ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Saturday 31 December 2011

ಮಧುರ ಪಿಸುಮಾತಿಗೆ, ಅದರ ತುಸು ಪ್ರೀತಿಗೆ

ಜನವರಿ ೧, ಸದಾ ನನ್ನ ನೆನಪಿನಲ್ಲುಳಿಯುವ ದಿನ. ಅದು ನವ ವಸಂತದ ಆರಂಭವೆಂಬ ಕಾರಣಕ್ಕೆ ಮಾತ್ರವಲ್ಲ. ನನ್ನ ಜೀವನದಲ್ಲಿನ ಒಂದು ಅನಿರೀಕ್ಷಿತ ತಿರುವು, ಒಂದು ಸುಮಧುರ ಯಾತನೆಯಾಗಿ ಉಳಿದ ಕಾರಣದಿಂದ. "ಆತ(?)" ನನ್ನ ಜೀವನದಲ್ಲಾಡಿದ ಆಟವನ್ನು ನಾನೆಂದಿಗೂ ಮರೆಯುವಂತಿಲ್ಲ..! ಇಂದು ಆ ಕ್ಷಣವನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇನೆ.


ನನ್ನ ಕ್ಯಾಂಟೀನ್ ಪುರಾಣದಲ್ಲಿ "ನಾನು ನಿನ್ನನ್ನು ನನ್ನ ಜೀವದ ಗೆಳೆಯನೆಂದು ತಿಳಿದಿದ್ದೇನೆಯೇ ಹೊರತು ನಲ್ಲನಾಗಿ ಅಲ್ಲ" ಎಂದು ಆಕೆ ನನ್ನ ಪ್ರೀತಿಗೆ ಅಲ್ಪವಿರಾಮವಿಟ್ಟಿದ್ದಳು..! ನನಗೋ ಅದ್ಯಾವುದಕ್ಕೂ ಹೊಂದಿಕೊಳ್ಳಲಾಗದೆ ಸ್ನೇಹಕ್ಕೆ ಪ್ರೀತಿಯನ್ನು ತ್ಯಾಗ ಮಾಡಿದ ಅಮರ ಪ್ರೇಮಿಯಾಗಿದ್ದೆ. ಆನಂತರದಲ್ಲಿ ಆಕೆ ಮತ್ತೊಂದು ಕತೆ ಹೇಳಲು ಶುರುವಚ್ಚಿದ್ದಳು. ನಾನು ಒಬ್ಬ ಹುಡುಗನನ್ನು ಪ್ರೇಮಿಸಿದ್ದೇನೆ, ಆತನನ್ನು ನನ್ನ ಜೀವದ ಗೆಳೆಯನಾದ ನಿನಗೆ ಪರಿಚಯಿಸಬೇಕೆಂದು ಹೇಳಿದಳು.ನನಗೋ ಹೃದಯದಲ್ಲಿ ಹೇಳಿಕೊಳ್ಳಲೂ, ತಾಳಿಕೊಳ್ಳಲೂ ಆಗದ ತಳಮಳ. ನನ್ನವಳೆಂದು ತಿಳಿದವಳು ನನ್ನೆದುರಿಗೆ ಮತ್ತೊಬ್ಬನನ್ನು ಪ್ರೀತಿಸುವುದು ಸಹಿಸಲಾಗದ ನೋವನ್ನು ನೀಡಿತ್ತು, ನಿದ್ರೆ ಬಿಟ್ಟ ಉದಾಹರಣೆಗಳೂ ಉಂಟು. ಇವೆಲ್ಲವುಗಳ ನಡುವೆಯೇ ಆಕೆ ಮತ್ತು ಆಕೆಯ ಮನೆಯವರೊಂದಿಗೆ ನಿಮಿಷಾಂಬಾ ದೇವಿಯ ದರ್ಶನವೂ ಆಗಿತ್ತು. ಅವಳ ಕುಟುಂಬದ ಎಲ್ಲ ಸದಸ್ಯರೂ ನನಗೆ ತುಂಬಾ ಹಿಡಿಸಿದ್ದರು, they were so cool together. ಆಕೆ ಅಂದು ನನ್ನೊಂದಿಗೆ ಏನನ್ನೋ ಹೇಳಲು ಚಡಪಡಿಸಿದ್ದಳು, ನಾನು ಆ ನಿಮಿಷಾಂಬಾ ದೇವಿಗೆ ನನ್ನ ಪ್ರೀತಿಯನ್ನು 'ನಮ್ಮ ಪ್ರೀತಿಯಾಗಿ' ಮಾಡೆಂದು ಅರ್ಜಿ ಹಾಕಿದ್ದೂ ಆಗಿತ್ತು.

