ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Saturday 24 December 2011

ದೇವಮಾನವ ಯೇಸು




ದರ್ಪದಾಡಳಿತಕ್ಕೆ ಬೇಸತ್ತು
ಜೀವವನು
ಅರಸೊತ್ತಿಗೆಗಡವಿತ್ತು,
ನಲುಗುತ್ತಿರುವ ಜೀವಗಳ
ಸಂಕೋಲೆ ಕಳೆಯಲು,
ಭವಬಂಧನ ಬಿಡಿಸಲು
ಅವತರಿಸಿದನವಧೂತನ
ಯೇಸುವೆಂದರು ಜನ!

ಕಣ್ಣಿಲ್ಲದವರ ಕಣ್ಣಾದ,
ಮೌನದ ಮಾತಾದ,
ಮಾನವೀಯ ಗುರುವಾದ!
ಕುಜನರ ಕುಯುಕ್ತಿಗೆ
ದೇವನೆಂದವರೂ
ಕಲ್ಲು ಹೊಡೆದರು,
ಕೈಗಳಿಗೆ ಮೊಳೆ ಜಡಿದರು!
ಶಿಲುಬೆಗೇರಿಸಿ, ಕೈ ಮುಗಿದರು!

ಯೇಸು ನಗುತ್ತಲಿದ್ದ,
ಜನರ ಜತನಾರಭ್ಯ
ಅಂಟಿದ್ದ ಕರ್ಮಗಳ ತೊಳೆದು,
ತಮವನ್ನು ತೊಡೆದು,
ಬೆಳಕನ್ನು ನೀಡೆಂದು
ದೇವನಲ್ಲಿ ಮೊರೆಯುತ್ತಿದ್ದ!
ಸಾವಿನಲ್ಲೂ ಮಾನವೀಯತೆ
ಸಾರಿ ಸ್ಥಬ್ದನಾದ!

ಯೇಸುವೆಂದರೆ
ಅವನಾರೂ ಅಲ್ಲ!
ನಿಮ್ಮ ನಮ್ಮೊಳಗಿನ ಜ್ಯೋತಿ,
ಬೆಳಗುವುದದರ ರೀತಿ!
ತನ್ನ ಮುಗ್ಧತೆಯನ್ನೇ
ಬತ್ತಿಯಾಗಿಸಿ,
ತಾನೇ ತಪ್ತ ದೀಪ್ತಿಯಾದನು!
ಜನರ ಬಾಳಿಗೆ ದೀಪವಾದನು!

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

6 comments:

  1. ಅಪಾರ ದಯಾಮಯನಾದ, ಜನಾನುರಾಗಿಯಾದ ಮತ್ತು ದೈವ ಪುರುಷನಾದ ಭಗವಾನ್ ಏಸು ಕ್ರಿಸ್ತರ ಬಗ್ಗೆ ಕ್ರಿಸ್ಮಸ್ ವಿಶೇಷವಾಗಿ ಬರೆದ ಈ ಕವನ ಅವರ ಸಧ್ಗುಣಗಳನ್ನು ಚೆನ್ನಾಗಿ ವಿವರಿಸಿದೆ.

    ನಿಮಗೂ ಕ್ರಿಸ್ಮಸ್ ಹಬದ ಹಾರ್ದಿಕ ಶುಭಾಶಯಗಳು.

    ನನ್ನ ಬ್ಲಾಗಿಗೂ ಬನ್ನಿರಿ.

    ReplyDelete
  2. ತುಂಬು ಮನದ ಧನ್ಯವಾದಗಳು ಬದರಿ ಸರ್..:))) ನಿಮಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.. ನಿಮ್ಮ ಬದರಿನಾಥ್ ಪಲ್ಲವಳ್ಳಿಯ ಕವನಗಳು ತೋಟದಲ್ಲಿ ವಿಹರಿಸುತ್ತಿರುತ್ತೇನೆ, ಚೆಂದವಾಗಿ ಬರೆಯುತ್ತೀರಿ..:)))

