ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Sunday, 8 January 2012

ಬದುಕಾಯ್ತು ಮೂರಾಬಟ್ಟೆ



ತುತ್ತಗುಳ ಕಂಡ ಕಾಗೆ
ಕಾವ್ ಕಾವ್ ಎಂದು ಕೂಗಿ,
ತನ್ನ ಬಳಗವರಚಿ ಕರೆದು,
ತುತ್ತಗುಳ ಭಾಗ ಮಾಡಿ
ಗುಟುಕಿರಿಸಿರೆ...
ಪೊಳ್ಳು ಅಭಿಮಾನದಮಲೇರಿ
ಮನೆಗೆ ಕರೆದ
ಬಂಧುಬಳಗದವರನ್ನ
ಕಸಿದ ಹೀನ ಕೃತ್ಯವು,
ಕೂಡಿಟ್ಟ ಅನ್ನವನು
ಹಳಸಿ ಕೊಳೆಯಿಸಿ
ಅಹಾರವಾಯಿತದು
ಕಸದ ಬುಟ್ಟಿಗೆ..!
ಕಾಗೆಗಿಂತ ಕಡೆಯಾಯ್ತೆ,
ಎಲ್ಲಿಂದ ಎಲ್ಲಿಗ್ಹೊರಟೆ,
ಬದುಕಾಯ್ತೆ ಮೂರಾಬಟ್ಟೆ,
ಎಲೆ ಮಾನವ..!!!

ಮದ್ಯದಂಗಡಿ
ಜಾಡು ಹಿಡಿದು
ಕಂಠಪೂರ್ತಿ
ಶೇಂಧಿ  ಕುಡಿದು,
ಮತ್ತಷ್ಟು ಸಾಲ ಮಾಡಿ
ಹೆಂಡವೀರುವೆ,
ಹೆತ್ತಮ್ಮನ ಕರುಳ ಕುಯ್ದು,
ಹೆಂಡತಿಯ ಮಾನ ಕಳೆದು
ಹರಾಜಿಗಿಟ್ಟೆಯೋ,
ಮಕ್ಕಳವು ಬೀದಿ ಪಾಲು
ತಿರಿದುಣ್ಣಲು ಸಾಲು ಸಾಲು,
ಕೈಯಿಲಿ ಹಿಡಿದು ಮುರುಕುತಟ್ಟೆ,
ಬದುಕಾಯ್ತು ಮೂರಾಬಟ್ಟೆ,
ಎಲೆ ಮಾನವ...!!!

ಅದೃಷ್ಟದ ಆಟ ಕಟ್ಟಿ
ಕುದುರೆಯ ಬಾಲವಿಡಿದು,
ಊರೂರು ಸುತ್ತು ಹೊಡೆದು,
ಲಾಟರಿಯ ಸಂಖ್ಯೆ ಹಿಡಿದು,
ಗೆಲುವ ಕುದುರೆ
ಕಾಲು ಮುರಿಯೆ,
ಅದೃಷ್ಟ ಸಂಖ್ಯೆ
ಮುರುಗಿ ತಿರುಗೆ,
ಹೆಂಡತಿಯ ಮಾಂಗಲ್ಯ ಕಸಿವೆ
ಮಗುವಿನ ಕಾಲ್ಗೆಜ್ಜೆ ಕಸಿವೆ,
ಬದುಕಿದು ಬಂಗಲೆಯಿಂ
ಬೀದಿಯೆಡೆಗೆ..!
ಎಲ್ಲಿಂದ ಎಲ್ಲಿಗ್ಹೊರಟೆ
ಬದುಕಾಯ್ತು ಮೂರಾಬಟ್ಟೆ,
ಎಲೆ ಮಾನವ..!!!

ಮಕ್ಕಳ ಪಾಡದು
ಹೇಳತೀರದು,
ಸುಪ್ಪತ್ತಿಗೆಯಿಂ
ತೊಟ್ಟಿಯೆಡೆಗೆ,
ಅರಳುವ ಮೊದಲೆ
ಬಸವಿಳಿದ ಬದುಕಿಡಿದು,
ಭಿಕ್ಷೆಯ ಅನ್ನಕ್ಕೆ ಬಿದ್ದು
ಹಾಡಿ ಹೊರಟಿವೆ,
"ಹೇ ದೇವಾ,
ಚಿನ್ನದ ತೊಟ್ಟಿಲ ಹಂದಿಗೆ
ಮರಿಯಾಗುವುದಕ್ಕಿಂತ,
ಮುರಿದ ಕೊಟ್ಟಿಗೆಯ
ಹಸುವಿಗೆ ಕರುವಾಗಿ ಮಾಡೆಮ್ಮ"..!

- ಪ್ರಸಾದ್.ಡಿ.ವಿ.

Thursday, 5 January 2012

ಕ್ಯಾಂಟೀನ್ ಪುರಾಣಗಳು

 ಸಾಮಾನ್ಯವಾಗಿ ಕಾಲೇಜ್ ನ ಕ್ಯಾಂಟೀನ್, ಕ್ಯಾಂಪಸ್ ಕಾರಿಡಾರ್ ಮತ್ತು ಪಾರ್ಕಿಂಗ್ ಲಾಟ್ ಗಳಲ್ಲಿ ನಡೆಯುವ ಸನ್ನಿವೇಶಗಳಿಗೆ ಹಾಸ್ಯದ ಲೇಪನ ನೀಡಿ ನಿರೂಪಿಸುವ ಒಂದು ಸಣ್ಣ ಪ್ರಯತ್ನವೇ "ಕ್ಯಾಂಟೀನ್ ಪುರಾಣ" ಸೀರೀಸ್. ಈ ಪುರಾಣದಲ್ಲಿ ಬರುವ ಸನ್ನಿವೇಶಗಳು ಕಾಲ್ಪನಿಕವಾಗಿಯೂ ಇರಬಹುದು, ನಿಜವಾಗಿಯೂ ಇರಬಹುದು. ಒಂದು ಪುರಾಣಕ್ಕೂ ಮತ್ತೊಂದು ಪುರಾಣಕ್ಕೂ ಸಂಬಂಧವಿರುವುದಿಲ್ಲ. ಪಾತ್ರಧಾರಿಗಳಾಗುವವರು ಬೇಸರಿಸದೆ ಎಂಜಾಯ್ ಮಾಡಿ. ಲಾಫ್ಟರ್ ಟಾನಿಕ್ ನೀಡುವ ಒಂದು ಪ್ರಾಮಾಣಿಕ ಪ್ರಯತ್ನವಿದು.

