ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Thursday, 27 December 2012

ಬಾರದಿರು ಸಖೀ




ಬಾರದಿರು ಸಖೀ
ಬಾರದಿರು!
ಇನ್ನೆಂದು ಕನಸಲ್ಲೂ
ಹಿಂದಿರುಗಿ ಬಾರದಿರು!
ಕನಸು ಕಂಡ ಕಣ್ಣೇ
ಕುರುಡಾಗಿಬಿಡಲಿ!
ನೀನು ಮಾತ್ರ
ಹಿಂದಿರುಗಿ ಬಾರದಿರು!

ಕಪ್ಪು ಬಿಳುಪಿನ
ಯಾನವಾದರೂ ಸರಿ,
ಹಿಂದೆಂದೋ
ಮುರಿದುಬಿದ್ದ
ಗುಡಿಯೊಳಗೆ
ಬುಡ್ಡಿ ದೀಪವನ್ನೂ
ಹಚ್ಚದಿರು!
ಸಹಿಸಲಾರೆನು,
ಅದು ನನ್ನಣಕಿಸಿ
ನಗುವ ಪರಿಯ!

!! ಬಾರದಿರು ಸಖೀ !!

ಯಾರಾದರೂ ಸರಿಯೇ
ನಿನ್ನೆದುರು ಸಿಕ್ಕಿ,
ನನ್ನನ್ನೇನಾದರೂ
ಕೇಳಿದರೆ, ಅದೋ
ಆ ಪಾಳುಬಿದ್ದ ಪಂಟಪದಡಿಯಲ್ಲಿ
ಅತ್ತು ಹಗೆದು, ಹೂಳು ಹೊದ್ದು
ಮಲಗಿರುವ
ಗೋರಿಯನ್ನೊಮ್ಮೆ
ತೋರಿಬಿಡು ಸಖೀ,
ತೋರಿಬಿಡು!
ಇನ್ನೆಂದೂ ಬಾಳಲ್ಲಿ
ಬಣ್ಣ ಹೊದ್ದು ಬದುಕಲಾರೆ,
ಬಾರದಿರು ಸಖೀ,
ಇನ್ನೆಂದೂ ಹಿಂದಿರುಗಿ ಬಾರದಿರು!

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಅಂತರ್ಜಾಲ

Wednesday, 12 December 2012

ಅರ್ಥವಾಗದ ಅವಳು, ತೇವವಾಗುವ ಅವನು!



ಅವನು
--------
ನನಗಿನ್ನೂ ಅರ್ಥವಾಗಿಲ್ಲ,
ಆಕೆ ನನ್ನಿಂದ
ದೂರಾದದ್ದಾದರೂ ಯಾಕೆಂದು?
ಅವಳಿಲ್ಲದ ದಿನಗಳಲಿ
ತೀರಿಲ್ಲದ ಬದುಕಲ್ಲಿ
ಉಳಿದದ್ದಾದರೂ ಏನೆಂದು?

ಆಕೆ ವಿಮುಖಳಾದಾಗಲೆಲ್ಲಾ
ಸಾಂತ್ವನ ಸುರಿದು,
ಕೈಯ್ಯಲ್ಲಿ ಕೈ ಹಿಡಿದು,
ಮಳೆಯಲ್ಲಿ ನೆನೆಯದಂತೆ,
ಎದೆಗವುಚಿಕೊಂಡದ್ದು!
ಅವಳು ಸುಮ್ಮನಿದ್ದು,
ನನ್ನನ್ನು ತಬ್ಬಿದ್ದು,
ಅಳುವಾಗಲೆಲ್ಲ ನನ್ನೆದೆಯೊಳಗೆ
ಮೊಗ ಉದುಗಿಸಿ ಬಿಕ್ಕಿದ್ದು ಯಾಕೆಂದು?
ಅರ್ಥವಾಗಲಿಲ್ಲ ನನಗೆ
ನೆನಪುಗಳೊಂದಿಗೆ ಒಬ್ಬಂಟಿ ಪಯಣ
ನನಗೊಬ್ಬನಿಗ್ಯಾಕೆಂದು?

ಅವಳು ನೋಡಲೆಂದೇ
ವಿಧ-ವಿಧದ ಕೇಶ ವಿನ್ಯಾಸ,
ಅವಳ ಮೆಚ್ಚಿಸಲೆಂದೇ
ಗಿಟ್ಟಿಸಿಕೊಂಡ ಉದ್ಯೋಗ,
ಅವಳಿಗಾಗಿ ಬದಲಿಸಿಕೊಂಡ
ಜೀವನ ಶೈಲಿ,
ಬಿಟ್ಟ ಸಿಗರೇಟು ಸೇವನೆ!
ನನ್ನ ಪ್ರೀತಿಯನ್ನು ಅವಳಿಗರ್ಥ
ಮಾಡಿಸಲು ಹೆಣಗಿದ್ದು!
ಇಷ್ಟೆಲ್ಲದರ ನಡುವೆ
ಅರ್ಥವಾಗಲಿಲ್ಲ ನನಗೆ,
ಆಕೆ ನನ್ನನ್ನು ಬಿಟ್ಟದ್ದು ಯಾಕೆಂದು?
ಅವಳ ಮದುವೆಗೆ ನನ್ನನ್ನು
ಬರಲೇ ಬೇಕೆಂದು
ಕರೆದದ್ದು ಯಾಕೆಂದು?

