ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Saturday, 29 August 2015

ಅದೊಂದು ಕೊರತೆ!


ಅದೊಂದು ಕೊರತೆಯಿದೆ,
ಮನೆಗೆ ತಡವಾಗಿ ಬಂದಾಗ
'ಎಲ್ಲಿ ಹೋಗಿದ್ಯೋ ಇಷ್ಟ್ ಹೊತ್ತು?'
ಎಂದು ರೋಫು ಹಾಕಿ
ಭದ್ರಕಾಳಿಯಾಗುವ ತಂಗಿಯದು,
ಅವಳನ್ನು ಛೇಡಿಸಿ ಅಳಿಸಿ
ಕಿತ್ತಾಡಿ, ಮಾತು ಬಿಟ್ಟು...
ಓಡಿ ಹೋಗಿ ಬಿಗಿದಪ್ಪಿ,
'ಸಾರಿ ಕಣಪ್ಪಿ' ಎಂದು
ಲಲ್ಲೆಗರೆಯುವ ಕನಸು ಕಂಡಾಗೆಲ್ಲಾ
ಕಣ್ಣೀರು ಕೂಡುತ್ತವೆ!

ಅದೊಂದು ಕೊರತೆಯಿದೆ,
ನಾನಿರುವುದೇ ಹೀಗೆ,
ಏನಿವಾಗ? ಹಾಗೆ ಹೀಗೆ
ಎಂದು ಮೊಂಡು ಮಾಡುವಾಗೆಲ್ಲಾ
ನನ್ನ ಮೊಂಡುಗಳನ್ನೆಲ್ಲಾ ಮುದ್ದಿಸಿ
ತಿದ್ದಿ, ತೀಡಿ
ಬದುಕಿನ ದಾರಿ ತೋರುವ,
ಬಿದ್ದಾಗ
ಅಮ್ಮನಿಗಿಂತ ಮೊದಲೇ
ಓಡಿ ಬಂದು ಸಂತೈಸುವ
ಅಕ್ಕನಿಲ್ಲ ಎಂಬುದನ್ನು ನೆನೆವಾಗೆಲ್ಲಾ
ಅದೊಂದು ಕೊರತೆಯಿರುತ್ತದೆ!

ಜಗಳವಾಡಿ ಬೈದು,
ಸೂಕ್ಷ್ಮತೆಗಳನ್ನು ಮೀರಿ
ಆರೊಗೆಂಟಾಗಿ ನಡೆದುಕೊಳ್ಳುವಾಗೆಲ್ಲಾ
ಕಣ್ಣೀರಾಗುವ 'ಅವಳು'
'ನಿನಗೊಬ್ಬಳು ತಂಗಿನೋ, ಅಕ್ಕನೋ ಇರ್ಬೇಕಿತ್ತು'
ಅಂದಾಗೆಲ್ಲಾ ಅನಿಸುತ್ತದೆ,
ಹೌದು ಅದೊಂದು ಕೊರತೆಯಿದೆ,
ಈ ಸಮಪಾಕದ ಬದುಕೊಳಗೆ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Monday, 3 August 2015

ಬಯಲ ಬುದ್ಧ!