ಕ್ಯಾಂಟೀನ್ ಪುರಾಣ-೧

ಅಂದು ಎರಡು ಪೀರಿಯಡ್ ಕ್ಲಾಸ್ ನಲ್ಲಿ ಕೂತದ್ದು ಯುಗದಂತೆ ಭಾಸವಾಗಿತ್ತು. ಬೋರ್ ಹೊಡೆಯುತ್ತಿದ್ದರಿಂದ ಕ್ಲಾಸ್ ನಲ್ಲಿದ್ದರೂ ಡೋರ್ ಓಪನ್ ಆಗಿದ್ದರಿಂದ ಕಾರಿಡಾರ್ ನಲ್ಲಿ ಅಡ್ಡಾಡುವ ಹುಡುಗಿಯರನ್ನು ಸಿನ್ಸಿಯರ್ ಆಗಿ ನೋಡುತ್ತಾ ಕುಳಿತಿದ್ದೆ. ಏಕೆಂದರೆ ನಮ್ಮ ಕ್ಲಾಸಿನ ಫಿಗರ್ ಗಳನ್ನು ದಿನವೂ ನೋಡಿ-ನೋಡಿ ಬೋರ್ ಹೊಡೆದು ಹೋಗಿತ್ತು. ನಮ್ಮ ಕ್ಲಾಸ್ ನ ಹುಡುಗಿಯರು ಶಾಕಿಣಿ, ಡಾಕಿನಿಯರ ತರ ಕಾಣಿಸುತ್ತಿದ್ದರು ಈಗೀಗ..!!! ಮೂರನೆ ಕ್ಲಾಸ್ ಗೆ ಒಳಗೆ ಕುಳಿತಿರಲಾಗದೆ ಚೇತನ್ ಗೆ ಪ್ರಾಕ್ಸಿ ಹಾಕಲು ಹೇಳಿ ಬಂಕ್ ಮಾಡಿ ಕ್ಲಾಸ್ ನ ಹೊರಬಿದ್ದೆ. ಹೊರಗೆ ಬರುತ್ತಿದ್ದಂತೆ ನಮ್ಮ ಕ್ಲಾಸ್ ನ ’ಶಾರುಖ್ ಖಾನ್’ ಪ್ರಶಾಂತ್ ಎದುರುಗೊಂಡ.
"ಏನೋ ಕ್ಲಾಸ್ ಬಂಕಾ? ಯಾರದು ಕ್ಲಾಸ್ ಈಗ?" ಎಂದ.
ನಾನು "ಅದೇ ಮಗ ಬೋರಿಂಗ್ ಕ್ಲಾಸ್, ಆ ಕ್ಲಾಸ್ ನಲ್ಲಿ ಕುಳಿತು ಮೊಳೆ ಹೊಡೆಸಿಕೊಳ್ಳುವುದಕ್ಕಿಂತ ನೇಣು ಹಾಕ್ಕೊಳ್ಳೋದೆ ವಾಸಿ ಅಂತ ಹೊರಬಂದೆ" ಎಂದೆ.
"ಲೇ ನಾನು ತಿಂಡಿ ತಿಂದಿಲ್ಲ ಮಚ್ಚಾ, ಕ್ಯಾಂಟೀನ್ ಗೆ ಬರ್ತೀಯಾ ಸುಮ್ಮನೆ ಕಂಪೆನಿ ಕೊಡುವಂತೆ" ಎಂದವನು ಕರೆದ.
"ಮಚ್ಚಾ ಈ ಧನ್ಯ ಆವಾಗಿಂದ ಕಾರಿಡಾರ್ ನಲ್ಲೆ ಅಲೆಯುತ್ತಿದ್ದಾಳೆ, ಇವತ್ತು ಮಸ್ತಾಗಿ ಕಾಣ್ತಾವ್ಳೆ, ಸ್ವಲ್ಪ ಹೊತ್ತು ಬಿಟ್ಟು ಹೋಗೋಣ ಮಗಾ" ಎಂದೆ.
"ಅಯ್ಯೋ ಲೋಫರ್ ಅವಳೋ ೭ ಅಡಿ, ನೀನು ಐದೂವರಡಿ(5.8), ನೀನು ಅವಳ ಜೊತೆ ನಿಲ್ಲೋಕು ಸ್ಟೂಲ್ ಬೇಕು ಮುಚ್ಕೊಂಡು ನನ್ನಜೊತೆ ಬಾ" ಎಂದು ಎಳೆದುಕೊಂಡು ಹೋದ.
ನಾನು ಮನಸ್ಸಿನಲ್ಲಿಯೇ ಆಕಾಶಕ್ಕೆ ಏಣಿ ಹಾಕಿದ್ರೂ ಸರಿಯೇ, ಸ್ಟೂಲ್ ಸಹವಾಸ ಬೇಡವೆಂದು ಅವನೊಂದಿಗೆ ಕ್ಯಾಂಟೀನ್ ಕಡೆ ಹೊರಟೆ.

ಇಂಜಿನಿಯರಿಂಗ್ ಸ್ಟೂಡೆಂಟ್ಸ್ ಆದ ನಮಗೆ ಡ್ರೆಸ್ ಕೋಡ್ ಆಗಿ ಯುನಿಫಾಂ ಮಾಡಿದ್ದರಿಂದ ಬುಧವಾರ ಮತ್ತು ಶನಿವಾರ ಬಿಟ್ಟು ಉಳಿದ ದಿನಗಳಲ್ಲಿ ಕಲರ್ಸ್ ಇದ್ರೂ ಕಾಲೇಜ್ ಕಲರ್ ಲೆಸ್ ಆಗಿತ್ತು..:( ಆದ್ರೆ ಆವತ್ತು ಬುಧವಾರವಾದ್ದರಿಂದ ಕಣ್ಣಿಗೆ ಕೂಲಿಂಗ್ ಗಾಗಲ್ಸ್ ಹಾಕದೆ ಕಣ್ಣು ತಂಪಾಗಿತ್ತು...;)

