ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Tuesday 7 September 2021

ತೇಜಸ್ವಿ ಎಂಬ ಪ್ರಜ್ಞೆ!


ಬೆಳಿಗ್ಗೆ ಚೆನ್ನೈಗೆ ತೇಜಸ್ವಿ ಬಂದಿದ್ರು. ನಾನು ಹೀಗೆ ಹೊರಗೆ ಅಡ್ಡಾಡೋಣೆಂದು ಹೋಗಿದ್ದೆ. ಅಡ್ಯಾರ್ ಹತ್ರ ಆಟೋಗೆ ಕಾಯ್ತಿದ್ರು. ನಾನು ಮಾತಾಡ್ಸೋಕೂ ಮುಂಚೆ ಎರೆಡೆರೆಡು ಸಲ ಕನ್'ಫರ್ಮ್ ಮಾಡ್ಕೊಂಡಿದ್ದೀನಿ, ಆಮೇಲೆ...

"ಏನ್ ಸಾರ್ ನೀವಿಲ್ಲಿ?" ಅಂದೆ. ಓಹೋ ಇಲ್ಲೂ ಕನ್ನಡದವ್ರಿದ್ದೀರಲ್ಲಪ್ಪ, ಬನ್ನಿ ಬನ್ನಿ ಅಂದ್ರು. ಎಲ್ಲಿಗೆ ಹೊರ್ಟಿದ್ದೀರಿ ಅಂತ ಕೇಳ್ದೆ,

'ಏನಿಲ್ಲ ಕಣ್ರಿ ಒಂದಷ್ಟು ದಿನ ಅಮೇಜಾನ್ ಕಾಡುಗಳಲ್ಲಿ ಅಲೆದು ಬರ್ಬೇಕು. ಹೊಸ ಕತೆ, ಪಾತ್ರಗಳು, ಪಕ್ಷಿಗಳು, ಮೀನುಗಳು, ನದಿಗಳು, ನಿಗೂಢಗಳು ಏನು ಸಿಕ್ರೂ ಎತ್ಕೊಂಡ್ ಬರ್ಬೇಕು' ಅಂದ್ರು.

'ಅಲ್ಲೂ ಹಾರುವ ಓತಿ ಸಿಗ್ಬೋದು ಅನ್ಸುತ್ತೆ ಅಲ್ವಾ ಸಾರ್?' ಅಂತ ನಕ್ಕೆ.

'ಅಯ್ಯೋ ನಿಮ್ಮ, ಹಾರೋ ಓತಿಗಳು ಬರಿ ದಕ್ಷಿಣ ಏಷ್ಯಾದಲ್ಲಷ್ಟೆ ಕಾಣ ಸಿಕ್ತವೆ ಕಣ್ರಿ. ಅಮೇಜಾನಲ್ಲಿ ಸಿಗಲ್ಲ.' ಅಂದ್ರು. ನಂಗೆ ಪೆಚ್ಚಾದಂಗನ್ನಿಸಿತು.

ನಾನು ಸುಮ್ಮನಾದದ್ದನ್ನು ಕಂಡು 'ಬನ್ರಿ, ವೀಸಾ ಆಫೀಸಲ್ಲೊಂದಷ್ಟು ಕೆಲಸ ಇದೆ. ಮುಗಿಸಿ ಬರಣ' ಅಂದ್ರು. ನಾನೂ ಅವರೊಂದಿಗೆ ಆಟೋ ಹತ್ತಿಕೊಂಡೆ.

'ನಿಮ್ಮ ಕಣ್ಣಿಗೆ ಪ್ರಾಣಿ, ಪಕ್ಷಿಗಳು ತುಂಬ ವಿಶೇಷ ಅನ್ನುಸ್ತವೇನೋ ಅಲ್ವಾ  ಸಾರ್? ಅದಕ್ಕೆ ನಿಸರ್ಗಕ್ಕೆ ಹತ್ತಿರವಾದ ಕತೆಗಳನ್ನೆ ಹೆಚ್ಚು ಬರೆದಿದ್ದೀರಿ?' ಅಂದೆ.

'ನಿಮಗೆ ಹಾಗನ್ಸುತ್ತಾ? ಆಶ್ಚರ್ಯ ಕಣ್ರಿ' ಅಂದ್ರು. ಆಶ್ಚರ್ಯ ಪಟ್ಟುಕೊಳ್ಳೊ ಸರದಿ ನನ್ನದಾಗಿತ್ತು ಈಗ.

'ನಾನು ನಿಸರ್ಗವನ್ನೂ ಒಂದು ಪಾತ್ರವಾಗಿಸಿಕೊಳ್ತೀನಿ. ಹಾರೋ ಓತಿ ಹೇಗೆ ಒಂದು ಪಾತ್ರವೋ, ಮಂದಣ್ಣನೂ ಒಂದು ಪಾತ್ರವೆ ಅಲ್ವಾ? ನಿಗೂಢಗಳ ಜೊತೆಗೆ ಗಾನ್ ಕೇಸ್ ಸುರೇಶ - ಗೌರಿಯರು, ಕೆಸರೂರಿನ ಜೊತೆಗೆ ನಮ್ಮ ಕ್ರಾಂತಿಕಾರಿಗಳು, ರಫೀಕ್ - ಜಯಂತಿಯರು, ದೊಡ್ಡ ಆಲದ ಮರದ ಜೊತೆಗೆ ಗಯ್ಯಾಳಿಯರು, ಹೀಗೆ ಸಾಕಷ್ಟು ಸಿಕ್ತವೆ. ಮತ್ತೊಮ್ಮೆ ಗ್ರಹಿಸಿ.' ಅಂದರು. ನಾನು 'ಹೌದು' ಎನ್ನುವಂತೆ ಗೋಣಾಡಿಸಿದೆ.