ಅವಳು
--------
ಅವನು ನನ್ನನ್ನು
ಪ್ರೀತಿಸಿದ್ದನೇನೋ ಹೌದು,
ನಾನೂ ಪ್ರೀತಿಸಿದ್ದಿರಬಹುದು,
ಆದರೆ ನಾನೆಂದು ಒಪ್ಪಿಲ್ಲ!
ಅದಕ್ಕಾಗೆ ಗೆಳೆಯ
ಎಂದಲ್ಲದೆ ಮತ್ತೇನೂ ಕರೆದಿಲ್ಲ!
ಆಗಾಗ ತಲೆ ಒರಗಿಸಿದ್ದುಂಟು,
ಅತ್ತು ಕರೆದದ್ದುಂಟು, ನಗುವ
ಬಯಸಿದ್ದುಂಟು!
ಹೊರಗೆ ಬೇಡವೆಂದರೂ,
ಒಳಗೊಳಗೇ ಬೇಕೆನಿಸಿದ್ದುಂಟು!
ಆದರೆ ಪೋಷಕರ ಮನವ
ನೋಯಿಸಲಾರೆ,
ಅವರ ಮಾನವ ಬೀದಿಗೆ ತಂದ
ಕೆಟ್ಟ ಮಗಳಾಗಲಾರೆ!
ಅವರಾದರೂ ಹೆತ್ತವರು,
ಹಾಳು ಬಾವಿಗೆ ತಳ್ಳಿಯಾರೇ?
ಜೋಪಾನ ಮಾಡಲೆಂದೇ
ಬಂದವನು ಅವನು,
ಅವನ ಜೀವನ ಸ್ಪರ್ಶದಿ
ಪುಳಕಿತಗೊಂಡೆನು!
ಅವನೊಲವಿಗೆ ಋಣಿಯೂ ನಾನು!
ಬದುಕ ಹೆಜ್ಜೆಯ ನಡುವೆ,
ಗೆಳೆಯನ ನೆನಪಿರಲೆಂದು
ಅವನನ್ನೂ ಕರೆದು ಬಂದೆ
ನನ್ನ ಮದುವೆಗೆ!

ನಾನು
---------
ಪ್ರೀತಿ ಪ್ರೇಮವೆಂಬ
ಈ ಕ್ಲಿಷ್ಟ ಎಳೆಗಳನು
ನಾ ವಿಮರ್ಶಿಸಿ
ಕೂರಲಾರೆ!
ಅವಳು - ಅವನಲ್ಲಿ
ಬೆರೆತ ನಮ್ಮನ್ನು
ನಾ ಹುಡುಕುತ್ತಿದ್ದೇನೆ!
ಅವಳು - ಅವನಲ್ಲಿ
ಬೆರೆತ ನಿಮ್ಮನ್ನೂ
ನಾ ಹುಡುಕುತ್ತಿದ್ದೇನೆ!

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

Saturday, 1 December 2012

ಕೈ ಬೀಸಿ ಕರೆದ ಕರ್ವಾಲೊ!



ನನಗೆ, ಒಬ್ಬ ಬರಹಗಾರ ಎಷ್ಟು ಸೃಜನಾತ್ಮಕವಾಗಿ ಯೋಚಿಸಬೇಕೆಂಬುದರ ದಿಕ್ಕಾದುದು ’ಕರ್ವಾಲೊ’. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರೇ ಹೇಳುವಂತೆ, ’ಸೃಷ್ಟಿಶೀಲ ಬರಹಗಾರ ಅನೇಕ ವೇಳೆ ತನ್ನ ಸಿದ್ಧಾಂತ, ತತ್ವ, ತರ್ಕ ಇತ್ಯಾದಿಗಳ ಇತಿಮಿತಿಗಳನ್ನು ತಿಳಿಯಲು ಅದನ್ನು ಅತಿರೇಖದ ಅಂಚಿನವರೆಗೆ ಒಯ್ಯಬೇಕಾಗುತ್ತದೆ. ಈ ರೀತಿ ತನ್ನ ಮಿತಿಯನ್ನು ಮೀರಿಯೇ ತನ್ನ ಸರಹದ್ದುಗಳನ್ನರಿಯಬೇಕಾದ ಅನಿವಾರ್ಯತೆ ಇರುವುದರಿಂದಲೇ ಎಲ್ಲಾ ಕಲಾಸೃಷ್ಟಿಯೂ ಅಪರಿಪೂರ್ಣತೆಯನ್ನು ಅನುಷಂಗಿಕವಾಗಿ ಒಳಗೊಂಡಿರುತ್ತದೆಂಬುದು ನನ್ನ ಭಾವನೆ’ ಎನ್ನುತ್ತಾರೆ. ಎಷ್ಟು ಸತ್ಯವಾದ ಮಾತು ಅಲ್ಲವೇ, ತನ್ನ ಸಿದ್ಧಾಂತ, ತತ್ವ ಮತ್ತು ತರ್ಕಗಳ ಪರಿಧಿಯನ್ನು ಅರಿಯುವ ಸೃಷ್ಟಿ ಅದಾಗಿದ್ದ ಮೇಲೆ ಅದರಲ್ಲಿ ಅನುಷಂಗಿಕವಾಗಿ ಅಪರಿಪೂರ್ಣತೆ ಸಹಜವೇ. ಇದು ಒಬ್ಬ ಬರಹಗಾರನ ದಿಕ್ಕನ್ನು ನಿರ್ದೇಶಿಸುವಷ್ಟು ಸತ್ವಯುತವಾದ ಪ್ರಸ್ತುತಿ ಎಂಬುದು ನನ್ನ ಭಾವನೆಯೂ ಹೌದು.

