ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Wednesday 1 October 2014

ಹೇ ಬಾಪು...


ಮಹಾತ್ಮನೆನಿಸಿಕೊಳ್ಳುವ ಗಾಂಧಿ,
ಆಗಾಗ ಮನದ ಬಾಗಿಲವರೆಗೆ
ಬರುತ್ತಾರೆ, ಕದ ಬಡಿಯುತ್ತಾರೆ,
ಬಾಗಿಲ ಮುಂದಿಳಿಬಿಟ್ಟ
ಬಿಳಿ ಪರದೆಯ ಕಂಡು ಪುಳಕಿತರಾದಂತೆ
ತೋರುತ್ತಾರೆ...
ತಾನು ಬಿತ್ತಿ ಹೋದ ಶಾಂತಿ ಮಂತ್ರ
ಸಫಲವಾಗಿದೆ ಎಂದವರಿಗೆ ಹಿಗ್ಗೋ ಹಿಗ್ಗೋ..

ಪರದೆಯೊಳಗೆ ಸಮಾನತೆಗೆ ವಿಷವಿಕ್ಕಿ,
ಜನರ ಹುಟ್ಟಿಗೇ ಹಿಂದೂ, ಮುಸ್ಲೀಂ, ಕ್ರೈಸ್ತನೆಂಬ
ನಂಜು ಬೆರೆಸಿ, ಪ್ರಶಾಂತತೆ ಕಾಪಾಡಲಾಗಿದೆ,
ಗಣೇಶ ಚತುರ್ಥಿಗೆ ಗೋಲಿಬಾರ್ ಆದರೆ,
ರಂಜಾನ್ ಗೆ ಕರ್ಫ್ಯೂ ಹೇರಲಾಗಿದೆ,
ಚರ್ಚ್ ಗೆ ಕಲ್ಲು ಹೊಡೆದು ಜಕಂ ಮಾಡಲಾಗಿದೆ,
ಇಲ್ಲೇ ಕೇಳುತ್ತದೆ ಕೇಳಿಸಿಕೊಳ್ಳಿ...
"ಸರ್ವಜನಾಂಗದ ಶಾಂತಿಯ ತೋಟ.."
ಅದನೇ ಕೇಳಿಸಿಕೊಳ್ಳುವ ಗಾಂಧಿ
ತನ್ನ ಎದೆಯುಬ್ಬಿಸಿ ಹೆಮ್ಮೆಯಾಗುತ್ತಾರೆ!

ಮೇಲ್ನೋಟಕ್ಕೆ ವೈಭವದ ಸೋಗು ಹೊದ್ದ
ಮನದೊಳಗೆ ಬಿಲ ಕೊರೆದು
ಕನ್ನ ಹಾಕುವ ಹೆಗ್ಗಣಗಳಿವೆ,
ಹೇ ಬಾಪು ನೋಡು,
ನೀ ಕೊಡಿಸಿದ ಸ್ವಾತಂತ್ರ್ಯ ಇವರಿಗೆಷ್ಟು ಪ್ರಯೋಜನಕಾರಿ?
ದುಡ್ಡನ್ನೇ ತಿಂದುಂಡು ಗುಡಾಣ ಬೆಳೆಯುತ್ತದೆ,
ಕೆಲವರು ಪೇಚಾಡಿಕೊಳ್ಳುತ್ತಾರೆ,
ಗಾಂಧಿ ಇನ್ನೂ ತನ್ಹಳೇ ಮಂತ್ರವನ್ನೇ ಪಠಿಸುತ್ತಾರೆ,
"ಈಶ್ವರ ಅಲ್ಲಾ ತೇರೇ ನಾಮ್,
ಸಬ್ ಕೋ ಸನ್ಮತಿ ದೇ ಭಗವಾನ್..."

ಪಾಪ ವಯಸ್ಸಾದ ಗಾಂಧಿ
ಇನ್ನಷ್ಟು ಹೊತ್ತು ತಮ್ಮ ಕಾತರದ
ಮೂಟೆಯನ್ಹೊರಲಾಗದೆ,
ಒಳ ಪ್ರವೇಶ ಮಾಡಲು ಉತ್ಸುಕರಾಗಿ
ಪರದೆ ಸರಿಸಿ ನೋಡುತ್ತಾರೆ,
ಚಿಲಕವಿರದ ಬಾಗಿಲ ಮೇಲೆ
"ನಾಳೆ ಬಾ" ಎಂದು ಬರೆಯಲಾಗಿದೆ,
ನಿರೀಕ್ಷೆಗಳ ಭಾರಕ್ಕೆ ಕುಗ್ಗಿಹೋದ ಗಾಂಧಿ,
"ಹೇ ರಾಮ್" ಎನ್ನುತ್ತಾ ಕುಸಿದು ಬಿದ್ದವರು
ಸತ್ತೇ ಹೋದರೆ?!
ಭ್ರಮೆಯಾವರಿಸಿಬಿಟ್ಟಿದೆ!!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

1 comment:

  1. ಮಹಾತ್ಮನ ಹೆಸರಲ್ಲಿ ಇಂದು ಸಾವಿರ ಅಪಚಾರಗಳು ನಡೆದುಹೋಗುತ್ತಿವೆ. ಅವುಗಳ ಕರಾಳತೆಯನ್ನು ನಿಮ್ಮ ಕವಿತೆ ತೆರೆದಿಡುತ್ತಿದೆ.

    ReplyDelete