ಅಂದು ಡಿಸೆಂಬರ್ 31ರ ಸಂಜೆ , ಆಕೆಯೊಂದಿಗೆ ಮೊಬೈಲ್ ನಲ್ಲಿ ಒಂದು ಗಂಟೆಯ ಸಂಭಾಷಣೆಯಾಗಿತ್ತು. ಅದು ನನ್ನ ಪ್ರೀತಿಯ ಸುಮಧುರ ನೆನಪುಗಳಲ್ಲೊಂದು. ಅವಳ ಜೀವನದ ನೂರಾರು ಕನಸುಗಳ ಬಗ್ಗೆ, ನಮ್ಮ ಗೆಳೆತನದ ಬಗ್ಗೆ, ನಾನು ಆಕೆಯ ಜೀವನದಲ್ಲಿ ಬಂದ ನಂತರ ಆದ ಬದಲಾವಣೆಗಳ ಬಗ್ಗೆ, ಅವಳ ಹುಚ್ಚು ಕಲ್ಪನೆಗಳ ಬಗ್ಗೆ ನಲಿವಿನಂತೆ ಉಲಿದಿದ್ದಳು. ನನಗಂತೂ ಅವಳ ಮಾತು ಕೇಳುವುದೇ ಸಿರಿ. ಹಾಗೆ ಆಗಸದಲ್ಲಿ ತೇಲುತಿದ್ದವನಿಗೆ ತಂತಿ ಬೇಲಿಯಾಗಿತ್ತು ಅವಳ ಕಡೆಯ ಮಾತು "ನನ್ನವನು ನಿನ್ನನ್ನು ಆದಷ್ಟು ಬೇಗ ಭೇಟಿಯಾಗಬೇಕಂತೆ". ನಾನು ಹೌಹಾರಿಬಿಟ್ಟಿದ್ದೆ!! ನಾನು ತುಂಬಾ ಬ್ಯುಸಿಯಾಗಿದ್ದೇನೆ ಪರೀಕ್ಷೆಗೆ ತಯಾರಿ ನಡೆಯುತ್ತಿದೆ, ಹಾಗೆ-ಹೀಗೆ ಎಂದು ಚೋಡಿದ್ದೆ. ನಿಜವಾದ ಕಾರಣವೇನೆಂದರೆ ನಾನು ಆಕೆಯ ಧ್ಯಾನದಲ್ಲಿಯೇ ಮುಳುಗಿ ಹೋಗಿದ್ದೆ. ಆತ ಮೋಹನನಾಗಿ ಬಂದು ನನ್ನವಳನ್ನು "ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು(!)" ಎಂಬಂತೆ ನನ್ನಿಂದ ದೂರಕ್ಕೆ ಸರಿಸಿ ಬಿಟ್ಟರೆ? ಎಂಬ ಭಯ. ಸರಿ ಏನೋ ಸಬೂಬು ಹೇಳಿ ಸಂಭಾಷಣೆ ತುಂಡರಿಸಿದ್ದೆ.

ಅಂದು ರಾತ್ರಿ ಮನೆಯಲ್ಲಿ ಕೇಕ್ ಕತ್ತರಿಸಿ ವರ್ಷದಾರಂಭದ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ ನಾನು ಮೊಬೈಲ್ ಹಿಡಿದು ಶತಪಥ ಹಾಕುತ್ತಿದ್ದೆ. ಕಡೆಗೆ ಆ ಕಡೆಯಿಂದ ಕರೆ ಬರದಾದಾಗ ತಾಳಲಾರದೆ ನಾನೇ ಫೋನಾಯಿಸಿದೆ, "ನಾನೂ ನಿನಗೇ ಪ್ರಯತ್ನಿಸುತ್ತಿದ್ದೆ ಕಣೋ, ಆದರೆ ನೆಟ್ ವರ್ಕ್ ಪ್ರಾಬ್ಲಮ್, ನಾಳೆ ಸಿಗು, ಮಾತನಾಡಬೇಕು" ಉಲಿಯಿತು ಅವಳ ಧ್ವನಿ. ಇದ್ದ ಕೋಪವೆಲ್ಲ ಮಾಯವಾಗಿ "ಹೌದಾ, ಸರಿ ಅದೋಗ್ಲಿ ಬಿಡೆ, happy new year, ನಾಳೆ ಸಿಗುತ್ತೇನೆ" ಎಂದ್ಹೇಳಿ ಸಂಪರ್ಕ ಕಡಿದು ಮನೆಯವರ ಸಂಭ್ರಮಾಚರಣೆಯಲ್ಲಿ ಮುಳುಗಿಹೋದೆ.


