಾಬಟ್ಟೆ



ತುತ್ತಗುಳ ಕಂಡ ಕಾಗೆ
ಕಾವ್ ಕಾವ್ ಎಂದು ಕೂಗಿ,
ತನ್ನ ಬಳಗವರಚಿ ಕರೆದು,
ತುತ್ತಗುಳ ಭಾಗ ಮಾಡಿ
ಗುಟುಕಿರಿಸಿರೆ...
ಪೊಳ್ಳು ಅಭಿಮಾನದಮಲೇರಿ
ಮನೆಗೆ ಕರೆದ
ಬಂಧುಬಳಗದವರನ್ನ
ಕಸಿದ ಹೀನ ಕೃತ್ಯವು,
ಕೂಡಿಟ್ಟ ಅನ್ನವನು
ಹಳಸಿ ಕೊಳೆಯಿಸಿ
ಅಹಾರವಾಯಿತದು
ಕಸದ ಬುಟ್ಟಿಗೆ..!
ಕಾಗೆಗಿಂತ ಕಡೆಯಾಯ್ತೆ,
ಎಲ್ಲಿಂದ ಎಲ್ಲಿಗ್ಹೊರಟೆ,
ಬದುಕಾಯ್ತೆ ಮೂರಾಬಟ್ಟೆ,
ಎಲೆ ಮಾನವ..!!!

ಮದ್ಯದಂಗಡಿ
ಜಾಡು ಹಿಡಿದು
ಕಂಠಪೂರ್ತಿ
ಶೇಂಧಿ  ಕುಡಿದು,
ಮತ್ತಷ್ಟು ಸಾಲ ಮಾಡಿ
ಹೆಂಡವೀರುವೆ,
ಹೆತ್ತಮ್ಮನ ಕರುಳ ಕುಯ್ದು,
ಹೆಂಡತಿಯ ಮಾನ ಕಳೆದು
ಹರಾಜಿಗಿಟ್ಟೆಯೋ,
ಮಕ್ಕಳವು ಬೀದಿ ಪಾಲು
ತಿರಿದುಣ್ಣಲು ಸಾಲು ಸಾಲು,
ಕೈಯಿಲಿ ಹಿಡಿದು ಮುರುಕುತಟ್ಟೆ,
ಬದುಕಾಯ್ತು ಮೂರಾಬಟ್ಟೆ,
ಎಲೆ ಮಾನವ...!!!

ಅದೃಷ್ಟದ ಆಟ ಕಟ್ಟಿ
ಕುದುರೆಯ ಬಾಲವಿಡಿದು,
ಊರೂರು ಸುತ್ತು ಹೊಡೆದು,
ಲಾಟರಿಯ ಸಂಖ್ಯೆ ಹಿಡಿದು,
ಗೆಲುವ ಕುದುರೆ
ಕಾಲು ಮುರಿಯೆ,
ಅದೃಷ್ಟ ಸಂಖ್ಯೆ
ಮುರುಗಿ ತಿರುಗೆ,
ಹೆಂಡತಿಯ ಮಾಂಗಲ್ಯ ಕಸಿವೆ
ಮಗುವಿನ ಕಾಲ್ಗೆಜ್ಜೆ ಕಸಿವೆ,
ಬದುಕಿದು ಬಂಗಲೆಯಿಂ
ಬೀದಿಯೆಡೆಗೆ..!
ಎಲ್ಲಿಂದ ಎಲ್ಲಿಗ್ಹೊರಟೆ
ಬದುಕಾಯ್ತು ಮೂರಾಬಟ್ಟೆ,
ಎಲೆ ಮಾನವ..!!!

ಮಕ್ಕಳ ಪಾಡದು
ಹೇಳತೀರದು,
ಸುಪ್ಪತ್ತಿಗೆಯಿಂ
ತೊಟ್ಟಿಯೆಡೆಗೆ,
ಅರಳುವ ಮೊದಲೆ
ಬಸವಿಳಿದ ಬದುಕಿಡಿದು,
ಭಿಕ್ಷೆಯ ಅನ್ನಕ್ಕೆ ಬಿದ್ದು
ಹಾಡಿ ಹೊರಟಿವೆ,
"ಹೇ ದೇವಾ,
ಚಿನ್ನದ ತೊಟ್ಟಿಲ ಹಂದಿಗೆ
ಮರಿಯಾಗುವುದಕ್ಕಿಂತ,
ಮುರಿದ ಕೊಟ್ಟಿಗೆಯ
ಹಸುವಿಗೆ ಕರುವಾಗಿ ಮಾಡೆಮ್ಮ"..!