'ಈ ಕಾಲದಲ್ಲಿ 'ರಫೀಕ್ - ಜಯಂತಿ' ಪ್ರೀತಿಸಿ ಓಡಿ ಹೋಗಿದ್ದರೆ, 'ಲವ್ ಜಿಹಾದ್' ಅಂದು ಬಿಟ್ಟಿರೋರು ಕಣ್ರಿ, ಪಾಪ.' ಅಂತ ಜೋರಾಗಿ ನಕ್ಕರು. ನಾನೂ ನಗುತ್ತಿದ್ದೆ.

ಆಮೇಲೆ ಕೈಯಲ್ಲಿದ್ದ ಯಾವುದೋ ರಿಪೋರ್ಟ್ ನೋಡುತ್ತಾ ಮೌನವಾದರು, ನಾನು ಅವರೇನು ಓದುತ್ತಿದ್ದಾರೋ ತಿಳಿಯದೆ ಅವರನ್ನೆ ನೋಡುತ್ತಾ ಕುಳಿತೆ. ಅಷ್ಟರಲ್ಲಿ ವೀಸಾ ಆಫೀಸ್ ಬಂತು, ಇಳಿದೆವು. ಆಮೇಲೆ ತುಸು ಗಂಭೀರವಾದಂತೆ ಕಂಡ ತೇಜಸ್ವಿ, 'ಸರಿ ಕಣ್ರಿ, ನಾನು ಊರಿಗೆ ಹೋಗ್ಬೇಕು, ಹೊರಡ್ತೀನಿ' ಅಂದ್ರು.


'ಸಾರ್, ವೀಸಾ ಆಫೀಸಲ್ಲಿ ಕೆಲ್ಸ ಅಂದ್ರಲ್ಲಾ' ಅಂದೆ.


'ದಡ್ರು ಕಣ್ರಿ ನಮ್ ಜನ, ಅಲ್ಲಿ ಪಶ್ಚಿಮ ಘಟ್ಟಗಳನ್ನ ಅವೈಜ್ಞಾನಿಕವಾಗಿ ನಾಶ ಮಾಡ್ತಿದ್ದಾರೆ. ನೋಡಿ ಈ ರಿಪೋರ್ಟಲ್ಲೂ ಅದೆ ಇದೆ. ನಾನು ಕೊಡಗು ಮತ್ತು ಕೇರಳಗಳಲ್ಲಿ ಏನಾದ್ರೂ ಮಾಡೋಕಾಗುತ್ತಾ ನೋಡ್ತೀನಿ. ಅಮೇಜಾನಿಗೆ ಇನ್ಯಾವಾಗ ಹೋದ್ರೂ ನಡೆಯುತ್ತೆ.' ಅಂತ ಧೊತ್ತೆಂದು ಎದುರಿಗೆ ತೆರೆದುಕೊಂಡ ದಟ್ಟ ಕಾಡುಗಳಲ್ಲಿ ಕಣ್ಮರೆಯಾಗಿಬಿಟ್ಟರು.


~ ಮಂಜಿನ ಹನಿ


2018 ರಲ್ಲಿ ತೇಜಸ್ವಿಯವರ ಹುಟ್ಟುಹಬ್ಬದ ದಿನ ಬರೆದ ಬರಹ. ಅವರು ನಮ್ಮನ್ನೆಲ್ಲಾ ಕಾಯುತ್ತಾ, ಎಚ್ಚರಿಸುತ್ತಾ ಇರುವ ಪ್ರಜ್ಞೆ.

Sunday 20 September 2020

ಅಹಲ್ಯೆಯರು!



ಭಾವಗಳನ್ನೆಲ್ಲಾ ಅದುಮಿಟ್ಟುಕೊಂಡು

ಬದುಕಿಗೆ ನೊಗ ಹೂಡುತ್ತಾಳೆ,

ಗಂಡನಿಗೆ ರಸ ಹೀರಿ ಎಸೆದ ಸಿಪ್ಪೆ,

ಮಕ್ಕಳಿಗೆ ತಮ್ಮನ್ನು ಉದ್ಧರಿಸಲು ನಿಂತ ದೇವರು,

ದೇವರಲ್ಲಿ ಬೇಡುವುದು ಬಿಟ್ಟು

ದೇವರ ಕಷ್ಟ ಕೇಳುವುದುಂಟಾ? ಹಾಗೆ!


ಮನಸಿನ ತುಮುಲಗಳ

ಹರಿಯಬಿಡದಂತೆ

ಎಚ್ಚರವಹಿಸುವಳು,

ನೀಲುವಿನ ಪದ್ಯ ಓದಿ

ಪುಳಕಗೊಳ್ಳುವಳು; ಹೌದೆ?