ಅಮಲೇರಿದ ಬುದ್ಧನಂತೆ
ಕಣ್ಣುಮುಚ್ಚಿ ಕುಳಿತುಬಿಡುತ್ತೇನೆ,
ಕತ್ತಲೆ ರಾತ್ರಿಯಲ್ಲಿ
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು
ಪಹರೆಗೆ ನಿಲ್ಲುವ
ಸಾವಿರ ಆಸೆಗಳಿಗೆ
ನಾನು ಬುದ್ಧ ಎಂಬ ಸುಳ್ಳು ಹೇಳುತ್ತೇನೆ,
ನಿಂತ ನೆಲ ಕುಸಿಯುತ್ತದೆ,
ಆಯ ತಪ್ಪುತ್ತದೆ,
ಪಾಯ ತೋಡುತ್ತಿರುವ ಸಮಾಧಿಗೆ
ಬೆಳಕು ಹಿಡಿದು ನಿಂತ
ನೋವುಗಳನ್ನು ಕೈಯಲ್ಲಿ ಹಿಡಿದು
ಕೊರಳಿಗೆ ಹಾಕಿಕೊಂಡು
ನಗುತ್ತ ನಿಂತಿದ್ದಾನೆ ಬುದ್ಧ,
ಕೊರಳ ಹಾರದ ಸಮೇತ
ಆತ ಅಂಗೂಲಿ ಮಾಲನನ್ನು ಹೋಲುತ್ತಿದ್ದಾನೆ,
ನಾನು ಕೇಳಿದೆ;
ನೀನೇ ಏನು ಬುದ್ಧ ಭಗವಾನ?
ಅಲ್ಲಪ್ಪ ನಾನು ಬರಿಯ ಬುದ್ಧ,
ಅವ ಹೇಳುತ್ತಾನೆ,
ಇದೇನಿದೆ ಇಷ್ಟೋಂದು ನೋವಿನ ಹಾರಗಳು,
ಅಂಗೂಲಿ ಮಾಲನಿಂದ
ಎರವಲು ಪಡೆದೆಯೆ? ನನ್ನ ಮಾತು,
ಅವನೊಬ್ಬನದಷ್ಟೇ ಅಲ್ಲ
ನೋಡು ನಿನ್ನದೂ ಇದೆ,
ಎಂದು ಒಂದನ್ನೆತ್ತಿ ತೋರಿದ,
ಹೌದೌದು,
ಇದನ್ನೆಲ್ಲಾ ಇಟ್ಟುಕೊಂಡು ಏನು ಮಾಡ್ತೀಯೋ ಪುಣ್ಯಾತ್ಮ?
ನಾನು ಬೆರಗಾಗುತ್ತಿದ್ದೆ,
ಒಂದೊಂದು ನೋವಿನ ಹಾರಕ್ಕೂ
ಒಂದೊಂದು ದೀಪದಂತೆ
ಮಾರುತ್ತಿದ್ದೇನೆ,
ನೋವಿನ ಹಾರಗಳಿಂದ
ದೀಪಗಳ ಬತ್ತಿ ಹೊಸೆಯುತ್ತೇನೆ ಎಂದ,
ನಾನು ಮೌನಕ್ಕೆ ಸಿಕ್ಕುತ್ತಲೇ,
ಹೊರಡಲನುಮತಿ ಕೊಡೆನ್ನುತ್ತಾನೆ,
ಕತ್ತಲಾಯಿತು,
ದೀಪ ಹಚ್ಚಿಟ್ಟೆ, ಬುದ್ಧ ಬೆಳಕಾಗಿದ್ದ,
ಊರು ಬೆಳಗುವುದರೊಳಗೆ
ಅವನಿಗೆಷ್ಟು ಕಾಲ ಬೇಕೋ?
ನಾನು ಬಯಲಾದರಷ್ಟೇ
ಅವನಾಗುತ್ತೇನೆಂಬ ಅರಿವಾವರಿಸುತ್ತಿದೆ!


--> ಮಂಜಿನ ಹನಿ

ಚಿತ್ರಕೃಪೆ: ಕೃಷ್ಣ ಗಿಳಿಯಾರ್

Wednesday, 8 July 2015

ಎಲ್ಲಾ ಎಂದಿನಂತೆಯೇ ಇದೆ...


ಎಲ್ಲಾ ಎಂದಿನಂತೆಯೇ ಇದೆ,
ಬಿಟ್ಟುಹೋದ
ಕಾಲದ ನಂತರವೂ
ಈ ಮುಖ ಪುಸ್ತಕದ ಹಾಳೆಗಳು
ಮೊದಲಿನಂತೆಯೇ ಇವೆ,
ಕುದಿವ ಕಾವು, ಒಡಲ ಬೇಗೆ,
ಮೈಥುನದ ಹಸಿವು,
ಸಂಜೆಗತ್ತಲ ಜೊಂಪೇರಿಸುವ
ಸುರಪಾನದಮಲು,
ನಶೆ, ನಾಶವಾಗದ ನಶೆಯ ಕಡಲು,
ಬದುಕು ಕಟ್ಟಲಾಗದ ಕರ್ಮಕ್ಕೆ
ತತ್ವಪದವಾಡುವ ಒಳಗುಟ್ಟು,
ಏನೂ ಬದಲಾಗದ ಮುಖದ ಹೊತ್ತಿಗೆ,
ತುತ್ತಿಗೆ ಮೈನವಿರೇಳುವ ಕಂಪನ,
ಏನು ತಾನೆ ಬದಲಾದೀತು?
ನಾನು? ನೀನು ಬಿಟ್ಟು ಹೋದ ಮಾತ್ರಕ್ಕೆ?