- ಪ್ರಸಾದ್.ಡಿ.ವಿ.

Thursday 5 January 2012

ಕ್ಯಾಂಟೀನ್ ಪುರಾಣಗಳು

 ಸಾಮಾನ್ಯವಾಗಿ ಕಾಲೇಜ್ ನ ಕ್ಯಾಂಟೀನ್, ಕ್ಯಾಂಪಸ್ ಕಾರಿಡಾರ್ ಮತ್ತು ಪಾರ್ಕಿಂಗ್ ಲಾಟ್ ಗಳಲ್ಲಿ ನಡೆಯುವ ಸನ್ನಿವೇಶಗಳಿಗೆ ಹಾಸ್ಯದ ಲೇಪನ ನೀಡಿ ನಿರೂಪಿಸುವ ಒಂದು ಸಣ್ಣ ಪ್ರಯತ್ನವೇ "ಕ್ಯಾಂಟೀನ್ ಪುರಾಣ" ಸೀರೀಸ್. ಈ ಪುರಾಣದಲ್ಲಿ ಬರುವ ಸನ್ನಿವೇಶಗಳು ಕಾಲ್ಪನಿಕವಾಗಿಯೂ ಇರಬಹುದು, ನಿಜವಾಗಿಯೂ ಇರಬಹುದು. ಒಂದು ಪುರಾಣಕ್ಕೂ ಮತ್ತೊಂದು ಪುರಾಣಕ್ಕೂ ಸಂಬಂಧವಿರುವುದಿಲ್ಲ. ಪಾತ್ರಧಾರಿಗಳಾಗುವವರು ಬೇಸರಿಸದೆ ಎಂಜಾಯ್ ಮಾಡಿ. ಲಾಫ್ಟರ್ ಟಾನಿಕ್ ನೀಡುವ ಒಂದು ಪ್ರಾಮಾಣಿಕ ಪ್ರಯತ್ನವಿದು.