ಯಾರಾದರೊಬ್ಬರು

ಸಣ್ಣವಾಗ್ತಿದ್ದೀ ನೋಡು

ಎನ್ನಲಿ ಎಂದು ಪರಿತಪಿಸಿ

ಸುಮ್ಮನಾಗುವಳು,

ಪಾಪ ಅವಳನ್ನವಳೇ ಕನ್ನಡಿಯಲಿ ಕಂಡು

ವರ್ಷಗಳಾಗಿರಬಹುದೆ?


ಜಿಜ್ಞಾಸೆಯ ಸಿಕ್ಕುಗಳಿಂದ ಬಿಡಿಸಿಕೊಳ್ಳುವ ಕನಸು,

ಆದರೆ ಶಿಲೆಯಾದ ಇವಳಿಗೆ

ಗೌತಮನ ಶಾಪವೇನೆಂದೆ ತಿಳಿಯದು,

ರಾಮನಂತು ದಾರಿ ಮರೆತಿರಬಹುದು?

ಓಡುವ ಕಾಲದಲಿ

ಸಾವಿರ ಸಾವಿರ ಅಹಲ್ಯೆಯರು!


--> ಮಂಜಿನ ಹನಿ

20/09/2017 ರಲ್ಲಿ ಬರೆದ ಕವಿತೆ.

Monday 14 September 2020

'ಹಿಂದಿ ದಿವಸ' ಎಂಬ ಕಂಟಕ



ಹಿಂದಿ ಹೇರಿಕೆಯ ಈ ಕಾಲಘಟ್ಟದಲ್ಲಿ, ನೆನ್ನೆಯಿಂದ ಕೆಲವು ಘಟನೆಗಳು ನಡೆದವು. ಗಮನಿಸಿದೆ, ಇಲ್ಲಿ ಪರ ವಿರೋಧ ಚರ್ಚೆಗಳು ನಡೆದಿವೆ.

ಇರಲಿ, ಸಂವಾದಗಳು ಅಗತ್ಯ. ಅವುಗಳೇ ನಮ್ಮ ನಡುವೆ ಇರುವ ಕಂದಕಗಳನ್ನು ಮುಚ್ಚಲು ಇರುವ ಸಣ್ಣ ಬೆಳಕಿಂಡಿಗಳು. ಸಾಧ್ಯವಾದಷ್ಟು ಸಂಯಮ ಇಟ್ಟುಕೊಂಡು ಎಲ್ಲಾ ತೀವ್ರಗಾಮಿಗಳನ್ನೂ ಸೋಲಿಸುವ ಜವಾಬ್ಧಾರಿ ನಮ್ಮ ಮೇಲಿದೆ.

ಇಷ್ಟು ಮಾತು ದಾಖಲಿಸುತ್ತೇನೆ.

1) ನೆನ್ನೆ ಪವನ್ ಕುಮಾರ್ ಹಿಂದಿ ಹೇರಿಕೆ ಬಗ್ಗೆ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಅವರ ಅಭಿಪ್ರಾಯ ಎಲೈಟಿಸ್ಟ್ ಎಂದು ಒಂದು ಗುಂಪು, ಅವರು ಕನ್ನಡದ ಒಳ್ಳೆಯ ನಿರ್ದೇಶಕ, ಒಳ್ಳೆ ಸಿನೇಮಾಗಳನ್ನು ನೀಡಿದ್ದಾರೆ, ಅವರ ಕೆಲಸ ಸರಿ ಇದ್ದಾಗ ಇಂತಹ ಅಭಿಪ್ರಾಯಗಳನ್ನು ಉಪೇಕ್ಷಿಸಬೇಕು ಅಂತ ಇನ್ನೊಂದು ಲಿಬರಲ್ ಗಳ ಗುಂಪು ಹೇಳಿದೆ. ಬಲಪಂಥೀಯರು ಅವರನ್ನು ಸಮರ್ಥಿಸಿಕೊಂಡಿದ್ದಾರೆ. ನಾವು ಕನ್ನಡ ಮತ್ತು ಕರ್ನಾಟಕ ಪರ ವಿಷಯಗಳನ್ನು ಇನ್ಮುಂದೆ ರಾಜಕೀಯ ವಿಷಯವಾಗಿಯೇ ನೋಡಬೇಕು. ಇವು ಭಾವನಾತ್ಮಕ ವಿಷಯವಾಗಿಯಷ್ಟೇ ಉಳಿಯಬಾರದು. ಅದರ ಬಗ್ಗೆ ಕನ್ನಡಿಗರು ಗಮನಹರಿಸಬೇಕು. ರಾಜ್ಯದ, ಭಾಷೆಯ ಪರ ನಿಲುವುಗಳನ್ನು ಯಾವ ಪಕ್ಷ ತಳೆಯುತ್ತದೋ ಅದರ ಪರವಾಗಿ ನಾವು ನಿಲ್ಲಬೇಕು. ಇಷ್ಟು ಹೇಳುತ್ತಾ, ಪವನ್ ರ ಅಭಿಪ್ರಾಯ, ರಾಜಕೀಯ ಅಭಿಪ್ರಾಯ, ಅದಕ್ಕೆ ಬರುವ ಪ್ರತಿಕ್ರಿಯೆಗಳೂ ರಾಜಕೀಯವಾಗಿಯೇ ಇರುತ್ತವೆ. ಅದು ಹಾಗೆಯೇ ಇರಬೇಕು ಕೂಡ. ಕನ್ನಡ, ಕರ್ನಾಟಕದಿಂದ ಪವನ್ ಕುಮಾರ್ ಮತ್ತು ಉಳಿದವರೇ ವಿನಃ ಅವರಿಂದ ಕನ್ನಡವಲ್ಲ, ಕರ್ನಾಟಕವಲ್ಲ.