ಓದುವುದು ಕಡಿಮೆಯಾಗಿ ಬಹಳ ದಿನಗಳಾಗಿದ್ದವು. ಓದು ಎಂಬುದೂ ಮುಖ ಪುಸ್ತಕದ ಗೆಳೆಯರ ಬರಹಗಳಿಗೆ ಸೀಮಿತವಾಗಿತ್ತು. ನನ್ನ ಕಾಲೇಜಿನ ದಿನಗಳಲ್ಲಿ ಎಸ್.ಎಲ್.ಭೈರಪ್ಪ, ಜಿಎಸ್ಸೆಸ್, ಕುವೆಂಪು, ಎಂಡಮೂರಿ ಮತ್ತು ರವಿ ಬೆಳಗೆರೆಯವರನ್ನು ಖುಷಿಯಿಂದ ಓದುತ್ತಿದ್ದ ನಾನು, ಅದೇನೋ ಕೆಲಸ ಅಂತಾದ ಮೇಲೆ ಓದು ಕಡಿಮೆಯಾಯ್ತೆಂದೇ ಹೇಳಬೇಕು. ಇತ್ತೀಚೆಗೆ ಸುಮ್ಮನೆ ಎತ್ತಿಕೊಂಡ ಪುಸ್ತಕ ತೇಜಸ್ವಿಯವರ ’ಕರ್ವಾಲೊ’.

ಫಿಲಾಸಫಿ ಮತ್ತು ತತ್ವಶಾಸ್ತ್ರವನ್ನು ವಿಷಯವಾಗಿ ಆರಿಸಿಕೊಂಡು ಎಮ್.ಎ. ಪದವಿ ಮಾಡಿಕೊಂಡ ತೇಜಸ್ವಿಯವರಿಗೆ ಪ್ರಕೃತಿ ವೈಚಿತ್ರಗಳ ಬಗ್ಗೆ ಇಷ್ಟು ಮಟ್ಟಿಗಿನ ಒಳನೋಟ ಸಾಧ್ಯವಾದದ್ದಾದರೂ ಹೇಗೆ ಎಂಬುದು ನನ್ನನ್ನು ಕಾಡುವ ಪ್ರಶ್ನೆ. ಪ್ರಕೃತಿ ವೈಚಿತ್ರಗಳ ಬಗ್ಗೆ ನಮಗರಿವಿಲ್ಲದಂತೆ ಆಸಕ್ತಿ ಮೂಡಿಸಬಲ್ಲ ಕಾದಂಬರಿ ಕರ್ವಾಲೊ. ಕಥಾನಾಯಕ ಕರ್ವಾಲೊ, ಒಬ್ಬ ಸಸ್ಯ ವಿಜ್ಞಾನಿ ಮತ್ತು ಕೀಟ ಶಾಸ್ತ್ರಜ್ಞ. ನೀವು ಓದಿಕೊಂಡು ಹೋದಂತೆ ಅವರು ಒಂದು ನಿಗೂಢವೂ, ಒಬ್ಬ ತತ್ವ ಜ್ಞಾನಿಯೂ, ಮಾನವ, ಜೀವಿ ಮತ್ತು ಸಸ್ಯ ಸಂಕುಲಗಳ ಕೊಂಡಿಯಾಗಿಯೂ ಕಾಣುತ್ತಾರೆ. ಇನ್ನುಳಿದ ಪಾತ್ರಗಳು ಮಂದಣ್ಣ, ಕರಿಯಪ್ಪ, ಪ್ರಭಾಕರ, ಲೇಖಕರು ಮತ್ತು ಕಿವಿ. ಮಂದಣ್ಣ ಒಬ್ಬ ಹುಟ್ಟು ನಿಸರ್ಗ ತಜ್ಞ! ಮೊದಲಲ್ಲಿ ಅವನೊಬ್ಬ ಹೆಡ್ಡನಂತೆ ಕಂಡು ಬಂದರೂ ಎಲ್ಲರಲ್ಲಿಯೂ ಅಸಾಮಾನ್ಯವಾದುದ್ದೇನೋ ಇರುತ್ತದೆ ಎಂಬ ವಾದಕ್ಕೆ ಅನ್ವರ್ಥವಾಗಿ ನಿಲ್ಲುತ್ತಾನೆ. ಓದುಗರನ್ನು ಅಚ್ಚರಿಗೊಳಿಸುತ್ತಾನೆ. ಕರಿಯಪ್ಪ ಉದ್ದುದ್ದವಾದ ಮರಗಳನ್ನು ಹತ್ತುವ ಮತ್ತು ಮಾಂಸಾಹಾರಗಳನ್ನು ಹದವಾಗಿ ತಯಾರಿಸುವ ಬಾಣಸಿಗ! ಕಾದಂಬರಿಯ ಉದ್ದಕ್ಕೂ ಲವಲವಿಕೆ ಉಕ್ಕಿಸುತ್ತಾ, ನಗಿಸುತ್ತಾ ಓದಿಸುವುದು ಅವನ ಹೆಗ್ಗಳಿಕೆ! ಪ್ರಭಾಕರ ಒಬ್ಬ ಫೋಟೋಗ್ರಾಫರ್, ಪ್ರಕೃತಿಯ ವೈಚಿತ್ರಗಳನ್ನು ಸೆರೆ ಹಿಡಿಯಲು ಕರ್ವಾಲೊರವರೊಂದಿಗೆ ಇರುತ್ತಾನೆ. ಪ್ರಭಾಕರನ ಕ್ಯಾಮೆರಾದ ದೃಷ್ಟಿಕೋನಗಳನ್ನು ಕರ್ವಾಲೊ ಸೂಕ್ಷ್ಮಗೊಳಿಸಿರುವ ಕಾರಣದಿಂದಲೇ, ಅವನು ಅವರೊಂದಿಗೆ ಉಳಿದಿರುತ್ತಾನೆ ಅವರ ಸಂಶೋಧನೆಗಳಿಗೆ ಒತ್ತಾಸೆಯಾಗಿ.