ಕ್ಯಾಂಟೀನ್ ಪುರಾಣ-೧

ಅಂದು ಎರಡು ಪೀರಿಯಡ್ ಕ್ಲಾಸ್ ನಲ್ಲಿ ಕೂತದ್ದು ಯುಗದಂತೆ ಭಾಸವಾಗಿತ್ತು. ಬೋರ್ ಹೊಡೆಯುತ್ತಿದ್ದರಿಂದ ಕ್ಲಾಸ್ ನಲ್ಲಿದ್ದರೂ ಡೋರ್ ಓಪನ್ ಆಗಿದ್ದರಿಂದ ಕಾರಿಡಾರ್ ನಲ್ಲಿ ಅಡ್ಡಾಡುವ ಹುಡುಗಿಯರನ್ನು ಸಿನ್ಸಿಯರ್ ಆಗಿ ನೋಡುತ್ತಾ ಕುಳಿತಿದ್ದೆ. ಏಕೆಂದರೆ ನಮ್ಮ ಕ್ಲಾಸಿನ ಫಿಗರ್ ಗಳನ್ನು ದಿನವೂ ನೋಡಿ-ನೋಡಿ ಬೋರ್ ಹೊಡೆದು ಹೋಗಿತ್ತು. ನಮ್ಮ ಕ್ಲಾಸ್ ನ ಹುಡುಗಿಯರು ಶಾಕಿಣಿ, ಡಾಕಿನಿಯರ ತರ ಕಾಣಿಸುತ್ತಿದ್ದರು ಈಗೀಗ..!!! ಮೂರನೆ ಕ್ಲಾಸ್ ಗೆ ಒಳಗೆ ಕುಳಿತಿರಲಾಗದೆ ಚೇತನ್ ಗೆ ಪ್ರಾಕ್ಸಿ ಹಾಕಲು ಹೇಳಿ ಬಂಕ್ ಮಾಡಿ ಕ್ಲಾಸ್ ನ ಹೊರಬಿದ್ದೆ. ಹೊರಗೆ ಬರುತ್ತಿದ್ದಂತೆ ನಮ್ಮ ಕ್ಲಾಸ್ ನ ’ಶಾರುಖ್ ಖಾನ್’ ಪ್ರಶಾಂತ್ ಎದುರುಗೊಂಡ.
"ಏನೋ ಕ್ಲಾಸ್ ಬಂಕಾ? ಯಾರದು ಕ್ಲಾಸ್ ಈಗ?" ಎಂದ.
ನಾನು "ಅದೇ ಮಗ ಬೋರಿಂಗ್ ಕ್ಲಾಸ್, ಆ ಕ್ಲಾಸ್ ನಲ್ಲಿ ಕುಳಿತು ಮೊಳೆ ಹೊಡೆಸಿಕೊಳ್ಳುವುದಕ್ಕಿಂತ ನೇಣು ಹಾಕ್ಕೊಳ್ಳೋದೆ ವಾಸಿ ಅಂತ ಹೊರಬಂದೆ" ಎಂದೆ.
"ಲೇ ನಾನು ತಿಂಡಿ ತಿಂದಿಲ್ಲ ಮಚ್ಚಾ, ಕ್ಯಾಂಟೀನ್ ಗೆ ಬರ್ತೀಯಾ ಸುಮ್ಮನೆ ಕಂಪೆನಿ ಕೊಡುವಂತೆ" ಎಂದವನು ಕರೆದ.
"ಮಚ್ಚಾ ಈ ಧನ್ಯ ಆವಾಗಿಂದ ಕಾರಿಡಾರ್ ನಲ್ಲೆ ಅಲೆಯುತ್ತಿದ್ದಾಳೆ, ಇವತ್ತು ಮಸ್ತಾಗಿ ಕಾಣ್ತಾವ್ಳೆ, ಸ್ವಲ್ಪ ಹೊತ್ತು ಬಿಟ್ಟು ಹೋಗೋಣ ಮಗಾ" ಎಂದೆ.
"ಅಯ್ಯೋ ಲೋಫರ್ ಅವಳೋ ೭ ಅಡಿ, ನೀನು ಐದೂವರಡಿ(5.8), ನೀನು ಅವಳ ಜೊತೆ ನಿಲ್ಲೋಕು ಸ್ಟೂಲ್ ಬೇಕು ಮುಚ್ಕೊಂಡು ನನ್ನಜೊತೆ ಬಾ" ಎಂದು ಎಳೆದುಕೊಂಡು ಹೋದ.
ನಾನು ಮನಸ್ಸಿನಲ್ಲಿಯೇ ಆಕಾಶಕ್ಕೆ ಏಣಿ ಹಾಕಿದ್ರೂ ಸರಿಯೇ, ಸ್ಟೂಲ್ ಸಹವಾಸ ಬೇಡವೆಂದು ಅವನೊಂದಿಗೆ ಕ್ಯಾಂಟೀನ್ ಕಡೆ ಹೊರಟೆ.

ಇಂಜಿನಿಯರಿಂಗ್ ಸ್ಟೂಡೆಂಟ್ಸ್ ಆದ ನಮಗೆ ಡ್ರೆಸ್ ಕೋಡ್ ಆಗಿ ಯುನಿಫಾಂ ಮಾಡಿದ್ದರಿಂದ ಬುಧವಾರ ಮತ್ತು ಶನಿವಾರ ಬಿಟ್ಟು ಉಳಿದ ದಿನಗಳಲ್ಲಿ ಕಲರ್ಸ್ ಇದ್ರೂ ಕಾಲೇಜ್ ಕಲರ್ ಲೆಸ್ ಆಗಿತ್ತು..:( ಆದ್ರೆ ಆವತ್ತು ಬುಧವಾರವಾದ್ದರಿಂದ ಕಣ್ಣಿಗೆ ಕೂಲಿಂಗ್ ಗಾಗಲ್ಸ್ ಹಾಕದೆ ಕಣ್ಣು ತಂಪಾಗಿತ್ತು...;)