ಪಾರ್ಕಿಂಗ್ ಲಾಟ್ ನಲ್ಲಿ ಹಾದು ಹೋಗುವಾಗ ಜೂನಿಯರ್ ಆದ ನಿಶಾ ತನ್ನ ಗೆಳತಿಯೊಂದಿಗೆ "ಹೇ ಯು ನೊ ಐಯಂ ಟ್ರೈಯಿಂಗ್ ಟು ಹ್ಯಾವ್ ಜೀರೋ ಫಿಗರ್" ಎಂದುಲಿದಳು. ನಾನು ಧನಿಯೇರಿಸಿ "ಸೊಂಟ ಹುಳುಕೀತು ಹುಷಾರು, ಕರೀನಳ ವೇಯ್ಟ್ ತಾಳಲಾಗದೆ ಅವಳ ಸೊಂಟ ಮುರಿಯಿತಂತೆ" ಎಂದೆ.
ಪಾಪದ ಹುಡುಗಿ ಹೆದರಿ, ಆ ಕಡೆಗೆ ದೂರ ಸರಿದುಬಿಟ್ಟಳು.
ಈ ಕಡೆ ಪ್ರಶಾಂತ "ಅಯ್ಯೋ ನನ್ನ ಮಗನೆ ನೀನು ಉದ್ಧಾರ ಆಗಲ್ಲ" ಎಂದ.
ನಾನೂ ಜೋರಾಗಿ ನಗುತ್ತಾ, "ಅಲ್ವಾ, ನಂಗೂ ಹಂಗೇ ಅನ್ಸುತ್ತೆ ಶಿಷ್ಯ" ಎಂದೆ...!
ಅಷ್ಟರೊಳಗೆ ಪ್ರಶಾಂತನ ಸಾಮ್ಸ್(ಸಮಂತಾ) ಒಂದು ಚಾಕೊಲೇಟ್ ಕೋನ್ ಹಿಡಿದು ಒಂದು ಪ್ಲೇಟ್ ಗೋಬಿಯನ್ನು ತನ್ನ ಮುಂದಿಟ್ಟುಕೊಂಡು ತನ್ನ ಫ್ರೆಂಡ್ಸ್ ಜೊತೆ ಕುಳಿತಿರುವುದು ಕಾಣಿಸಿತು.
"ಲೋ ಮಗಾ ನಿಮ್ಮುಡ್ಗಿ ಐಸ್ ಕ್ರೀಂ ಹಿಡ್ಕೊಂಡವ್ಳೆ, ಐಸ್ ಕ್ರೀಂ ಕರಗಿ ಹೋದೀತಲೆ" ಎಂದು ಪ್ರಶಾಂತನ ಬೆನ್ನಿಗೊಂದು ಪೆಟ್ಟು ಕೊಟ್ಟೆ.
ಈ ಪ್ರಶಾಂತ ಅವಳ ಅಟ್ರಾಕ್ಷನ್ ಸೆಳೆಯಲು ತನ್ನ ಸ್ಯಾಂಸಂಗ್ ಸೆಲ್ ಅನ್ನು ಯಾರೊಂದಿಗೋ ಮಾತನಾಡುವಂತೆ ಹಿಡಿದುಕೊಂಡ.
ಅಲ್ಲಿ ಪ್ರಶಾಂತನ ಇನ್ನೊಬ್ಬ ಸ್ನೇಹಿತ ಲ್ಯಾಬ್ ರೆಕಾರ್ಡ್ ಬರೀತಾ ಕುಳಿತಿದ್ದ. ಪ್ರಶಾಂತ ಎರಡು ಇಡ್ಲಿ ತೆಗೆದುಕೊಂಡ, ನಾನು ಸ್ಲೈಸ್ ತೆಗೆದುಕೊಂಡು ಅವಳು ಕಾಣಿಸುವಂತೆ ಪ್ರಶಾಂತನ ಫ್ರೆಂಡ್ ಟೇಬಲ್ ಗೆ ಹೋಗಿ ಕುಳಿತೆವು.
ಇವನು ಇಡ್ಲಿ ತಿನ್ನುತ್ತಾ ಫೋನ್ ನಲ್ಲಿ "ಹಲೋ ಮಗಾ, ಕ್ಯಾಂಟೀನ್ ನಲ್ಲಿದ್ದೀನಿ ಕಣೋ ನಮ್ಮುಡ್ಗಿಗೆ ಐಸ್ ಕ್ರೀಂ ತಿನ್ನಿಸ್ತಿದ್ದೀನಿ" ಎಂದ ಅವಳಿಗೆ ಕೇಳಿಸುವಂತೆ.
ಅಸಲಿಗೆ ಅವನಿಗೆ ಯಾವುದೇ ಕರೆಯೂ ಇರಲಿಲ್ಲ, ಆ ಹುಡುಗಿಯನ್ನು ಇವನ ಕಡೆ ನೋಡುವಂತೆ ಮಾಡಬೇಕಿತ್ತು ಅಷ್ಟೆ..!!
ಅವಳು ಇವನ ಮಾತನ್ನು ಕೇಳಿ, ಆ ಕಡೆ ಮುಖ ಮಾಡಿ ಮುಗುಳು ನಗುತಿದ್ದಳು. ಅದನ್ನು ನೋಡಿದ ಇವನು ಫುಲ್ ಜೂಮ್ ನಲ್ಲಿದ್ದ.
ಪ್ರಶಾಂತನ ಸ್ನೇಹಿತ, "ಲೋ ಒಂದು ಐಸ್ ಕ್ರೀಂ ತಿನ್ನಲು ಎಷ್ಟೊತ್ತು ಬೇಕು ಗುರು?" ಎಂದು ಕೇಳಿದ.
"ಚಿಕ್ಕ ಮಗುವಾದ್ರೂ ೩ ರಿಂದ ೫ ನಿಮಿಷ ಸಾಕು ಗುರು" ನಾನಂದೆ.
"ಅವಳು ನೋಡು ಮಗಾ, ಒಂದೂವರೆ ಗಂಟೆಯಿಂದ ಅದೇ ಐಸ್ ಕ್ರೀಂ ಇಡ್ಕೊಂಡು ಕೂತಿದ್ದಾಳೆ. ಅಲ್ಲ ನನಗೊಂದು ಅನುಮಾನ ಅವಳು ಪ್ರತಿ ಸಲ ತಿನ್ನುವಾಗ್ಲೂ ಆ ಐಸ್ ಕ್ರೀಂನ ಚಾಕೊಲೇಟ್ ಅಟ್ ಲೀಸ್ಟ್ ಅವಳ ನಾಲಿಗೆಗೆ ಟಚ್ ಆಗ್ತಿದ್ಯೋ ಏನೋ ಅಂತ? ನನಗನ್ಸುತ್ತೆ ಅವಳು ತಿನ್ನೋಕು ಮುಂಚೆನೇ ಆ ಐಸ್ ಕ್ರೀಂ ಕರಗಿ ಹೋಗುತ್ತೆ ಅಂತ" ಎಂದು ಗೊಳ್ ಎಂದು ನಗಲಾರಂಭಿಸಿದ.
ನಾನೂ ಬಿದ್ದು ಬಿದ್ದು ನಗುತ್ತಾ, "ಪ್ರಶಾಂತ ಇದಕ್ಕಿಂತ ಅವಮಾನ ಬೇಕಾ ನಿಂಗೆ, ಕೊತ್ತಂಭರಿ ಗಿಡಕ್ಕೆ ಹೋಗಿ ನೇಣು ಹಾಕ್ಕೋ" ಎಂದೆ.
ಪ್ರಶಾಂತನ ಫ್ರೆಂಡ್ ನನ್ನ ಕೈಮೇಲೆ ಹೊಡೆದು ನನ್ನನ್ನು ಅಭಿನಂದಿಸಿದ.
ಇವನು ಹುಸಿ ಕೋಪ ನಟಿಸುತ್ತಾ, "ಮಕ್ಳ ಅದು ಅವಳ ಯುನೀಕ್ ಸ್ಟೈಲ್ ಕಣ್ರೊ, ಒಂದೂವರೆ ಗಂಟೆ ಯಾರಾದ್ರೂ ಐಸ್ ಕ್ರೀಂ ತಿಂತಾರಾ? ನೋಡು ನಮ್ಮುಡ್ಗಿ ತಿಂತಾಳೆ ಆ ಐಸ್ ಕ್ರೀಂ ಕೂಡ ಕರಗದಂತೆ ನೋಡ್ಕೊಳ್ತಾಳೆ ಗೊತ್ತಾ? ಹೆಂಗೆ" ಎಂದು ತನ್ನ ಬೆನ್ನನ್ನು ತಾನೆ ತಟ್ಟಿಕೊಂಡ.
ಮತ್ತೂ ಮುಂದುವರೆದು "ಜೊತೆಗೆ ಗೋಬಿ ಇದೆಯಲ್ಲ ಮಗಾ, ಐಸ್ ಕ್ರೀಂ ತಿನ್ನೋದು ಒಂದು ಪೀಸ್ ಗೋಬಿ ತಿನ್ನೋದು ಹಾಗೆ ತಿನ್ನೋದು ಅವಳು" ಎಂದ.
"ಲೋ ಅವಳು ಹೀಗೇ ತಿಂತಿದ್ರೆ ಒಂದಿನ ಇನ್ವಿಸಿಬಲ್ ಆಗ್ಬಿಡ್ತಾಳೆ, ಈಗಿರೋದೆ ಸ್ಕೆಲಿಟನ್ ತರ" ಎಂದು ಪ್ರಶಾಂತನ ಫ್ರೆಂಡ್ ಬೊಬ್ಬಿಟ್ಟ.
"ಲೋ ಅವಳು ನನ್ನ ಪ್ರೀತಿ ಒಪ್ಕೊಂಡ್ಮೇಲೆ ನಾನೇ ತಿನ್ಸೋದಲ್ವ, ಆಗ ತಯಾರಿ ಮಾಡ್ತೀನಿ ಬಿಡು" ಎಂದ ಪ್ರಶಾಂತ.
ನಾವಿಬ್ಬರು "ಹೋ" ಎಂದು ಹೋಕಾರ ಎಳೆದೆವು.
"ಆಮೇಲೆ ಅವಳಿಂದೆ ತಿರುಗಿ ತಿರುಗಿ ದೇವದಾಸ್ ಅಗ್ಬಿಟ್ಟೀಯ ಪ್ರಶಾಂತ, ಮೊದಲೆ ನಿಮ್ಮ ಶಾರುಖ್ ಆ ಫಿಲ್ಮ್ ಹೀರೊ" ಎಂದೆವು ನಾವು.
"ಅಂತದ್ದೆಲ್ಲ ಸೀನ್ ಇಲ್ಲ, ನಾನ್ಯಾವಗ್ಲೂ ಲವರ್ ಬಾಯ್" ಎಂದ ಪ್ರಶಾಂತ.