ಜನವರಿ 1 ರಂದು ಆಕೆಯನ್ನು ಭೇಟಿಮಾಡುವ ಸಂಭ್ರಮ. ಕ್ಲೀನ್ ಆಗಿ ಶೇವ್ ಮಾಡಿ, ಟ್ರಿಮ್ ಆಗಿ ಅಪ್ಪ ಕೊಡಿಸಿದ್ದ ಹೊಸ ಬಟ್ಟೆ ತೊಟ್ಟು ಮನೆಯಿಂದ ಹೊರಟೆ. ಕಾಲೇಜ್ ತಲುಪಿ, ನಾನಿಲ್ಲಿದ್ದೇನೆ ಎಂದು ಆಕೆಯ ಮೊಬೈಲಿಗೊಂದು ಸಂದೇಶ ರವಾನಿಸಿದೆ. ಆಕೆ ಎದುರಿನಲ್ಲೇ ಪ್ರತ್ಯಕ್ಷ! ನನ್ನ ಎದೆಬಡಿತ ಅವಳಿಗೂ ಕೇಳಿಸಬಹುದೆಂದು ಹೆದರಿಬಿಟ್ಟೆ. ಆಕೆಯೋ ಅಪ್ಸರೆಯಂತೆ ಕಂಗೊಳಿಸುತ್ತಿದ್ದಳು. ಕ್ಯಾಂಪಸ್ ನ ಪಾರ್ಕಿನಲ್ಲಿನ ಬೆಂಚ್ ಮೇಲೆ ಕುಳಿತು ಹರಟೆ ಶುರುವಚ್ಚಿದೆವು. ಅದು-ಇದು ಮಾತನಾಡುತ್ತಾ ಸಾಗಿತ್ತು ನಮ್ಮ ಮಾತುಕತೆ. ಹಾಗೆ ಸಾಗಿದ್ದ ಸಂಭಾಷಣೆ ಆಕೆಯ ಪ್ರೀತಿಯೆಡೆಗೆ ಹೊರಳಿತು. "ಇಂದು ನೀನು ಅವನನ್ನು ಭೇಟಿ ಮಾಡು, ಅವನು ಮೈಸೂರಿಗೆ ಬಂದಿದ್ದಾನಂತೆ, ನಾನಿನ್ನೂ ಅವನಿಗೆ ವಿಷ್ ಕೂಡ ಮಾಡಿಲ್ಲ, ಬೈಸಿಕೊಳ್ಳಬೇಕೇನೋ? ತಾಳು ಅವನಿಗೆ ಕಾಲ್ ಮಾಡಿ ಇಲ್ಲಿಗೆ ಬರಲು ಹೇಳುತ್ತೇನೆ". ಎಂದಾಕೆ ಒಂದೇ ಸ್ವರದಲ್ಲಿ ಉಸುರಿದಾಗ ನನ್ನ ಹೃದಯ ದಸಕ್ಕೆಂದಿತು. ನಾನು ಪ್ರತಿಕ್ರಿಯಿಸುವ ಮೊದಲೆ ಅವನ ನಂಬರ್ ಗೆ ಡಯಲ್ ಮಾಡಿಯೇ ಬಿಟ್ಟಳು. ಹೃದಯ ತನ್ನ ಬಡಿತ ಹೆಚ್ಚಿಸಿತು, ಎಲ್ಲಿ ಒಡೆದು ಹೋಗುವುದೋ ಎಂದು ಭಯಪಟ್ಟೆ. "ರಿಂಗ್ ಆಗ್ತಿದೆ, ತೆಗೀತಾನೇ ಇಲ್ಲ... ಕಾಲರ್ ಟ್ಯೂನ್ ಚೆನ್ನಾಗಿದೆ ಕೇಳು" ಎಂದು ನನ್ನ ಕಿವಿಗಿಟ್ಟಳು. ನನ್ನ ಕೈ ನಡುಗುತ್ತಿತ್ತು, ಮೈ ಬೆವರುತ್ತಿತ್ತು. "ಮಧುರ ಪಿಸುಮಾತಿಗೆ" ಎಂಬ ಬಿರುಗಾಳಿ ಸಿನೆಮಾದ ಸಾಂಗ್ ಕೇಳಿಸುತ್ತಿತ್ತು. ತಟ್ಟನೆ ಹೃದಯ ನಿಂತಂತಾಯ್ತು..!

