ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Sunday 17 November 2013

ಟೀಕಿಸಲೆಂದೇ ಟೀಕಿಸುವವರಿಗೆ!


ಸಚಿನ್ ಗೆ ’ಭಾರತ ರತ್ನ’ ಕೊಟ್ಟದ್ದು ಅಗತ್ಯವಿಲ್ಲದಿರಬಹುದೇನೋ, ಏಕೆಂದರೆ ಕ್ರೀಡೆಗೆ ಸಂಬಂಧಿಸಿದ ಪರಮೊಚ್ಛ ಗೌರವ ’ಖೇಲ್ ರತ್ನ’ವಿದೆ ಎಂದು ಹೇಳುವವರ ಮಾತಿನ ತಳಹದಿಗಳೇ ನಂಗೆ ಅರ್ಥವಾಗ್ತಿಲ್ಲ. ’ಭಾರತ ರತ್ನ’ವನ್ನು ಕ್ರೀಡಾ ಕ್ಷೇತ್ರಕ್ಕೆ ವಿಸ್ತರಿಸಬಹುದೆಂದು ಕಳೆದ ವರ್ಷವೇ ತಿದ್ದುಪಡಿಯಾಗಿದೆ. ಆದ್ದರಿಂದ ಕ್ರೀಡೆಯನ್ನೂ ಒಳಗೊಂಡಂತೆ ದೇಶದ ನಾಗರೀಕನಿಗೆ ಕೊಡಬಹುದಾದ ಪರಮೋಚ್ಛ ಗೌರವ ’ಭಾರತ ರತ್ನ’ವಾಗುತ್ತದೆ!

ಇನ್ನು ’ಭಾರತ ರತ್ನ’ ಪ್ರಶಸ್ತಿಗೆ ಪರಿಗಣಿಸಲು ಸಚಿನ್’ನ ಬಾದ್ಯತೆಯ ಪ್ರಶ್ನೆ. ಸಚಿನ್ ತನಗೆ ’ಭಾರತ ರತ್ನ’ ಕೊಡಿ ಎಂದು ಸರ್ಕಾರದ ಹಿಂದೆ ಹಿಂದೆ ಓಡಿರಲಿಕ್ಕಿಲ್ಲ. ಅದು ಅವರ ಜಾಯಮಾನವೂ ಅಲ್ಲ. ಅಷ್ಟು ಸಾಕು ಆ ಅರ್ಹತೆ ಗಳಿಸಿಕೊಳ್ಳಲು! ಇನ್ನೂ ಆತ ’ಬಹುರಾಷ್ಟ್ರೀಯ ಕಂಪೆನಿ’ಗಳ ಜೇಬು ತುಂಬಿಸಿದ, ಹಣದಾಹಿ ಎಂಬ ಅಪವಾದ. ದುಡ್ಡು ಮಾಡಿದವರೆಲ್ಲ ಹಣದಾಹಿಗಳಲ್ಲ! ಆತ ತನ್ನ ಆಟದ ಹೆಮ್ಮಯೆಂಬಂತೆ ಮೆರೆದು, ವಿಶ್ವಕ್ಕೆ ಕ್ರಿಕೇಟ್ ನ ರಾಯಬಾರಿ ಎಂಬಂತೆ ಆಡಿ ತೋರಿಸಿದವ. ತನ್ನ ಕ್ರೀಡೆಯಲ್ಲಿ ಅತ್ಯುನ್ನತ ಶಿಖರವೇರಿದವ. ಇನ್ನೇನು ಸಾಧಿಸಲು ಉಳಿದಿತ್ತು ಕ್ರಿಕೇಟ್ ನಲ್ಲಿ ಅವನಿಗೆ? ಸೋ ಅವನು ಕ್ರಿಕೇಟ್ ನಲ್ಲಿ ಸಲ್ಲಿಸಿದ ಸೇವೆಯನ್ನು ’ಭಾರತ ರತ್ನ’ ಪ್ರಶಸ್ತಿಗೆ ಪರಿಗಣಿಸುವ ಅರ್ಹತೆ ಆತನಿಗಿತ್ತು.

