ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Saturday, 4 May 2013

ಸರಗೂರಿನ ಗುಮಾಸ್ತ!




ಸರಗೂರು ಎಂಬುದು ಪಟ್ಟಣಕ್ಕೆ ಪಟ್ಟಣವೂ ಅಲ್ಲದ, ಹಳ್ಳಿಗೆ ಹಳ್ಳಿಯೂ ಅಲ್ಲದ ಅವುಗಳೆರಡರ ಮಧ್ಯ ಇರುವ ಸಣ್ಣದೂ ಅಲ್ಲದ, ದೊಡ್ಡದೂ ಅಲ್ಲದ ಒಂದು ಊರು. ಸರಗೂರಿಗೆ ಆ ಹೆಸರು ಬಂದ ಬಗ್ಗೆ ಸಾಕಷ್ಟು ಕಥೆಗಳೂ, ಉಪಕಥೆಗಳೂ ಹುಟ್ಟಿಕೊಂಡಿದ್ದವು ಮತ್ತು ಅವುಗಳು ಅಲ್ಲಲ್ಲಿ ಪ್ರಚಲಿತದಲ್ಲಿಯೂ ಇದ್ದವು. ಅವುಗಳಲ್ಲಿ ಹಾವಿಗೆ ಸಂಬಂಧಪಟ್ಟಂಥ ಉಪಕಥೆಯೂ ಒಂದು. ’ಸರಗೂರಿನಲ್ಲಿ ಹಾವುಗಳ ಸಂಖ್ಯೆ ಅತ್ಯಧಿಕವಾಗಿತ್ತಂತೆ. ಅದು ಎಷ್ಟರಮಟ್ಟಿಗೆ ಎಂದರೆ ಆ ಊರಿನಲ್ಲಿದ್ದ ಜನರಿಗೂ, ಸರ್ಪಗಳಿಗೂ ಜನಗಣತಿಯನ್ನೂ, ಸರ್ಪಗಣತಿಯನ್ನೂ ಏರ್ಪಡಿಸಿದ್ದರೆ ಸರ್ಪಗಳ ಸಂಖ್ಯೆಯೇ ಅಧಿಕವಾಗಿ ಹಾವುಗಳೂ ತಮ್ಮ ಮೂಲಭೂತ ಹಕ್ಕುಗಳಾದ ತಮ್ಮ ಪ್ರತಿನಿಧಿಯನ್ನು ತಾವೇ ಚುನಾಯಿಸಿಕೊಳ್ಳುವ ಮತದಾನದ ಹಕ್ಕು, ದಿನವೂ ಹೊಟ್ಟೆ ತುಂಬುವಷ್ಟು ಮೊಟ್ಟೆಗಳು ಮತ್ತು ಅವುಗಳಿಗೇ ಪ್ರತ್ಯೇಕ ವಾಸಸ್ಥಳಗಳನ್ನು ಕೇಳಬಹುದೆಂಬ ಭಯ ಅಲ್ಲಿನ ಜನಪ್ರತಿನಿಧಿಗಳಲ್ಲಿ ಮನೆ ಮಾಡಿತ್ತಂತೆ! ಆ ರೀತಿಯ ಒಂದು ಸನ್ನಿವೇಶ ಸೃಷ್ಠಿಯಾದದ್ದೇ ಆದಲ್ಲಿ ಆ ಊರಿನಲ್ಲಿ ಅಲ್ಪಸಂಖ್ಯಾತರಾಗುವವರಿದ್ದ ಜನರು ಸರ್ಪಗಳಿಂದ ಆಳಿಸಿಕೊಳ್ಳುವುದೂ, ನಿರ್ಗತಿಕರಾಗುವ ಆಪಾಯವೂ ಇತ್ತಂತೆ. ಹೀಗೆ ಜನರನ್ನೇ ಅಲ್ಪಸಂಖ್ಯಾತರನ್ನಾಗಿ ಮಾಡಿದ್ದ ಹಾವುಗಳು ತಾವು ಹರಿದಾಡುವಾಗ ಸರ ಸರ ಎಂದೂ, ಜನರು ಗರ ಗರ ಎಂದೂ ಸುತ್ತುತ್ತಿದ್ದರಂತೆ. ಸರ ಗರ ಎಂದು ಸರಿದಾಡುವ ಸರ್ಪಗಳು ಮತ್ತು ಜನಗಳ ಊರು ಎಂಬ ಹೆಸರು ಕಾಲಕ್ರಮೇಣ ಹ್ರಸ್ವಗೊಂಡು ಸರಗೂರು ಎಂದಾಯ್ತಂತೆ. ಕಾಲಕ್ರಮೇಣ ಸರ್ಪಗಳು ಹೇಗೋ ಅವಶೇಷ ಹೊಂದಿದವಂತೆ! ಎಂಬುದೂ ಅಲ್ಲಲ್ಲಿ ಜನಜನಿತವಾದ ಕಥೆಯಾಗಿದೆ’.

ಇಂತಿಪ್ಪ ಸರಗೂರು ಎಂಬ ಊರು ಹೆಚ್ಚಲ್ಲದಿದ್ದರೂ ಒಂದಷ್ಟು ಅಭಿವೃದ್ಧಿ ಕಂಡು ಬಸ್ ವ್ಯವಸ್ಥೆಯನ್ನೂ, ಕೇಳುವವರೇ ದಿಕ್ಕಿಲ್ಲದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೂ, ಆಗ ತಾನೇ ಅನುಮತಿ ಸಿಕ್ಕಿದ ಸರ್ಕಾರಿ ಶಾಲೆಯನ್ನೂ ಹೊಂದಿತ್ತು. ಆ ಸರ್ಕಾರಿ ಶಾಲೆಯಲ್ಲಿ ಬಹಳಷ್ಟಲ್ಲದಿದ್ದರೂ ಒಂದಷ್ಟು ವಿದ್ಯಾರ್ಥಿಗಳಿದ್ದರು ಮತ್ತು ಶಿಕ್ಷಕರೂ ಇದ್ದರು, ಒಂದರಿಂದ ಹತ್ತನೇ ತರಗತಿಯವರೆಗೂ ಪಾಠ ಪ್ರವಚನಗಳು ನಡೆಯುತ್ತಿದ್ದವಂತೆ ಎಂಬುದು ಖುದ್ದು ನೋಡದವರ ಉವಾಚ! ಇಂಥ ಶಾಲೆಗೆ ಗುಮಾಸ್ತನಾಗಿ ಬಂದವನೇ ಮಾದೇವ. ಮಾದೇವ ಮಧ್ಯ ವಯಸ್ಕನಾಗಿದ್ದು. ಸರಿಯಾದ ಸೂರಿಲ್ಲದ ಸರಗೂರಿನ ಶಾಲೆಯ ಗುಮಾಸ್ತನಾಗಿ ನೇಮಕಗೊಂಡಿದ್ದನ್ನೇ ಒಂದು ವೃತ್ತಾಂತವಾಗಿ ಬರೆಯಬಹುದು! ಆತ ಇದಕ್ಕೆ ಮೊದಲು ಪುರಾತತ್ವ ಇಲಾಖೆ, ಮೈಸೂರು ಮುನ್ಸಿಪಾಲಿಟಿ, ಮೂಡಾ, ಕಾಡ ಹೀಗೆ ಸಾಕಷ್ಟು ಸರ್ಕಾರಿ ಇಲಾಖೆಗಳಲ್ಲಿ ಅರೆಕಾಲಿಕ ಗುಮಾಸ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದವನು. ಅರೆಕಾಲಿಕ ಹುದ್ದೆಯ ಅರೆಗಂಜಿ ಮತ್ತು ಅರೆ ಹೊಟ್ಟೆಯ ತಾಪದ ಅರಿವಿದ್ದ ಮಾದೇವ, ಸರಗೂರಿನ ಸರ್ಕಾರಿ ಶಾಲೆಯ ಗುಮಾಸ್ತನ ಹುದ್ದೆ ಖಾಯಂ ಆಗಬಹುದೆಂಬ ಆಸೆಯಿಂದ ತನ್ನೂರೇ ಆದ ಸರಗೂರಿಗೆ ಬಂದು ನೆಲೆಸಿದ್ದನು. ಸರ್ಪಗಳ ಶಾಪ ಹೊತ್ತಿದ್ದ ಸರಗೂರನ್ನು ಯಾರೂ ಅಪ್ಪದಿದ್ದ ಕಾರಣ, ಅದೇ ಊರಿನ ಓದಿದ ವಿದ್ಯಾವಂತರೂ ಅಲ್ಲಿ ನೆಲೆ ನಿಲ್ಲಲು ಇಚ್ಛಿಸದ ಕಾರಣ ಆ ಗುಮಾಸ್ತನ ಕೆಲಸ ಯಾವುದೇ ದೊಡ್ದ ಆತಂಕಗಳಿಲ್ಲದೆ ಮಾದೇವನಿಗೆ ಒಲಿದಿತ್ತು. ಆ ಶಾಲಾ ಸಮಿತಿಯ ಕಾರ್ಯಾಧ್ಯಕ್ಷ ಸಣ್ಣಪ್ಪನ ಸಣ್ಣ ಇರುಸು ಮುರುಸನ್ನು ಹೊರತುಪಡಿಸಿ!