ಅಯ್ಯೋ ಇದು ನನ್ನದೇ ಕಾಲರ್ ಟ್ಯೂನ್, ನನ್ನ ಮೊಬೈಲ್ ಎತ್ತಿ ನೋಡಿದೆ. silent mode ನಲ್ಲಿದ್ದ ಫೋನ್ ಹಾಗೆಯೇ ಜುಂಯ್ ಜುಂಯ್ ಎಂದು ವೈಬ್ರೇಟ್ ಆಗ್ತಿತ್ತು. ಅವಳ ಮೊಬೈಲ್ ಅನ್ನು ಅವಳ ಕೈಗಿಟ್ಟು ಒಂದು ಕ್ಷಣ ಮೌನವಾಗಿ ಕುಳಿತುಬಿಟ್ಟೆ. ಅವಳು "wish you happy new year" ಎಂದು ನನ್ನ ಕಿವಿಯಲ್ಲುಸುರಿದಳು. ನೂರಾರು ಭಾವಗಳಲ್ಲಿ ಮನ ತೋಯಿಸಿ ಹೋದಂತೆನಿಸಿತು. ಅಬ್ಬಾ! ಎಷ್ಟು ಜಾಣೆಯವಳು, ನನಗೀಗಲೂ ಮೈ ರೋಮಾಂಚನವಾಗುತ್ತದೆ. ನಾನವಳಿಗೆ ಪ್ರೇಮ ನಿವೇದಿಸಿಕೊಂಡ ಕ್ಯಾಂಟೀನ್ ಪುರಾಣ ನೆನಪಾಗುತ್ತದೆ. ಬರೋಬ್ಬರಿ ಎರಡು ತಿಂಗಳುಗಳ ನಂತರ ನನ್ನ ಅವಳು ನಮ್ಮ ಪ್ರೇಮಕ್ಕೆ ಅಧಿಕೃತ ಮುದ್ರೆಯೊತ್ತಿದ್ದಳು! ನನ್ನ ಮುಖದ ಭಾವಗಳನ್ನರಿಯಲು ಓರೆಗಣ್ಣಿನಲ್ಲಿ ನನ್ನ ಮೇಲೆ ದೃಷ್ಠಿ ನೆಟ್ಟ ಅವಳೆಡೆಗೆ ಮುಗುಳುನಗೆ ಬೀರಿ ಸ್ವಲ್ಪ ಹತ್ತಿರಕ್ಕೆ ಸರಿದು ಕುಳಿತೆ. ಒಮ್ಮೆಲೇ ಅಪ್ಪಿ ಮುದ್ದಿಸಬೇಕೆಂಬ ಭಾವೋತ್ಕಟತೆ. ಎಂದೂ ಸಭ್ಯತೆಯ ಎಲ್ಲೆ ಮೀರದ ನಾನು, ಅವಳ ಕೈಯನ್ನು ನನ್ನ ಕೈಯಲ್ಲಿಟ್ಟುಕೊಂಡು ನೇವರಿಸಲಷ್ಟೆ ಶಕ್ತನಾದೆ. ಹಿಡಿದ ಕೈಯನ್ನು ಎಂದೂ ಬಿಡೆನು ಎಂದು ಕಣ್ಣಿನಲ್ಲಿಯೇ ಸಂದೇಶ ರವಾನಿಸಿದೆ. ಅವಳು ಹಿಡಿತವನ್ನು ಬಿಗಿಗೊಳಿಸಿದಳು. ಅಕ್ಕ-ಪಕ್ಕದಲ್ಲಿದ್ದ ಕಣ್ಣುಗಳು ನಮ್ಮನ್ನೇ ನೋಡುತ್ತಿವೆ ಎಂದೆನಿಸುತ್ತಿತ್ತು ನನಗೆ. ಆದರೂ ಹಾಗೇ ಕೈಹಿಡಿದು ಕುಳಿತೆವು. ಹತ್ತು ನಿಮಿಷ ನೆಲೆಸಿದ್ದ ನಿರ್ಮಲ ಮೌನದಲ್ಲಿ ಹೃದಯಗಳೆರಡೂ ಕಣ್ಣುಗಳೊಳಗಿಳಿದು ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತಿದ್ದವು.


ಸ್ವಲ್ಪ ಸಮಯದ ನಂತರ ಕೈಹಿಡಿದೇ ಅವಳ PG ಯೆಡೆಗೆ ಹೆಜ್ಜೆ ಹಾಕಿದೆವು, ಮುಂದೆ ಹೀಗೆಯೇ ಸಪ್ತಪದಿ ತುಳಿದೇವು ಎಂಬ ಕನಸಲ್ಲಿ.

ಇಂದು ಆಕೆ ನನ್ನೊಂದಿಗಿಲ್ಲ, ಯಾವ ಕ್ಷುದ್ರಶಕ್ತಿಯ ಕಣ್ಣು ಬಿತ್ತೋ ಗೊತ್ತಿಲ್ಲ., ಆದರೆ ಅವಳೊಂದಿಗೆ ಅವಳ ನೆನಪುಗಳು ಮಧುರ ಮತ್ತು ಶಾಶ್ವತ..!

ಪುಟ್ಟಾ, ಈ ಲೇಖನವನೊಮ್ಮೆ ನೀನು ನೋಡುವಂತಾದರೆ ಸಾಕು ಕಣೆ, ನಾನು ಧನ್ಯ ಧನ್ಯ ಧನ್ಯ.

ಎಲ್ಲರೂ ದಯವಿಟ್ಟು, ಮೂರು ವಸಂತ ಪೂರೈಸಿ, ನಾಲ್ಕನೇ ವಸಂತಕ್ಕೆ ಕಾಲಿರಿಸಿರುವ ನನ್ನ ಪ್ರೀತಿಗೆ ಹುಟ್ಟುಹಬ್ಬದ ಶುಭಾಶಯ ಕೋರಿಬಿಡಿ...:-)

ಎಲ್ಲರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು, ದೇವರು ಎಲ್ಲರನ್ನೂ ಹರಸಲಿ, ಕಾಪಾಡಲಿ...:-)

- ಪ್ರಸಾದ್.ಡಿ.ವಿ.