ಇವೆಲ್ಲಾ ಪಾತ್ರಗಳನ್ನು ಒಂದು ತಹಬಂದಿಗೆ ತಂದು, ತಮ್ಮನ್ನೂ ನಿರೂಪಿಸಿಕೊಳ್ಳುವವರು ಲೇಖಕ. ಲೇಖಕ ಇಲ್ಲಿ ಒಬ್ಬ ಅಲೆಮಾರಿ ಮನೋಭಾವದ, ಮಾನವ ಸಹಜ ಭಾವಗಳನ್ನು ಹೊಂದಿರುವ, ಆರಕ್ಕೇರದ ಮೂರಕ್ಕಿಳಿಯದ ಬೇಸಾಯವನ್ನು ನೆಚ್ಚಿಕೊಂಡ ಕೃಷಿಕ. ಕೃಷಿಕರ ಕಷ್ಟಗಳು ಮತ್ತು ಅವರನುಭವಿಸುವ ತುಮುಲಗಳನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ತೇಜಸ್ವಿ. ಏಕತಾನತೆ ಬದುಕಿನ ಜಡ ಎಂದು ಭಾವಿಸುವ ಲೇಖಕ, ಈ ಕಷ್ಟಗಳ ಸರಮಾಲೆಯಲ್ಲಿ ಕೊಸರುತ್ತಾ ತನ್ನ ಜಮೀನನ್ನು ಮಾರಲು ಪ್ರಯತ್ನಿಸುತ್ತಾರೆ, ಮಾರುವುದಿಲ್ಲ! ಕೃಷಿಕನ ಕಷ್ಟದ ತೀವ್ರತೆ ಎಷ್ಟೆಂಬುದು ಓದುಗರ ಗಮನಕ್ಕೆ ಬರಲಿ ಎಂಬುದು ಲೇಖಕರ ಉದ್ದೇಶವಾಗಿತ್ತು ಎನಿಸುತ್ತದೆ! ಕಿವಿ ಲೇಖಕರ ಮನೆಯಲ್ಲಿ ಹುಟ್ಟಿ ಬೆಳೆದ ಸ್ಪ್ಯಾನಿಶ್ ನಾಯಿ, ಕಾದಂಬರಿಯ ಉದ್ದಕ್ಕೂ ಲೇಖಕರ ಅಪ್ತ ಮತ್ತು ಶಿಕಾರಿಯಲ್ಲಿ ಅವರಿಗೆ ಜೊತೆಗಾರ. ಇವೆಲ್ಲಾ ಪಾತ್ರಗಳನ್ನು ಕಾದಂಬರಿಯ ಹಂದರದೊಳಗೆ ಬಂಧಿಸಿರುವ ಅಪರೂಪದ ಪ್ರಾಣಿ, ದಶ-ದಶಮಾನಗಳ ಹಿಂದಿನ ’ಹಾರುವ ಓತಿ’. ಡೈನೋಸಾರ್ ನಂತೆ ಕಾಣಿಸಿಕೊಳ್ಳುವ ಅದು, ತನ್ನ ಪಕ್ಕೆಲುಬುಗಳ ಪಕ್ಕದಲ್ಲಿ ಪಾರದರ್ಶಕ ರೆಕ್ಕೆಗಳನ್ನು ಹೊಂದಿರುತ್ತದೆ ಎಂಬುದು ಕರ್ವಾಲೊ ರವರ ನಂಬಿಕೆ. ಮಂದಣ್ಣ ಹೇಳುವಂತೆ ಅದು ನಾರ್ವೆ ಹಳ್ಳಿಯ ಸುತ್ತ ಮುತ್ತಲ ಪಶ್ಚಿಮ ಘಟ್ಟಗಳ ದಟ್ಟ ಕಾನನದಲ್ಲಿ ಇರುವುದು ಎಂಬ ಮೂಲದ ಜಾಡು ಹಿಡಿದು ಹೋಗುವ ಇವರ ಗುಂಪಿಗೆ ಹಾರುವ ಓತಿ ಸಿಕ್ಕೀತೆ? ಇವರಿಗೆ ಜೀವಿ ವೈವಿಧ್ಯಗಳ ಒಳಸುರುಳಿಗಳನ್ನು ಬಿಚ್ಚಿಡಲು ಸಹಕರಿಸೀತೇ? ಎಂಬುದೇ ಕಾದಂಬರಿಯ ಹಂದರ.



