ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Tuesday 24 February 2015

ದೇವರ ಫರ್ಮಾನು!!


ಮಾನ್ಯ ಜಗದೋದ್ಧಾರಕ ಕರುಣಾಮಯಿ
ದೇವರೆ,
ಈಗಿಂದೀಗಲೇ ಫರ್ಮಾನು ಹೊರಡಿಸು;
ಹಣ್ಣು ಕಾಯಿ ಮಾಡಿಸಿ,
ಅಡ್ಡ ಪಲ್ಲಕ್ಕಿ ಉತ್ಸವಗಳು,
ಎಡೆ ಮಡೆ ಸ್ನಾನಗಳು,
ಭಾಗವತರ ಭಗವದ್ಗೀತೆಗಳು
ಭಕ್ತಿಯಾಗಿ ರಕ್ತದ ಹೊಳೆ ಹರಿಸಿ,
ಸವೆದು, ಸೋರಿ, ರಾಗ - ದ್ವೇಷದ
ಪದವಾಡಿಸಿ, ಮುಗಿದಿವೆ,
ಜೀವ ನಿಲ್ಲುವ ಮೊದಲು
ಪ್ರಪಂಚ ಉಸಿರಾಡುವಂತೆ
ಫರ್ಮಾನು ಹೊರಡಿಸು!

ಕತ್ತಲ ರಾಜ್ಯದಲ್ಲಿ ಹೊಳೆದು ಬಂದವನ
ಪವಾಡವಾಗಿಸಿ,
ನೀರ ಮೇಲೆ ನಡೆಸಿ,
ಉಣ್ಣದವರಿಗೆ ರೊಟ್ಟಿ ಕೊಡಿಸಿ,
ಅವ ದೇವ ಮಾನವನಲ್ಲ,
ಬರೀ ಮನುಷ್ಯತ್ವದ
ಕಾರುಣ್ಯ ಮೂರ್ತಿಯೆಂದರಿತ ಕೂಡಲೆ,
ಶಿಲುಬೆಗೇರಿಸಿ
ಮೊಳೆ ಜಡಿಸಿ ದೇವರಾಗಿಸಿದ್ದಾರೆ;
ಕೋಲ್ಕತ್ತೆಯ ಕೊಳಕು ಬೀದಿಗಳಲ್ಲಿ
ಕುಷ್ಟ ರೋಗಿಗಳನ್ನು ಬಾಚಿ ತಬ್ಬಿದ
ಮದರ್ ತೆರೇಸಾಳನ್ನು
ಕ್ರಿಶ್ವಿಯನ್ನಾಗಿಸಿದವರಿಗೆ
ಕಾರುಣ್ಯವನ್ನು ದಯಪಾಲಿಸಿ
ಫರ್ಮಾನು ಹೊರಡಿಸು!

ಕಡು ಕತ್ತಲೆಯ ಗುಹೆಯೊಳಗೆ
ಮೊಹಮದ್ಪೈಗಂಬರರಿಗೆ
ಒಲಿದು ಬಂದು ಯಾ ಮೌಲಾ,
ಬೆಳದಿಂಗಳ ಅಲ್ಲಾ,
ಜಿಹಾದಿನ ಪಹರೆಯೊಳಗೆ,
ಮುಳುಗೇಳುತ್ತಿರುವ ಜಗಕೆ,
ರಕ್ತದ ಸೋಂಕು ತಗುಲಿ,
ಮನಸೆಲ್ಲಾ ಮಡುಗಟ್ಟಿ,
ಜಾಗತಿಕ ಟೆರರಿಸಂ ಮೈಯಾಗುವ ಮುನ್ನ,
ಕೆಟ್ಟ ಮನಸುಗಳ ಕಣ್ಣಾಗುವ ಮುನ್ನ
ಸಹನೆಯೊಂದು ಕುಡಿಯೊಡೆದು,
ದೇವರ ಅಮೂರ್ತ ರೂಪವೊಂದು
ಎಲ್ಲರೆದೆಗಳಲಿ
ಮನುಷ್ಯತ್ವವಾಗಿ ಚಿಗುರಲಿ;
ಶಪಿಸಿ ಈಗಿಂದೀಗಲೆ
ಫರ್ಮಾನು ಹೊರಡಿಸು!

--> ಮಂಜಿನ ಹನಿ

ಚಿತ್ರ ಕೃಪೆ: ಗೂಗಲ್ ಅಂತರ್ಜಾಲ