ಸಣ್ಣಪ್ಪನ ಈ ಇರುಸು ಮುರುಸಿಗೆ ಕಾರಣವಿಲ್ಲದೇನಿಲ್ಲ. ಸರ್ಕಾರದ ಸಾಕಷ್ಟು ಇಲಾಖೆಗಳಲ್ಲಿ ಸುಮಾರು ಹನ್ನೆರಡು ವರ್ಷಗಳಷ್ಟು ಮಣ್ಣು ಹೊತ್ತಿದ್ದ ಮಾದೇವನಿಗೆ ಸರ್ಕಾರದಿಂದ ಸಿಗುತ್ತಿದ್ದ ಸವಲತ್ತುಗಳು ಮತ್ತು ಅನುದಾನಗಳ ಬಗ್ಗೆ ಒಂದಷ್ಟು ಅರಿವಿತ್ತು. ತನ್ನೂರಿನಿಂದ ಯಾವುದೇ ವ್ಯಕ್ತಿ ಆ ರೀತಿಯ ಫಲಾನುದಾನಕ್ಕೆ ಅರ್ಹನಾಗಿದ್ದು ಮತ್ತು ಅವನು ಮಾದೇವನ ಬಳಿಗೆ ಹೋದರೆ. ಮಾದೇವ ಆತನಿಂದ ಯಾವುದೇ ಪ್ರತಿಫಲಾಪೇಕ್ಷೆಯನ್ನೂ ಬಯಸದೆ ಅವನಿಗೆ ಅರ್ಜಿ ಬರೆದುಕೊಟ್ಟು ಹೇಗೆ ಕೆಲಸ ಮಾಡಿಸಿಕೊಳ್ಳಬೇಕೆಂಬ ಅರಿವು ನೀಡಿ ಸಹಕರಿಸುತ್ತಿದ್ದನು ಮತ್ತು ಅರ್ಹನಾಗಿದ್ದೂ ಅನುದಾನ ಸಿಗಲಿಲ್ಲವಾದ ಪಕ್ಷದಲ್ಲಿ ಸಂಬಂಧಪಟ್ಟ ಇಲಾಖೆಗೆ ಮೂಗರ್ಜಿ ಗುಜರಾಯಿಸಿ, ಆ ಕೆಲಸ ಆಗುವವರೆಗೂ ಮಲಗುತ್ತಿರಲಿಲ್ಲ! ಇದರಿಂದಲೇ ಅವನಿಗೆ ಮೂಗರ್ಜಿ ಮಾದೇವ ಎಂಬ ಅನ್ವರ್ಥ ನಾಮವೂ ತಗಲಿಸಿಕೊಂಡಂತಿತ್ತು! ಇಂಥ ಉದಾತ್ತ ಗುಣಗಳಿಂದಲೇ ಅರೆಕಾಲಿಕ ಕೆಲಸದಲ್ಲಿದ್ದ ಮಾದೇವನ ಹೊಟ್ಟೆಯೂ ಅರೆಬರೆಯಾಗಿಯೇ ಇರುತ್ತಿತ್ತು! ತನ್ನ ಈ ರೀತಿಯ ವೃತ್ತಿಯಲ್ಲದ ಕೆಲಸಗಳೂ ಕೆಲವರಿಗೆ ರೊಟ್ಟಿ ಗಿಟ್ಟಿಸಬಲ್ಲವು ಎಂಬುದು ಮಾದೇವನಿಗೆ ಗೊತ್ತಿರಲಿಲ್ಲವೋ ಅಥವಾ ಆ ರೀತಿಯ ಕೆಲಸಗಳ ಮೂಲಕ ಹಣ ಗಳಿಸಲು ಪ್ರಯತ್ನಿಸಿದ್ದರೆ ಕೈಯ್ಯಲ್ಲಿದ್ದ ಅರೆಕಾಲಿಕ ಕೆಲಸವೂ ಕೈಬಿಡಬಹುದೆಂಬ ಭಯದಿಂದಲೋ ಅವುಗಳಿಂದ ಬಾಹ್ಯವಾಗಿ ಗಳಿಸಿಕೊಳ್ಳಬಹುದಾದ ಪಗಾರಕ್ಕೆ ಆತ ಆಸೆ ಪಡುತ್ತಿರಲಿಲ್ಲ. ಇಂತಿದ್ದ ಮಾದೇವ ತನ್ನ ಸಹಾಯದಿಂದ ಯಾರಿಗಾದರೂ ಕೆಲಸವಾದದ್ದು ತಿಳಿದರೆ, “ಮನುಷ್ಯ ಏನ್ಬೇಕಾದ್ರೂ ಮಾಡಿ ಹೊಟ್ಟೆ ತುಂಬುಸ್ಕೊಳ್ಳಲಿ ಆದರೆ ಒಬ್ಬರ ಮುಂದೆ ಕೈಯ್ಯೊಡ್ಡುವುದು ಮತ್ತು ತಲೆ ಹೊಡೆಯುವುದು ಮಾತ್ರ ಮಾಡಬಾರ್ದು. ಚೆನ್ನಾಗಿ ಬದ್ಕಿ ಬಾಳು…” ಎಂದು ಹರಸಿ ಕಳುಹಿಸುತ್ತಿದ್ದನು. ಇವನ ಈ ವೃತ್ತಾಂತವೆಲ್ಲಾ ಗೊತ್ತಿದ್ದ ಸಣ್ಣಪ್ಪನಿಗೆ, ಈ ಮಾದೇವನೇ ನಮ್ಮ ಶಾಲೆಗೆ ಗುಮಾಸ್ತನಾಗಿ ಬಂದರೆ ತಾನು ಅಲ್ಲಿನ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷನೆಂದುಕೊಂಡು ಮಾಡುತ್ತಿರುವ ಅನಾಚಾರಗಳ ಬಗ್ಗೆ ಯಾವುದಾದರೂ ಇಲಾಖೆಗೆ ಮೂಗರ್ಜಿ ಬರೆದುಬಿಟ್ಟರೆ ತನ್ನ ಇಮೇಜೆಲ್ಲಾ ಹಾಳಾಗಿ, ತಾನು ಪದವಿ ಭ್ರಷ್ಟನಾಗಿಬಿಡಬಹುದೆಂಬ ಆತಂಕ ಕಾಡುತ್ತಿತ್ತು! ಇಷ್ಟಲ್ಲದೆ ಅವರಿಬ್ಬರ ಕುಟುಂಬಗಳ ನಡುವೆ ಒಂದಷ್ಟು ಹಳೆ ವೈಷಮ್ಯವೂ ಇತ್ತು!

ಮೊದಲೇ ಸರ್ಪಗಳ ಊರಿನವರಲ್ಲವೇ ವೈರವನ್ನೂ ಕೊರಳಿಗೇ ಕಟ್ಟಿಕೊಂಡು ಸುತ್ತುವವರು. ಸಣ್ಣಪ್ಪನ ಇರುಸು ಮುರುಸು ಎಷ್ಟಿತ್ತಪ್ಪ ಅಂದ್ರೆ ಆ ಇರುಸು ಮುರುಸು ದ್ವೇಷವಾಗಿ, ಅವನನ್ನು ಹೇಗಾದರೂ ಮಾಡಿ ಕೆಲಸದಿಂದ ಹೊರದಬ್ಬಬೇಕೆಂದು ಹವಣಿಕೆ ಶುರುವಿಟ್ಟುಕೊಂಡಿದ್ದನು. ಇಂಥ ಪ್ರತಿಕೂಲ ಪರಿಸ್ಥಿತಿಗಳ ನಡುವೆ ಗುಮಾಸ್ತನಾಗಿ ಬಂದ ಮಾದೇವನಿಗೆ ಅದ್ಯಾವುದರ ಪರಿವೆಯೂ ಇರಲಿಲ್ಲ. ಖಾಯಂ ಕೆಲಸ ಸಿಕ್ಕ ಬಗ್ಗೆ ಖುಷಿಯಿತ್ತು. ತಾನಾಯ್ತು ತನ್ನ ಲೆಡ್ಜರ್ ಗಳು, ಮಕ್ಕಳ ಅಡ್ಮಿಶನ್ ರೆಕಾರ್ಡ್ಸ್’ಗಳು, ಎಲ್ಲಾ ಶಿಕ್ಷಕರ ಸ್ಯಾಲರಿ ಸ್ಲಿಪ್ಗಳು, ಇನ್ಕಂ ಟ್ಯಾಕ್ಸ್ ರೆಕಾರ್ಡ್ಸ್’ಗಳು ಮತ್ತು ಮುಂತಾದ ಕೆಲಸಗಳಾಯ್ತು ಎಂದು ಇದ್ದುಬಿಡುತ್ತಿದ್ದನು. ಜೊತೆ ಜೊತೆಯಲ್ಲಿಯೇ ಮೂಗರ್ಜಿಗಳು ಮತ್ತು ಸರ್ಕಾರಿ ಅರ್ಜಿಗಳನ್ನು ಬರೆದುಕೊಡುವ ಮುಖೇನ ತನ್ನ ಸಮಾಜಸೇವೆಯನ್ನೂ ಮುಂದುವರೆಸುತ್ತಿದ್ದನು! ಅವನ ಈ ಸಮಾಜಸೇವೆಯಿಂದ ಒಳಗೊಳಗೆ ಕುದಿಯುತ್ತಿದ್ದ ಸಣ್ಣಪ್ಪ ಮಾದೇವನ ಪ್ರತಿಯೊಂದು ಕೆಲಸದಲ್ಲೂ ಕೊಂಕು ಹುಡುಕಿ ಕಟಕಿಯಾಡುತ್ತಿದ್ದನು. ಎಷ್ಟಿದ್ರೂ ಅಧಿಕಾರದಲ್ಲಿರುವವನು ಒಂದು ಮಾತು ಹೆಚ್ಚಿಗೆ ಆಡಿದ್ರೆ ಪರ್ವಾಗಿಲ್ಲ ಬಿಡು ಅಂತ ಸುಮ್ಮನಾಗಿ ಬಿಡುತ್ತಿದ್ದನು ಮಾದೇವ.