ಪಾರ್ಕಿಂಗ್ ಲಾಟ್ ನಲ್ಲಿ ಹಾದು ಹೋಗುವಾಗ ಜೂನಿಯರ್ ಆದ ನಿಶಾ ತನ್ನ ಗೆಳತಿಯೊಂದಿಗೆ "ಹೇ ಯು ನೊ ಐಯಂ ಟ್ರೈಯಿಂಗ್ ಟು ಹ್ಯಾವ್ ಜೀರೋ ಫಿಗರ್" ಎಂದುಲಿದಳು. ನಾನು ಧನಿಯೇರಿಸಿ "ಸೊಂಟ ಹುಳುಕೀತು ಹುಷಾರು, ಕರೀನಳ ವೇಯ್ಟ್ ತಾಳಲಾಗದೆ ಅವಳ ಸೊಂಟ ಮುರಿಯಿತಂತೆ" ಎಂದೆ.
ಪಾಪದ ಹುಡುಗಿ ಹೆದರಿ, ಆ ಕಡೆಗೆ ದೂರ ಸರಿದುಬಿಟ್ಟಳು.
ಈ ಕಡೆ ಪ್ರಶಾಂತ "ಅಯ್ಯೋ ನನ್ನ ಮಗನೆ ನೀನು ಉದ್ಧಾರ ಆಗಲ್ಲ" ಎಂದ.
ನಾನೂ ಜೋರಾಗಿ ನಗುತ್ತಾ, "ಅಲ್ವಾ, ನಂಗೂ ಹಂಗೇ ಅನ್ಸುತ್ತೆ ಶಿಷ್ಯ" ಎಂದೆ...!
ಅಷ್ಟರೊಳಗೆ ಪ್ರಶಾಂತನ ಸಾಮ್ಸ್(ಸಮಂತಾ) ಒಂದು ಚಾಕೊಲೇಟ್ ಕೋನ್ ಹಿಡಿದು ಒಂದು ಪ್ಲೇಟ್ ಗೋಬಿಯನ್ನು ತನ್ನ ಮುಂದಿಟ್ಟುಕೊಂಡು ತನ್ನ ಫ್ರೆಂಡ್ಸ್ ಜೊತೆ ಕುಳಿತಿರುವುದು ಕಾಣಿಸಿತು.
"ಲೋ ಮಗಾ ನಿಮ್ಮುಡ್ಗಿ ಐಸ್ ಕ್ರೀಂ ಹಿಡ್ಕೊಂಡವ್ಳೆ, ಐಸ್ ಕ್ರೀಂ ಕರಗಿ ಹೋದೀತಲೆ" ಎಂದು ಪ್ರಶಾಂತನ ಬೆನ್ನಿಗೊಂದು ಪೆಟ್ಟು ಕೊಟ್ಟೆ.
ಈ ಪ್ರಶಾಂತ ಅವಳ ಅಟ್ರಾಕ್ಷನ್ ಸೆಳೆಯಲು ತನ್ನ ಸ್ಯಾಂಸಂಗ್ ಸೆಲ್ ಅನ್ನು ಯಾರೊಂದಿಗೋ ಮಾತನಾಡುವಂತೆ ಹಿಡಿದುಕೊಂಡ.
ಅಲ್ಲಿ ಪ್ರಶಾಂತನ ಇನ್ನೊಬ್ಬ ಸ್ನೇಹಿತ ಲ್ಯಾಬ್ ರೆಕಾರ್ಡ್ ಬರೀತಾ ಕುಳಿತಿದ್ದ. ಪ್ರಶಾಂತ ಎರಡು ಇಡ್ಲಿ ತೆಗೆದುಕೊಂಡ, ನಾನು ಸ್ಲೈಸ್ ತೆಗೆದುಕೊಂಡು ಅವಳು ಕಾಣಿಸುವಂತೆ ಪ್ರಶಾಂತನ ಫ್ರೆಂಡ್ ಟೇಬಲ್ ಗೆ ಹೋಗಿ ಕುಳಿತೆವು.
ಇವನು ಇಡ್ಲಿ ತಿನ್ನುತ್ತಾ ಫೋನ್ ನಲ್ಲಿ "ಹಲೋ ಮಗಾ, ಕ್ಯಾಂಟೀನ್ ನಲ್ಲಿದ್ದೀನಿ ಕಣೋ ನಮ್ಮುಡ್ಗಿಗೆ ಐಸ್ ಕ್ರೀಂ ತಿನ್ನಿಸ್ತಿದ್ದೀನಿ" ಎಂದ ಅವಳಿಗೆ ಕೇಳಿಸುವಂತೆ.
ಅಸಲಿಗೆ ಅವನಿಗೆ ಯಾವುದೇ ಕರೆಯೂ ಇರಲಿಲ್ಲ, ಆ ಹುಡುಗಿಯನ್ನು ಇವನ ಕಡೆ ನೋಡುವಂತೆ ಮಾಡಬೇಕಿತ್ತು ಅಷ್ಟೆ..!!
ಅವಳು ಇವನ ಮಾತನ್ನು ಕೇಳಿ, ಆ ಕಡೆ ಮುಖ ಮಾಡಿ ಮುಗುಳು ನಗುತಿದ್ದಳು. ಅದನ್ನು ನೋಡಿದ ಇವನು ಫುಲ್ ಜೂಮ್ ನಲ್ಲಿದ್ದ.
