ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Tuesday 1 May 2012

ವಂದನೆಗೊಂದೋಲೆ


ಮಾನ್ಯರೇ,

             ನಾನೊಬ್ಬ ಪುಟ್ಟ ಬ್ಲಾಗಿಗ, ನನ್ನ ಹೆಸರು ಪ್ರಸಾದ್.ಡಿ.ವಿ. ನಾನು 'ಮಂಜಿನ ಹನಿ’ ಯನ್ನು ಮೊನ್ನೆ ಮೊನ್ನೆ ಎಂದರೆ ಕಳೆದ ವರ್ಷವಷ್ಟೇ ಪ್ರಾರಂಭಿಸಿದ್ದೇನೆ. ನನ್ನ ಬ್ಲಾಗ್ ನ ಬಗ್ಗೆ ಹೇಳುವುದಕ್ಕೆ ಮೊದಲು ನನ್ನಲ್ಲಿ ಸುಪ್ತವಾಗಿದ್ದ ಸಾಹಿತ್ಯದ ಆಸಕ್ತಿ ಮತ್ತೆ ಗರಿ ಕಟ್ಟಿಕೊಂಡ ಬಗ್ಗೆ ತಿಳಿಸುತ್ತೇನೆ.

              ನಾನು ನನ್ನ ಇಂಜಿನಿಯರಿಂಗ್ ಪದವಿಯನ್ನು ಜೂನ್ ೨೦೧೧ ರಲ್ಲಿ ಮುಗಿಸಿ ನನ್ನ ಕಂಪೆನಿಯವರು ನನಗೆ ಕರೆ ಕಳುಹಿಸುವರೆಂದು ಕಾತುರನಾಗಿ ಕಾಯುತ್ತಾ ಕುಳಿತಿದ್ದೆ. ನನ್ನ ಕೈಯಲ್ಲಿ ಒಂದೆರಡು ತಿಂಗಳುಗಳಿದ್ದವು. ಅವುಗಳನ್ನು ಹೇಗಾದರೂ ಮಾಡಿ ಸದುಪಯೋಗ ಪಡಿಸಿಕೊಳ್ಳಬೇಕೆಂದುಕೊಳ್ಳುತ್ತಿರುವಾಗಲೆ ನೆನಪಾದದ್ದು ಈ ಬರವಣಿಗೆಯ ಗೀಳು. ಮೊದಲಿನಿಂದಲೂ ಬರೆಯುವ ಗೀಳಿದ್ದರೂ ಸಮಾಯಾಭಾವ ಮತ್ತು ಪ್ರೋತ್ಸಾಹಿಸುವ ಕೈಗಳಿಲ್ಲದೆ ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದೆ. ಪ್ರೋತ್ಸಾಹಿಸುವ ಪೋಷಕರ ಕೈಗಳು ಬದುಕನ್ನು ಕಟ್ಟಿಕೊಳ್ಳಲು ಪ್ರೇರೇಪಿಸಿದ್ದವು. ಈಗ ಕೈಯಲ್ಲಿ ಡಿಗ್ರಿ ಇದ್ದ ಕಾರಣ ಅವರಿಗೆ ಮಗನ ಮೇಲಿನ ಯೋಚನೆ ಕಡಿಮೆಯಾದಂತೆನಿಸಿತ್ತೋ ಏನೋ ನನ್ನ ಪ್ರೌವೃತ್ತಿಗೆ ಯಾವುದೆ ಅಡ್ಡಿ ಪಡಿಸಲಿಲ್ಲ. ಆನಂತರದಲ್ಲಿ ಮತ್ತೆ ಟೈಂ ಪಾಸ್ ಗೆಂದು ಹಿಡಿದ ಲೇಖನಿಯನ್ನು ಗಟ್ಟಿಗೊಳಿಸಿದ ಕೈಗಳು ಅಪಾರವೆಂದೇ ಹೇಳಬೇಕು. ನಾನು ನನ್ನ ಮನಶ್ಶಾಂತಿಗಾಗಿ ಬರೆಯಲು ಪ್ರಾರಂಭಿಸಿದವನು. ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಂಡಿರಲೇ ಇಲ್ಲ.