ಇನ್ನೂ ’ಬಹುರಾಷ್ಟ್ರೀಯ ಕಂಪೆನಿ’ಗಳು ಎಂದು ತಂಪು ಪಾನೀಯದ ಪೆಪ್ಸಿ, ಕೋಲಾಗಳನ್ನಷ್ಟೇ ಕರೆದದ್ದು? ಬಹುರಾಷ್ಟ್ರೀಯ ಕಂಪೆನಿಗಳೆಂದರೆ ಬಹುರಾಷ್ಟ್ರಗಳಲ್ಲಿ ತನ್ನ ನೆಲೆಯನ್ನು ಹೊಂದಿರುವ ಎಲ್ಲವೂ ಬಹುರಾಷ್ಟ್ರೀಯ ಕಂಪೆನಿಗಳು, ಪೆಪ್ಸಿ-ಕೋಲಗಳಷ್ಟೆ ಅಲ್ಲ. ಆತ ಪೆಪ್ಸಿ-ಕೋಲಗಳಿಗಲ್ಲದೆ ಭಾರತೀಯ ಮೂಲದ ಅನೇಕ ಉತ್ಪನ್ನಗಳಿಗೂ ರಾಯಭಾರಿಯಾಗಿದ್ದ ಎನ್ನುವುದು ಎಲ್ಲರ ನೆನಪಿನಲ್ಲಿದ್ದರೆ ಸಾಕು! ಈ ತಂಪು ಪಾನೀಯಗಳ ಉದ್ಯಮ ಕಾರ್ಯ ನಿರ್ವಹಿಸುವುದಾದರೂ ಹೇಗೆ? ಪೆಪ್ಸಿ-ಕೋಲಗಳ ಬ್ರಾಂಡ್ ನೇಮ್ ಇಲ್ಲದಿದ್ದರೆ ಆ ತಂಪು ಪಾನೀಯಗಳು ಮಾರುಕಟ್ಟೆಯಲ್ಲಿ ಉಳಿಯಲೂ ಸಾಧ್ಯವಿಲ್ಲ! ಈ ಸಂದರ್ಭದಲ್ಲಿ ಟೋರಿನೋ ಮುಂತಾದ ಪೆಪ್ಸಿ ಬ್ರಾಂಡ್ ನೇಮ್ ಇಲ್ಲದ ತಂಪು ಪಾನೀಯಗಳಿಗೆ ಒದಗಿದ ದುಃಸ್ಥಿತಿಯನ್ನು ಎಲ್ಲರೂ ನೆನೆಯಬಹುದು. ಈ ಪರಿಸ್ಥಿತಿಗೆ ಕಾರಣ ಪೆಪ್ಸಿ-ಕೋಲ ಕಂಪೆನಿಗಳೇ ವಿನಃ ಸಚಿನ್ ಅಲ್ಲ ಎಂಬುದು ಎಲ್ಲರೂ ಒತ್ತತಕ್ಕಂಥದ್ದು.

ಸಚಿನ್ ಕ್ರಿಕೇಟ್ ನಲ್ಲಿ ಸಲ್ಲಿಸಿದ, ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಗಮನಿಸುವುದಾದರೆ, ಆತ ೨೪ ವರ್ಷಗಳಿಂದ ತನ್ನ ಫಾರ್ಮ್ ನಲ್ಲಿ ಸ್ಥಿರತೆ ಕಾಯ್ದುಕೊಂಡು, ದೇಶದ ಹೆಸರನ್ನು ವಿರಾಜಮಾನವಾಗಿ ಹಾರಿಸಿದವ. ಸಚಿನ್ ಆಡಿದ್ದು ತನ್ನದೇ ಸ್ವಾಯತ್ತತೆ ಹೊಂದಿರುವ ಬಿ.ಸಿ.ಸಿ.ಐ ಎಂಬ ಸಂಸ್ಥೆಗೇ ಹೊರತು ಭಾರತಕ್ಕಾಗಿಯಲ್ಲ ಎನ್ನುವ ಮಾತು ಹಾಸ್ಯಾಸ್ಪದವೆನಿಸುತ್ತದೆ ನನಗೆ. ಸಚಿನ್ ನ ಫೇರ್’ವೆಲ್ ನಲ್ಲಿ ಆತ ಹೇಳಿಕೊಂಡದ್ದು "ಇಟ್ಸ್ ಮೈ ಡ್ರೀಂ ಟು ಪ್ಲೇ ಫಾರ್ ಇಂಡಿಯಾ ಅಂಡ್ ಐ ಹ್ಯಾವ್ ಲೀವ್ಡ್ ಇಟ್ ಫಾರ್ 24 ಇಯರ್ಸ್" ಮತ್ತು "ಇಟ್ಸ್ ಅವರ್ ಪ್ರಿವಿಲೇಜ್ ಅಂಡ್ ಪ್ರೈಡ್ ಟು ಪ್ಲೇ ಫಾರ್ ಇಂಡಿಯಾ". ಇಲ್ಲಿ ಇಂಡಿಯಾದ ಬದಲಾಗಿ ಆತ ಬಿ.ಸಿ.ಸಿ.ಐ ಎಂದು ಬಳಸಲಿಲ್ಲ! ತಮ್ಮದು ಸ್ವಾಯತ್ತತೆಯ ಸಂಸ್ಥೆ ಎಂದು ಘೋಷಿಸಿಕೊಂಡದ್ದು ಬಿ.ಸಿ.ಸಿ.ಐ ನ ದುರಾಸೆಯಿಂದಲೇ ಹೊರತು, ಸಚಿನ್ ನ ದುರಾಸೆಯಿಂದಲ್ಲ.