ಒಮ್ಮೆ ಮಾದೇವನ ನಾದಿನಿಗೆ ಹೆರಿಗೆ ನೋವು ಬಂದು ಆಸ್ಪತ್ರೆಗೆ ಸೇರಿಸಬೇಕಿತ್ತು, ತಮ್ಮಾ ಊರಿನಲ್ಲಿರದಿದ್ದ ಕಾರಣ ಮಾದೇವನೇ ಹೆಡ್ಮಾಸ್ಟರ್’ರಿಂದ ಅನುಮತಿ ಪಡೆದು ಶಾಲೆಯಿಂದ ಬೇಗ ಹೊರಟುಬಿಡುತ್ತಾನೆ. ಅವನ ಗ್ರಹಚಾರವೋ ಏನೋ ಎಂಬಂತೆ ಶಿಕ್ಷಣಾ ಇಲಾಖೆಯವರು ಅಂದೇ ಇನ್ಸ್’ಪೆಕ್ಶನ್’ಗೆ ಬರುತ್ತಾರೆ. ಆ ತಾಲ್ಲೂಕು ಶಿಕ್ಷಣಾಧಿಕಾರಿಯೋ ಮಹಾನ್ ಕೋಪಿಷ್ಠ! ಅವನ ಉಗ್ರ ನರಸಿಂಹಾವತಾರಕ್ಕೆ ಹೆದರಿದ ಹೆಡ್ಮೇಷ್ಟ್ರು ಮಾದೇವ ತನ್ನ ಅನುಮತಿಯಿಲ್ಲದೆ ಶಾಲೆಯಿಂದ ಹೊರಟುಹೋಗಿದ್ದಾನೆ ಎಂದುಬಿಡುತ್ತಾನೆ. ಸರಿಯಾದ ಅವಕಾಶಕ್ಕಾಗಿ ಕಾಯುತ್ತಿದ್ದ ಸಣ್ಣಪ್ಪ ಅಲ್ಲಿಂದ ತನ್ನ ಪ್ರಭಾವ ಬೀರಿ ಮಾದೇವನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಸಿದ. ಮಾದೇವ ಮೈಂಟೇನ್ ಮಾಡುತ್ತಿದ್ದ ಶಾಲಾ ದಾಖಲೆಗಳಾವುವೂ ಸರಿಯಾಗಿಲ್ಲವೆಂದೂ, ಅವುಗಳನ್ನು ತನ್ನಿಚ್ಛೆಯಂತೆ ಮಾಡುತ್ತಾನೆಂದೂ, ತನಗಿಷ್ಟ ಬಂದಾಗ ಶಾಲೆಗೆ ಬರುವುದು, ಹೋಗುವುದು ಮಾಡುತ್ತಾನೆಂದೂ ಪುಕಾರೆಬ್ಬಿಸಿದನು! ಇದನ್ನೆಲ್ಲಾ ಕೇಳಿ ಕುಪಿತಗೊಂಡ ಬಿ.ಈ.ಓ ಮಾದೇವನ ಕರ್ತವ್ಯ ಲೋಪದ ಬಗ್ಗೆ ಸಮಜಾಯಿಷಿ ಕೊಡುವಂತೆ ವಾರ್ನಿಂಗ್ ಲೆಟರ್ ಇಶ್ಯೂ ಮಾಡುತ್ತಾರೆ. ಹೊಗುವ ಮುನ್ನ ಒಂದು ಸಣ್ಣ ಬಾಂಬ್ ಸಿಡಿಸಿ ಹೋಗುತ್ತಾರೆ, “ಇನ್ನು ಮುಂದಿನ ಶಾಲೆಯ ಎಲ್ಲಾ ಕಡತಗಳು ಮತ್ತು ದಾಖಲೆಗಳನ್ನು ಕಂಪ್ಯೂಟರೀಕರಣ ಮಾಡಬೇಕೆಂದು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಿದೆ, ಆದ್ದರಿಂದ ಶಾಲೆಯ ದಾಖಲೆಗಳನ್ನು ನೋಡಿಕೊಳ್ಳುವ ಗುಮಾಸ್ತನಿಗೆ ಕಂಪ್ಯೂಟರ್ ಜ್ಞಾನ ಕಡ್ಡಾಯ. ಆದ್ದರಿಂದ ಮಾದೇವನಿಗೆ ಕಂಪ್ಯೂಟರ್ ಜ್ಞಾನ ತೆಗೆದುಕೊಳ್ಳಲು ಹೇಳಿ, ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಲು ಹೇಳಿ” ಎಂದುಬಿಟ್ಟರು.

ನಾದಿನಿಯ ಆರೈಕೆಯಲ್ಲಿ ಅಂದು ಮಾದೇವ ಶಾಲೆಗೆ ಬರಲಾಗಲೇ ಇಲ್ಲ. ನಾಳೆಯ ದಿನ ಶಾಲೆಗೆ ಸ್ವಲ್ಪ ತಡವಾಗಿ ಬಂದವನನ್ನು ಸ್ವಾಗತಿಸುತ್ತಿದ್ದುದು ಅವನ ಟೇಬಲ್ ಮೇಲಿದ್ದ ಕರ್ತವ್ಯ ಲೋಪದ ಛೀಮಾರಿ ಪತ್ರ. ಅವನಿಗೆ ಎಲ್ಲಿಲ್ಲದ ವ್ಯಥೆಯಾಯ್ತು, ತಾನು ಎಷ್ಟೇ ನಿಷ್ಠನಾಗಿ ಕೆಲಸ ಮಾಡಿಕೊಂಡಿದ್ದರೂ ತನ್ನ ಕೈಮೀರಿ ಹೀಗೆಲ್ಲಾ ನಡೆಯುತ್ತಿದೆಯಲ್ಲಾ ಎಂಬ ಕೊರಗು ಅವನ ಹೃದಯವನ್ನು ಹಿಂಡುತ್ತಿತ್ತು. ಅರೆಕಾಲಿಕ ಗುಮಾಸ್ತನಾಗಿದ್ದಾಗಿನ ನೆಮ್ಮದಿಯೂ ಈಗ ಇಲ್ಲವಲ್ಲ ಎಂಬುದು ಅವನನ್ನು ಬಹಳವಾಗಿ ಬಾದಿಸುತ್ತಿತ್ತು. ಶಾಲೆಯ ಜವಾನ ಮುನಿಯಾ, ನೆನ್ನೆ ನಡೆದ ಪ್ರಹಸನವನ್ನು ಚಾಚೂ ತಪ್ಪದೆ ವಿವರಿಸಿದಾಗ ಉರಿಯುತ್ತಿದ್ದ ದುಃಖದ ದಾವಾಗ್ನಿಗೆ ತುಪ್ಪ ಸುರಿದಂತಾಯ್ತು! ತನ್ನ ಅಸಹಾಯಕತೆ ಗೊತ್ತಿದ್ದೂ ತನ್ನ ಪರ ನಿಲ್ಲದಿದ್ದ ಹೆಡ್ಮಾಸ್ಟರ್’ರ ಬಗ್ಗೆ ಬೇಸರವಾಯ್ತು. ಆ ವಿಷಯ ತಿಳಿದ ನಂತರ ಎಷ್ಟೇ ಪ್ರಯತ್ನಪಟ್ಟರೂ ಮಾದೇವನಿಗೆ ಕೆಲಸದಲ್ಲಿ ತೊಡಗಿಸಿಕೊಳ್ಳಲಾಗಲಿಲ್ಲ. ಕಡೆಗೆ ಹೊರಗೆ ಹೋಗಿ ಒಂದು ಸಿಗರೇಟು ಸೇದಿ ಬಂದರೆ ಸರಿಯಾಗಬಹುದೆಂದು ಹೊರಗೆ ಬಂದನು. ಅದೇ ಸಮಯಕ್ಕೆ ಶಾಲೆಯ ಆವರಣದೊಳಕ್ಕೆ ಬರುತ್ತಿದ್ದ ಸಣ್ಣಪ್ಪ,

"ಏನೋ ಮಾದೇವ ಶಾಲೆಗೆ ಹೊತ್ತಲ್ಲದ್ ಹೊತ್ತಲ್ಲಿ ಬರೋದು, ಹೋಗೋದಲ್ದೇ ಶಾಲೇಲಿದ್ದಾಗ್ಲೂ ನೆಟ್ಟಗೆ ಕೆಲ್ಸ ಮಾಡ್ದೆ ಹೀಗೆ ಕಾಲ ಕಳೀತಿಯಲ್ಲಾ?" ಎಂದು ಚುಚ್ಚಿದನು.