2) ಕೇಂದ್ರ ಸರ್ಕಾರಗಳು ಮೊದಲಿನಿಂದಲೂ ಹಿಂದಿಯೇತರ ಭಾಷೆಗಳ ಕತ್ತು ಹಿಸುಕುತ್ತಲೇ ಬಂದಿವೆ. ಅದು ಈ ಸರ್ಕಾರದಲ್ಲಿ ತೀವ್ರವಾಗಿದೆಯಷ್ಟೆ. ಅದಕ್ಕೂ ರಾಜಕೀಯ ಕಾರಣಗಳೇ ಇರುವುದು. ನಾವು ನಮ್ಮ ಅಸ್ಮಿತೆ ಮರೆತು ಬಿಜೆಪಿಯ 26 ಎಂಪಿಗಳನ್ನು ಗೆಲ್ಲಿಸಿಕೊಟ್ಟೆವು. ಅದರಿಂದಾಗಿರುವ ಲಾಭ ಎಲ್ಲಿರಿಗೂ ಗೊತ್ತಿರುವಂತಹದ್ದೇ. ಜಿಎಸ್ಟಿ ಹಂಚಿಕೆಯಲ್ಲಾದ ಮೋಸವನ್ನು ಧ್ವನಿ ಮಾಡಿ ಕೇಳುವ ಧೈರ್ಯ ಯಾರೂ ಮಾಡುತ್ತಿಲ್ಲ, ಯಡಿಯೂರಪ್ಪನಂತಹವರೇ ಸುಮ್ಮನಿರುವುದು ಆತಂಕ ಮೂಡಿಸಿದೆ. ಕೊರೋನಾ ಪರಿಹಾರದಲ್ಲಿ ನಮಗೆ ಮೋಸವಾಗಿದೆ, ನೆರೆ ಪರಿಹಾರದಲ್ಲಿ ಮೋಸವಾಗಿದೆ, ಅನುದಾನಗಳಲ್ಲಿ ಮೋಸವಾಗಿದೆ. ಹಾಗಿದ್ದಾಗ್ಯೂ ನಾವು ಬಿಜೆಪಿಯನ್ನೇ ಬೆಂಬಲಿಸುತ್ತಾ ಬಂದಿದ್ದೇವೆ. ಇದು ಕೇವಲ ಭಾಷಾ ವೈರುಧ್ಯವಲ್ಲ, ಬದಲಾಗಿ, ಕನ್ನಡ ಅಥವಾ ಕೇವಲ ಕನ್ನಡವಷ್ಟೇ ಬರುವ ಸಾಮಾನ್ಯ ಕನ್ನಡಿಗನಿಗೆ ಕರ್ನಾಟಕದಲ್ಲೇ ಅವಕಾಶ ಕಲ್ಪಿಸುವುದು ಮತ್ತು ಬದುಕು ಕಟ್ಟಿಕೊಳ್ಳುವ ಸಾಧ್ಯತೆಗಳನ್ನು ಕಲ್ಪಿಸಿಕೊಡುವುದಾಗಿದೆ. ಹಾಗಿದ್ದಾಗ ಅದು ಕೇವಲ ಭಾಷಾ ವಿಷಯ ಹೇಗೆ ಅನ್ನುವುದನ್ನು ನಂಗೆ ಅರ್ಥ ಮಾಡಿಸಿ.

3) ಕರ್ನಾಟಕ ಕಾಂಗ್ರೇಸ್ ಮತ್ತು ಕಾಂಗ್ರೇಸ್ ನ ರಾಜಕಾರಣಿಗಳು 'ಹಿಂದಿ ದಿವಸ' ಆಚರಣೆಯ ಬಗ್ಗೆ ಸಕಾರಣವಾಗಿಯೇ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಇದು ಸ್ವಾಗತಾರ್ಹವೇ. ಆದರೆ ಹಿಂದಿ ಹೇರಿಕೆ ಎಂಬುದು ಅವರಿಂದಲೇ ಶುರುವಾದ ಭೂತ ಎಂಬುದನ್ನು ಮರೆಯಬಾರದು. ಈಗ ಅವರ ಅಭಿಪ್ರಾಯಗಳನ್ನು ಬೆಂಬಲಿಸಿದರೂ ಮುಂದೆ ಅವರು ಅಧಿಕಾರಕ್ಕೆ ಬಂದಾಗ ಮತ್ತೆ ಹಿಂದಿ ಹೇರಿಕೆಯ ಹಿಂದೆ ನಿಲ್ಲುವುದಿಲ್ಲ ಅನ್ನುವುದನ್ನು ಹೇಗೆ ನಂಬುವುದು? ದ್ವಿಭಾಷಾ ನೀತಿ, ಕರ್ನಾಟಕದ ಕೆಲಸಗಳು ಕನ್ನಡಿಗರಿಗೆ, 8ನೇ ಪರಿಚ್ಛೇದದಲ್ಲಿ ನಮೂದಾದ ಕನ್ನಡ ಮತ್ತು 21 ಇತರೆ ಭಾಷೆಗಳಿಗೆ ದೇಶದ ಆಡಳಿತ ಭಾಷೆಯ ಸ್ಥಾನ ಮತ್ತು ಜಿಎಸ್ಟಿಯಲ್ಲಿನ ಲೋಪಗಳನ್ನು ಸರಿಪಡಿಸುವ ಬಗ್ಗೆ ನಿಮ್ಮ ಮುಂದಿನ ಪ್ರಣಾಳಿಕೆಗಳಲ್ಲಿ ಸೇರಿಸುತ್ತೀರಾ?