ಹೆಂಗೊ ಸಮಂತಾ ಐಸ್ ಕ್ರೀಂ ತಿಂದು ಮುಗಿಸಲು ಎರಡು ಗಂಟೆ ತೆಗೆದುಕೊಂಡಳು..!
ಅವಳಿಗೆ ಇವನು ಐಸ್ ಕ್ರೀಂ ತಿನ್ನಿಸಿ, ನಾವು ಇವನಿಗೆ ಇಡ್ಲಿ ತಿನ್ನಿಸುವುದರೊಳಗೆ ಮುಂದಿನ ಪಿರಿಯಡ್ ಗೆ ಐದು ನಿಮಿಷವಿತ್ತು ಅಷ್ಟೆ.
"ಹೇ ಬಾರ್ಲೆ ಮುಂದಿನ ಕ್ಲಾಸ್ ಗೆ ಲೇಟಾಗುತ್ತೆ" ಎಂದು ಅವನ ಕೈಯಿಡಿದು ಎಳೆದೆ, ಇಬ್ಬರೂ ಕ್ಲಾಸ್ ಕಡೆಗೆ ಓಡಿದವು.

- ಪ್ರಸಾದ್.ಡಿ.ವಿ. 
ಚಿತ್ರಕೃಪೆ: ಅಂತರ್ಜಾಲ (ವರುಣ್)

Saturday, 31 December 2011

ಮಧುರ ಪಿಸುಮಾತಿಗೆ, ಅದರ ತುಸು ಪ್ರೀತಿಗೆ

ಜನವರಿ ೧, ಸದಾ ನನ್ನ ನೆನಪಿನಲ್ಲುಳಿಯುವ ದಿನ. ಅದು ನವ ವಸಂತದ ಆರಂಭವೆಂಬ ಕಾರಣಕ್ಕೆ ಮಾತ್ರವಲ್ಲ. ನನ್ನ ಜೀವನದಲ್ಲಿನ ಒಂದು ಅನಿರೀಕ್ಷಿತ ತಿರುವು, ಒಂದು ಸುಮಧುರ ಯಾತನೆಯಾಗಿ ಉಳಿದ ಕಾರಣದಿಂದ. "ಆತ(?)" ನನ್ನ ಜೀವನದಲ್ಲಾಡಿದ ಆಟವನ್ನು ನಾನೆಂದಿಗೂ ಮರೆಯುವಂತಿಲ್ಲ..! ಇಂದು ಆ ಕ್ಷಣವನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇನೆ.


ನನ್ನ ಕ್ಯಾಂಟೀನ್ ಪುರಾಣದಲ್ಲಿ "ನಾನು ನಿನ್ನನ್ನು ನನ್ನ ಜೀವದ ಗೆಳೆಯನೆಂದು ತಿಳಿದಿದ್ದೇನೆಯೇ ಹೊರತು ನಲ್ಲನಾಗಿ ಅಲ್ಲ" ಎಂದು ಆಕೆ ನನ್ನ ಪ್ರೀತಿಗೆ ಅಲ್ಪವಿರಾಮವಿಟ್ಟಿದ್ದಳು..! ನನಗೋ ಅದ್ಯಾವುದಕ್ಕೂ ಹೊಂದಿಕೊಳ್ಳಲಾಗದೆ ಸ್ನೇಹಕ್ಕೆ ಪ್ರೀತಿಯನ್ನು ತ್ಯಾಗ ಮಾಡಿದ ಅಮರ ಪ್ರೇಮಿಯಾಗಿದ್ದೆ. ಆನಂತರದಲ್ಲಿ ಆಕೆ ಮತ್ತೊಂದು ಕತೆ ಹೇಳಲು ಶುರುವಚ್ಚಿದ್ದಳು. ನಾನು ಒಬ್ಬ ಹುಡುಗನನ್ನು ಪ್ರೇಮಿಸಿದ್ದೇನೆ, ಆತನನ್ನು ನನ್ನ ಜೀವದ ಗೆಳೆಯನಾದ ನಿನಗೆ ಪರಿಚಯಿಸಬೇಕೆಂದು ಹೇಳಿದಳು.ನನಗೋ ಹೃದಯದಲ್ಲಿ ಹೇಳಿಕೊಳ್ಳಲೂ, ತಾಳಿಕೊಳ್ಳಲೂ ಆಗದ ತಳಮಳ. ನನ್ನವಳೆಂದು ತಿಳಿದವಳು ನನ್ನೆದುರಿಗೆ ಮತ್ತೊಬ್ಬನನ್ನು ಪ್ರೀತಿಸುವುದು ಸಹಿಸಲಾಗದ ನೋವನ್ನು ನೀಡಿತ್ತು, ನಿದ್ರೆ ಬಿಟ್ಟ ಉದಾಹರಣೆಗಳೂ ಉಂಟು. ಇವೆಲ್ಲವುಗಳ ನಡುವೆಯೇ ಆಕೆ ಮತ್ತು ಆಕೆಯ ಮನೆಯವರೊಂದಿಗೆ ನಿಮಿಷಾಂಬಾ ದೇವಿಯ ದರ್ಶನವೂ ಆಗಿತ್ತು. ಅವಳ ಕುಟುಂಬದ ಎಲ್ಲ ಸದಸ್ಯರೂ ನನಗೆ ತುಂಬಾ ಹಿಡಿಸಿದ್ದರು, they were so cool together. ಆಕೆ ಅಂದು ನನ್ನೊಂದಿಗೆ ಏನನ್ನೋ ಹೇಳಲು ಚಡಪಡಿಸಿದ್ದಳು, ನಾನು ಆ ನಿಮಿಷಾಂಬಾ ದೇವಿಗೆ ನನ್ನ ಪ್ರೀತಿಯನ್ನು 'ನಮ್ಮ ಪ್ರೀತಿಯಾಗಿ' ಮಾಡೆಂದು ಅರ್ಜಿ ಹಾಕಿದ್ದೂ ಆಗಿತ್ತು.