ಅಲ್ಲಿಯವರೆಗೂ ಮನಸ್ಸಿಗೆ ಆಗಿದ್ದ ಗಾಯವನ್ನು ಮರೆಯಲು ಪ್ರಯತ್ನಿಸುತ್ತಿದ್ದ ಮಾದೇವನ ಸಹನೆ ಈ ಮಾತುಗಳನ್ನು ಕೇಳಿ ತನ್ನ ಕಟ್ಟೆಯನ್ನು ಒಡೆಯಿತು.

"ಅಲ್ರೀ ಅಧ್ಯಕ್ಷರೇ ನಾ ಏನ್ಮಾಡೀನಿ ಅಂಥ ನನ್ಮೇಲೆ ನಿಮಗೀ ಹಗೆ? ನಾನೂ ಎಷ್ಟು ಅಂಥ ಸಹಿಸೋದು. ಪ್ರತಿಯೊಂದು ವಿಷ್ಯಕ್ಕೂ ಕ್ಯಾತೆ ತೆಗೆದು ರಂಪ ಮಾಡ್ತಿದ್ರಿ. ನಾನು ಊರ ಹಿರಿಯರು, ಎದುರಾಡ್ಬಾರ್ದೂಂಥ ಹಲ್ಕಚ್ಕೊಂಡಿದ್ರೆ ಸವಾರಿನೇ ಮಾಡ್ತೀರಿ. ನೆನ್ನೆ ನೋಡಿದ್ರೆ ಸಾಹೇಬ್ರು ಇನ್'ಸ್ಪೆಕ್ಷನ್ಗೆ ಬಂದಾಗ ಇಲ್ದಿರೋ ಆರೋಪಾನೆಲ್ಲಾ ಹೊರ್ಸಿದ್ದೀರಿ? ನಾನು ಕರ್ತವ್ಯ ಲೋಪ ಮಾಡಿದ್ದು ನೋಡಿದ್ರಾ, ನೋಡಿದ್ರೆ ಅಂಥದ್ದೇನು ಮಾಡಿದ್ದೀನಿ ಹೇಳಿ? ಸುಖಾ ಸುಮ್ನೆ ಯಾಕ್ ಹೀಗೆ ತೊಂದ್ರೆ ಕೊಡ್ತೀರಿ?" ಎಂದು ಅಹವಾಲತ್ತುಕೊಂಡನು.

ಅವನ ಈ ನೇರವಾದ ಪ್ರತಿಪ್ರಹಾರದಿಂದ ಮತ್ತೂ ಕೆರಳಿದ ಸಣ್ಣಪ್ಪ, "ಲೇ ಮಾದೇವಾ, ನಾನು ಊರಿಗೆ ಹಿರಿಯನಿದ್ದೀನಿ ಅನ್ನೋದು ಕಾಣ್ದೆ ಎದುರು ಮಾತಾಡ್ತೀಯಾ? ಇಲ್ದಿರೋದು ನಾನೆಲ್ಲಿ ಹೇಳಿದ್ದೀನಿ? ನೆನ್ನೆ ಇನ್'ಸ್ಪೆಕ್ಶನ್ ಟೈಮಲ್ಲಿ ಯಾರಿಗೂ ಹೇಳದೆ ಎಲ್ಲಿಗ್ಹೋಗಿದ್ದೆ?" ಎಂದು ತಾನೂ ಮಾತಿಗೆ ನಿಂತನು.

"ನೆನ್ನೆ ಹೆಡ್ಮಾಷ್ಟರ್ ಪರ್ಮಿಶನ್ ತಗೊಂಡೇ ನನ್ನ ನಾದಿನಿಯನ್ನ ಆಸ್ಪತ್ರೆಗೆ ಸೇರಿಸೋಕೆ ಹೋಗಿದ್ದು ಕಣ್ರಿ, ಗೊತ್ತಿಲ್ದಿರೋವ್ರು ತಿಳ್ಕೊಂಡು ಮಾತಾಡ್ಬೇಕು" ಎಂದನು ಮಾದೇವ.

ಕೋಪಕ್ಕೆ ಬುದ್ದಿ ಕೊಟ್ಟ ಸಣ್ಣಪ್ಪ ಸ್ವಲ್ಪ ನಾಲಿಗೆ ಜಾರಿಸಿ, "ಆ ಸುವರ್ ಹೆಡ್ಮಾಸ್ಟ್ರು ನೆನ್ನೆ ಸಾಹೇಬ್ರು ಕೇಳ್ದಾಗ ಯಾಕೋ ಹಲ್ಕಚ್ಕೊಂಡಿದ್ದಾ ಮತ್ತೆ ನೀನು ಪರ್ಮಿಷನ್ ತಕ್ಕಂಡ್ ಹೋಗಿದ್ರೆ? ಇಬ್ರೂ ಸೇರ್ಕಂಡ್ ಅದೇನ್ ನಡೆಸ್ತಿದ್ದೀರಿ ಈ ಶಾಲೇಲಿ, ಹೇಳೋರು ಕೇಳೋರು ಯಾರೂ ಇಲ್ವಾ? ನೀನು ಕೆಲ್ಸದ್ ಟೈಮಲ್ಲಿ ಪರ್ಮಿಷನ್ನೂ ತಕ್ಕಳ್ದೆ ನಿಮ್ಮನೆ ಕೆಲ್ಸ ಮಾಡ್ಕೊಳ್ಳೋಕೆ ಸರ್ಕಾರ ಸಂಬ್ಳ ಕೊಡ್ತದೇನೋ ಸೂಳೇಮಗ್ನೆ" ಎಂದುಬಿಟ್ಟನು.

ಆ ಮಾತನ್ನು ಕೇಳಿದ್ದೇ ತಡ ಮಾದೇವನ ಕೋಪ ನೆತ್ತಿಗೇರಿತು. ಸಣ್ಣಪ್ಪನಿಗೆ ತೆಗೆದು ಸರಿಯಾಗಿ ಒಂದು ಬಾರಿಸಿದ. ಮೊದಲೇ ಸಪೂರವಿದ್ದ ಸಣ್ಣಪ್ಪ ಗಾಳಿಯಲ್ಲಿ ತೇಲಿಕೊಂಡು ಹೋದವನಂತೆ ಹೋಗಿ ಬಿದ್ದ. ತಲೆ ಒಂದು ಸಣ್ಣ ಕಲ್ಲಿಗೆ ತಗುಲಿ ಗಾಯವಾಯ್ತು. ಇದನ್ನೇ ನೆಪ ಮಾಡಿಕೊಂಡು, 'ಮಾದೇವ ತನ್ನನ್ನು ಕೊಲೆ ಮಾಡಲು ಪ್ರಯತ್ನಪಟ್ಟ' ಎಂದು ಚೀರಿಕೊಂಡನು ಸಣ್ಣಪ್ಪ.