4) ಇತ್ತೀಚೆಗೆ ಕನ್ನಡ ಮತ್ತು ಕರ್ನಾಟಕ ಪರ ಹೋರಾಟಗಾರರಿಗೆ ಒತ್ತಾಸೆಯಾಗಿ ನಿಲ್ಲುತ್ತಿರುವ ಸದ್ಯದಲ್ಲಿ ರಾಜ್ಯದಲ್ಲಿರುವ ಏಕೈಕ ಸದೃಢ ಪ್ರಾದೇಶಿಕ ಪಕ್ಷ ಜೆಡಿಎಸ್. ಕುಮಾರಸ್ವಾಮಿಯವರೂ ಹಿಂದಿ ಹೇರಿಕೆ ಮತ್ತು 'ಹಿಂದಿ ದಿವಸ' ಆಚರಣೆಯ ವಿರುದ್ಧ ಗಟ್ಟಿ ಧ್ವನಿ ಮಾಡಿದ್ದಾರೆ. ಅಭಿನಂದನಾರ್ಹ. ಆದರೆ ಪ್ರಾದೇಶಿಕ ಪಕ್ಷದ ಜವಬ್ಧಾರಿಗಳನ್ನು ಅರಿತುಕೊಂಡು ಇದುವರೆಗೂ ಕೆಲಸ ಮಾಡಲು ಪ್ರಯತ್ನ ಮಾಡಿಲ್ಲವೇಕೆ ಎಂಬುದು ಅರ್ಥವಾಗದ ಸಂಗತಿ. ಇದುವರೆಗೂ ಜೆಡಿಎಸ್ ನ ತತ್ವ ಸಿದ್ಧಾಂತವೇನು ಎಂಬ ಬಗ್ಗೆಯೇ ಸಾಕಷ್ಟು ಅನುಮಾನಗಳಿವೆ. ಇನ್ನು ಮುಂದೆಯಾದರೂ ತನ್ನ ಪ್ರಣಾಳಿಕೆಯನ್ನು ನವೀಕರಿಸಿಕೊಂಡು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಕೆಲಸ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕು.

ಇಷ್ಟೆಲ್ಲಾ ಹೇಳಿದ ಮೇಲೂ ಯಾವ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು, ಕನ್ನಡ ಮತ್ತು ಕರ್ನಾಟಕ ಪರವಾಗಿ ಮಾತನಾಡಿದರೂ ಅವರ ಹಿಂದಿನ ತಪ್ಪುಗಳನ್ನು ಹೆಚ್ಚಿಗೆ ಕೆದಕದೆ ವಿಶಾಲ ಮನಸ್ಸಿನಿಂದ ನಾವು, ಕನ್ನಡಿಗರು ಸ್ವಾಗತಿಸುತ್ತೇವೆ. ಆದರೆ ಕನ್ನಡ ಮತ್ತು ಕರ್ನಾಟಕಪರ ವಿಷಯಗಳು ಇನ್ಮುಂದೆ ರಾಜಕೀಯದ ವಿಷಯಗಳಾಗುತ್ತವೆ. ನಿಮ್ಮನ್ನು ನೀವು ತಿದ್ದುಕೊಂಡು ರಾಜ್ಯದ ಒಳಿತಿಗಾಗಿ ದುಡಿದರೆ ನಿಮಗೂ ಉತ್ತಮ, ನಮಗೂ ಉತ್ತಮ.

ಜೈ ಕನ್ನಡಾಂಬೆ, ಜೈ ಕರ್ನಾಟಕ.

~ ಮಂಜಿನ ಹನಿ

Wednesday 2 October 2019

ತೋಳುಗಳ ನಡುವೆ


ಮೊನ್ನೆ ನಿನಗೆಂದು ಬರೆದ ಕವಿತೆಯಲ್ಲಿ
ಏನೋ ಕಮ್ಮಿ ಇತ್ತು,
ನೀನಾದರೂ ಹೇಳಲಿಲ್ಲ ನೋಡು?
ಇತ್ತೀಚೆಗೆ ನಿನಗೆಂಥದೊ ಈರ್ಷೆ,
ತಾಸುಗಟ್ಟಲೆ ನನ್ನ ಮೇಲೆ
ಹಾಡು ಕಟ್ಟಿ ಹಾಡುತ್ತಿ,
ನಾನು ಕಟ್ಟುವ ಪದಗಳಿಗೆ
ನಿನಾದ ಕಮ್ಮಿಯಾಯ್ತೆ ಎನ್ನುತ್ತಿ,
ನಾನೇನು ಹಾಡುಗಾರ್ತಿಯೆ,
ಕವಿತೆ ಬರೆಯುವೆ
ಎಂದರೆ,
ಅಲ್ಲವೆ? ಎಂಬ ಅಣಕ,
ಅದು ಕೊಂಕು ತಾನೆ?