ಅಂದು ಡಿಸೆಂಬರ್ 31ರ ಸಂಜೆ , ಆಕೆಯೊಂದಿಗೆ ಮೊಬೈಲ್ ನಲ್ಲಿ ಒಂದು ಗಂಟೆಯ ಸಂಭಾಷಣೆಯಾಗಿತ್ತು. ಅದು ನನ್ನ ಪ್ರೀತಿಯ ಸುಮಧುರ ನೆನಪುಗಳಲ್ಲೊಂದು. ಅವಳ ಜೀವನದ ನೂರಾರು ಕನಸುಗಳ ಬಗ್ಗೆ, ನಮ್ಮ ಗೆಳೆತನದ ಬಗ್ಗೆ, ನಾನು ಆಕೆಯ ಜೀವನದಲ್ಲಿ ಬಂದ ನಂತರ ಆದ ಬದಲಾವಣೆಗಳ ಬಗ್ಗೆ, ಅವಳ ಹುಚ್ಚು ಕಲ್ಪನೆಗಳ ಬಗ್ಗೆ ನಲಿವಿನಂತೆ ಉಲಿದಿದ್ದಳು. ನನಗಂತೂ ಅವಳ ಮಾತು ಕೇಳುವುದೇ ಸಿರಿ. ಹಾಗೆ ಆಗಸದಲ್ಲಿ ತೇಲುತಿದ್ದವನಿಗೆ ತಂತಿ ಬೇಲಿಯಾಗಿತ್ತು ಅವಳ ಕಡೆಯ ಮಾತು "ನನ್ನವನು ನಿನ್ನನ್ನು ಆದಷ್ಟು ಬೇಗ ಭೇಟಿಯಾಗಬೇಕಂತೆ". ನಾನು ಹೌಹಾರಿಬಿಟ್ಟಿದ್ದೆ!! ನಾನು ತುಂಬಾ ಬ್ಯುಸಿಯಾಗಿದ್ದೇನೆ ಪರೀಕ್ಷೆಗೆ ತಯಾರಿ ನಡೆಯುತ್ತಿದೆ, ಹಾಗೆ-ಹೀಗೆ ಎಂದು ಚೋಡಿದ್ದೆ. ನಿಜವಾದ ಕಾರಣವೇನೆಂದರೆ ನಾನು ಆಕೆಯ ಧ್ಯಾನದಲ್ಲಿಯೇ ಮುಳುಗಿ ಹೋಗಿದ್ದೆ. ಆತ ಮೋಹನನಾಗಿ ಬಂದು ನನ್ನವಳನ್ನು "ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು(!)" ಎಂಬಂತೆ ನನ್ನಿಂದ ದೂರಕ್ಕೆ ಸರಿಸಿ ಬಿಟ್ಟರೆ? ಎಂಬ ಭಯ. ಸರಿ ಏನೋ ಸಬೂಬು ಹೇಳಿ ಸಂಭಾಷಣೆ ತುಂಡರಿಸಿದ್ದೆ.

ಅಂದು ರಾತ್ರಿ ಮನೆಯಲ್ಲಿ ಕೇಕ್ ಕತ್ತರಿಸಿ ವರ್ಷದಾರಂಭದ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ ನಾನು ಮೊಬೈಲ್ ಹಿಡಿದು ಶತಪಥ ಹಾಕುತ್ತಿದ್ದೆ. ಕಡೆಗೆ ಆ ಕಡೆಯಿಂದ ಕರೆ ಬರದಾದಾಗ ತಾಳಲಾರದೆ ನಾನೇ ಫೋನಾಯಿಸಿದೆ, "ನಾನೂ ನಿನಗೇ ಪ್ರಯತ್ನಿಸುತ್ತಿದ್ದೆ ಕಣೋ, ಆದರೆ ನೆಟ್ ವರ್ಕ್ ಪ್ರಾಬ್ಲಮ್, ನಾಳೆ ಸಿಗು, ಮಾತನಾಡಬೇಕು" ಉಲಿಯಿತು ಅವಳ ಧ್ವನಿ. ಇದ್ದ ಕೋಪವೆಲ್ಲ ಮಾಯವಾಗಿ "ಹೌದಾ, ಸರಿ ಅದೋಗ್ಲಿ ಬಿಡೆ, happy new year, ನಾಳೆ ಸಿಗುತ್ತೇನೆ" ಎಂದ್ಹೇಳಿ ಸಂಪರ್ಕ ಕಡಿದು ಮನೆಯವರ ಸಂಭ್ರಮಾಚರಣೆಯಲ್ಲಿ ಮುಳುಗಿಹೋದೆ.


ಜನವರಿ 1 ರಂದು ಆಕೆಯನ್ನು ಭೇಟಿಮಾಡುವ ಸಂಭ್ರಮ. ಕ್ಲೀನ್ ಆಗಿ ಶೇವ್ ಮಾಡಿ, ಟ್ರಿಮ್ ಆಗಿ ಅಪ್ಪ ಕೊಡಿಸಿದ್ದ ಹೊಸ ಬಟ್ಟೆ ತೊಟ್ಟು ಮನೆಯಿಂದ ಹೊರಟೆ. ಕಾಲೇಜ್ ತಲುಪಿ, ನಾನಿಲ್ಲಿದ್ದೇನೆ ಎಂದು ಆಕೆಯ ಮೊಬೈಲಿಗೊಂದು ಸಂದೇಶ ರವಾನಿಸಿದೆ. ಆಕೆ ಎದುರಿನಲ್ಲೇ ಪ್ರತ್ಯಕ್ಷ! ನನ್ನ ಎದೆಬಡಿತ ಅವಳಿಗೂ ಕೇಳಿಸಬಹುದೆಂದು ಹೆದರಿಬಿಟ್ಟೆ. ಆಕೆಯೋ ಅಪ್ಸರೆಯಂತೆ ಕಂಗೊಳಿಸುತ್ತಿದ್ದಳು. ಕ್ಯಾಂಪಸ್ ನ ಪಾರ್ಕಿನಲ್ಲಿನ ಬೆಂಚ್ ಮೇಲೆ ಕುಳಿತು ಹರಟೆ ಶುರುವಚ್ಚಿದೆವು. ಅದು-ಇದು ಮಾತನಾಡುತ್ತಾ ಸಾಗಿತ್ತು ನಮ್ಮ ಮಾತುಕತೆ. ಹಾಗೆ ಸಾಗಿದ್ದ ಸಂಭಾಷಣೆ ಆಕೆಯ ಪ್ರೀತಿಯೆಡೆಗೆ ಹೊರಳಿತು. "ಇಂದು ನೀನು ಅವನನ್ನು ಭೇಟಿ ಮಾಡು, ಅವನು ಮೈಸೂರಿಗೆ ಬಂದಿದ್ದಾನಂತೆ, ನಾನಿನ್ನೂ ಅವನಿಗೆ ವಿಷ್ ಕೂಡ ಮಾಡಿಲ್ಲ, ಬೈಸಿಕೊಳ್ಳಬೇಕೇನೋ? ತಾಳು ಅವನಿಗೆ ಕಾಲ್ ಮಾಡಿ ಇಲ್ಲಿಗೆ ಬರಲು ಹೇಳುತ್ತೇನೆ". ಎಂದಾಕೆ ಒಂದೇ ಸ್ವರದಲ್ಲಿ ಉಸುರಿದಾಗ ನನ್ನ ಹೃದಯ ದಸಕ್ಕೆಂದಿತು. ನಾನು ಪ್ರತಿಕ್ರಿಯಿಸುವ ಮೊದಲೆ ಅವನ ನಂಬರ್ ಗೆ ಡಯಲ್ ಮಾಡಿಯೇ ಬಿಟ್ಟಳು. ಹೃದಯ ತನ್ನ ಬಡಿತ ಹೆಚ್ಚಿಸಿತು, ಎಲ್ಲಿ ಒಡೆದು ಹೋಗುವುದೋ ಎಂದು ಭಯಪಟ್ಟೆ. "ರಿಂಗ್ ಆಗ್ತಿದೆ, ತೆಗೀತಾನೇ ಇಲ್ಲ... ಕಾಲರ್ ಟ್ಯೂನ್ ಚೆನ್ನಾಗಿದೆ ಕೇಳು" ಎಂದು ನನ್ನ ಕಿವಿಗಿಟ್ಟಳು. ನನ್ನ ಕೈ ನಡುಗುತ್ತಿತ್ತು, ಮೈ ಬೆವರುತ್ತಿತ್ತು. "ಮಧುರ ಪಿಸುಮಾತಿಗೆ" ಎಂಬ ಬಿರುಗಾಳಿ ಸಿನೆಮಾದ ಸಾಂಗ್ ಕೇಳಿಸುತ್ತಿತ್ತು. ತಟ್ಟನೆ ಹೃದಯ ನಿಂತಂತಾಯ್ತು..!