    ReplyDelete
  3. ಜೀಸಸ್ ,ಅದೊಂದು ಮಗುವಿನ ಮನಸ್ಸಿನ ಮಾನವವತಾರಿ ಅಷ್ಟೆ.ಜನರ ಅಂದಶ್ರದ್ಧೆಯನ್ನು ತೊಡೆಯಲು ತನ್ನ ಜೀವವನ್ನು ಪಣ ಇಟ್ಟ. ಅಂದರೆ ಬಲಿಷ್ಠವಾಗಿ ಬೆಳೆದ ದೇಹದಲ್ಲಿ ಮಗುವಿನಂತ ಆತ್ಮವನ್ನು ಜನರು , ಧರ್ಮಾಂಧನ ಹಣೆ ಪಟ್ಟಿಕಟ್ಟಿ ಶಿಲುಬೆಗೇರಿಸಿದರು. ಅದು ತುಂಬಾ ಅಮಾನವೀಯವಾಗಿ. ಶಿಲುಬೇರಿಸಿದ ಮೇಲೂ ಅಲ್ಲಿಗೆ ಎಲ್ಲರೂ ಕಲ್ಲು ಹೊಡೆದರು.ಅದು ಮನುಷ್ಯರ ವಿಕಾರ ಮನಸ್ಸಿನ ದರ್ಶನವನ್ನು ಬೈಬಲ್ ತಿಳಿಸಿದೆ. ಇದನ್ನು ಯಾರೂ ಬರೆದರೋ ತಿಳಿಯದು.ಅಂತೂ ಜೀಸಸ್ ತತ್ತ್ವ ಸತ್ಯ.ಅದನ್ನು ಅನುಸರಿಸುವ ಕೈಗಳು ಸುಳ್ಳು ಅಷ್ಟೆ. ಇದೇ ಬೈಬಲ್ ನ ಮುಷ್ಠಿಯ ಪೂರ್ಣ ಪಾಠ.ಚೆನ್ನಾಗಿದೆ ಕವಿತೆ, ಮತ್ತೆ ಇದನ್ನು ಇನ್ನಷ್ಟು ಪ್ರಖರತೆಗೆ ಒಗ್ಗಿಸಲು ಪರಿಷ್ಕರಣೆ ಮಾಡುತ್ತಲೇ ಇರಿ. ಶಾಶ್ವತವಾಗಿ ಉಳಿಯಲಿ.

    ReplyDelete
  4. ದೇವರ ರಾಜ್ಯವನ್ನು ಸೃಷ್ಠಿಸಿದ,ಮಾನವತೆಯ ಜ್ಯೋತಿಯನ್ನು ಬೆಳಗಿಸಿದ ಮಹಾಮಾನವ ಏಸುವಿನ ಕುರಿತ ಸುಂದರ ಕವಿತೆಯನ್ನು ರಚಿಸಿ ನುಡಿ ನಮನ ಸಲ್ಲಿಸಿದ್ದೀರಿ.ಕ್ರೌರ್ಯ,ಅನ್ಯಾಯ,ಶೋಷಣೆ,ಮೋಸ ಮತ್ತು ದಬ್ಬಾಳಿಕೆಯಿಂದ ಶಿಲುಬೆಗೇರಿಸಿದ ನೀಚ ರಾಕ್ಷಸಿ ಮಾನವರಿಗೆ ಧಿಕ್ಕಾರವಿರಲಿ.ಅರಸೊತ್ತಿಗೆಯು ಕೋಲಾಹಲವನ್ನೆಬ್ಬಿಸಿ ನಿಜ ದೇವಮಾನವನ್ನು ಆಹುತಿ ಪಡೆದ ಕಥೆ ಓದಿದಾಗಲೆಲ್ಲ ಮೈ ಮನಗಳು ರೋಮಾಂಚನಗೊಳ್ಳವವು.ಮನಸು ಘಾಸಿಗೊಂಡು ಆಕ್ರೋಶವಾಗುವುದು.ಕರುಣಾಮಯಿ ಏಸುವಿಗೆ ಈ ಶುಭ ದಿನದಂದು ಸಕಾಲಿಕವಾದೊಂದು ನುಡಿ ತೋರಣ ಕಟ್ಟಿ ಅರ್ಪಿಸಿದ್ದೀರಿ.ರಚಿಸಿದ ನೀವೂ ಓದಿದ ನಾವೂ,ಎಲ್ಲರೂ ಧನ್ಯರಾಗುವರು.