ಕ್ರಿಕೇಟ್ ಅನ್ನು ಒಲಂಪಿಕ್ ನಲ್ಲಿ ಸೇರಿಸಿದ್ದರೆ ಧ್ಯಾನ್ ಚಂದ್, ಮಿಲ್ಖಾ ಸಿಂಗ್ ಮತ್ತಿತರ ಮಹಾನ್ ಆಟಗಾರರು ಮಾಡಿರುವ ಸಾಧನೆಯಷ್ಟೇ ಸಚಿನ್ ಕೂಡ ಮಾಡಿರುತ್ತಿದ್ದ. ೨೪ ವರ್ಷ ಆಡಿದವನಿಗೆ ಅದು ಸಾಧ್ಯವಾಗುತ್ತಿರಲಿಲ್ಲ ಎಂಬುದು ತಳವಿಲ್ಲದ ವಾದ! ಆತ ತನ್ನ ಆಟದಿಂದಷ್ಟೇ ಅಲ್ಲದೆ, ತನ್ನ ವ್ಯಕ್ತಿತ್ವದಿಂದಲೂ ಎಷ್ಟೋ ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾನೆ ಎನ್ನುವುದು ಒಪ್ಪತಕ್ಕಂಥ ವಿಷಯ. ಅಂದ ಮಾತ್ರಕ್ಕೆ ಧ್ಯಾನ್ ಚಂದ್, ಮಿಲ್ಖಾ ಸಿಂಗರ ಸಾಧನೆಯನ್ನು ನಾನು ಅಲ್ಲೆಗೆಳೆಯುತ್ತಿಲ್ಲ, ಸಚಿನ್ ಗಿಂಥ ಮೊದಲು ಅವರಿಬ್ಬರಿಗೆ ಕೊಟ್ಟಿದ್ದರೂ ನನಗೆ ಸಂತೋಷವಾಗುತ್ತಿತ್ತು. ಆದರೆ ಸಚಿನ್ ಗೆ ಕೊಟ್ಟಿದ್ದರಲ್ಲಿ ಯಾವುದೇ ತಪ್ಪೂ ನನಗೆ ಕಾಣುವುದಿಲ್ಲ, ಕಾಂಗ್ರೇಸ್ ನವರ ಆಷಾಢಭೂತಿತನದ ರಾಜಕೀಯ ನಡೆಯೊಂದನ್ನು ಬಿಟ್ಟು! ಆ ರೀತಿ ನೋಡುತ್ತಾ ಹೋದರೆ ’ಭಾರತ ರತ್ನ' ಪ್ರಶಸ್ತಿಯ ’ತಮ್ಮ ಅಧಿಕಾರಾವಧಿಯ ಸಂದರ್ಭದಲ್ಲೇ ಪ್ರಶಸ್ತಿ ಪಡೆದ ಇಂದಿರಾ ಗಾಂಧಿ’ ಮತ್ತು ’ಸರ್ದಾರ್ ವಲ್ಲಭಬಾಯಿ ಪಟೇಲರೊಂದಿಗೆ ೧೯೯೧ ರಲ್ಲಿ ಪ್ರಶಸ್ತಿ ಪಡೆದ ರಾಜೀವ್ ಗಾಂಧಿ’ ಈ ಎರಡು ಸಂದರ್ಭಗಳು ಹಾಸ್ಯಾಸ್ಪದವೂ, ವಿಷಾದನೀಯವೂ ಅನ್ನಿಸುತ್ತದೆ!

- ಪ್ರಸಾದ್.ಡಿ.ವಿ.

No comments:

Post a Comment