ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Thursday 11 September 2014

ವಿರಹಿಯ ಸಾಲುಗಳು!


ಮಧುಶಾಲೆಯ
ಮೂಲೆಕೊನೆಯ ಟೇಬಲ್ಲೊಂದರಲಿ
ಕುಡಿದು ಬಿದ್ದವನು
ಸತ್ತುಹೋಗಿ ವರ್ಷಗಳೇ ಕಳೆದಿವೆ,
ಕುಯ್ಯದೆ, ಕತ್ತರಿಸದೆ
ಅವನ ಹೃದಯದ ಬಿಸಿರಕ್ತ ಕುಡಿದ
ನಿನ್ನ ಕಣ್ಣೋಟಗಳಿಗೆ
ತೃಪ್ತಿಯಾಗಿರಬಹುದಲ್ಲವೇ ಹುಡುಗಿ?
ನಿನಗೆ ನೆನಪಿರಬಹುದು, ಇಲ್ಲದೆಯೂ ಇರಬಹುದು!

ಎದುರು ಸಿಕ್ಕರೂ ಪರಿಚಯದ ನಗೆ ನಕ್ಕು
ಕೊಂದೇ ಬಿಡಬೇಡ ಪಾಪ,
ಅವನ ಸ್ಮೃತಿ, ವಿಸ್ಮೃತಿಯ ಪ್ರಜ್ಞೆಗಳೆಲ್ಲ
ನೀ ಬಿಟ್ಟು ಹೋದಷ್ಟೇ ಹಿಂದಿನವು,
ಹೆಸರು ಕರೆದಾನು ಜೋಕೆ?!
ತಲೆ ತಪ್ಪಿಸಿಕೊಂಡೋಡಿ ಬಿಡು,
ನಿನಗೆಂದೇ ಇಟ್ಟು ಕರೆದ ಹೆಸರುಗಳನ್ನು
ಕರೆದರಂತೂ,
ನಿನ್ನ ಕೊಂದ ಪಾಪ ತಟ್ಟುತ್ತದೆ,
ಮೊದಲೇ ಪ್ರೇಮಿಸಿ ಪಾಪಿಯಾಗಿದ್ದಾನೆ,
ಉಸಿರಾಡಿಕೊಂಡಿರಲಿ ಬಿಡು!

ಸದ್ದುಗಳಬ್ಬರದ ಸಂತೆಯಲಿ
ಕಳೆದುಹೋಗುವ ಒಂಟಿಪಯಣಿಗನಿಗೆ
ಶುದ್ಧ ಮೌನವೆಂದರೆ ತೀರದ ಅಸಹ್ಯ!
ನಿನ್ನ ನೆನಪುಗಳಾವಳಿಯಲಿ
ಶುದ್ಧ ಪಾಪಿಯಾಗುವವನು,
ನಕ್ಕಾಗ ಮುದ್ದು ಪಾಪುವಾಗುತ್ತಾನೆ,
ನೀನಿಟ್ಟ ಆಣೆ, ಪ್ರಮಾಣಗಳನು
ಮರೆತಂತೆ ಮಾಡಿ ಕ್ಷಮಿಸುವಾಗ
ನೋವುಗಳನು ನುಂಗಿ ನಡೆದ
ಬುದ್ಧನಾಗುತ್ತಾನೆ,
ಆದರೆ ವಿಪರ್ಯಾಸ ನೋಡು,
ಕಂಡವರಿಗೆ ಕುಡುಕನಾಗಿದ್ದಾನೆ,
ಬರಿಯ ಕುಡುಕನಾಗಿದ್ದಾನೆ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Tuesday 2 September 2014

ನಮ್ಮೂರಿನ ರಸ್ತೆಗಳಿಗೆ ಬಸ್ಸು ಬರಬೇಕು!


ನಮ್ಮೂರಿನ ರಸ್ತೆಗಳಿಗೆ
ಬಸ್ಸು ಬರುತ್ತದೆ,
ಮುಂಚೆಯೆಲ್ಲಾ ಕೆಂಪು ಬಣ್ಣದ
ಲೈಫ್ಬಾಯ್ ಸೋಪಿನ ಬಸ್ಸುಗಳಿಗೆ
ಕಾದಂತಹ ಜನರ ಚಡಪಡಿಕೆಯ ನೋಟಗಳು,
ಈಗಲೂ ನಮ್ಮೂರಿನ ಲಡ್ಡು ಬಿದ್ದ ರಸ್ತೆಗಳ ಮೇಲೆ
ಆಸೆಗಳನ್ನು ಹೊದ್ದು ಮಲಗಿವೆ...
ಅವು ಒಮ್ಮೆಯೂ ನಿದ್ರೆ ಮಾಡಿದ್ದನ್ನು ನೋಡಿಲ್ಲ,
ನಿದ್ರಾಹೀನ ಆಸೆಗಳು, ಅರೆತುಂಬಿದ ಹೊಟ್ಟೆಗಳು,
ಇಲ್ಲಿ ಸರ್ವೇ ಸಾಮಾನ್ಯ, ಸಿಕ್ಕುತ್ತವೆ...