Tuesday 27 December 2011

ಅಹಂ ಬ್ರಹ್ಮಾಸ್ಮಿ



ಹುಟ್ಟಿನಿಂದ ಪಡೆದು ತಂದೆ
ಸಾವಿರಾರು ಬಂಧಗಳ...
ಅಪ್ಪನಿಂದ ಪಡೆದವು
ಅಜ್ಜ-ಅಜ್ಜಿ, ಚಿಕ್ಕಪ್ಪ,
ದೊಡ್ಡಪ್ಪ, ಅತ್ತೆ...
ಅಮ್ಮನಿಂದ ಪಡೆದವು
ಅಜ್ಜ-ಅಜ್ಜಿ, ಚಿಕ್ಕಮ್ಮ,
ದೊಡ್ಡಮ್ಮ, ಮಾವ...
ಇಬ್ಬರಿಂದಲೂ ಪಡೆದವು
ಅಣ್ಣ-ಅಕ್ಕ, ತಮ್ಮ-ತಂಗಿ...
ನಿನಗಾಗಿ ಮಿಡಿದ
ಹೃದಯಗಳೆಷ್ಟು ಇಲ್ಲಿ..?
ಎಲ್ಲರವರವರ ಅನುಕೂಲತೆಗಳಿಗೆ
ಜೋತು ಬಿದ್ದವರು,
ಬಣ್ಣ ಕಟ್ಟಿಕೊಂಡು ಕುಣಿವರು,
ಹೊಗಳುವರು ನೀನೇ ಇಂದ್ರ-ಚಂದ್ರ
ನಂಬಬೇಡವೋ ಮೂಢ
ನಂಬಿಕೆಯ ಬೆಟ್ಟವೇರಿಸಿ
ಆಳ ನೋಡುವ ಹುನ್ನಾರ,
ನಿನಗಾಗಿ ಮಿಡಿದ ಹೃದಯವೊಂದೆ,
ಎದೆಯ ಮೇಲೆ ಕೈಯಿಟ್ಟು
ಕೇಳು ಅದರ ಬಡಿತವ,
ನಿನ್ನಿರುವ ಸಂಕೇತಿಸುವ ಮಿಡಿತವ...

ಬದುಕುವ ರೀತಿ-ನೀತಿಗಳು
ಕಲ್ಪಿಸಿದವು ನೂರಾರು ಅನುಬಂಧಗಳ,
ಶತ್ರು-ಮಿತ್ರ, ಗೆಳೆಯ-ಗೆಳತಿ,
ನಲ್ಲೆ ಹೆಂಡತಿ,
ಮಕ್ಕಳು-ಮರಿಗಳು,
ಸಹವರ್ತಿಗಳು,
ಎಲ್ಲವೂ ಸಹಜವೇ, ಸಹ್ಯವೇ...
ಆದರೆ ಅವರವರ
ಬದುಕು ಅವರವರಿಗೆ,
ಸಮಾನಾಂತರ ರೇಖೆಯ
ಬಾಳು ನಮ್ಮದು
ಸಂದಿಸುವುದನಂತದಲಿ...
ಮುಖ ನೋಡಿ ನಗುವೆವು,
ಅಳು ನೋಡಿ ಮಿಡಿವೆವು...
ಮತ್ತದೇ ನಾಟಕವೇ..!
ಬದುಕೊಂದು ನಾಟಕರಂಗ
ವಿಧಿಯದರ ಸಾಹೇಬ..!

ಬಂಧ-ಅನುಬಂಧಗಳಲ್ಲಿ
ಸಿಲುಕಿದ ಮೀನಾದೆ,
ಸಾಧನೆಯು ಶೂನ್ಯವಾಗಿ,
ದುರಾಸೆಯಲ್ಲಿ ನಿರಾಸೆಯ ಮೂಟೆ ಹೊತ್ತು
ಸವೆಸಿರುವೆ ಬದುಕಹಾದಿ,
ವರ್ಷಗಟ್ಟಲೆ ಉಸಿರಾಡಿದ್ದೀ,
ಆದರೆ ಬದುಕಿದ ಕ್ಷಣಗಳೆಷ್ಟು..?
ನಿನಗಾಗಿ ನಿನ್ನ ಹೃದಯ
ಬಡಿದ ಬಡಿತಗಳೆಷ್ಟು..?
ಅನಂತದಲ್ಲಿನ ಬದುಕಿಗಾಗಿ
ಕೂಡಿಟ್ಟ ಪುಣ್ಯದ ಗಂಟುಗಳೆಷ್ಟು..?
ಮಾನವನ ಬದುಕು
ನೀರಮೇಲಿನ ಗುಳ್ಳೆ..!
ಇನ್ನಾದರೂ ಬದುಕಬಾರದೆ ಬದುಕ..?
ನಿನಗಾಗಿ, ನಿನ್ನೊಳಗಿನ
ಆತ್ಮದ ಪರಮಾತ್ಮನ ಸಂತೃಪ್ತಿಗಾಗಿ...
ಅಹಂ ಬ್ರಹ್ಮಾಸ್ಮಿ...!

- ಪ್ರಸಾದ್.ಡಿ.ವಿ.
---------------------------------------------------------------------------------------------------
ಕೇವಲ ಜಂಜಡಗಳಲ್ಲಿ ಸಿಲುಕಿ ನರಳದೆ ನಿಮ್ಮ ಮನಸ್ಸಿನ ಸಂತೋಷಕ್ಕೆ ಬದುಕ ಕಟ್ಟಿಕೊಳ್ಳಬೇಕು.. ನಗು, ಅಳು, ಪ್ರೀತಿ, ನಿರಾಶೆ, ನೋವು, ಯಶಸ್ಸು ಎಲ್ಲವು ಸಮ್ಮಿಳಿತಗೊಂಡ ಬಾಳಾಗಬೇಕು ನಮ್ಮದು.. ಹೊಸ ಹೊಸ ತಪ್ಪುಗಳನ್ನು ಮಾಡಬೇಕು ಮತ್ತು ಅವುಗಳಿಂದ ಪಾಠ ಕಲಿಯಬೇಕು, ತಪ್ಪುಗಳು ಗತಿಸಿದವೆಂದು ಚಿಂತಿಸುವ ಅಗತ್ಯವಿಲ್ಲ ಯಾಕೆಂದರೆ ಈ ರೀತಿಯ ಪೆದ್ದುತನಗಳು ಜೀವನದಲ್ಲಿಲ್ಲದಿದ್ದರೆ ವಯಸ್ಸಾದ ಮೇಲೆ ನೆನೆಸಿ ನಗಲು ಕಾರಣಗಳೇ ಉಳಿಯದು.. ತಪ್ಪು ಮತ್ತು ಬದಲಾವಣೆಗಳು ಹರಿಯುವ ನೀರಿನಂತೆ..! ಬದುಕನ್ನ ಸಹಜವಾಗಿ ನಿರ್ಮಿಸಕೊಳ್ಳಬೇಕು, ಕೃತಕತೆ ಆದಷ್ಟು ಕಡಿಮೆಯಾಗಲಿ ಎಂಬುದು ಕವಿತೆಯ ಆಶಯ..