    ReplyDelete
  5. ಸರಿಯಾಗಿ ಹೇಳಿದಿರಿ ರವಿಯಣ್ಣ.. ನಿಮ್ಮ ಈ ಮಾತುಗಳೇ ನನ್ನನ್ನು ಈ ಪ್ರಯತ್ನಕ್ಕಿಳಿಸಿದವುಗಳು.. ಆದರೆ ನೀವು ಹೇಳಿದ ಬೈಬಲ್ ನ ಸಾರವನ್ನು ಸಂಪೂರ್ಣವಾಗಿ ಹಿಡಿಯಲಾಗಲಿಲ್ಲ ಆದರೆ ತಿದ್ದಿ-ತೀಡಿದರೆ ಸ್ವಲ್ಪವಾದರೂ ನೀವು ಹೇಳಿದ ಅಂಶಗಳ ಬಗ್ಗೆ ಬೆಳಕುಚೆಲ್ಲಲು ಸಾಧ್ಯವಾಗುತ್ತದೆ ಎಂಬ ನಿಮ್ಮ ಮಾತು ಮನಸ್ಸಿಗೆ ನಾಟಿದೆ, ಪ್ರಯತ್ನಿಸುತ್ತೇನೆ.. ಅಂತಹ ಮಾಹಾನ್ ದೇವ ಮಾನವನನ್ನು ಶಿಲುಬೆಗೇರಿಸುವಾಗಿನ ಅಮಾನವೀಯ ದೃಶ್ಯಗಳ ಬಗ್ಗೆ ಇನ್ನಷ್ಟು ಪ್ರಖರವಾಗಿ ಬೆಳಕು ಚೆಲ್ಲಬಹುದೆನಿಸುತ್ತದೆ.. ಜೀಸಸ್ ಸತ್ಯಗಳು ಸಾರ್ವಕಾಲಿಕವಾಗಿದ್ದು ಅವುಗಳನ್ನು ಅನುಸರಿಸುವ ಕೈಗಳ ಅಸತ್ಯತೆಯ ಬಗ್ಗೆಯೂ ಬೆಳಕು ಚೆಲ್ಲಬಹುದೆ, ಒಮ್ಮೆ ಯೋಚಿಸಬಹುದೆನಿಸುತ್ತದೆ.. ನಿಮ್ಮ ಮಾತುಗಳು ಇನ್ನಷ್ಟು ಆತ್ಮವಿಶ್ವಾಸ ತುಂಬಿವೆ.. ಪ್ರೀತಿಯ ಧನ್ಯವಾದಗಳು ನಿಮಗೆ..:)))

    ReplyDelete
  6. ನಿಮ್ಮ ಪ್ರೀತಿಯ ವಿಮರ್ಶೆಗೆ ತುಂಬು ಮನದ ಧನ್ಯವಾದಗಳು ಸೋಮಣ್ಣ..:))) ನೀವು ಸರಿಯಾಗಿಯೇ ಹೇಳಿದಿರಿ ಮಾನವತೆಯ ಭಿತ್ತಿ ದೇವರ ರಾಜ್ಯವನು ಸೃಷ್ಠಿಸಲು ಬಂದ ಮಮತಾಮಯಿಯನ್ನು ಧರ್ಮಾಂಧನೆಂಬ ಹಣೆಪಟ್ಟಿ ಕಟ್ಟಿ, ಶಿಲುಬೆಗೇರಿಸಿದ ವಿಕೃತ ಮನಸುಗಳಿಗೆ ಧಿಕ್ಕಾರವಿರಲಿ.. ಇಂತಹ ದಿನಗಳಲ್ಲಾದರೂ ಅವರ ಪುಣ್ಯ ಸ್ಮರಣೆಯಲಿ ಮನ ಪುನೀತವಾಗಲಿ ಎಂಬ ಸದಾಶಯ ಹೊತ್ತು ನಿಮ್ಮೆಲ್ಲರ ಸಹಕಾರದಿಂದ ಮೂಡಿದ ಕವಿತೆಯಿದು.. ನಿಮ್ಮೆಲ್ಲರ ಸಹಕಾರ ಮತ್ತು ಆರೈಕೆಗೆ ಚಿರ ಋಣಿ ನಾನು..:)))

    ReplyDelete