ಅಯ್ಯೋ ಇದು ನನ್ನದೇ ಕಾಲರ್ ಟ್ಯೂನ್, ನನ್ನ ಮೊಬೈಲ್ ಎತ್ತಿ ನೋಡಿದೆ. silent mode ನಲ್ಲಿದ್ದ ಫೋನ್ ಹಾಗೆಯೇ ಜುಂಯ್ ಜುಂಯ್ ಎಂದು ವೈಬ್ರೇಟ್ ಆಗ್ತಿತ್ತು. ಅವಳ ಮೊಬೈಲ್ ಅನ್ನು ಅವಳ ಕೈಗಿಟ್ಟು ಒಂದು ಕ್ಷಣ ಮೌನವಾಗಿ ಕುಳಿತುಬಿಟ್ಟೆ. ಅವಳು "wish you happy new year" ಎಂದು ನನ್ನ ಕಿವಿಯಲ್ಲುಸುರಿದಳು. ನೂರಾರು ಭಾವಗಳಲ್ಲಿ ಮನ ತೋಯಿಸಿ ಹೋದಂತೆನಿಸಿತು. ಅಬ್ಬಾ! ಎಷ್ಟು ಜಾಣೆಯವಳು, ನನಗೀಗಲೂ ಮೈ ರೋಮಾಂಚನವಾಗುತ್ತದೆ. ನಾನವಳಿಗೆ ಪ್ರೇಮ ನಿವೇದಿಸಿಕೊಂಡ ಕ್ಯಾಂಟೀನ್ ಪುರಾಣ ನೆನಪಾಗುತ್ತದೆ. ಬರೋಬ್ಬರಿ ಎರಡು ತಿಂಗಳುಗಳ ನಂತರ ನನ್ನ ಅವಳು ನಮ್ಮ ಪ್ರೇಮಕ್ಕೆ ಅಧಿಕೃತ ಮುದ್ರೆಯೊತ್ತಿದ್ದಳು! ನನ್ನ ಮುಖದ ಭಾವಗಳನ್ನರಿಯಲು ಓರೆಗಣ್ಣಿನಲ್ಲಿ ನನ್ನ ಮೇಲೆ ದೃಷ್ಠಿ ನೆಟ್ಟ ಅವಳೆಡೆಗೆ ಮುಗುಳುನಗೆ ಬೀರಿ ಸ್ವಲ್ಪ ಹತ್ತಿರಕ್ಕೆ ಸರಿದು ಕುಳಿತೆ. ಒಮ್ಮೆಲೇ ಅಪ್ಪಿ ಮುದ್ದಿಸಬೇಕೆಂಬ ಭಾವೋತ್ಕಟತೆ. ಎಂದೂ ಸಭ್ಯತೆಯ ಎಲ್ಲೆ ಮೀರದ ನಾನು, ಅವಳ ಕೈಯನ್ನು ನನ್ನ ಕೈಯಲ್ಲಿಟ್ಟುಕೊಂಡು ನೇವರಿಸಲಷ್ಟೆ ಶಕ್ತನಾದೆ. ಹಿಡಿದ ಕೈಯನ್ನು ಎಂದೂ ಬಿಡೆನು ಎಂದು ಕಣ್ಣಿನಲ್ಲಿಯೇ ಸಂದೇಶ ರವಾನಿಸಿದೆ. ಅವಳು ಹಿಡಿತವನ್ನು ಬಿಗಿಗೊಳಿಸಿದಳು. ಅಕ್ಕ-ಪಕ್ಕದಲ್ಲಿದ್ದ ಕಣ್ಣುಗಳು ನಮ್ಮನ್ನೇ ನೋಡುತ್ತಿವೆ ಎಂದೆನಿಸುತ್ತಿತ್ತು ನನಗೆ. ಆದರೂ ಹಾಗೇ ಕೈಹಿಡಿದು ಕುಳಿತೆವು. ಹತ್ತು ನಿಮಿಷ ನೆಲೆಸಿದ್ದ ನಿರ್ಮಲ ಮೌನದಲ್ಲಿ ಹೃದಯಗಳೆರಡೂ ಕಣ್ಣುಗಳೊಳಗಿಳಿದು ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತಿದ್ದವು.


ಸ್ವಲ್ಪ ಸಮಯದ ನಂತರ ಕೈಹಿಡಿದೇ ಅವಳ PG ಯೆಡೆಗೆ ಹೆಜ್ಜೆ ಹಾಕಿದೆವು, ಮುಂದೆ ಹೀಗೆಯೇ ಸಪ್ತಪದಿ ತುಳಿದೇವು ಎಂಬ ಕನಸಲ್ಲಿ.

ಇಂದು ಆಕೆ ನನ್ನೊಂದಿಗಿಲ್ಲ, ಯಾವ ಕ್ಷುದ್ರಶಕ್ತಿಯ ಕಣ್ಣು ಬಿತ್ತೋ ಗೊತ್ತಿಲ್ಲ., ಆದರೆ ಅವಳೊಂದಿಗೆ ಅವಳ ನೆನಪುಗಳು ಮಧುರ ಮತ್ತು ಶಾಶ್ವತ..!

ಪುಟ್ಟಾ, ಈ ಲೇಖನವನೊಮ್ಮೆ ನೀನು ನೋಡುವಂತಾದರೆ ಸಾಕು ಕಣೆ, ನಾನು ಧನ್ಯ ಧನ್ಯ ಧನ್ಯ.

ಎಲ್ಲರೂ ದಯವಿಟ್ಟು, ಮೂರು ವಸಂತ ಪೂರೈಸಿ, ನಾಲ್ಕನೇ ವಸಂತಕ್ಕೆ ಕಾಲಿರಿಸಿರುವ ನನ್ನ ಪ್ರೀತಿಗೆ ಹುಟ್ಟುಹಬ್ಬದ ಶುಭಾಶಯ ಕೋರಿಬಿಡಿ...:-)

ಎಲ್ಲರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು, ದೇವರು ಎಲ್ಲರನ್ನೂ ಹರಸಲಿ, ಕಾಪಾಡಲಿ...:-)

- ಪ್ರಸಾದ್.ಡಿ.ವಿ.