ಈ ನಿಲುವುಗನ್ನಡಿಯ ಮುಂದೆ
ನಿರಾಭರಣಳಾಗಿ ನಿಂತಾಗ
ನೀನು ನೋಡುತ್ತೀ ಎಂದು
ನಾಚಿ, ಮೈ
ಮುಚ್ಚಿಕೊಂಡೆ,
ನೀ ನಿಂತು ನೋಡಿಕೊಳ್ಳುವ ಕನ್ನಡಿ
ನಿನ್ನ ನೆನಪಿಸಿದರೆ?
ಅಕ್ಕ ಪಕ್ಕ ನಿಂತ ನಮ್ಮಿಬ್ಬರ
ಬೆತ್ತಲೆ ದೇಹಗಳು ಹೊಳೆದಂತಾಗಿ ನಗು ಬಂತು.
ಆ ಬೆಳಕಿಗಂತೂ ಸಿಗ್ಗೆಂಬುದೊಂದಿಲ್ಲ
ನಮ್ಮಿಬ್ಬರ ಉಬ್ಬು ತಗ್ಗುಗಳ ಮೇಲೆ
ಎಗ್ಗಿಲ್ಲದೆ ಇಣುಕುತ್ತದೆ.

ಮೊನ್ನೆ ಹನೀಫ ಸಿಕ್ಕಿದ್ದ,
ನಾನು ಚಂದವಂತೆ, ಮನಸೋತನಂತೆ,
ಗುಲಾಬಿ ಹಿಡಿದು ಬಂದಿದ್ದ,
ಆಹಾ! ಅವನ ಚಿಗುರು ಮೀಸೆಯೆ!
‘ಇದು ಲವ್ ಜಿಹಾದ್ ಆಗ್ತದೆ’
ಎಂದು ನಾ ನಗುವಾಗಲೆ;
ನಾ ಈಸಿಕೊಂಡ ಗುಲಾಬಿ
ಕಸಿದುಕೊಂಡು ಓಡಿಬಿಟ್ಟ.

ಇದನ್ನು ನಿನ್ನೊಡನೆ ಹೇಳಿಕೊಂಡು
ನಾನೆಷ್ಟು ನಕ್ಕೆ? ಈಗಲೂ ನಗು!

ನಿನಗೆಂಥದೊ ಈರ್ಷೆ, ನನಗರ್ಥವಾಗಲ್ಲ!


~ ಮಂಜಿನ ಹನಿ

Friday 12 July 2019

ನಾನು ಮಿಯಾ!


ಬರೆಯಿರಿ
ಬರೆದಿಡಿ
ನಾನು ಮಿಯಾ,
NRCಯಲ್ಲಿ ನನ್ನ ಕ್ರಮಸಂಖ್ಯೆ 200543
ನನಗಿಬ್ಬರು ಮಕ್ಕಳು,
ಮೂರನೆಯದು ಬರುವುದರಲ್ಲಿದೆ
ಬರುವ ಬೇಸಿಗೆಗೆ,
ನೀವು ಅವನನ್ನೂ ದ್ವೇಷಿಸುವಿರಾ
ನನ್ನನ್ನು ದ್ವೇಷಿಸುವಂತೆ?
ಬರೆಯಿರಿ
ನಾನು ಮಿಯಾ.
ಬರಡುಜವುಗು ಭೂಮಿಯನ್ನು
ಉತ್ತುಬಿತ್ತೆಭತ್ತ ಬೆಳೆದು
ನಿಮಗೆ ಉಣಲು ಕೊಡಲು,
ಬೆನ್ನ ಮೇಲೆ ಇಟ್ಟಿಗೆ ಹೊತ್ತೆ
ನಿಮ್ಮ ಮಹಲು ಕಟ್ಟಲು,
ನಿಮ್ಮ ಕಾರು ಓಡಿಸಿದೆ
ಏಸಿಯಲ್ಲಿ ನೀವು ಆರಾಮ ವಿಶ್ರಮಿಸಲು,
ನಿಮ್ಮ ಗಟಾರ ಶುಚಿ ಮಾಡಿಕೊಟ್ಟೆ
ನೀವು ಆರೋಗ್ಯದಿಂದಿರಲು.
ನಿಮ್ಮ ಸೇವೆಗೆಂದರೆ
ನಾನು ನಿತ್ಯ ತಯಾರು,
ಆದರೂ
ಎಂಥದೋ ಅತೃಪ್ತಿ ನಿಮಗೆ.