ನೋವುಗಳಲ್ಲಿ ನೆನಪಾಗುತ್ತಿದ್ದೆ,
ಬಿಕ್ಕುವಷ್ಟು,
ಕಣ್ಣು ತುಂಬಿ ಉಕ್ಕುವಷ್ಟು,
ಈಗಿಲ್ಲ...
ಹೈಕು ಸಿಗದ ನಿರಾಸೆಗೆ
ಬೀರು ಬಿಟ್ಟು ನೋವು ಕುಡಿದು,
ಮೊಸರನ್ನ ತಿಂದು
ತಣ್ಣಗೆ ಮಲಗಿಬಿಟ್ಟಿದ್ದೆ;
ಅಂತೆಯೇ ಬದುಕು ನಿಲ್ಲದೆ ಹೊರಟುಬಿಡುತ್ತದೆ,
ವರ್ಚುಯಲ್ ಬದುಕಿನ
ಕೊಂಡಿ ಕಳಚುತ್ತಾ ವಾಸ್ತವಕ್ಕೆ,
ಈಗೀಗ ನೀನ್ಯಾರೆಂದೂ ನೆನಪಾಗುವುದಿಲ್ಲ,
ಆಗೊಮ್ಮೆ, ಈಗೊಮ್ಮೆ ಅವಳ ಛೇಡಿಸುವ
ಅಕ್ಕ ಅನ್ಬೇಕಾ ಅವ್ಳ್ನಾ?
ಅನ್ನುವ ಮಾತುಗಳಿಗೆ,
ನಿಂಗವ್ಳ್ಯಾವ ಅಕ್ಕ? ಕೊಡ್ತೀನ್ ನೋಡು
ಎಂಬ ನನ್ನ ಹುಸಿಮುನಿಸ ಹೊರತು...
ಸದ್ಯಕ್ಕೆ ಮುನ್ನುಡಿ, ಬೆನ್ನುಡಿಗಳಿಲ್ಲದ
ಕವನ ಸಂಕಲನವೊಂದು
ಕಪ್ಪು ಕಾಗದದ ಹೂವಾಗುವುದು ತಪ್ಪಿ
ನಿಟ್ಟುಸಿರುಬಿಟ್ಟಿದೆ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Thursday, 18 June 2015

ಶೀಲ ಅಶ್ಲೀಲಗಳಾಚೆ


ಶೀಲ ಅಶ್ಲೀಲಗಳನ್ನು ಮೀರಿ
ನಾವು ಬರೆಯುವುದೇ ಹೀಗೆ,
ಖುಷಿಯ ಉಂಡು ಬಡಿಸುವ,
ತಣಿಸಿ ತಣಿಯುವ,
ಉತ್ಕೃಷ್ಟತೆಯ ವ್ಯಸನವಿರದೆ
ಶರಣಾಗುವ
ಪ್ರೇಮ, ಕಾಮಗಳ ಬಗ್ಗೆ
ಬರೆಯುತ್ತೇವೆ,
ಕೂಡದೆ ಪಲ್ಲವಿಸಿ
ಗರ್ಭವಲ್ಲದ ಬೇರೊಂದು
ಪವಿತ್ರ ಸ್ಥಳದಿಂದ ಉದುರಿ ಬಿದ್ದವರೆ
ಕ್ಷಮಿಸಿ,
ನಾವು ಬರೆಯುವುದೇ ಹೀಗೆ!