Tuesday, 27 December 2011

ಅಹಂ ಬ್ರಹ್ಮಾಸ್ಮಿ



ಹುಟ್ಟಿನಿಂದ ಪಡೆದು ತಂದೆ
ಸಾವಿರಾರು ಬಂಧಗಳ...
ಅಪ್ಪನಿಂದ ಪಡೆದವು
ಅಜ್ಜ-ಅಜ್ಜಿ, ಚಿಕ್ಕಪ್ಪ,
ದೊಡ್ಡಪ್ಪ, ಅತ್ತೆ...
ಅಮ್ಮನಿಂದ ಪಡೆದವು
ಅಜ್ಜ-ಅಜ್ಜಿ, ಚಿಕ್ಕಮ್ಮ,
ದೊಡ್ಡಮ್ಮ, ಮಾವ...
ಇಬ್ಬರಿಂದಲೂ ಪಡೆದವು
ಅಣ್ಣ-ಅಕ್ಕ, ತಮ್ಮ-ತಂಗಿ...
ನಿನಗಾಗಿ ಮಿಡಿದ
ಹೃದಯಗಳೆಷ್ಟು ಇಲ್ಲಿ..?
ಎಲ್ಲರವರವರ ಅನುಕೂಲತೆಗಳಿಗೆ
ಜೋತು ಬಿದ್ದವರು,
ಬಣ್ಣ ಕಟ್ಟಿಕೊಂಡು ಕುಣಿವರು,
ಹೊಗಳುವರು ನೀನೇ ಇಂದ್ರ-ಚಂದ್ರ
ನಂಬಬೇಡವೋ ಮೂಢ
ನಂಬಿಕೆಯ ಬೆಟ್ಟವೇರಿಸಿ
ಆಳ ನೋಡುವ ಹುನ್ನಾರ,
ನಿನಗಾಗಿ ಮಿಡಿದ ಹೃದಯವೊಂದೆ,
ಎದೆಯ ಮೇಲೆ ಕೈಯಿಟ್ಟು
ಕೇಳು ಅದರ ಬಡಿತವ,
ನಿನ್ನಿರುವ ಸಂಕೇತಿಸುವ ಮಿಡಿತವ...

ಬದುಕುವ ರೀತಿ-ನೀತಿಗಳು
ಕಲ್ಪಿಸಿದವು ನೂರಾರು ಅನುಬಂಧಗಳ,
ಶತ್ರು-ಮಿತ್ರ, ಗೆಳೆಯ-ಗೆಳತಿ,
ನಲ್ಲೆ ಹೆಂಡತಿ,
ಮಕ್ಕಳು-ಮರಿಗಳು,
ಸಹವರ್ತಿಗಳು,
ಎಲ್ಲವೂ ಸಹಜವೇ, ಸಹ್ಯವೇ...
ಆದರೆ ಅವರವರ
ಬದುಕು ಅವರವರಿಗೆ,
ಸಮಾನಾಂತರ ರೇಖೆಯ
ಬಾಳು ನಮ್ಮದು
ಸಂದಿಸುವುದನಂತದಲಿ...
ಮುಖ ನೋಡಿ ನಗುವೆವು,
ಅಳು ನೋಡಿ ಮಿಡಿವೆವು...
ಮತ್ತದೇ ನಾಟಕವೇ..!
ಬದುಕೊಂದು ನಾಟಕರಂಗ
ವಿಧಿಯದರ ಸಾಹೇಬ..!

ಬಂಧ-ಅನುಬಂಧಗಳಲ್ಲಿ
ಸಿಲುಕಿದ ಮೀನಾದೆ,
ಸಾಧನೆಯು ಶೂನ್ಯವಾಗಿ,
ದುರಾಸೆಯಲ್ಲಿ ನಿರಾಸೆಯ ಮೂಟೆ ಹೊತ್ತು
ಸವೆಸಿರುವೆ ಬದುಕಹಾದಿ,
ವರ್ಷಗಟ್ಟಲೆ ಉಸಿರಾಡಿದ್ದೀ,
ಆದರೆ ಬದುಕಿದ ಕ್ಷಣಗಳೆಷ್ಟು..?
ನಿನಗಾಗಿ ನಿನ್ನ ಹೃದಯ
ಬಡಿದ ಬಡಿತಗಳೆಷ್ಟು..?
ಅನಂತದಲ್ಲಿನ ಬದುಕಿಗಾಗಿ
ಕೂಡಿಟ್ಟ ಪುಣ್ಯದ ಗಂಟುಗಳೆಷ್ಟು..?
ಮಾನವನ ಬದುಕು
ನೀರಮೇಲಿನ ಗುಳ್ಳೆ..!
ಇನ್ನಾದರೂ ಬದುಕಬಾರದೆ ಬದುಕ..?
ನಿನಗಾಗಿ, ನಿನ್ನೊಳಗಿನ
ಆತ್ಮದ ಪರಮಾತ್ಮನ ಸಂತೃಪ್ತಿಗಾಗಿ...
ಅಹಂ ಬ್ರಹ್ಮಾಸ್ಮಿ...!

- ಪ್ರಸಾದ್.ಡಿ.ವಿ.
---------------------------------------------------------------------------------------------------
ಕೇವಲ ಜಂಜಡಗಳಲ್ಲಿ ಸಿಲುಕಿ ನರಳದೆ ನಿಮ್ಮ ಮನಸ್ಸಿನ ಸಂತೋಷಕ್ಕೆ ಬದುಕ ಕಟ್ಟಿಕೊಳ್ಳಬೇಕು.. ನಗು, ಅಳು, ಪ್ರೀತಿ, ನಿರಾಶೆ, ನೋವು, ಯಶಸ್ಸು ಎಲ್ಲವು ಸಮ್ಮಿಳಿತಗೊಂಡ ಬಾಳಾಗಬೇಕು ನಮ್ಮದು.. ಹೊಸ ಹೊಸ ತಪ್ಪುಗಳನ್ನು ಮಾಡಬೇಕು ಮತ್ತು ಅವುಗಳಿಂದ ಪಾಠ ಕಲಿಯಬೇಕು, ತಪ್ಪುಗಳು ಗತಿಸಿದವೆಂದು ಚಿಂತಿಸುವ ಅಗತ್ಯವಿಲ್ಲ ಯಾಕೆಂದರೆ ಈ ರೀತಿಯ ಪೆದ್ದುತನಗಳು ಜೀವನದಲ್ಲಿಲ್ಲದಿದ್ದರೆ ವಯಸ್ಸಾದ ಮೇಲೆ ನೆನೆಸಿ ನಗಲು ಕಾರಣಗಳೇ ಉಳಿಯದು.. ತಪ್ಪು ಮತ್ತು ಬದಲಾವಣೆಗಳು ಹರಿಯುವ ನೀರಿನಂತೆ..! ಬದುಕನ್ನ ಸಹಜವಾಗಿ ನಿರ್ಮಿಸಕೊಳ್ಳಬೇಕು, ಕೃತಕತೆ ಆದಷ್ಟು ಕಡಿಮೆಯಾಗಲಿ ಎಂಬುದು ಕವಿತೆಯ ಆಶಯ..

Saturday, 24 December 2011

ದೇವಮಾನವ ಯೇಸು




ದರ್ಪದಾಡಳಿತಕ್ಕೆ ಬೇಸತ್ತು
ಜೀವವನು
ಅರಸೊತ್ತಿಗೆಗಡವಿತ್ತು,
ನಲುಗುತ್ತಿರುವ ಜೀವಗಳ
ಸಂಕೋಲೆ ಕಳೆಯಲು,
ಭವಬಂಧನ ಬಿಡಿಸಲು
ಅವತರಿಸಿದನವಧೂತನ
ಯೇಸುವೆಂದರು ಜನ!