ಈ ವಿಷಯದಲ್ಲಿ ಹಿರಿಯ ತಲೆಗಳು ಸೇರಿದ್ದರಿಂದ ವಿಷಯ ಊರೆಲ್ಲಾ ಹರಡಲು ಹೆಚ್ಚು ಸಮಯವನ್ನೇನೂ ತೆಗೆದುಕೊಳ್ಳಲಿಲ್ಲ! ಜನರು ಊರು ಕೇರಿ ದಾಟಿ ಘಟನೆ ನಡೆದ ಸ್ಥಳದಲ್ಲಿ ಜಮಾಯಿಸಿದರು. ಸಣ್ಣಪ್ಪ ತನ್ನ ಪ್ರಭಾವ ಬಳಸಿ ಸಾಂದರ್ಭಿಕ ಸಾಕ್ಷಿಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದ. ಅದರ ಮರ್ಮ ಅರಿಯದ ಮಾದೇವ, ತನ್ನ ಪರಿಸ್ಥಿತಿಯನ್ನೂ ತಾನು ಶಾಲೆಯಲ್ಲಿ ಕರ್ತವ್ಯ ಲೋಪವಾಗುವಂತೆ ನಡೆದುಕೊಂಡಿಲ್ಲದಿರುವುದನ್ನೂ ಸಮರ್ಥಿಸಲು ಪ್ರಯತ್ನಿಸುತ್ತಿದ್ದ. ಆದರೆ ಅವನು ಸಣ್ಣಪ್ಪನ ಮೇಲೆ ಹಲ್ಲೆ ನಡೆಸಿರುವುದು ಮೇಲ್ನೋಟಕ್ಕೆ ಅಪರಾಧದಂತೆ ಗೋಚರಿಸುತ್ತಿತ್ತು. ಮಾದೇವನಿಂದ ಸಹಾಯ ಸ್ವೀಕರಿಸಿದ್ದವರು ಅವನಿಗೊದಗಿರುವ ಪರಿಸ್ಥಿತಿ ನೋಡಿ ಮರುಗಿದರೂ ಅವನ ಪರ ಗಟ್ಟಿಯಾಗಿ ನಿಲ್ಲದಾದರು. ಈ ಎಲ್ಲಾ ವಿಷಯಗಳು ಮಾದೇವನ ಮೇಲೆರಗಲು ಮುಖ್ಯ ಕಾರಣವೇ ಸಣ್ಣಪ್ಪ ಆ ಊರಿನಲ್ಲಿ ಬಲಾಢ್ಯನೂ, ಧನಿಕನೂ ಆಗಿರುವುದಾಗಿತ್ತು.

ಸಣ್ಣಪ್ಪನ ಮುನ್ಸೂಚನೆಯಂತೆ ಪಕ್ಕದ ಕಾಳೇನಳ್ಳಿ ಪೋಲೀಸ್ ಠಾಣೆಗೆ ಫೋನ್ ಮಾಡುತ್ತಾರೆ ಅವನ ಪಟಾಲಂಗಳು. ಅಲ್ಲಿನ ದಫೇದಾರನಾದ ಕಾಳಪ್ಪನೋ, ಸಣ್ಣಪ್ಪನ ದೂರದ ಸಂಬಂಧಿ. ಈ ಸಂದರ್ಭದ ಅವಕಾಶ ಪಡೆದು ಮಾದೇವನನ್ನು ಅರೆಸ್ಟ್ ಮಾಡಿಸುವಲ್ಲಿ ಸಣ್ಣಪ್ಪ ಯಶಸ್ವಿಯಾಗುತ್ತಾನೆ. ಈ ವಿಷಯ ಕಾಳ್ಗಿಚ್ಚಿನಂತೆ ಊರಿನಲ್ಲೆಲ್ಲಾ ಗುಲ್ಲಾಯ್ತು.  ಮಾದೇವನ ಮೇಲೆ ಒಂದು ಕೊಲೆ ಯತ್ನದ ಕೇಸ್ ಕೂಡ ದಾಖಲಾಯ್ತು. ತನ್ನ ಕೈಲಾದ ಮಟ್ಟಿಗೆ ತನ್ನೂರಿನ ಮತ್ತು ತನ್ನ ಜನಗಳ ಸೇವೆ ಮಾಡಿಕೊಂಡಿದ್ದವನಿಗೆ ಕ್ರಿಮಿನಲ್ ಎಂಬ ಹಣೆಪಟ್ಟಿ ಕಟ್ಟಲಾಯ್ತು! ಇದೇ ಕಾರಣ ಹೇಳಿ ಮಾದೇವನ ಕೈಯ್ಯಲ್ಲಿ 'ಸರ್ಕಾರಿ ಗುಮಾಸ್ತ’ನ ಹುದ್ದೆಗೂ ರಾಜೀನಾಮೆ ಕೊಡಿಸಲಾಯ್ತು.

ಈಗ ಖಾಯಂ ಹುದ್ದೆಯೂ ಇಲ್ಲ, ಸರ್ಕಾರಿ ಅರೆಕಾಲಿಕ ಹುದ್ದೆಯೂ ಇಲ್ಲದಂತೆ ಅತಂತ್ರನಾಗಿದ್ದಾನಂತೆ. ಊರನ್ನೂ ಬಿಟ್ಟುಬಿಟ್ಟಿದ್ದಾನಂತೆ! ಆಗಾಗ ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ ಎದುರಿಸಲು ಹಾಜರಾಗುತ್ತಾನಂತೆ! ಯಾವುದೋ ಖಾಸಗಿ ಕಂಪೆನಿಯಲ್ಲಿ ಅರೆಕಾಲಿಕ ಸೆಕ್ಯೂರಿಟಿ ಹುದ್ದೆ ಮಾಡುತ್ತಿದ್ದಾನೆಂಬುದು ಸದ್ಯದ ಸುದ್ದಿ.

“ಏನಪ್ಪಾ ನೀನು ಸರಗೂರವ್ನು ಅಲ್ವೇನಪ್ಪಾ? ನಾನು ನಿನ್ ಅಲ್ಲೇ ಎಲ್ಲೋ ನೋಡ್ದಂಗದೆ.” ಎಂದು ಯಾರಾದ್ರೂ ಕೇಳಿದ್ರೆ.

“ಆ ಊರು ಯಾವ್ದು ಅಂತಾನೇ ನಂಗೊತ್ತಿಲ್ಲ ಸಾ… ಕೆಲವು ಕಂತ್ರಿ ನಾಯಿಗಳು ನನ್ ಮೇಲೆ ದಾಳಿ ಮಾಡಿ ನಿರ್ಗತಿಕನನ್ನಾಗಿ ಮಾಡಿದ್ವು! ಅವು ಎಲ್ಲರ ನಿದ್ದೆ ಕೆಡ್ಸುವಂಗೆ ಬೊಗಳ್ತಿದ್ವು ಅಂತ ಯೋಳಿದ್ದೇ ನನ್ ತಪ್ಪು ಅಂತ ಕೇಸ್ ಹಾಕ್ಕಂಡವ್ರೆ ಈ ಪೋಲೀಸ್ನೋರು! ನಂಗೆ ನನ್ನೂರ್ ಯಾವ್ದು ಅಂತ್ಲೇ ಮರ್ತೋಗದೆ ಈಗ! ಊರಿಲ್ಲದ ತಿರುಕನಿಗೆ ಯಾವ್ ಊರಾದ್ರೇನೂ, ಕಾಡಾದ್ರೇನು” ಎಂದು ಹೇಳಿ, ಬೆನ್ನು ಹಾಕಿ ಹೊರಟುಬಿಡುತ್ತಾನಂತೆ!


- ಪ್ರಸಾದ್.ಡಿ.ವಿ.

ಈ ಕಥೆ ’ವಿಜಯ ನೆಕ್ಸ್ಟ್’ನಲ್ಲಿ ಪ್ರಕಟವಾಗಿದೆ. ’ವಿಜಯ ನೆಕ್ಸ್ಟ್’ ಪತ್ರಿಕಾ ವೃಂದಕ್ಕೆ ನನ್ನ ಧನ್ಯವಾದಗಳು.



ಚಿತ್ರಕೃಪೆ: ಗೂಗಲ್ ಅಂತರ್ಜಾಲ

Wednesday, 10 April 2013

ಬೇವು ಬೆಲ್ಲದ ಯುಗಾದಿ




ಎರಡು ಮೂರು ಜೊಂಪೆ
ಬೇವಿನ ಹೂವು,
ಹದವಾಗಿ ಕುಟ್ಟಿಟ್ಟ ಬೆಲ್ಲ!
ಪುಟ್ಟ ಬಟ್ಟಲೊಳಗೆ ಹಾಕಿ
ಕಲಸಿಟ್ಟು ಕೊಟ್ಟ ಅಮ್ಮ,
ಸರ್ವವೂ ಸಮ ಪಾಲು,
ಸಕಲಕ್ಕೂ ಸಮ ಬಾಳು!

ಅಡುಗೆ ಮನೆಯಿಂದ
ಪಟ ಪಟ ಸದ್ದು,
ಅಮ್ಮ ಒಬ್ಬಟ್ಟು ತಟ್ಟುತ್ತಿರಬಹುದು,
ಅವಳ ಕೈಬಳೆ
ಸದ್ದಿದ್ದರೇನೇ ಅದು ಸಂಭ್ರಮ!
ಸೋಮಾರಿ ತಮ್ಮನೂ
ಸ್ನಾನ ಮಾಡಿ ಬಂದ!
ಅಪ್ಪ ಬೆಳಗ್ಗೆಯಿಂದಲೇ
ಸೈರನ್ ಶುರುವಿಟ್ಟಿದ್ದಾರೆ,
ಕೆಲಸಗಳು ದಡ ಬಡ ಆಗಬೇಕು!

ಯುಗಾದಿ ಹಬ್ಬಕ್ಕೆ ಇಷ್ಟೇ
ನನ್ನ ಸಂಭ್ರಮ!
ಆದಿ ಹಿಡಿದು ಅಂತ್ಯ ಕಳೆದರೂ
ಬೆಳದಿಂಗಳಿಗೆ
ತುತ್ತು ಕೊಡಲಿ
ಹೊಳೆವ ಚಂದ್ರಮ!

