ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Sunday 20 September 2020

ಅಹಲ್ಯೆಯರು!



ಭಾವಗಳನ್ನೆಲ್ಲಾ ಅದುಮಿಟ್ಟುಕೊಂಡು

ಬದುಕಿಗೆ ನೊಗ ಹೂಡುತ್ತಾಳೆ,

ಗಂಡನಿಗೆ ರಸ ಹೀರಿ ಎಸೆದ ಸಿಪ್ಪೆ,

ಮಕ್ಕಳಿಗೆ ತಮ್ಮನ್ನು ಉದ್ಧರಿಸಲು ನಿಂತ ದೇವರು,

ದೇವರಲ್ಲಿ ಬೇಡುವುದು ಬಿಟ್ಟು

ದೇವರ ಕಷ್ಟ ಕೇಳುವುದುಂಟಾ? ಹಾಗೆ!


ಮನಸಿನ ತುಮುಲಗಳ

ಹರಿಯಬಿಡದಂತೆ

ಎಚ್ಚರವಹಿಸುವಳು,

ನೀಲುವಿನ ಪದ್ಯ ಓದಿ

ಪುಳಕಗೊಳ್ಳುವಳು; ಹೌದೆ?

ಯಾರಾದರೊಬ್ಬರು

ಸಣ್ಣವಾಗ್ತಿದ್ದೀ ನೋಡು

ಎನ್ನಲಿ ಎಂದು ಪರಿತಪಿಸಿ

ಸುಮ್ಮನಾಗುವಳು,

ಪಾಪ ಅವಳನ್ನವಳೇ ಕನ್ನಡಿಯಲಿ ಕಂಡು

ವರ್ಷಗಳಾಗಿರಬಹುದೆ?


ಜಿಜ್ಞಾಸೆಯ ಸಿಕ್ಕುಗಳಿಂದ ಬಿಡಿಸಿಕೊಳ್ಳುವ ಕನಸು,

ಆದರೆ ಶಿಲೆಯಾದ ಇವಳಿಗೆ

ಗೌತಮನ ಶಾಪವೇನೆಂದೆ ತಿಳಿಯದು,

ರಾಮನಂತು ದಾರಿ ಮರೆತಿರಬಹುದು?

ಓಡುವ ಕಾಲದಲಿ

ಸಾವಿರ ಸಾವಿರ ಅಹಲ್ಯೆಯರು!


--> ಮಂಜಿನ ಹನಿ

20/09/2017 ರಲ್ಲಿ ಬರೆದ ಕವಿತೆ.

No comments:

Post a Comment