ತೇಜಸ್ವಿಯವರ ಬರವಣಿಗೆಯ ಶೈಲಿ ತುಂಬಾ ಸಾಮಾನ್ಯವಾಗಿದ್ದು, ಯುವ ಬರಹಗಾರರಿಗೆ ಮಾದರಿಯಾಗಬಲ್ಲದು. ಅಧ್ಯಾತ್ಮ, ಧರ್ಮ, ಧ್ಯಾನಗಳಂತೆ ವಿಜ್ಞಾನ ಮತ್ತು ಜೀವಿ ವೈವಿಧ್ಯವೂ ಸಾಕ್ಷಾತ್ಕಾರದ ಹಾದಿ ಎಂಬುದನ್ನು ವೇಧ್ಯವಾಗಿಸುವ ಕಾದಂಬರಿ ಕರ್ವಾಲೊ. ಓದುಗರಿಗೆ ಜೀವ ವೈವಿಧ್ಯಗಳ ಬಗ್ಗೆ ಆಸಕ್ತಿಯಿದ್ದರಂತೂ ಕರ್ವಾಲೊ, ರಸದೌತಣ! ಎಲ್ಲರೂ ’ಕರ್ವಾಲೊ’ ವನ್ನು ಒಮ್ಮೆಯಾದರೂ ಓದಲೇ ಬೇಕು.

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

Thursday, 29 November 2012

ಅರಿಷಡ್ವರ್ಗಗಳ ಉರಿ



ಕಾರುತ್ತವೆ, ಉರಿಯುತ್ತವೆ,
ದೇಹವನ್ನೇ ದಹಿಸುತ್ತವೆ,
ನಿಗ್ರಹಿಸಿದವನು ಸಂತ,
ನಿಗ್ರಹಿಸದವಗವು ಸ್ವಂತ!
ಸೊಂಪಾದ ಬತ್ತಿಗೆ ಕಿಡಿಯಿಟ್ಟವನು
ಅವನೋ ಆಟವಾಡುತ್ತಾನೆ!
ಉರಿದವರು ಮಾತ್ರ ನಾವೇ!
ಅರಿಷಡ್ವರ್ಗಗಳ ಉರಿಗೆ!

ದಗದಗಿಸಿ ಉರಿದು
ಸ್ಖಲಿಸಿ ಉಗಿದದ್ದಷ್ಟೇ
ಪ್ರೇಮಕ್ಕೆ ಹಿಡಿಯಷ್ಟು ಮಣ್ಣು!
ಕಾಮಕ್ಕೆ ನೂರೆಂಟು ಕಣ್ಣು!
ಕ್ರೋಧದ ದಾವಾಗ್ನಿಗೆ
ಬೆಂದುಹೋಯಿತು ಕುರುವಂಶ
ಕಾರಿಕೊಂಡವನು ಸುಯೋಧನ
ಪಡೆದದ್ದು ಏನು?