- ಮಂಜಿನ ಹನಿ

ಚಿತ್ರ ಕೃಪೆ: ಗೂಗಲ್ ಅಂತರ್ಜಾಲ

Wednesday, 3 April 2013

ಎಂದೂ ಮುಳುಗದ ರವಿ





ಆತ ನನಗಾರೂ ಅಲ್ಲ,
ರಕ್ತ ಸಂಬಂಧವಂತೂ
ಮೊದಲೇ ಇಲ್ಲ,
ಈಗ ಒಂದೂವರೆ ವರ್ಷಗಳ ಹಿಂದೆ
ಪರಿಚಯವೂ ಇರಲಿಲ್ಲ...
ಸಾಹಿತ್ಯ, ಕನ್ನಡ
ಇವೆರಡೇ ಬಂಧಗಳು,
ಅಲ್ಲೆಲ್ಲೋ ಮಧ್ಯ ಆಫ್ರಿಕಾದಲ್ಲಿ
ಕೂತಿದ್ದವರನ್ನು
ಮೈಸೂರಿನವನಿಗೆ ಪರಿಚಯಿಸಿದವು!

ಸಾಕಷ್ಟು ಸಾಹಿತ್ಯ ವಿನಿಮಯ,
ಸಂದೇಶಗಳಲ್ಲಿ ಹರಿದ ಮಾತುಕತೆ,
ಒಂದಷ್ಟು ಫೋನಿನಲ್ಲಿ ಮಾತು,
ಅವರ ಸಾಹಿತ್ಯದಾಳಕ್ಕೆ
ಇಳಿದಷ್ಟೂ ಹೆಪ್ಪುಗಟ್ಟಿದ ಭಾವಗಳು,
ಆ ಹೆಪ್ಪುಗಟ್ಟಿದ ಭಾವಗಳು
ಬೆಸೆದ ಆತ್ಮೀಯತೆ,
ಅನುಬಂಧ, ಅವರಲ್ಲೊಬ್ಬ
ಹಿರಿಯಣ್ಣನನ್ನು ಕಂಡುಕೊಂಡ ಧನ್ಯತೆ!
ರಗುತ ಸಂಬಂಧಗಳಿಂದೇರ್ಪಡುವ
ಬಂಧಗಳಿಗಿಂತ ಗಟ್ಟಿ
ಬಂಧಗಳಿಲ್ಲ ಎಂದವರಾರು?

ಹೀಗೊಮ್ಮೆ ಅವರೊಂದಿಗೆ ಮಾತುಕತೆ:
ಹೇಗಿದ್ದೀರಿ ಅಣ್ಣಾ?
-ನಾನು ಚೆನ್ನಾಗಿದ್ದೇನೆ,
ನೀವು ಹೇಗಿದ್ದೀರಿ?
ನಾನೂ ಚೆನ್ನಾಗಿದ್ದೇನೆ!
-ಅಪ್ಪ, ಅಮ್ಮ, ಪ್ರಮೋದ್ ಹೇಗಿದ್ದಾರೆ?
ಅವರೆಲ್ಲರೂ ಚೆನ್ನಾಗಿದ್ದಾರೆ!
-ಕನ್ನಡ ಬ್ಲಾಗ್ ಹೇಗೆ ನಡೆಯುತ್ತಿದೆ?
ಎಲ್ಲರೂ ಹೇಗಿದ್ದಾರೆ?
ನಿಮ್ಮನ್ನೆಲ್ಲಾ ನೋಡಬೇಕೆಂದು ಆಸೆಯಾಗುತ್ತಿದೆ!
ನಿಮ್ಮನ್ನು ನೋಡಲು ನಮಗೂ ಆಸೆಯಾಗುತ್ತಿದೆ,
ಬಾಚಿ ತಬ್ಬಬೇಕೆನಿಸುತ್ತಿದೆ,
ಬನ್ನೀ ಬೇಗ ಬನ್ನೀ...
ಭಾರತಕ್ಕೆ ಬೇಗ ಬನ್ನೀ...
ಹೆಪ್ಪುಗಟ್ಟಿದ ಭಾವಗಳು,
ಒಂದೊಂದೇ ಹನಿಯನ್ನು ಬಸಿಯುತ್ತಿವೆ,
ಕಣ್ಣಿನಿಂದ ಜಾರಿ ಹರಿದ ಪ್ರತಿಯೊಂದು
ಕಣ್ಣ ಹನಿಯೂ
ಕೆನ್ನೆಯ ಮೇಲಿಳಿದು,
ಎದೆಯನ್ನು ತೋಯ್ಸುತ್ತಿವೆ,
ಅವಕ್ಕೂ ಗೊತ್ತಿರಬಹುದು...
ಮಧ್ಯ ಆಫ್ರಿಕಾದಲ್ಲಿ ಅಸ್ತಂಗತನಾದ ರವಿ,
ನಮ್ಮೆದೆಗಳಲ್ಲಿ
ಶಾಶ್ವತವಾಗಿ ಉಳಿದಿರುವರೆಂದು...

- ಪ್ರಸಾದ್.ಡಿ.ವಿ.

Tuesday, 19 March 2013

ಅಮ್ಮನ ಮೇಲೊಂದಷ್ಟು ದೂರುಗಳು!



ಚೆಂದವಿರುವುದಂತೆ ನನ್ನ ಮುಖ,
ಆದರೆ ಹಳ್ಳದಂತಿರುವ ಈ
ಮೋಟು ಮೂಗಿನದ್ದೇ ಚಿಂತೆ ನನಗೆ!
ಅದು ಇದ್ದಂತಿರಲೆಂದು,
ಹೆಗ್ಗಣವೇ ಮುದ್ದೆಂದು
ನನ್ನ ಮೂಗನ್ನು ಸರಿಯಾಗಿ
ಎತ್ತಿಲ್ಲದ ಬಗ್ಗೆ
ದೂರಿದೆ ನಿನ್ನ ಮೇಲೆ ನನ್ನದೊಂದು?

ನನಗೀಗಲೂ ಕಲ್ಲು, ಮುಳ್ಳುಗಳ ಮೇಲೆ ಕಾಲಿಟ್ಟರೆ,
ಚರ್ಮ ಸುಲಿಯುತ್ತದೆಂಬ ಭಯ!
ನಿನ್ನಂಗೈಯ ಮೇಲೆ ನನ್ನ ಪಾದಗಳನ್ನಿಟ್ಟುಕೊಂಡು
ಮುನ್ನಡೆಸಿ ನಡಿಗೆ ಕಲಿಸಿದ್ದು
ನಿನ್ನ ಹರಿದ ಬೆರಳ ಚರ್ಮ
ನೋಡುವವರೆಗೂ ಅರಿವಾಗಲಿಲ್ಲ!
ನಡೆದಾಡುವ ದಾರಿಯುದ್ದಕ್ಕೂ
ಕಲ್ಲುಮುಳ್ಳುಗಳೇ ಇವೆಯಂತೆ!
ಈಗೇನು ಮಾಡಲಿ ಹೇಳು?
ದೂರಿದೆ ನಿನ್ನ ಮೇಲೆ ನನ್ನದೊಂದು?

ಮಗನ ಮೀಸೆ ಚಿಗುರುತ್ತಿದ್ದಂತೆ,
ಹಿಂದೆ ಮುಂದೆ ಸುಳಿಯುವ
ಹುಡುಗಿಯರ ಬಗ್ಗೆ ತಿಳಿ ಹೇಳುವ
ಅಮ್ಮಂದಿರೇ ಹೆಚ್ಚು ಈ ಜಗದೊಳಗೆ!
ಮುಂದೊಂದು ದಿನ ವೈಫಲ್ಯವನುಭವಿಸಿ
ಪ್ರೇಮಕ್ಕೊಂದು ಕಪ್ಪು ಗುಲಾಬಿ ಇಡುವುದನ್ನು
ಊಹಿಸಿದ್ದೂ, ಪ್ರೀತಿಸಲು ಬಿಟ್ಟದ್ದು ಏಕೆ?
ಆದ ಗಾಯಗಳಿಗೆ ತುಪ್ಪ ಸವರಿದ್ದು
ಆಮೇಲಿನಾ ಮಾತು! ಹೇಳು,
ದೂರಿದೆ ನಿನ್ನ ಮೇಲೆ ನನ್ನದೊಂದು?

