ಉಪಶಮನದ ಹಾದಿ
ಪ್ರೇಮವೊಂದೇ ಎಂದ
ಬುದ್ಧ, ಬಸವ, ಗಾಂಧಿಯರು
ಪೂರ್ಣ ದಕ್ಕಿರಲೇ ಇಲ್ಲ,
ಅವಳೊಲವ ಭೋರ್ಗರೆತ
ನನ್ನೊಡಲ ತಣಿಸಿ,
ಎದೆಗಮೃತವ ಉಣಿಸುವವರೆಗೂ!
ಪ್ರೀತಿಯ ಗುಚ್ಛಕ್ಕೆ
ಮದುವೆಯ ರಂಗು ಬಳಿದು
ಅಂದ ನೋಡಿದ್ದೇ ನೆನಪು,
ಅವಳ ಕೈಯ ಮದರಂಗಿಯಿನ್ನೂ ಹಸಿ ಹಸಿ,
ತಾಳಿಯ ತುದಿ ಸೋಕಿದ್ದ
ನನ್ನ ಬೆರಳ ತುದಿಯ ಹರಿಶಿಣದ
ತೇವವಿನ್ನೂ ಎದೆಗೆ ಹಚ್ಚೆ ಬಿದ್ದಿದೆ,
ಅವಳ ಕೈಬಳೆಗಳ ಗಲಗಲ,
ಕಿರುಗೆಜ್ಜೆಯ ಇನಿದನಿ ಮಾರ್ದನಿ,
ಎಷ್ಟೆಲ್ಲವೂ ಸ್ಮೃತಿ ಪಟಲದೊಳಗೆ...
ಬಿಟ್ಟಿರಲಾಗದ ಸೆಳೆತದಿ
ನಾಳಿನ ಅಮಾವಾಸ್ಯೆಯ ಅಗಲಿಕೆ
ಭರಿಸಲಾಗುತ್ತಿಲ್ಲ,
ಏನು ಮಾಡಲಿ ಎಂದು ಅವಳನ್ನು ಕೇಳಿದೆ?
ಅವಳ ಕಣ್ಣಾಲಿಗಳು ಜಿನುಗಿ
ಎದೆ ತೋಯ್ಸಿದ ವಿರಹಕ್ಕೆ
ಅದೆಂತಹ ಉಪಶಮನವ ತರಲಿ?
ಅಗಲಿಕೆಯ ಕಾತರಕ್ಕದೆಂತಹ
ಮುಲಾಮು ಇದೆ ಹೇಳಿ?
--> ಮಂಜಿನ ಹನಿ
ಚಿತ್ರಕೃಪೆ: ನಮ್ ಎಂಗೇಜ್ಮೆಂಟ್ ಫೋಟೋಗ್ರಾಫರ್