Saturday 24 December 2011

ದೇವಮಾನವ ಯೇಸು




ದರ್ಪದಾಡಳಿತಕ್ಕೆ ಬೇಸತ್ತು
ಜೀವವನು
ಅರಸೊತ್ತಿಗೆಗಡವಿತ್ತು,
ನಲುಗುತ್ತಿರುವ ಜೀವಗಳ
ಸಂಕೋಲೆ ಕಳೆಯಲು,
ಭವಬಂಧನ ಬಿಡಿಸಲು
ಅವತರಿಸಿದನವಧೂತನ
ಯೇಸುವೆಂದರು ಜನ!

ಕಣ್ಣಿಲ್ಲದವರ ಕಣ್ಣಾದ,
ಮೌನದ ಮಾತಾದ,
ಮಾನವೀಯ ಗುರುವಾದ!
ಕುಜನರ ಕುಯುಕ್ತಿಗೆ
ದೇವನೆಂದವರೂ
ಕಲ್ಲು ಹೊಡೆದರು,
ಕೈಗಳಿಗೆ ಮೊಳೆ ಜಡಿದರು!
ಶಿಲುಬೆಗೇರಿಸಿ, ಕೈ ಮುಗಿದರು!

ಯೇಸು ನಗುತ್ತಲಿದ್ದ,
ಜನರ ಜತನಾರಭ್ಯ
ಅಂಟಿದ್ದ ಕರ್ಮಗಳ ತೊಳೆದು,
ತಮವನ್ನು ತೊಡೆದು,
ಬೆಳಕನ್ನು ನೀಡೆಂದು
ದೇವನಲ್ಲಿ ಮೊರೆಯುತ್ತಿದ್ದ!
ಸಾವಿನಲ್ಲೂ ಮಾನವೀಯತೆ
ಸಾರಿ ಸ್ಥಬ್ದನಾದ!

ಯೇಸುವೆಂದರೆ
ಅವನಾರೂ ಅಲ್ಲ!
ನಿಮ್ಮ ನಮ್ಮೊಳಗಿನ ಜ್ಯೋತಿ,
ಬೆಳಗುವುದದರ ರೀತಿ!
ತನ್ನ ಮುಗ್ಧತೆಯನ್ನೇ
ಬತ್ತಿಯಾಗಿಸಿ,
ತಾನೇ ತಪ್ತ ದೀಪ್ತಿಯಾದನು!
ಜನರ ಬಾಳಿಗೆ ದೀಪವಾದನು!

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

Friday 16 December 2011

ಮನ ಕಲ್ಲಾಗುವಾ ಮುನ್ನ



ನಾ ನಗಲು ತುಟಿ ಬಿರಿಯೆ
ನನ್ನ ನಗುವಲ್ಲೂ ಇಣುಕಿ
ಕಾಡುವ ನಿನ್ನ ಪರಿಯ
ಏನೆಂದು ಬಣ್ಣಿಸಲಿ ಚೆಲುವೆ
ನಿನ್ನ ಧ್ಯಾನದಲಿ
ನಾನು ನಾನಲ್ಲ, ನೀನು ನೀನಲ್ಲ,
ನಾನು ನೀನು, ನಿನ್ನೊಳಗೆ ನಾನು...

ನಾನಳಲು ಕಣ್ಣಹನಿಯಲ್ಲೂ
ನಗುವ ನೀನು,
ನೆನಪಲ್ಲೂ ನೀನು,
ಕನಸಲ್ಲೂ ನೀನು,
ನನ್ನ ಪ್ರತಿಯೊಂದು ಕೃತಿಯಲ್ಲೂ
ಇಣುಕಿ, ನಗುತ ಕಾಡುವ ನೀನು,
ನಾನು ನಾನಾಗಿಯೇ ಉಳಿದಿಲ್ಲ
ನಾನೆಲ್ಲವೂ ನೀನೆಂಬ ಅನುಮಾನ..!
ಇದು ನಿನ್ನಲ್ಲಿ ನನ್ನ ಬಂಧನವೋ?
ಇಲ್ಲ ನನ್ನಿಂದ ನನಗೇ ಬಿಡುಗಡೆಯೋ?