ಕಣ್ಣಿಲ್ಲದವರ ಕಣ್ಣಾದ,
ಮೌನದ ಮಾತಾದ,
ಮಾನವೀಯ ಗುರುವಾದ!
ಕುಜನರ ಕುಯುಕ್ತಿಗೆ
ದೇವನೆಂದವರೂ
ಕಲ್ಲು ಹೊಡೆದರು,
ಕೈಗಳಿಗೆ ಮೊಳೆ ಜಡಿದರು!
ಶಿಲುಬೆಗೇರಿಸಿ, ಕೈ ಮುಗಿದರು!

ಯೇಸು ನಗುತ್ತಲಿದ್ದ,
ಜನರ ಜತನಾರಭ್ಯ
ಅಂಟಿದ್ದ ಕರ್ಮಗಳ ತೊಳೆದು,
ತಮವನ್ನು ತೊಡೆದು,
ಬೆಳಕನ್ನು ನೀಡೆಂದು
ದೇವನಲ್ಲಿ ಮೊರೆಯುತ್ತಿದ್ದ!
ಸಾವಿನಲ್ಲೂ ಮಾನವೀಯತೆ
ಸಾರಿ ಸ್ಥಬ್ದನಾದ!

ಯೇಸುವೆಂದರೆ
ಅವನಾರೂ ಅಲ್ಲ!
ನಿಮ್ಮ ನಮ್ಮೊಳಗಿನ ಜ್ಯೋತಿ,
ಬೆಳಗುವುದದರ ರೀತಿ!
ತನ್ನ ಮುಗ್ಧತೆಯನ್ನೇ
ಬತ್ತಿಯಾಗಿಸಿ,
ತಾನೇ ತಪ್ತ ದೀಪ್ತಿಯಾದನು!
ಜನರ ಬಾಳಿಗೆ ದೀಪವಾದನು!

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

Friday, 16 December 2011

ಮನ ಕಲ್ಲಾಗುವಾ ಮುನ್ನ



ನಾ ನಗಲು ತುಟಿ ಬಿರಿಯೆ
ನನ್ನ ನಗುವಲ್ಲೂ ಇಣುಕಿ
ಕಾಡುವ ನಿನ್ನ ಪರಿಯ
ಏನೆಂದು ಬಣ್ಣಿಸಲಿ ಚೆಲುವೆ
ನಿನ್ನ ಧ್ಯಾನದಲಿ
ನಾನು ನಾನಲ್ಲ, ನೀನು ನೀನಲ್ಲ,
ನಾನು ನೀನು, ನಿನ್ನೊಳಗೆ ನಾನು...

ನಾನಳಲು ಕಣ್ಣಹನಿಯಲ್ಲೂ
ನಗುವ ನೀನು,
ನೆನಪಲ್ಲೂ ನೀನು,
ಕನಸಲ್ಲೂ ನೀನು,
ನನ್ನ ಪ್ರತಿಯೊಂದು ಕೃತಿಯಲ್ಲೂ
ಇಣುಕಿ, ನಗುತ ಕಾಡುವ ನೀನು,
ನಾನು ನಾನಾಗಿಯೇ ಉಳಿದಿಲ್ಲ
ನಾನೆಲ್ಲವೂ ನೀನೆಂಬ ಅನುಮಾನ..!
ಇದು ನಿನ್ನಲ್ಲಿ ನನ್ನ ಬಂಧನವೋ?
ಇಲ್ಲ ನನ್ನಿಂದ ನನಗೇ ಬಿಡುಗಡೆಯೋ?

ನಗುವಲ್ಲೂ ಕಾಡುವೆ,
ಅಳುವಲ್ಲೂ ಇಣುಕುವೆ,
ನಿನ್ನ ಮನಸಾರೆ ಪ್ರೀತಿಸಿದ
ಎನ್ನ ತಪ್ಪನ್ನು ಮನ್ನಿಸಿ
ನನ್ನ ಶಾಪ ವಿಮೋಚನೆ
ಮಾಡಿಬಿಡು ಗೆಳತಿ
ಈ ನನ್ನ ಮನ ಕಲ್ಲಾಗುವ ಮುನ್ನ...

- ಪ್ರಸಾದ್.ಡಿ.ವಿ.

Saturday, 10 December 2011

ಎಂದೂ ನಿದ್ರಿಸದ ಕಾಂಚಾಣ



ರೈತನ ಹೊಲದಲ್ಲಿ ಪೈರಾಗಿ ಮೊಳೆತು
ಬೆಳೆಯಾಗಬೇಕಿದ್ದ ಹಣ,
ಅವನ ಕೊರಳಿಗೆ ಉರುಳಾಗಿದೆ,
ಬೆಳೆಗೆ ಜೀವಜಲ ವರುಣ
ಅತಿವೃಷ್ಠಿಗೆ ಬೆಳೆ ನಲುಗಿದೆ...
ಬೆಳೆಯ ಸಾಲಿಗನು ಬಂದು ಸೆಳೆಯೆ
ರೈತನ ಬಾಳೇ ಬರಡಾಗಿದೆ,
ಸಾವಿನಲ್ಲಿ ನರ್ತನಗೈವ ಹಣ
ಎಂದೂ ನಿದ್ರಿಸದ ಕಾಂಚಾಣ..!

ಮಗಳ ಮದುವೆಗೆ ಬೇಕು
ಲಕ್ಷಗಟ್ಟಲೆ ಹಣ,
ಅವನ ವರಮಾನವೋ ಕೆಲವು ಸಾವಿರಗಳಣ್ಣ,
ಹೇಗೋ ಕಷ್ಟಪಟ್ಟು ಮಾಡಿ
ಮುಗಿಸಿದ ಮಗಳ ಮದುವೆ,
ತೀರದ ದಾಹ ವರದಕ್ಷಿಣೆಗೆ,
ಆ ಹೆಣ್ಣನ್ನು ತಳ್ಳಿತು ಬೆಂಕಿಯ ದಾವಾಗ್ನಿಗೆ..!
ಮಗಳ ಕರಕಲು ದೇಹದ ಹೆಣ
ಮನೆಯವರ ಆಕ್ರಂದನ ಕೇಳಿಸಿಕೊಳ್ಳದ ಹಣ,
ಆಕ್ರಂದನದಿ ನರ್ತನಗೈವ ಹಣ,
ಎಂದೂ ನಿದ್ರಿಸದ ಕಾಂಚಾಣ..!

ಮೋಜು ಮದಿರೆಯ
ದಾಸ್ಯದಲ್ಲಿ ಯುವ ಜನತೆ,
ಕಂಟಪೂರ್ತಿ ಮದಿರೆ ಹೀರುವನೀತ,
ಎಳೆದೆಳೆದು ಬಿಡುವ
ಸಿಗರೇಟಿನ ಧೂಮ,
ಅಪ್ಪ ಕೂಡಿಟ್ಟ ಹಣವೆಲ್ಲ
ಧೂಮದಲ್ಲಿ ಹೋಮ,
ಪ್ರಿಯವಾದವು ಗಾಂಜಾ-ಅಫೀಮು,
ಇವುಗಳ ಚಟಕ್ಕೆ
ಅವನ ಜೀವವೇ ಇನಾಮು..!
ಮೋಜು ಮದಿರೆಯ ನಶೆಯಲ್ಲೂ
ನರ್ತನಗೈವ ಹಣ,
ಎಂದೂ ನಿದ್ರಿಸದ ಕಾಂಚಾಣ..!

- ಪ್ರಸಾದ್.ಡಿ.ವಿ.