             ಹೀಗಿದ್ದವನಿಗೆ ಸಿಕ್ಕ ಒಂದಷ್ಟು ಗೆಳೆಯರ ಬರಹಗಳು ಕೇವಲ ಬರಹಗಳಾಗಿರದೆ ನನಗೆ ದೊಡ್ಡ ಪಠ್ಯಗಳಂತೆ ಕಾಣಿಸುತ್ತಿದ್ದವು. ನಾನು ಅನೇಕ ಹಿರಿಯ ಸಾಹಿತಿಗಳ ಪುಸ್ತಕಗಳನ್ನು, ಕಾದಂಬರಿಗಳನ್ನು, ನಾಟಕಗಳನ್ನು ಮತ್ತು ಕವನಗಳನ್ನು ಆಗಾಗ ಓದುತ್ತಿದ್ದರೂ ಅವುಗಳು ನನಗೆ ಓದುವ ಬಗ್ಗೆ ಆಸಕ್ತಿ ಹೆಚ್ಚಿಸಿದವೆ ಹೊರತು ಬರೆಯಬೇಕೆಂಬ ಉತ್ಕಟವಾದ ಹಂಬಲವನ್ನು ಬಿತ್ತಲಿಲ್ಲ ಎನಿಸುತ್ತದೆ. ಓದುವ ಆ ಪ್ರೌವೃತ್ತಿ ಮತ್ತು ಗೆಳೆಯರು ಬರೆದ ಪಠ್ಯಗಳು(ಬರಹಗಳು) ನನ್ನನ್ನು ಬರೆಯುವಂತೆ ಪ್ರೇರೇಪಿಸಿದವು. ಬರೆಯಲು ಶುರುವಿಟ್ಟುಕೊಂಡೆ. ಗೆಳತಿ ಕೈ ಕೊಟ್ಟಳು ನೆನಪುಗಳು ಸಾಥ್ ಕೊಟ್ಟವು, ಇನ್ನಷ್ಟು ಬರೆದೆ. ಬರೆದದ್ದನ್ನೆಲ್ಲಾ ಒಟ್ಟುಗೂಡಿಸುವ ಹಂಬಲ ಹೆಚ್ಚಾಯ್ತು. ನನ್ನದೇ ಆದ ಬ್ಲಾಗ್ ಮಾಡಿದೆ ’ಡ್ಯೂ ಡ್ರಾಪ್’ ಎಂಬ ನಾಮಕರಣ ಮಾಡಿದೆ. ಅದೇ ಈ ’ಮಂಜಿನ ಹನಿ’.

               ನನ್ನ ಸಾಹಿತ್ಯದ ಈ ಬೆಳವಣಿಗೆಯಲ್ಲಿ ಸಹಕರಿಸಿ, ಪ್ರೋತ್ಸಾಹಿಸಿದ ಎಲ್ಲರಿಗೂ ವಂದನೆಗಳನ್ನು ಸಲ್ಲಿಸುವ ಮನಸ್ಸಾಯ್ತು. ಅದಕ್ಕಾಗಿ ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ. ನನ್ನಲ್ಲಿ ಓದುವ ಆಸಕ್ತಿ ಬೆಳಸಿದ ಹಿರಿಯ ಸಾಹಿತಿಗಳಿಗೆ ನನ್ನ ವಂದನೆಗಳು. ನನ್ನ ಪ್ರತಿಯೊಂದು ಹಾಗು-ಹೋಗುಗಳಲ್ಲಿ ಜೊತೆಗಿರುವ ಅಪ್ಪ-ಅಮ್ಮನಿಗೂ ವಂದನೆಗಳು. ನನ್ನ ಪ್ರತಿಯೊಂದು ಅಂಕುಡೊಂಕುಗಳನ್ನು ಮೊದಲೇ ಎತ್ತಿ ತೋರಿಸುವ ತಮ್ಮನಿಗೂ ವಂದನೆಗಳು. ನನ್ನ ಬರವಣಿಗೆಯ ಆಯಾಮಗಳಿಗೆ ಪಠ್ಯ ಒದಗಿಸಿದ ಗೆಳೆಯರಿಗೂ ವಂದನೆಗಳು. ನೆನಪುಗಳನ್ನು ಕೊಟ್ಟು ಸರಕೊದಗಿಸಿದ ನಲ್ಲೆಗೂ ವಂದನೆಗಳು. ನನ್ನ ಬ್ಲಾಗ್ ಗೆ ಹೆಸರು ಸೂಚಿಸಿದ ಸ್ನೇಹಿತೆಗೂ ವಂದನೆಗಳು. ನಾನು ಬರೆದವುಗಳು ಪ್ರಕಟಣೆಗೆ ಯೋಗ್ಯವೊ, ಇಲ್ಲವೊ ಎಂಬ ಜಿಜ್ಞಾಸೆ ನನ್ನಲ್ಲಿ ಕಾಡುವಾಗ ನನ್ನ ಬ್ಲಾಗ್ ಬಗ್ಗೆ ತಮ್ಮ ಪತ್ರಿಕೆಯಲ್ಲಿ ಪರಿಚಯಿಸಿ ಅದು ಪ್ರಕಟವಾಗಲು ಕಾರಣಕರ್ತರಾದ ’ಬ್ಲಾಗ್ ಲೋಕ’ ಖಾಲಂ ನ ಬರಹಗಾರರಿಗೂ ನನ್ನ ಅನಂತ ವಂದನೆಗಳು. ಅದನ್ನು ಪ್ರಕಟಿಸಿದ ’ಸಂಯುಕ್ತ ಕರ್ನಾಟಕ’ ಪತ್ರಿಕೆಯವರಿಗೂ ನನ್ನ ವಂದನೆಗಳು. ಬರೆಯುವ ಕೈಗಳು ಒಂದಷ್ಟು ಇಂಧನವನ್ನಲ್ಲದೆ ಬೇರೇನನ್ನೂ ಕೇಳುವುದಿಲ್ಲ. ನನ್ನ ಕೈಗಳಿಗೆ ಇಚ್ಛಾಶಕ್ತಿಯನ್ನು ತುಂಬಿದ್ದೀರಿ, ಅದನ್ನು ಉಳಿಸಿಕೊಂಡು ಹೋಗುತ್ತೇನೆ ಎಂಬ ಭರವಸೆ ನೀಡುತ್ತೇನೆ.

ಇಂತಿ ವಿನಮೃತೆಯಿಂದ,
- ಪ್ರಸಾದ್.ಡಿ.ವಿ.

No comments:

Post a Comment