ಪ್ರಶಾಂತನ ಸ್ನೇಹಿತ, "ಲೋ ಒಂದು ಐಸ್ ಕ್ರೀಂ ತಿನ್ನಲು ಎಷ್ಟೊತ್ತು ಬೇಕು ಗುರು?" ಎಂದು ಕೇಳಿದ.
"ಚಿಕ್ಕ ಮಗುವಾದ್ರೂ ೩ ರಿಂದ ೫ ನಿಮಿಷ ಸಾಕು ಗುರು" ನಾನಂದೆ.
"ಅವಳು ನೋಡು ಮಗಾ, ಒಂದೂವರೆ ಗಂಟೆಯಿಂದ ಅದೇ ಐಸ್ ಕ್ರೀಂ ಇಡ್ಕೊಂಡು ಕೂತಿದ್ದಾಳೆ. ಅಲ್ಲ ನನಗೊಂದು ಅನುಮಾನ ಅವಳು ಪ್ರತಿ ಸಲ ತಿನ್ನುವಾಗ್ಲೂ ಆ ಐಸ್ ಕ್ರೀಂನ ಚಾಕೊಲೇಟ್ ಅಟ್ ಲೀಸ್ಟ್ ಅವಳ ನಾಲಿಗೆಗೆ ಟಚ್ ಆಗ್ತಿದ್ಯೋ ಏನೋ ಅಂತ? ನನಗನ್ಸುತ್ತೆ ಅವಳು ತಿನ್ನೋಕು ಮುಂಚೆನೇ ಆ ಐಸ್ ಕ್ರೀಂ ಕರಗಿ ಹೋಗುತ್ತೆ ಅಂತ" ಎಂದು ಗೊಳ್ ಎಂದು ನಗಲಾರಂಭಿಸಿದ.
ನಾನೂ ಬಿದ್ದು ಬಿದ್ದು ನಗುತ್ತಾ, "ಪ್ರಶಾಂತ ಇದಕ್ಕಿಂತ ಅವಮಾನ ಬೇಕಾ ನಿಂಗೆ, ಕೊತ್ತಂಭರಿ ಗಿಡಕ್ಕೆ ಹೋಗಿ ನೇಣು ಹಾಕ್ಕೋ" ಎಂದೆ.
ಪ್ರಶಾಂತನ ಫ್ರೆಂಡ್ ನನ್ನ ಕೈಮೇಲೆ ಹೊಡೆದು ನನ್ನನ್ನು ಅಭಿನಂದಿಸಿದ.
ಇವನು ಹುಸಿ ಕೋಪ ನಟಿಸುತ್ತಾ, "ಮಕ್ಳ ಅದು ಅವಳ ಯುನೀಕ್ ಸ್ಟೈಲ್ ಕಣ್ರೊ, ಒಂದೂವರೆ ಗಂಟೆ ಯಾರಾದ್ರೂ ಐಸ್ ಕ್ರೀಂ ತಿಂತಾರಾ? ನೋಡು ನಮ್ಮುಡ್ಗಿ ತಿಂತಾಳೆ ಆ ಐಸ್ ಕ್ರೀಂ ಕೂಡ ಕರಗದಂತೆ ನೋಡ್ಕೊಳ್ತಾಳೆ ಗೊತ್ತಾ? ಹೆಂಗೆ" ಎಂದು ತನ್ನ ಬೆನ್ನನ್ನು ತಾನೆ ತಟ್ಟಿಕೊಂಡ.
ಮತ್ತೂ ಮುಂದುವರೆದು "ಜೊತೆಗೆ ಗೋಬಿ ಇದೆಯಲ್ಲ ಮಗಾ, ಐಸ್ ಕ್ರೀಂ ತಿನ್ನೋದು ಒಂದು ಪೀಸ್ ಗೋಬಿ ತಿನ್ನೋದು ಹಾಗೆ ತಿನ್ನೋದು ಅವಳು" ಎಂದ.
"ಲೋ ಅವಳು ಹೀಗೇ ತಿಂತಿದ್ರೆ ಒಂದಿನ ಇನ್ವಿಸಿಬಲ್ ಆಗ್ಬಿಡ್ತಾಳೆ, ಈಗಿರೋದೆ ಸ್ಕೆಲಿಟನ್ ತರ" ಎಂದು ಪ್ರಶಾಂತನ ಫ್ರೆಂಡ್ ಬೊಬ್ಬಿಟ್ಟ.
"ಲೋ ಅವಳು ನನ್ನ ಪ್ರೀತಿ ಒಪ್ಕೊಂಡ್ಮೇಲೆ ನಾನೇ ತಿನ್ಸೋದಲ್ವ, ಆಗ ತಯಾರಿ ಮಾಡ್ತೀನಿ ಬಿಡು" ಎಂದ ಪ್ರಶಾಂತ.
ನಾವಿಬ್ಬರು "ಹೋ" ಎಂದು ಹೋಕಾರ ಎಳೆದೆವು.
"ಆಮೇಲೆ ಅವಳಿಂದೆ ತಿರುಗಿ ತಿರುಗಿ ದೇವದಾಸ್ ಅಗ್ಬಿಟ್ಟೀಯ ಪ್ರಶಾಂತ, ಮೊದಲೆ ನಿಮ್ಮ ಶಾರುಖ್ ಆ ಫಿಲ್ಮ್ ಹೀರೊ" ಎಂದೆವು ನಾವು.
"ಅಂತದ್ದೆಲ್ಲ ಸೀನ್ ಇಲ್ಲ, ನಾನ್ಯಾವಗ್ಲೂ ಲವರ್ ಬಾಯ್" ಎಂದ ಪ್ರಶಾಂತ.