ನಗುವಲ್ಲೂ ಕಾಡುವೆ,
ಅಳುವಲ್ಲೂ ಇಣುಕುವೆ,
ನಿನ್ನ ಮನಸಾರೆ ಪ್ರೀತಿಸಿದ
ಎನ್ನ ತಪ್ಪನ್ನು ಮನ್ನಿಸಿ
ನನ್ನ ಶಾಪ ವಿಮೋಚನೆ
ಮಾಡಿಬಿಡು ಗೆಳತಿ
ಈ ನನ್ನ ಮನ ಕಲ್ಲಾಗುವ ಮುನ್ನ...

- ಪ್ರಸಾದ್.ಡಿ.ವಿ.

Saturday 10 December 2011

ಎಂದೂ ನಿದ್ರಿಸದ ಕಾಂಚಾಣ



ರೈತನ ಹೊಲದಲ್ಲಿ ಪೈರಾಗಿ ಮೊಳೆತು
ಬೆಳೆಯಾಗಬೇಕಿದ್ದ ಹಣ,
ಅವನ ಕೊರಳಿಗೆ ಉರುಳಾಗಿದೆ,
ಬೆಳೆಗೆ ಜೀವಜಲ ವರುಣ
ಅತಿವೃಷ್ಠಿಗೆ ಬೆಳೆ ನಲುಗಿದೆ...
ಬೆಳೆಯ ಸಾಲಿಗನು ಬಂದು ಸೆಳೆಯೆ
ರೈತನ ಬಾಳೇ ಬರಡಾಗಿದೆ,
ಸಾವಿನಲ್ಲಿ ನರ್ತನಗೈವ ಹಣ
ಎಂದೂ ನಿದ್ರಿಸದ ಕಾಂಚಾಣ..!

ಮಗಳ ಮದುವೆಗೆ ಬೇಕು
ಲಕ್ಷಗಟ್ಟಲೆ ಹಣ,
ಅವನ ವರಮಾನವೋ ಕೆಲವು ಸಾವಿರಗಳಣ್ಣ,
ಹೇಗೋ ಕಷ್ಟಪಟ್ಟು ಮಾಡಿ
ಮುಗಿಸಿದ ಮಗಳ ಮದುವೆ,
ತೀರದ ದಾಹ ವರದಕ್ಷಿಣೆಗೆ,
ಆ ಹೆಣ್ಣನ್ನು ತಳ್ಳಿತು ಬೆಂಕಿಯ ದಾವಾಗ್ನಿಗೆ..!
ಮಗಳ ಕರಕಲು ದೇಹದ ಹೆಣ
ಮನೆಯವರ ಆಕ್ರಂದನ ಕೇಳಿಸಿಕೊಳ್ಳದ ಹಣ,
ಆಕ್ರಂದನದಿ ನರ್ತನಗೈವ ಹಣ,
ಎಂದೂ ನಿದ್ರಿಸದ ಕಾಂಚಾಣ..!

ಮೋಜು ಮದಿರೆಯ
ದಾಸ್ಯದಲ್ಲಿ ಯುವ ಜನತೆ,
ಕಂಟಪೂರ್ತಿ ಮದಿರೆ ಹೀರುವನೀತ,
ಎಳೆದೆಳೆದು ಬಿಡುವ
ಸಿಗರೇಟಿನ ಧೂಮ,
ಅಪ್ಪ ಕೂಡಿಟ್ಟ ಹಣವೆಲ್ಲ
ಧೂಮದಲ್ಲಿ ಹೋಮ,
ಪ್ರಿಯವಾದವು ಗಾಂಜಾ-ಅಫೀಮು,
ಇವುಗಳ ಚಟಕ್ಕೆ
ಅವನ ಜೀವವೇ ಇನಾಮು..!
ಮೋಜು ಮದಿರೆಯ ನಶೆಯಲ್ಲೂ
ನರ್ತನಗೈವ ಹಣ,
ಎಂದೂ ನಿದ್ರಿಸದ ಕಾಂಚಾಣ..!

- ಪ್ರಸಾದ್.ಡಿ.ವಿ.

Friday 2 December 2011

ಪ್ರೀತಿಯ ಅಳಲಿನಾಳ



ದೂರದಲ್ಲಾರೋ ಅಳುತ್ತಿರುವ ಸದ್ದು,
ದೂರದ ನದಿಯ ತೀರದಲ್ಲೋ,
ಅದರ ಹತ್ತಿರವಿರುವ ಸ್ಮಶಾನದಲ್ಲೋ,
ಅಲ್ಲೆಲ್ಲೋ ಅರಣ್ಯರೋಧನ,
ಮನ ತಡೆಯದೆ ಹುಡುಕುತ್ತ ಹೊರಟೆ,
ಅದರ ಹೆಸರು ಪ್ರೀತಿಯಂತೆ,
ವಾರಸುದಾರರಿಲ್ಲದೆ ಅಳುತ್ತಿರುವುದಂತೆ..!

ನನಗೋ ಕುತೂಹಲ ಜಾಸ್ತಿ,
ಏನು ನಿನ್ನ ಕತೆ, ಕೇಳಿಬಿಟ್ಟೆ...
ಒಂದೂರಿನಲ್ಲೊಬ್ಬ ಹೃದಯವಂತ,
ಒಬ್ಬಳು ಹೃದಯವಂತೆ,
ಕಣ್ಣು - ಕಣ್ಣು ಕಲೆತು,
ಹೃದಯಗಳು ಮಾತಿಗೆ ನಿಂತು,
ಆಗಿ ಹೋಯ್ತು ಪ್ರೀತಿ...
ಆ ಜೋಡಿಗೆ ಪ್ರೀತಿಯೇ
ಪರಮಾನ್ನ, ಮೃಷ್ಠಾನ್ನ..!