ಬೆತ್ತಲನ್ನು ಬೆತ್ತಲಾಗಿಯೂ,
ಕತ್ತಲನ್ನು ಕತ್ತಲಾಗಿಯೂ,
ಬೆವರನ್ನು ಬೆವರಾಗಿಯೂ,
ಹರವನ್ನು ಹರವಿದಂತೆಯೂ,
ಬೆದರದೆ, ಚದುರದೆ
ಕಟ್ಟಿಕೊಡುತ್ತೇವೆ,
ಆಧ್ಯಾತ್ಮ, ಶೂನ್ಯ, ಸೊನ್ನೆಗಳಿವೆ
ಕಾಮದಲ್ಲಿ,
ಕೂಡಿಕೆ, ಕಳೆಯುತ್ತವೆ
ಪ್ರೇಮದಲ್ಲಿ
ಎಂಬ ಸುಳ್ಳನಾಡುವುದಿಲ್ಲ,
ಅನುಭವಕ್ಕೆ ಬಂದದ್ದು ಪದ್ಯ,
ಕ್ಷಮಿಸಿ,
ನಾವು ಬರೆಯುವುದೇ ಹೀಗೆ!

ಸಿಕ್ಕಷ್ಟು ಬಾಚಿಕೊಂಡು,
ಆಸೆಯ ಬೀಜಗಳಿಗೆ
ಫಸಲು ಬೆಳೆಯುವ ಕನಸು,
ಭವಿತವ್ಯದ ಬದುಕಿಗೆ
ಕಣ್ಣು ಬಾಯಿ ಬಿಟ್ಟು
ಕಾದು ಕುಳಿತಿರುತ್ತೇವೆ,
ಪ್ರಾಪಂಚಿಕ ಸುಖಗಳಿಗೆ
ಜೋತು ಬಿದ್ದೆವು?
ನೀವು ಆರೋಪಿಸುವುದಾದರೆ,
ಹೌದು,
ನಾವು ವಾಸ್ತವಗಳಿಗೆ
ಬೇರು ಬಿಟ್ಟಿದ್ದೇವೆ,
ಸಸಿಗಳು ಡೌನ್ ಟು ಅರ್ಥ್,
ನಾವು ಬರೆಯುವುದೇ ಹೀಗೆ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Thursday, 4 June 2015

ಪದಗಳಿಗೆ ಪದ್ಯ ಕಟ್ಟುವ ಕಿಮ್ಮತ್ತಿಲ್ಲ


ಪದಗಳಿಗೆ ಪದ್ಯ ಕಟ್ಟುವ
ಕಿಮ್ಮತ್ತಿಲ್ಲ,

ಮರಳಿ ಬರುವ ಪದಗಳಿಗೆ
ಅರವತ್ತರ ಅರಳು ಮರಳು,
ನಿನಾದಕ್ಕೆ ಪದ ಹೆಕ್ಕಿ,
ಹುಕ್ಕಿನಲ್ಲಿ ಸಿಕ್ಕಿಸಿ
ಹೊಸೆದ ಸಾಲೊಳಗೆ ಪದ್ಯವೆಲ್ಲಿ?

ಅಭಿವ್ಯಕ್ತಿಯ ಅಡವಿಟ್ಟು,
ಚೌಕಟ್ಟಿನ ಕೊರಳುಪಟ್ಟಿ
ಬಿಗಿದುಕೊಂಡ ಭಾವಗಳಲಿ,
ನರಳಿ ಸತ್ತ ನೋವಿದೆ,
ಕಟ್ಟಕುಳಿತ ಪದ್ಯವೆಲ್ಲಿ?

ಸಂಜೆಯ ಕೆಂಧೂಳಿನ
ಹಿಂದೆ ಓಡಿ ಬಸವಳಿದು,
ದಾಹಕ್ಕೆ ಬೀರಿಳಿಸಿ
ಎಚ್ಚರ ತಪ್ಪುವಂತೆ ಮತ್ತೇರಿದೆ,
ನಶೆಯೊಳಗೆ ಪದ್ಯವೆಲ್ಲಿ?

ಬಿಡಿಸಿಕೊಂಡು ಹಗುರಾದೆ,
ಅಂಥದೊಂದು ಹುಂಬ ಆಸೆ,
ಸಮಾಜದ ಕಟಕಟೆಯಲಿ
ತೊಡರಿ ಬಿದ್ದ ಅವಮಾನ
ಸ್ವಾತಂತ್ರ್ಯದ ಪದ್ಯವೆಲ್ಲಿ?