ಶಕುನಿಯ ಕುಯುಕ್ತಿಗೆ
ಸುಯೋಧನನ ದಾಹ ಬೆಸೆತ!
ರಾಜ್ಯದಾಸೆಯ ಲೋಭಕ್ಕೆ
ಬರೆಸಿಕೊಂಡ ಭಾರತ!
ತಾರುಣ್ಯವತಿ ದ್ರೌಪದಿ,
ಏನ ಕಂಡನೋ ಕೀಚಕ!
ಮೋಹಕ್ಕೆ ಮತ್ತೊಂದು ಬಲಿ
ಬಲ ಭೀಮನ ಕೈಯ್ಯಲ್ಲಿ!

ಋಷಿಗಳ ಕೊರಳ್ ಹಿಡಿದು
ಗೋಪಿಕೆಯರ ಸೆರೆ ಹಿಡಿದ
ಅದಮ ನರಕನ ಬಲಿ ತೆಗೆದದ್ದು
ಮದ, ಭಾಮೆಯು ಸುಳಿಮದ್ದು!
ಶಕುನಿಯ ಮಾತ್ಸರ್ಯವು
ಕುರುಕ್ಷೇತ್ರಕೆ ಧಾಳ ಹೂಡಿ,
ಅವನಾದರೂ ಉಳಿದನೆ?
ಅವನೂ ಹಳಿದು ಹತನಾದವನೇ!

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

Monday, 26 November 2012

ಈ ಹೃದಯ ಹಾಡಿದೆ!



ನಲ್ಮೆಯ ಗೆಳತಿ,

ಇದೇನು ಕಾರಣವಿಲ್ಲದೆ ಪತ್ರ ಅನಾಮಧೇಯನಿಂದ, ಎಂದು ಬೇಸರಿಸದಿರು. ಹೆಸರು ನೋಡಿ ಎಸೆಯದಿರಲೆಂದೇ ಹೆಸರ ಮರೆ ಮಾಚಿದ್ದೇನೆ. ಪತ್ರ  ಓದುತ್ತಿದ್ದಂತೆ ಹೆಸರು ನಿನಗೇ ತಿಳಿಯುತ್ತದೆ ಎಂಬುದು ನನ್ನ ನಂಬಿಕೆ, ಮುದ್ದು ಬಂದರೆ ಮುದ್ದಿಸು ಸಾಕು! ಪ್ರೀತಿ ಹರಿವ ನೀರು ಅದನ್ನು ತಡೆವವರಾರು ಎಂದು ಹರಿದಿದ್ದೇ ನನ್ನ ತಪ್ಪಾಯ್ತು ಎನಿಸುತ್ತದೆ. ನೆನಪು ಉಡುಗೊರೆಯಾಯ್ತು, ವಿರಹ ಆಸರೆಯಾಯ್ತು, ಬರವಣಿಗೆಯೊಂದೇ ಆಸ್ತಿಯಾದದ್ದು!

ಬಸ್ ನಲ್ಲಿನ ಜೊತೆ ಪ್ರಯಾಣದೊಂದಿಗೆ ಮೊದಲ್ಗೊಂಡ ಸ್ನೇಹ, ಎದುರಿಗೆ ಸಿಕ್ಕಾಗ ಹೊರಬೀಳುತ್ತಿದ್ದ ಹಾಯ್-ಹಲೋಗಳು ಮತ್ತು ಕಣ್ಣೋಟಗಳಲ್ಲಿ ಪ್ರೀತಿಯಾಗಿ ಬೆಳೆಯುತ್ತಿದ್ದುದು ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ನಮ್ಮ ಪ್ರೀತಿಯಲ್ಲಿ ನನಗಿನ್ನೂ ಅರ್ಥವಾಗದ ಸಂಗತಿ ಎಂದರೆ ನಿರುಪದ್ರವಿಗಳು ನಾವು, ನಮ್ಮ ಪ್ರೀತಿಗೇ ಇಂತಹ ಅಡೆತಡೆಗಳು ಬರಬೇಕಾ? ನಿನ್ನ ನೆನಪಾದಾಗಲೆಲ್ಲಾ ಆ ವಿಧಿಯನ್ನು ಅದೆಷ್ಟು ಶಪಿಸಿದ್ದೇನೋ? ಆದರೆ ಅವನಿಗೆ ಮಾತ್ರ ಸ್ವಲ್ಪವೂ ತಟ್ಟಿದಂತೆ ಕಾಣುತ್ತಿಲ್ಲ!

