ಆತ ನನಗಾರೂ ಅಲ್ಲ,
ರಕ್ತ ಸಂಬಂಧವಂತೂ
ಮೊದಲೇ ಇಲ್ಲ,
ಈಗ ಒಂದೂವರೆ ವರ್ಷಗಳ ಹಿಂದೆ
ಪರಿಚಯವೂ ಇರಲಿಲ್ಲ...
ಸಾಹಿತ್ಯ, ಕನ್ನಡ
ಇವೆರಡೇ ಬಂಧಗಳು,
ಅಲ್ಲೆಲ್ಲೋ ಮಧ್ಯ ಆಫ್ರಿಕಾದಲ್ಲಿ
ಕೂತಿದ್ದವರನ್ನು
ಮೈಸೂರಿನವನಿಗೆ ಪರಿಚಯಿಸಿದವು!
ಸಾಕಷ್ಟು ಸಾಹಿತ್ಯ ವಿನಿಮಯ,
ಸಂದೇಶಗಳಲ್ಲಿ ಹರಿದ ಮಾತುಕತೆ,
ಒಂದಷ್ಟು ಫೋನಿನಲ್ಲಿ ಮಾತು,
ಅವರ ಸಾಹಿತ್ಯದಾಳಕ್ಕೆ
ಇಳಿದಷ್ಟೂ ಹೆಪ್ಪುಗಟ್ಟಿದ ಭಾವಗಳು,
ಆ ಹೆಪ್ಪುಗಟ್ಟಿದ ಭಾವಗಳು
ಬೆಸೆದ ಆತ್ಮೀಯತೆ,
ಅನುಬಂಧ, ಅವರಲ್ಲೊಬ್ಬ
ಹಿರಿಯಣ್ಣನನ್ನು ಕಂಡುಕೊಂಡ ಧನ್ಯತೆ!
ರಗುತ ಸಂಬಂಧಗಳಿಂದೇರ್ಪಡುವ
ಬಂಧಗಳಿಗಿಂತ ಗಟ್ಟಿ
ಬಂಧಗಳಿಲ್ಲ ಎಂದವರಾರು?
ಹೀಗೊಮ್ಮೆ ಅವರೊಂದಿಗೆ ಮಾತುಕತೆ:
ಹೇಗಿದ್ದೀರಿ ಅಣ್ಣಾ?
-ನಾನು ಚೆನ್ನಾಗಿದ್ದೇನೆ,
ನೀವು ಹೇಗಿದ್ದೀರಿ?
ನಾನೂ ಚೆನ್ನಾಗಿದ್ದೇನೆ!
-ಅಪ್ಪ, ಅಮ್ಮ, ಪ್ರಮೋದ್ ಹೇಗಿದ್ದಾರೆ?
ಅವರೆಲ್ಲರೂ ಚೆನ್ನಾಗಿದ್ದಾರೆ!
-ಕನ್ನಡ ಬ್ಲಾಗ್ ಹೇಗೆ ನಡೆಯುತ್ತಿದೆ?
ಎಲ್ಲರೂ ಹೇಗಿದ್ದಾರೆ?
ನಿಮ್ಮನ್ನೆಲ್ಲಾ ನೋಡಬೇಕೆಂದು ಆಸೆಯಾಗುತ್ತಿದೆ!
ನಿಮ್ಮನ್ನು ನೋಡಲು ನಮಗೂ ಆಸೆಯಾಗುತ್ತಿದೆ,
ಬಾಚಿ ತಬ್ಬಬೇಕೆನಿಸುತ್ತಿದೆ,
ಬನ್ನೀ ಬೇಗ ಬನ್ನೀ...
ಭಾರತಕ್ಕೆ ಬೇಗ ಬನ್ನೀ...
ಹೆಪ್ಪುಗಟ್ಟಿದ ಭಾವಗಳು,
ಒಂದೊಂದೇ ಹನಿಯನ್ನು ಬಸಿಯುತ್ತಿವೆ,
ಕಣ್ಣಿನಿಂದ ಜಾರಿ ಹರಿದ ಪ್ರತಿಯೊಂದು
ಕಣ್ಣ ಹನಿಯೂ
ಕೆನ್ನೆಯ ಮೇಲಿಳಿದು,
ಎದೆಯನ್ನು ತೋಯ್ಸುತ್ತಿವೆ,
ಅವಕ್ಕೂ ಗೊತ್ತಿರಬಹುದು...
ಮಧ್ಯ ಆಫ್ರಿಕಾದಲ್ಲಿ ಅಸ್ತಂಗತನಾದ ರವಿ,
ನಮ್ಮೆದೆಗಳಲ್ಲಿ
ಶಾಶ್ವತವಾಗಿ ಉಳಿದಿರುವರೆಂದು...
- ಪ್ರಸಾದ್.ಡಿ.ವಿ.