ಬರೆದಿಡಿ
ನಾನು ಮಿಯಾ,
ಜಾತ್ಯಾತೀತಪ್ರಜಾಪ್ರಭುತ್ವ ಗಣರಾಜ್ಯದ
ಹಕ್ಕುಗಳೇ ಇಲ್ಲದ
ನಾಗರೀಕ,
ಅವಳ ತಂದೆ ತಾಯಂದಿರು ಭಾರತೀಯರಾದರೂ
ನನ್ನ ತಾಯಿಯನ್ನು ಡಿ ವೋಟರ್ ಮಾಡಲಾಯಿತು,
ಯಾವ ಶಿಕ್ಷೆಗೊಳಪಡಿಸದೆ
ನಿಮ್ಮಿಚ್ಛೆಗನುಸಾರ ನನ್ನನ್ನು ಕೊಲ್ಲಬಹುದು,
ನನ್ನೂರಿನಿಂದ ನನ್ನ ದೂರ ಎಸೆಯಬಹುದು,
ನನ್ನ ಹಸಿರು ಹೊಲವನ್ನು ಕಸಿಯಬಹುದು,
ನಿಮ್ಮ ರೋಲರನ್ನು ನನ್ನ ಮೇಲೆ
ಉರುಳಿಸಬಹುದು,
ನಿಮ್ಮ ಗುಂಡುಗಳು ನನ್ನ ಎದೆ ಬಗೆಯಬಹುದು.

ಬರೆಯಿರಿ
ನಾನು ಮಿಯಾ
ನೀವು ಕೊಡುವ ಹಿಂಸೆಯನ್ನು ನುಂಗಿ
ಬ್ರಹ್ಮಪುತ್ರೆಯ ಮಡಿಲಲ್ಲಿರುವವ,
ನನ್ನ ಮೈ ನೀಲಿಗಟ್ಟಿ
ಕಣ್ಣು ಬೆಂಕಿಯಿಂದ ಕೆಂಪ್ಪುಗಟ್ಟಿದೆ.

ಆದರೆ ನೆನಪಿನಲ್ಲಿಡಿ,
ನನ್ನ ಬಳಿ ಕೋಪ ಬಿಟ್ಟರೆ ಬೇರ್ಯಾವ ದಾಸ್ತಾನಿಲ್ಲ
ದೂರವೇ ನಿಲ್ಲಿ
ಇಲ್ಲವೆ
ಉರಿದು ಬೂದಿಯಾಗಿ.

-  ಕಾಜಿ ನೀಲ್
   ಅನುವಾದ: ಮಂಜಿನ ಹನಿ 

ಮೂಲದಲ್ಲಿ ಮಿಯಾ ಉಪಭಾಷೆಯಲ್ಲಿ ಕಾಜಿ ಸರೋವರ ಹುಸೇನ್' ಕಾಜಿ ನೀಲ್ ಬರೆದಿರುವ ಉಲ್ಲೇಖವಿದೆಶಾಲೀಮ್ ಎಂ ಹುಸ್ಸೇನ್ ಅವರು ಇಂಗ್ಲೀಷ್’ಗೆ ಭಾಷಾಂತರಿಸಿದ್ದಾರೆ. ಬೆಂಗಾಳಿ ಮುಸಲ್ಮಾನರನ್ನು ದಶಕಗಳಿಂದಲೂ ಮಿಯಾ ಎಂದು ಹಂಗಿಸಲಾಗುತ್ತದೆ. ಅದನ್ನೇ ಅಸ್ತ್ರವಾಗಿಸಿಕೊಂಡು ಈ ಕವಿತೆ ಬರೆಯಲಾಗಿದೆ. ಇಂಗ್ಲೀಷ್ ಅನುವಾದವನ್ನು ಕೆಳಗೆ ಕೊಡಲಾಗಿದೆ.




Thursday 5 May 2016

ಅವಳೊಲವೇ ಉಪಶಮನದ ಹಾದಿ!


ಉಪಶಮನದ ಹಾದಿ
ಪ್ರೇಮವೊಂದೇ ಎಂದ
ಬುದ್ಧ, ಬಸವ, ಗಾಂಧಿಯರು
ಪೂರ್ಣ ದಕ್ಕಿರಲೇ ಇಲ್ಲ,
ಅವಳೊಲವ ಭೋರ್ಗರೆತ
ನನ್ನೊಡಲ ತಣಿಸಿ,
ಎದೆಗಮೃತವ ಉಣಿಸುವವರೆಗೂ!

ಪ್ರೀತಿಯ ಗುಚ್ಛಕ್ಕೆ
ಮದುವೆಯ ರಂಗು ಬಳಿದು
ಅಂದ ನೋಡಿದ್ದೇ ನೆನಪು,
ಅವಳ ಕೈಯ ಮದರಂಗಿಯಿನ್ನೂ ಹಸಿ ಹಸಿ,
ತಾಳಿಯ ತುದಿ ಸೋಕಿದ್ದ
ನನ್ನ ಬೆರಳ ತುದಿಯ ಹರಿಶಿಣದ
ತೇವವಿನ್ನೂ ಎದೆಗೆ ಹಚ್ಚೆ ಬಿದ್ದಿದೆ,
ಅವಳ ಕೈಬಳೆಗಳ ಗಲಗಲ,
ಕಿರುಗೆಜ್ಜೆಯ ಇನಿದನಿ ಮಾರ್ದನಿ,
ಎಷ್ಟೆಲ್ಲವೂ ಸ್ಮೃತಿ ಪಟಲದೊಳಗೆ...