ಮೇಲೆ ನೋಡಲೊಂದೇ ಊರು,
ಎಣಿಸಿದರೂ ಇನ್ನೂರು ಒಕ್ಕಲಿಲ್ಲ,
ಮಾರಿ-ಮಸಣಿಯರ ಹಬ್ಬಗಳೂ ಒಟ್ಟಿಗೇ ಆಗುತ್ತವೆ,
ಸಮಾನತೆ ಸಮಾನವಾಗಿ ಹಂಚಿಹೋಗಿದೆ,
ಹೊಲಗೇರಿಗೆ ಹೊಲಗೇರಿ ಎನ್ನುವುದಿಲ್ಲ,
ಒಕ್ಕಲುಗೇರಿಗೆ ಒಕ್ಕಲುಗೇರಿಯೆನ್ನುತ್ತಾರೆ,
ಆ ಜನಗಳಿಗೆ ಇವರ ಪಡಸಾಲೆಗಷ್ಟೇ ಪ್ರವೇಶ,
ಬೋರ್ಡು ಬರೆಸಲಾಗಿಲ್ಲ,
ಆದರೂ ಅಧಿಕೃತ ಪ್ರವೇಶ ನಿಷಿದ್ಧ,
ತುಟಿ ಬಿಚ್ಚುವಂತಿಲ್ಲ, ಬಾಯಿ ಹೊಲೆಯಲಾಗಿದೆ,
ಕೆಲವರಂತೂ ಸಮಾನತೆಯ ಕನಸು ಕಾಣುವುದು ಬಿಟ್ಟಿಲ್ಲ,
ಆದರೂ ಹೂವು ಅರಳಿಲ್ಲ...

ಬೀಳುವ ಕನಸುಗಳಿಗೆ,
ಸಾಮಾರ್ಥ್ಯಕ್ಕೆ ತಕ್ಕಂತೆಯೇ ಬೀಳೆಂದರೆ ಆದೀತೆ?
ಬಡವ, ಬಲ್ಲಿದರೆನ್ನದೆ
ಕನಸುಗಳನು ಬೀಳಿಸಿಕೊಳ್ಳುವ ಜನರನ್ನು ಕಂಡಿದ್ದೇನೆ,
ಅವರ ಕನಸುಗಳಲ್ಲಿ,
ಇರುವ ಸೋರುವ ಹೆಂಚಿನ ಮನೆಗಳು
ಆರ್ಸೀಸಿ ಮನೆಗಳಾಗುತ್ತವೆ,
ಬೆಳೆದ ಮಗಳಿಗೆ ಸಾಲವಿಲ್ಲದೆ ಮದುವೆಯಾಗುತ್ತದೆ,
ಮಗ ಕುಡಿತ ಬಿಟ್ಟು ಗೇಯುವುದಕ್ಕೆ ನಿಲ್ಲುತ್ತಾನೆ,
ಗೇಣುದ್ದದ ನೆಲ ಬಂಗಾರ ಬೆಳೆಯುತ್ತದೆ,
ಜನ ಹುಟ್ಟಿನೊಂದಿಗೆ ಅಂಟಿಸಿಕೊಳ್ಳುವ
ರಾಜಕೀಯ ಬಿಟ್ಟುಬಿಡುತ್ತಾರೆ, ಹೀಗೆ ನೂರಾರು...

ಈ ಎಲ್ಲಾ ಆಸೆ, ಕನಸುಗಳನ್ನು ಹೊತ್ತು,
ನಮ್ಮೂರಿಗೆ ಬಸ್ಸು ಬರುತ್ತದೆ,
ಇದುವರೆಗೂ ಊರಿಗೆ ಮೂರು ಕಿ.ಮೀ. ದೂರದಲ್ಲಿ
ತಲುಪಲಾರದ ದಾಹ ಉಳಿಸಿ
ನಿಲ್ಲುವ ಬಸ್ಸು, ಊರೊಳಗೆ ಬರುತ್ತದೆ,
ಬಂದೇ ಬಿಡುತ್ತದೆ ಎಂಬ ಕನಸು ಹೊತ್ತವರು ಕಾಯತ್ತಲೇ ಇದ್ದಾರೆ,
ಮುಂದೆ ಎಂದಾದರೂ ಬಸ್ಸು ಬರಬೇಕು,
ಆದರೆ ಈ ಕನಸುಗಳು ಮತ್ತು ಆಸೆಗಳಿಗೆ
ನಿಲ್ದಾಣ ಮಾತ್ರ ಇಲ್ಲೆಲ್ಲಿದೆಯೋ? ಕಾಯಬೇಕು...

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