ಹೆಂಗೊ ಸಮಂತಾ ಐಸ್ ಕ್ರೀಂ ತಿಂದು ಮುಗಿಸಲು ಎರಡು ಗಂಟೆ ತೆಗೆದುಕೊಂಡಳು..!
ಅವಳಿಗೆ ಇವನು ಐಸ್ ಕ್ರೀಂ ತಿನ್ನಿಸಿ, ನಾವು ಇವನಿಗೆ ಇಡ್ಲಿ ತಿನ್ನಿಸುವುದರೊಳಗೆ ಮುಂದಿನ ಪಿರಿಯಡ್ ಗೆ ಐದು ನಿಮಿಷವಿತ್ತು ಅಷ್ಟೆ.
"ಹೇ ಬಾರ್ಲೆ ಮುಂದಿನ ಕ್ಲಾಸ್ ಗೆ ಲೇಟಾಗುತ್ತೆ" ಎಂದು ಅವನ ಕೈಯಿಡಿದು ಎಳೆದೆ, ಇಬ್ಬರೂ ಕ್ಲಾಸ್ ಕಡೆಗೆ ಓಡಿದವು.

- ಪ್ರಸಾದ್.ಡಿ.ವಿ. 
ಚಿತ್ರಕೃಪೆ: ಅಂತರ್ಜಾಲ (ವರುಣ್)