ನಿನಗೆ ಕಾಡುತ್ತಿರಬಹುದು, ಒಂದೂವರೆ ವರ್ಷ ಒಂದೂ ಮಾತನಾಡದೆ ದೂರ ಉಳಿದವನು, ಹುಟ್ಟುಹಬ್ಬದಂದು ಶುಭಾಷಯ ತಿಳಿಸಲೂ ನೆನಪಿಸಿಕೊಳ್ಳದವನು ಈಗ್ಯಾಕೆ ಬಂದ ಎಂದು? ಎಲ್ಲದಕ್ಕೂ ಕಾರಣಗಳಿಲ್ಲವೆಂದಲ್ಲ ಆದರೆ ನಿನಗೆ ಆ ಕಾರಣಗಳನ್ನು ಹೇಳಲಾರೆ. ನಿನ್ನ ಜೀವನದ ಬಗ್ಗೆ ನನಗಿದ್ದ ಕಾಳಜಿ ನನ್ನನ್ನು ನನ್ನವೇ ಊಹೆಗಳಲ್ಲಿ ತಳ್ಳಿಬಿಟ್ಟಿತ್ತು. ನಿನ್ನ ನೆನಪಾದಗಾಲೆಲ್ಲ ನೀ ಕೈ ಹಿಡಿದು ನಡೆದ ಈ ಕೈಗಳನ್ನು ಎದೆಗೊತ್ತಿ ಮಲಗಿಬಿಡುತ್ತಿದ್ದೆ.

ಇಷ್ಟೆಲ್ಲಾ ಯೋಚಿಸಿದ ನಂತರ ನೀನು ಸಂತೋಷವಾಗಿರಬೇಕಾದರೆ ನಾನು ದೂರವಿರಬೇಕು ಎಂಬ ನಿರ್ಧಾರಕ್ಕೆ ನನ್ನ ಮನಸ್ಸು ಬಂದುಬಿಟ್ಟಿತ್ತು. ಆ ನಿರ್ಧಾರಕ್ಕೆ ಲಾಜಿಕ್ ಹುಡುಕಬೇಡ, ನನಗೂ ಇನ್ನೂ ಸಿಕ್ಕಿಲ್ಲ! ಒಂದೂವರೆ ವರ್ಷಗಳ ನಂತರ ಉಳಿದಿರುವ ಆ ಒಂದು ಸಾಲ ನನ್ನನ್ನು ಮತ್ತೆ ನಿನ್ನ ಮುಂದೆ ನಿಲ್ಲಿಸುತ್ತಿದೆ. 'ನೀನು ಚೆನ್ನಾಗಿರುವುದನ್ನು ನೋಡಲು ನಾನು ಯಾವ ನೋವಾದರೂ ಸಹಿಸುತ್ತೇನೆ' ಎಂದು ಬಂದ ನನ್ನ ಉದ್ವೇಗದ ಮಾತಿಗೆ ನಿನ್ನ ಕಣ್ಣುಗಳಲ್ಲಿ ಇಣುಕಿದ ಆ ಮುತ್ತು ಹನಿಗಳು ಅವುಗಳಲ್ಲಿನ ಪ್ರೀತಿ, ಆ ನಿನ್ನ ನೋಟ! ನನ್ನ ಜೀವನ ಪರ್ಯಂತ ನಿನ್ನ ಪ್ರೀತಿಸಿದರೂ ಸವೆಯದ ಸಾಲಗಾರನನ್ನಾಗಿ ಮಾಡಿವೆ. ಸಾಲಗಾರನಾಗಿ ಸಾಯಲಾರೆ! ದಯವಿಟ್ಟು ನನ್ನ ಪ್ರೀತಿಯನ್ನು ಮತ್ತೆ ಅಪ್ಪಿ ಮುದ್ದಿಸು ಗೆಳತಿ! ಜೀವದ ಪರ್ಯಂತ ಕಾವಲಿರುತ್ತೇನೆ.

ನಿನ್ನ ಸ್ನೇಹ, ನಿನ್ನ ಒಡನಾಟ, ನಿನ್ನ ನಗು, ಆ ನಿನ್ನ ಪುಟ್ಟ ಪುಟ್ಟ ಭಯಗಳು ನನ್ನನ್ನು ಈಗಲೂ ಕಾಡುತ್ತಿವೆ. ಉಸಿರು ಬಿಗಿ ಹಿಡಿದು, ನಿನ್ನ ಅಪ್ಪಿ ಲಾಲಿ ಹಾಡಬೇಕು ಎನ್ನಿಸುತ್ತದೆ. ಮಧ್ಯ ರಾತ್ರಿಯಲಿ ನೀನು ಮಗುವಂತೆ ನಿದ್ರಿಸುವುದನ್ನು ನೋಡಬೇಕೆನಿಸುತ್ತದೆ. ಬೆಳಗಿನ ಮುಂಜಾನೆಗೆ ನಿನ್ನ ಕಿವಿಯಲ್ಲಿ ಪಿಸುಗುಟ್ಟಿ ಎಬ್ಬಿಸಿದಂತೆ ಕನಸ್ಸು ಬೀಳುತ್ತದೆ. ಎಲ್ಲದಕ್ಕೂ ಕಾರಣ ಹುಡುಕುತ್ತಾ ಹೋದರೆ ಮತ್ತೆ ಮನಸ್ಸು ನಿನ್ನಲ್ಲಿಯೇ ಬಂದು ನಿಲ್ಲುತ್ತದೆ. ಉತ್ತರ ಹುಡುಕುವುದನ್ನು ನಿಲ್ಲಿಸುತ್ತೇನೆ, ದಾರಿದೀಪವಾಗಿ ನೀ ಬರುವೆಯಾ? ಪ್ರೀತಿಯ ಸೆಲೆ ಬತ್ತದಂತೆ ಕಾಯುವೆಯಾ?