ನಮ್ಮ ಮೇಲೆ ಕೇವಲ ಪ್ರೀತಿಯನ್ನೇ ಸುರಿದು,
ನೋವೆಲ್ಲಾ ನೀನೇ ನುಂಗಿ,
ಸುಮ್ಮನೆ ನಕ್ಕಿಬಿಟ್ಟದ್ದು!
ನಾನ್ಯಾವುದೋ ಸಿಟ್ಟನ್ನು
ನಿನ್ನ ಮೇಲೆ ಹರಿಯಬಿಟ್ಟಾಗ ಎದುರಾಡದೆ,
ಹಲ್ಕಚ್ಚಿ, ಯಾರಿಗೂ ಕಾಣದಂತೆ
ಸೆರಗಿನಂಚಲ್ಲಿ ಕಣ್ಣೊರೆಸಿಕೊಂಡದ್ದು!
ಆಪ್ತಳಾದ ನಿನ್ನೊಳಗಿನ ಮಮತಾಮಯಿ ಹೆಣ್ಣು
ಈಗಲೂ ನಿಗೂಢ?! ಹೇಳು, ಆ ಬಗ್ಗೆಯೂ
ದೂರಿದೆ ನಿನ್ನ ಮೇಲೆ ನನ್ನದೊಂದು?

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

Tuesday, 5 March 2013

ದಿನಕ್ಕೊಂದು ವಚನಗಳೂ, ಅದರ ಕರ್ತೃ ಬೇಲೂರರೂ



ಕಾವ್ಯವನ್ನು ಆಳವಾಗಿ ಓದಿಕೊಂಡು, ಇಂದಿನ ಕನ್ನಡ ಸಾಹಿತ್ಯದಲ್ಲಿ ತನ್ನದೇನಾದರೂ ನವೀನತೆಯ ಕೊಡುಗೆ ಕೊಡಬೇಕೆಂಬ ಸಾಹಿತಿಗಳ ಹಂಬಲವೇ ಸಾಹಿತ್ಯದ ದಿಕ್ಕನ್ನು ಇದುವರೆವಿಗೂ ನಿರ್ದೇಶಿಸುತ್ತಾ ಬಂದಿರುವುದು ಮತ್ತು ಸಾಹಿತ್ಯಿಕ ಪ್ರಯೋಗಗಳಿಗೆ ಕಾರಣೀಭೂತವಾಗಿರುವುದು. ಇಂಥ ವಿಷಯಗಳನ್ನು ತನ್ನ ಯೋಚನಾಧಾಟಿಗಳಲ್ಲಿ ಅಂತರ್ಗತ ಮಾಡಿಕೊಂಡು, ಸಾಹಿತ್ಯಿಕವಾಗಿ ಹೊಸದೇನಾದರೂ ಪ್ರಯೋಗಿಸುವ ಉತ್ಕಟ ಆಸ್ಥೆ, ಶ್ರದ್ಧೆ ಇರುವವರು ಬೇಲೂರು ರಘುನಂದನ್ ರವರು. ಬೇಲೂರರು ನನಗೆ ಅಂತರ್ಜಾಲದ ಮೂಲಕ ಪರಿಚಯವಾದವರು. ಸಾಹಿತ್ಯವನ್ನು ಓದಿ ಆಸ್ವಾದಿಸುವ ನನ್ನ ಅಸ್ವಾದನೆಯ ನಾಲಿಗೆಗೆ ಇವರ ವಚನಗಳು ಬಹಳವೇ ರುಚಿಸುತ್ತಿದ್ದವು. ಹೀಗೆ ಒಂದು ಗಾಢ ಸಾಹಿತ್ಯ ನನಗೆ ಸಿಕ್ಕಿದ್ದೇ ತಡ ನನ್ನೊಳಗಿನ ಓದುಗ ಜಾಗೃತವಾದನಲ್ಲದೆ, ಅದರ ಬಗ್ಗೆ ಒಂದು ಟಿಪ್ಪಣಿ ಬರೆಯಲು ಯೋಚಿಸಿದೆ. ಸಿಕ್ಕ ಒಂದು ಒಳ್ಳೆಯ ಓದಿಗೆ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂಬ ಭಾವ ನನ್ನದು.

ಬೇಲೂರರು ಈಗಾಗಲೇ ಸಾಹಿತ್ಯದ ಪಟ್ಟುಗಳನ್ನು ಬಲ್ಲ ಬರಹಗಾರರು. ಈಗಾಗಲೇ ನಾಲ್ಕು ಕವನಸಂಕಲನಗಳನ್ನು ಹೊರತಂದಿದ್ದಾರೆ (ಶ್ವೇತಪ್ರಿಯ, ಕನ್ನಡಿ ಮುಂದೆ ನಿಂತಾಗ, ಹಸುರು, ಕವಿಶೈಲದ ಕವಿತೆಗಳು). ಈಗಿನ ಅವರ ಭರವಸೆಯ ರಚನೆ “ದಿನಕ್ಕೊಂದು ವಚನ”. ವಚನಗಳು ಎಂದೊಡನೆಯ ಎಲ್ಲರಿಗೂ ನೆನಪಿಗೆ ಬರುವುದು ವಚನಗಳ ಹರಿಕಾರ ಬಸವಣ್ಣನ ಕಾಲದ ಕಾವ್ಯ ಸೃಷ್ಠಿಗಳು. ಬಸವಣ್ಣ, ಅಲ್ಲಮ, ಅಕ್ಕ, ಜೇಡರ ದಾಸಿಮ್ಮಯ್ಯ, ಸಿದ್ದರಾಮ ಹೀಗೆ ಒಬ್ಬಿಬ್ಬರಲ್ಲದೆ ಎಲ್ಲರೂ ದಿಗ್ಗಜರೇ. ವಚನ ಸಾಹಿತ್ಯದ ಸರ್ವ ಸಾಧ್ಯತೆಗಳನ್ನೂ ತಮ್ಮ ಸಾಹಿತ್ಯದ ಮೂಲಕ ದೋಚಿಬಿಟ್ಟಿದ್ದಾರೆ. ಅದಕ್ಕಾಗಿಯೇ ವಚನ ಸಾಹಿತ್ಯವು ವಿಶ್ವ ಸಾಹಿತ್ಯಕ್ಕೆ ಕನ್ನಡ ಕೊಟ್ಟ ಅತ್ಯಮೂಲ್ಯ ಕೊಡುಗೆ ಎಂಬ ಹೆಗ್ಗಳಿಕೆ ಇರುವುದು. ಸಾಧ್ಯತೆಗಳೆಲ್ಲಾ ಸೋರಿಹೋಗಿರುವ ವಚನ ಸಾಹಿತ್ಯ ಪ್ರಕಾರದಲ್ಲಿ ಬೇಲೂರು ರಘುನಂದನ್ ರವರು ಕೃಷಿ ಮಾಡುವುದನ್ನು ನೋಡಿ ನನಗೆ ಎಲ್ಲಿಲ್ಲದ ಆಶ್ಚರ್ಯವಾಗಿತ್ತು. ಇಂದಿನ ಸಾಧ್ಯತೆಗಳನ್ನೂ ಸಹ ವಚನಕಾರರು ಹಿಂದೆಯೇ ಬರೆದಿಟ್ಟಿರುವುದರಿಂದ ಬೇಲೂರರು ವಚನ ಸಾಹಿತ್ಯ ಪರಂಪರೆಯನ್ನು ಮುಂದುವರೆಸಿರುವುದು ನನಗೆ ಕುತೂಹಲದ ಕೇಂದ್ರವಾಗಿತ್ತು. ಆಗಿನಿಂದ ಅವರ ವಚನಗಳನ್ನು ಆದಷ್ಟು ಆಳವಾಗಿ ಗ್ರಹಿಸಲು ಪ್ರಾರಂಭಿಸಿದೆ.

ವಚನ ಸಾಹಿತ್ಯಕ್ಕೆ ಇಂದಿನ ಅಗತ್ಯತೆಗಳ ಪೋಷಾಕು ತೊಡಿಸಿ, ಭಾಷೆಯನ್ನೂ ಈಗಿನ ಆಗುಗಳಿಗೊಗ್ಗಿಸಿ ಬರೆಯುತ್ತಿರವುದು ಬೇಲೂರರ ಸಾಂದರ್ಬಿಕ ಪ್ರಜ್ಞೆಗೆ ಹಿಡಿದ ಕನ್ನಡಿ. ಸಾಮಾಜಿಕ ಕಾಳಜಿ, ಸಾತ್ವಿಕ ಪ್ರಜ್ಞೆ, ಲೈಂಗಿಕ ಅಶಿಸ್ತಿನ ವಿರುದ್ಧದ ಧ್ವನಿ, ಸ್ತ್ರೀಯರನ್ನು ತಮ್ಮ ಭೋಗದ ವಸ್ತುಗಳಂತೆ ಬಳಸಿಕೊಳ್ಳುತ್ತಿರುವ ಸಮಾಜದ ಮೇಲಿನ ತಿರಸ್ಕಾರ, ಸ್ತ್ರೀಪರವಾದ ಧೋರಣೆಗಳು ಮತ್ತು ಸಮಾಜದ ಆಗುಗಳಿಗೆ ತುಡಿಯುವ ಸೂಕ್ಷ್ಮ ಸಂವೇಧಿತನ ರಘುನಂದನ್ ರ ವಚನಗಳಲ್ಲಿ ಢಾಳಾಗಿ ಸಿಗುತ್ತವೆ. ಸಮಾಜದಿಂದಲೇ ಸಮಾಜವನ್ನು ತಿದ್ದುವ ಕಾರ್ಯ ರಘುನಂದನ್ ರವರ ವಚನಗಳಿಂದ ಸಾಧ್ಯ. ಅವುಗಳು ಸಾಹಿತ್ಯಿಕವಾಗಿ ಮೌಲ್ಯ ಗಳಿಸಿಕೊಂಡಿರುವುದಲ್ಲದೆ, ಸಾಮಾಜಿಕವಾಗಿಯೂ ಮೌಲ್ಯ ಸಂಪಾದಿಸಿವೆ. ಕಾವ್ಯತ್ಮಕವಾಗಿ ಈ ವಚನಗಳನ್ನು ನೋಡುವುದಾದರೆ ಸಾಕಷ್ಟು ಚೆಂದದ ರೂಪಕಗಳು, ಉಪಮೆಗಳನ್ನು ದುಡಿಸಿ ಸಾಹಿತ್ಯಶೀಲ ಪ್ರತಿಮೆ ಕಟ್ಟಿದ್ದಾರೆ ಬೇಲೂರರು.