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Friday, 22 May 2015

ನಾನು ಪದ್ಯ ಮಾರುವುದನ್ನು ಬಿಟ್ಟಿದ್ದೇನೆ,


ಕಟ್ಟು ಕರದಂಟು, ಕೀರೆ
ಕಿಲ್ ಕೀರೆ ಸೊಪ್ಪುಗಳ ನಡುವೆ
ಅಮಾಯಕವಾಗಿ ಬಿದ್ದ
ಬೆವರ ಹನಿ,
ಚಿಲ್ಲರೆ ಕಾಸಿನ ಅಸಹಾಯಕತೆ
ಮತ್ತು
ನೂರು ರೂ ಬಂಧದ ಆಸೆಗೆ
ಹಲ್ಲು ಕಿರಿದ ಒಳಗಿಸೆಗಳು,
ಆಗಾಗ ಒಂದೋ ಎರಡೋ ಕಟ್ಟುಗಳ
ಹೆಚ್ಚುವರಿ
ಕೈ ಬದಲಾವಣೆಗೆ
ಚಲಾವಣೆಯಾಗುವ ಅಯ್ಯನ್, ಅಮ್ಮನ್
ಉವಾಚಗಳು;
ಬೈಗುಳಗಳು ಪದ್ಯಗಳಾಗಿವೆ!

ನೆನ್ನೆ ಬಿದ್ದ ಮಳೆಗೆ
ಹದಕೆ ಬಂದ ಇಳೆಗೆ
ಮಿಲನದ ಸಂಭ್ರಮ,
ಮಳೆ ಗಂಡೋ ಹೆಣ್ಣೋ?
ಇಳೆ ಸಲಿಂಗಿಯೋ?
ಎಂಬ ಜಿಜ್ಞಾಸೆಗಳು,
ಮೊನ್ನೆ ಅಮೇರಿಕಾದ ವಾಷಿಂಗ್ಟನ್ನಲ್ಲಾದ
ಸ್ನೋ ಫಾಲಿಗದೆಷ್ಟು ಜನರ
ಜೀವನ ಅಸ್ತವ್ಯಸ್ತವಾಗಿದೆಯೋ
ಎಂಬ ಆತಂಕಗಳು,
ನಿಗೂಢ ಚರ್ಯೆ ಹೊತ್ತ
ಪಶ್ಚಿಮ ಘಟ್ಟಗಳು,
ಮಂಜು ಹೊತ್ತು ಮಳೆ ಕರೆದಾಗ
ಮಿದುವಾಗುವ ಕವಿ ಹೃದಯ
ಹೆಣ್ಣೋ ಗಂಡೋ?
ಕುತೂಹಲಗಳಿಗೆ ಕವಿತೆ
ಬರೆಯುತ್ತದೆ,
ನಾನವುಗಳನ್ನೆಲ್ಲಾ ಬುಟ್ಟಿಗಾಕಿಕೊಂಡು
ಮಾರಲು ಹೊರಡುತ್ತಿದ್ದೆ!

ಒಂದು ವರ್ಷದಿಂದೀಚೆಗೆ
ಮಹಾನ್ ಆದ ಭವ್ಯ ಭಾರತದ
ಕನಸುಗಳನ್ನು
ಅಪ್ಪಟ ವ್ಯಾಪಾರಿಯೊಬ್ಬ ಮಾರುತ್ತಾನೆ,
ನನಸು ಮಾಡಿಸಿಕೊಳ್ಳಲಾಗದ
ಅಸಹಾಯಕ ಜನ
ಕೊಳ್ಳುತ್ತಾರೆ, ಕೊಳ್ಳುತ್ತಾರೆ...
ಬೀದಿ ಬದಿಯಲ್ಲೇ ಬಿದ್ದ ಬಡತನ,
ನಿರ್ಗತಿಕರ ಅನಾಥತೆ,
ಕರುಳು ಸುತ್ತುವ ಹಸಿವು,
ದುಡಿಯಗೊಡದ ನಿರುದ್ಯೋಗಗಳು
ವಿದೇಶ ಸಂಚಾರಿಯ ಫ್ಲೈಟ್ ಮೋಡಿನಲ್ಲಿ
ಸದ್ದಡಗಿಸುತ್ತವೆ,
ಒಂದು ವರ್ಷವಾದರೂ ಏನೂ ಬದಲಾಗಿಲ್ಲ
ಎಂಬ ಹತಾಶೆಯ ಪದ್ಯವೊಂದಿತ್ತು
ಭಾರೀ ಬೆಲೆ ಬಾಳುವಂಥದ್ದು,
ಈಗೆಲ್ಲಿ, ಮಾರುವುದಿಲ್ಲ!