ಬಿಟ್ಟಿರಲಾಗದ ಸೆಳೆತದಿ
ನಾಳಿನ ಅಮಾವಾಸ್ಯೆಯ ಅಗಲಿಕೆ
ಭರಿಸಲಾಗುತ್ತಿಲ್ಲ,
ಏನು ಮಾಡಲಿ ಎಂದು ಅವಳನ್ನು ಕೇಳಿದೆ?
ಅವಳ ಕಣ್ಣಾಲಿಗಳು ಜಿನುಗಿ
ಎದೆ ತೋಯ್ಸಿದ ವಿರಹಕ್ಕೆ
ಅದೆಂತಹ ಉಪಶಮನವ ತರಲಿ?
ಅಗಲಿಕೆಯ ಕಾತರಕ್ಕದೆಂತಹ
ಮುಲಾಮು ಇದೆ ಹೇಳಿ?

--> ಮಂಜಿನ ಹನಿ

ಚಿತ್ರಕೃಪೆ: ನಮ್ ಎಂಗೇಜ್ಮೆಂಟ್ ಫೋಟೋಗ್ರಾಫರ್

Saturday 30 April 2016

ಹೊಸತನದ ಭಾವಗಳು!


ಈ ಮನೆಗೀಗಾಗಲೇ
ಐವತ್ತು ವರ್ಷ ಸಂದಿರಬಹುದು,
ನಡುಮನೆಯ ತೊಲೆಗಳಿಗೆ
ಅಜಾನುಬಾಹು ತಾತನ
ತೋಳುಗಳ ಆಧಾರ,
ಅದೋ ಅಲ್ಲಿ ನೋಡಿ
ಆ ಕಡೆಯ ಕೊಂಬೆಗೆ
ದೊಡ್ಡಪ್ಪನ ಉಸಿರು,
ಈ ಕಡೆಯ ಜಂತಿಗೆ ಅಪ್ಪಜಿಯ
ಜೀವದ ಜೀವದ ಕಸುವು!

ಇದರ ಇತಿಹಾಸ ದೊಡ್ಡದು.. ಬಗೆದಷ್ಟೂ
ಬದುಕೇ ಸಿಕ್ಕುತ್ತದೆ,
ಎಳೆ ವಯಸ್ಸಿಗೆ ಓಡಲು
ಶುರು ಮಾಡಿದ ನಾಲ್ಕು ಕಂದಮ್ಮಗಳ
ಬದುಕು, ಬವಣೆ, ತಬ್ಬಲಿತನಗಳು,
ನಿಟ್ಟುಸಿರು, ಹಸಿವು, ಅಳಲು,
ಎಷ್ಟೋ ಕಾಲ ಹೊಟ್ಟೆ ತಣ್ಣಗಿಟ್ಟ
ಹಿಟ್ಟು ಮತ್ತು ಬಸಿದ ಗಂಜಿ,
ಎಲ್ಲವನ್ನೂ ಇಂಗಿಕೊಂಡಿದೆ...
ಮತ್ತೆ ತಲೆ ಎತ್ತಿ ನಿಂತಿದೆ,
ಮುಂದೇನೆಂದು ತಿಳಿಯದಾದಾಗ
ಇಲ್ಲಿಗೆ ಬಂದು ನಿಲ್ಲುವುದು ಸೂಕ್ತ,
ಬಸವಳಿದು ಬಂದವನ ಬಿಗಿದಪ್ಪುವ
ಮಮತೆಯ ಭಾವವೊಂದು ಇಲ್ಲಿ ಅವ್ಯಕ್ತ!

ಇಷ್ಟು ಕಾಲ ಮುಗಿಲೆತ್ತರಕ್ಕೆ
ಕಾಣುತ್ತಿದ್ದವು,
ಹೆಂಚಿನ ಛಾವಣಿ, ಜಂತಿಗಳು, ರಿಪೀಸುಗಳು,
ಇಂದು ಭುಜಕ್ಕೊರಗುತ್ತಿರಬಹುದು,
ಸಂಚಿಯಿಸಿಕೊಂಡ ಶಕ್ತಿಯನ್ನು
ನೊಗಕ್ಕೆ ಕೊಡಬೇಕು;
ಮತ್ತೊಂದು ತಲೆಮಾರನ್ನು ಸ್ವಾಗತಿಸುವ ಕನಸಿಗೆ
ಮೈದಳೆದು ನಿಂತ ಮನೆಯ ಸಂಭ್ರಮ,
"ಮದುಮಗ ಒಬ್ಬೊಬ್ಬನೆ ಅಡ್ಡಾಡಬಾರದು ಮಗ.."
ಎಂದು ಕರೆದ ಅಜ್ಜಿ,
"ಹೂಂ..." ಎಂದು ಹೊರಗೆ ಹೊರಟ ನಾನು,
ತಲೆಮಾರುಗಳನ್ನು ಜಂಗಮವಾಗಿಸಿ
ತಾನು ಸ್ಥಾವರವಾಗಿ ನಿಂತಿದೆ,
ಸಂತನಾರೆಂಬ ಪ್ರಶ್ನೆಗೆ ಉತ್ತರವಿಲ್ಲ?

--> ಮಂಜಿನ ಹನಿ

ಚಿತ್ರಕೃಪೆ: ನಂದೇ ಫೋಟೋಗ್ರಫಿ