ಪ್ರೀತಿಯ ವಿಷಯ
ಪೋಷಕರ ಮನೆಮುಟ್ಟಲು
ಇವರು ಉಸಿರಾಡಿದ
ಗಾಳಿಯೇ ಸಾಕಂತೆ..!
ಹುಡುಗಿಯಪ್ಪನಿಗೋ
ತನ್ನ ಜಾತಿಯೇ ಮೇಲು,
ಆ ಹುಡುಗ ಬೇಡವೆಂದ,
ಹುಡುಗನಪ್ಪನೋ
ಸ್ವಪ್ರತಿಷ್ಠೆಯೇ ಮೇಲೆಂಬ ಭೂಪ
ಅವಳ್ಯಾವಳೋ ಎಲುಬಿಲ್ಲದ
ನಾಲಿಗೆಯವನ ಮನೆಯವಳು,
ಆ ಹುಡುಗಿ ಬೇಡವೆಂದ..!
ಹುಚ್ಚು ಪ್ರೀತಿಯ ಬರದಲ್ಲಿ
ಪ್ರೇಮಿಗಳು ನಿರ್ಧರಿಸಿಬಿಟ್ಟವು
ಈ ಜಗವೇ ಬೇಡ, ಜನವೂ ಬೇಡ..!

ಒಬ್ಬನ ಜಾತಿಯ ರಾಜ್ಯಭಾರ
ಇನ್ನೊಬ್ಬನ ಮಗನ
ಸಮಾಧಿಯ ಮೇಲೆ,
ಇವನ ಸ್ವಪ್ರತಿಷ್ಟೆಯ
ಹುಂಬತನದ ನರ್ತನ
ಅವನ ಮಗಳ
ಗೋರಿಯ ಮೇಲೆ..!
ಮಕ್ಕಳಿಬ್ಬರ ಸಮಾಧಿಯೇ
ಗೋರಿ ಆ ಪ್ರೀತಿಗೀಗ..!
ಪ್ರೀತಿ ಬಡವಾಯ್ತು
ಇವರಿಬ್ಬರ ದೆಸೆಯಿಂದ..!
ಆ ಪ್ರೇಮಿಗಳ ಪ್ರೀತಿಯ
ಮಗುವನ್ನು ಜೋಳಿಗೆಯಲ್ಲಿ
ಕಟ್ಟಿ ತೂಗಬೇಕಿದ್ದ ಪ್ರೀತಿ
ಅಳುತ್ತಲಿದೆ ವಾರಸುದಾರರಿಲ್ಲದೆ..!
ಅರಿಯುವವರಾರು
ಆ ಪ್ರೀತಿಯ ಅಳಲ?
ಊಹಿಸಬಲ್ಲಿರ
ಅದರ ಅಳಲಿನಾಳ?

- ಪ್ರಸಾದ್.ಡಿ.ವಿ.
------------------------------------------------------------------------------------------------------------------
ಕಣ್ಣೆದುರೇ ಕಂಡ ಒಂದು ಅಮಾನವೀಯ ಕೃತ್ಯದೊಟ್ಟಿಗೆ ಪುಟ್ಟ ಪ್ರೀತಿಯೊಂದರ ಅಳಲು, ಹೊರಬರಲು ಚಡಪಡಿಸಿ ಇಂದು ಪದಗಳ ರೂಪ ಪಡೆದಿದೆ. ಅವರ ಒಬ್ಬನೇ ಮಗನನ್ನು ಕಳೆದುಕೊಂಡು ಕೊರಗುತ್ತಿರುವ ಅವನಿಗೆ ಈಗ ಅವರ ಮಗ ಬೇಕಂತೆ..! ಇವನಿಗೆ ಕಾಡಿ-ಬೇಡಿ ಹೆತ್ತ ಮಗಳು ಮತ್ತೆ ಬೇಕಂತೆ..! ಆ ಪ್ರೇಮಿಗಳ ಪ್ರೀತಿ ಇವರಿಬ್ಬರ ಮನೆಯಲ್ಲಿ ಕಣ್ಣೀರ ಧಾರೆಯಾಗಿ ಅರಿಯುತ್ತಿದೆ. ಜಾತಿಯ ಮತಾಂದತೆಗೆ, ಸ್ವಪ್ರತಿಷ್ಟೆಯ ಹುಂಬತನಕ್ಕೆ ಇಷ್ಟಾದರೂ ಶಿಕ್ಷೆ ಬೇಡವೇ? ಹುಚ್ಚುತನಕ್ಕೆ ಬಿದ್ದ ಆ ಇಬ್ಬರು ಪ್ರೇಮಿಗಳು ಇಹ ಲೋಕವನ್ನೇ ತ್ಯಜಿಸಿವಬಿಟ್ಟಿವೆ, ಅವುಗಳಿಗವೇ ಶಿಕ್ಷೆ ಕೊಟ್ಟಿಕೊಂಡಿವೆ..!!!!!