ಇಂತಿ (ನಿನ್ನ) ಗೆಳೆಯಾ!


- ಪ್ರಸಾದ್.ಡಿ.ವಿ

ಈ ಪತ್ರವು ’ಕನ್ನಡ ಪ್ರಭ’ ದಲ್ಲಿ ಡಿಸೆಂಬರ್ ೨೨ರ ಬೈಟೂ ಕಾಫಿಯ ’ಮಕರಂದ’ ಆವೃತ್ತಿಯಲ್ಲಿ ಪ್ರಕಟಿತವಾಗಿದೆ.


ಚಿತ್ರ ಕೃಪೆ: ಅಂತರ್ಜಾಲ

Sunday, 11 November 2012

ಹಚ್ಚೋಣ ಹಣತೆಯನ್ನು


ಹಚ್ಚೋಣ ಹಣತೆಯನ್ನು,
ಹಾದಿಗೂ ಬೀದಿಗೂ,
ಓಣಿಗೂ ಕೋಣೆಗೂ,
ತಮವನ್ನು ತೊಡೆವ,
ದೂರದೃಷ್ಟಿಯ ಹಡೆವ,
ದಿವ್ಯಜ್ಯೋತಿಯ ದೀವಿಗೆಯನು!

ಹಚ್ಚೋಣ ಹಣತೆಯನ್ನು,
ಕೋಶ-ಕೋಶದೊಳಗೆ,
ಅಂತರಂಗನಾತ್ಮದೊಳಗೆ,
ತೋಮರದಿ ತಿವಿದು, ರಕುತವನೇ ಬಸಿದ
ಮಾನವನ ಮನಶ್ಶುದ್ಧಿಗೆ
ಜ್ಞಾನಜ್ಯೋತಿಯ ದೀವಿಗೆಯನು!

ಹಚ್ಚೋಣ ಹಣತೆಯನ್ನು,
ಅಂಧತೆಯ ನೆರಳೊಳಗೂ,
ನೋಡಲಿ ನಮ್ಮ ಕಣ್ಣು,
ಸೇರಿದ ಮೇಲೂ ಈ ದೇಹ
ಭೂದೇವಿಯ ಮಣ್ಣು,
ಹಚ್ಚೋಣ ಬನ್ನಿರೈ ಬನ್ನಿ
ತೇಜೋರೂಪಿ ದೀಪ್ತಿಯನ್ನು!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Saturday, 3 November 2012

ಉಚ್ಛ್ವಾಸ-ನಿಶ್ವಾಸದೊಳಗೆ


ಉಸಿರಾಟದಿ ಒಳ ಸೇರಿ
ಶ್ವಾಸ ನಾಳದೊಳಿಳಿದು
ದೇಹ ಸೇರಿದ ಪ್ರಾಣವಾಯು,
ಹೊರಗೆ ಹಾರಿದಿಂಗಾಲದನಿಲ,
ಊದಿಕೊಂಡಿತ್ತು ಶ್ವಾಸನಾಳ!
ಉಚ್ಛ್ವಾಸ-ನಿಶ್ವಾಸಗಳಿವು,
ಜೀವದಲ್ಲಷ್ಟೆ ಅರಳುವವು!

ದೇಹದಲ್ಲಿ ಪ್ರಾಣವಾಯುವನ್ನು
ಬೆರೆಸಲೆಂದೇ ಹೃದಯ ತಾ ಬಡಿಯುತ್ತದೆ!
ರಕ್ತದೊಳ ಪ್ರಾಣವಾಯು
ದೇಹದಣುವಣುವನ್ನೂ ಸೇರಿದರೆ ಲಬ್!
ಇಂಗಾಲದನಿಲ ಹೊತ್ತುತರುವಾಗ ಡಬ್!
ಹೃದಯದ ಕವಾಟಗಳವು
ಮುಚ್ಚಿಕೊಂಡು ಬಿಚ್ಚಿಕೊಳ್ಳುವವು!

ಜೀವವಿಲ್ಲದೆ ಬರಿಯ ಬೂದಿಯೂ
ಮಾನವನ ದೇಹವಿದು,
ದೇಹಕ್ಕೆ ಜೀವ ತುಂಬಿ,
ಅದರೊಳಗೆ ಆತ್ಮನಿರಿಸಿ,
ತಾನೂ ಒಳ ಸೇರಿಬಿಟ್ಟ ಅವನು!
ಜಪಿಸುತ್ತೇನೆ ಕೃಷ್ಣಾರ್ಪಣಂ
ಪ್ರತಿಯೊಂದು ಉಚ್ಛ್ವಾಸ ನಿಶ್ವಾಸದೊಳಗೆ!

- ಪ್ರಸಾದ್.ಡಿ.ವಿ.