ಪದ್ಯವನ್ನು ಸಗಟು ಸಗಟು
ಮಾರಿ ಬಂದ ಹಣದಲ್ಲಿ
ಬನ್ನು ಕೂಡ ಕೊಳ್ಳಲಾಗದ
ನಿರಾಸೆಗೆ,
ಮುಟ್ಟಿ ಮುಟ್ಟಿ ಒದ್ದೆಯಾದ
ಖಾಲಿ ಜೇಬು ನೋಡಿಕೊಳ್ಳುವಾಗ
ಅನಿಸುತ್ತದೆ; ಇಲ್ಲಿ
ಕನಸುಗಳನು ಮಾರುವುದು ಮೋಜು,
ವಾಸ್ತವದ
ಪದ್ಯಗಳನ್ನು ಮಾರುವುದು ಜೂಜು,
ಅದಕ್ಕೆ ನಾನು ಪದ್ಯ ಮಾರುವುದನ್ನು ಬಿಟ್ಟಿದ್ದೇನೆ!

- ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Thursday, 7 May 2015

ನಾನುಣಬಡಿಸುವ ಪದ್ಯ!


ನಾನುಣಬಡಿಸುವ ಪದ್ಯಕ್ಕೆ
ಹಸಿ ಮಾಂಸದ ಬಿಸಿ ನೆತ್ತರ
ಭಾವಗಳ ಸ್ಪರ್ಶವಿದೆ,
ಓದಬೇಡಿರೆಂದು ಕೈ ಮುಗಿದು
ಕೋರುತ್ತೇನೆ;
ಮುಂದಾಗುವ ಅನಾಹುತಗಳಿಗೆ
ನಾನು ಜವಾಬ್ದಾರನಲ್ಲ,
ಹಸಿದ ಹಲ್ಲುಗಳಿಗೆ
ಮೃದು ಹೃದಯ ಹೊರತಲ್ಲ!

ಹದ್ದಿನ ಸರಹದ್ದು
ಕಣ್ಣುಗಳು ಕಾದು ಕುಳಿತಿವೆ,
ನೋವಿಗೆ, ನೆರಳಿಗೆ,
ವಿರಹಕೆ, ಪ್ರೇಮಕೆ,
ಬಳಲಿದ ಬಂಧಕೆ,
ಇಡಿಯಾಗಿ ಸಿಕ್ಕ ದೇಹಕೆ,
ನರ ನೆತ್ತರು, ಮೂಳೆ ಮಜ್ಜೆಗಳು,
ಯಾವುದಾದರೂ ಸರಿ,
ಹುಲಿ ಹರಿದರೆ ಹಳಸು ಮಾಂಸ,
ಹಸೀದೇ ಸಿಕ್ಕರೆ
ರುಚಿಕಟ್ಟು ಎಳೆಸು ಮಾಂಸ!

ಅವು ಕಚ್ಚಿ ಕತ್ತರಿಸಿದ
ಪದ್ಯ ನಿಮ್ಮೆಡೆಗೆ,
ಕ್ಷಮಿಸಿ ನಿಮಗರಿವಿರದೆ
ನೀವು ನರ ಭಕ್ಷಕರಾಗಿದ್ದೀರಿ,
ನನ್ನ ಪಾಪಗಳ
ವಾರಸುದಾರರಾಗಿದ್ದೀರಿ,
ನೈತಿಕತೆ - ಅನೈತಿಕತೆ
ಮೀರಿದ ಶುದ್ಧ ಭಾವಗಳ
ಮೆರವಣಿಗೆಯಲಿ
ಬಂದು ಹೋದಿರಿ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