ಅಂಥದ್ದೊಂದು ನವ್ಯ ಪ್ರಯೋಗದ ಪ್ರತಿಮೆ ಈ ವಚನದಲ್ಲಿ ಸಿಗುತ್ತದೆ:

ಜಲ ಕುಡಿದ ಮರ ಬಲಿತು,
ಜೋಲು ಮೊಲೆಗಳೇ ಮರದ ತುಂಬೆಲ್ಲಾ.
ಹಲಸೊಳಗೆ ಕಸ ತುಂಬಲಾಗದು,
ವಿಷ ಸ್ರವಿಸಿ ಸಾವಿನ ರಸ ಅದು ಹರಿಸದು.
ಹೊರ ಮೈ ಮುಳ್ಳು ನೋಡಿ,
ಒಳ ಗರ್ಭವ ಪಾಪಸುಕಳ್ಳಿ ಅಂದರೆ,
ಕಣ್ಣಿನ ನರಗಳಿಗೆಲ್ಲಾ ಕನ್ನಡಕ ತೊಡಿಸಬೇಕು!

ಮನೆಯೆಂದರೆ ಹಲಸಿನಂತಲ್ಲ,
ಹೊಲಸು ಕಾಣದ ಏರ್ಪಾಟುಸೌಧ!
ಮನಸು ಕನಸಿಗೆಲ್ಲಾ ಬಣ್ಣದಬಳೆ ತೊಡಿಸಿ,
ಬರೀ ಸದ್ದು ಮಾಡುವ ಗದ್ದುಗೆಯು,
ಹಲಸಿನಂತಾದರೆ ಸರಿಯಲ್ಲವೇ ?
ಶ್ವೇತಪ್ರಿಯ ಗುರುವೆ .......

ಈ ವಚನದಲ್ಲಿ, ಹಲಸಿನ ಉಪಮೆಯಿಟ್ಟು ಒಂದು ಮನೆಯಾಗುವ ಸಾಧ್ಯತೆಯನ್ನು ಬಿಡಿಸಿಡಲು ಪ್ರಯತ್ನಿಸಿದ್ದಾರೆ ವಚನಕಾರ. ಹಲಸು ಹೊರಗೆ ನೋಡಲು ಮುಳ್ಳುಗಳನ್ನು ಹೊಂದಿದ್ದು ಅದರೊಳಗೆ ಕಸ ತುಂಬುವುದರಿಂದ ಮುಕ್ತವಾಗಿದೆ. ಕಸ ಅದರ ಹತ್ತಿರ ಸುಳಿದರೂ ಅದರ ಒಳ ನುಗ್ಗಲಾಗದು ಅದರಂತೆಯೇ ಒಂದು ಮನೆಯೂ ಆಗಬೇಕು. ಹೊಲಸುಗಳಿಂದ ದೂರ ಸರಿದು ಆದ ಏರ್ಪಾಟು ಸೌಧವಾಗದೆ ಹೊಲಸು ಮನೆಯ ಸುತ್ತ ಸುಳಿದರೂ ಮನೆಯ ಒಳ ನುಸುಳಲು ಸಾಧ್ಯವಾಗಬಾರದು. ಸಾಮರಸ್ಯವೇ ಮನೆಯ ಜೀವಾಳವಾಗಬೇಕು ಎಂಬುದನ್ನು ಸಾರಿದ್ದಾರೆ. ಈಗಾಗಲೇ ಸಮಾಜದಿಂದ ದೂರಾಗುತ್ತಿರುವ ’ತುಂಬು ಕುಟುಂಬ’ ದ ಪರಿಕಲ್ಪನೆಯನ್ನು ಈ ವಚನದ ಮೂಲಕ ಮತ್ತೆ ಬಿತ್ತಲು ಪ್ರಯತ್ನಿಸಿದ್ದಾರೆ.

ಬೇಲೂರರ ವಚನಗಳಲ್ಲಿ ಸಾಂಸಾರಿಕ ಸ್ವಸ್ಥತೆಯ ಕಾಳಜಿ  ವ್ಯಕ್ತವಾಗುವುದರ ಜೊತೆಗೆ ಸಾತ್ವಿಕ ಪ್ರಜ್ಞೆಯನ್ನೂ ಉತ್ತೇಜಿಸಲು ಪ್ರಯತ್ನಿಸಿದ್ದಾರೆ. ಹಣ ಮತ್ತು ಗುಣಗಳ ನಡುವಿನ ಮೌಲಿಕ ತುಲನೆ, ಮದುವೆಯ ನೆಪದಲ್ಲಿ ಹೆಣ್ಣಿನ ಮನಸ್ಸಿನ ಮೇಲಾಗುವ ದೌರ್ಜನ್ಯ ಮತ್ತು ಆಕೆಯನ್ನು ಒಬ್ಬ ಮನುಷ್ಯಳು ಎಂದೂ ಸಹ ಗೌರವಿಸದ ಕೆಲವು ಪುರುಷರ ಆಮಾನವೀಯ ನಡವಳಿಕೆಗಳನ್ನು ತಮ್ಮ ವಚನಗಳ ಮೂಲಕ ಕಟುವಾಗಿ ಖಂಡಿಸಿದ್ದಾರೆ. ಮತ್ತೊಂದು ವಚನದಲ್ಲಿ ಭಾಷೆಯೆಂಬುದು ಹಸುಗೂಸಿನ ತೊದಲು ನುಡಿಗಳಿಂದ ಪ್ರಾರಂಭವಾದರೆ, ಭಾಷೆಯನ್ನುಳಿಸಲು ಇನ್ಯಾವುದೇ ಹೆಚ್ಚಿನ ಕಾರ್ಯಕ್ರಮಗಳ ಅಗತ್ಯವಿಲ್ಲ ಎನ್ನುವ ಮೂಲಕ ಭಾಷಾಭಿಮಾನ ಮರೆತ ಕುರುಡು ಮತಿಗಳಿಗೆ ಸರಿಯಾಗಿ ಕುಟುಕಿದ್ದಾರೆ.

ಹೀಗೆ ಲೈಂಗಿಕ ಅಶಿಸ್ತಿನ ವಿರುದ್ಧದ ವಚನವೊಂದು ನನ್ನ ಗಮನ ಸೆಳೆಯಿತು:

ಕಾಮಕ್ಕೆ ಕಣ್ಣಿಲ್ಲ ಸರಿ, ಈಗ ಕಿವಿಯೂ ಇಲ್ಲ.
ರತಿದೇವನ ಮೈಯೆಲ್ಲಾ ನಾಲಿಗೆ ತೆರೆದ ಬಾಯಿ.
ರುಚಿ ಕಂಡ ತಂಬುಲದ ತಂಬಿಗೆಗೆ ಲೋಲುಪತೆಯ ಜೊಲ್ಲು.
ರತಿದೇವಿಯ ನರಮಂಡಲಕ್ಕೆ ಹುಸಿಬೀಗ ಜಡಿದು,
ಕಣ್ಣಾಟ ಮೈಮಾಟದ ಮಂತ್ರಕ್ಕೆ ಯಂತ್ರ ಮಗ್ನ.
ಎಳೆ ಕೊನರು,ಹೂದಳವಾಗಿ,ಬೀಸುಗತ್ತಿಯಾಗಿ,
ಮೆದುಳಲ್ಲಿ ಸಾವಿರ ಸಿಡಿಮದ್ದಿನ ಸ್ಪೋಟ ಸಿಡಿಸುವ ಕಾಮ,
ದೇಹದೊಳಗೆ ಕೋಟಿ ಒಯಾಸೀಸಿನ ಚಿಲುಮೆಯಾಗದೆ,
ಕಣ್ಣು ಕಿವಿ ಬಾಯಿ ಸ್ಪರ್ಶ ರುಚಿಗಳ ನಿಜ ರೂಪ ಕಳಚಿ,
ಹೆಳವಾದ ಹೆಣವಾಗುತ್ತಿದೆಯಲ್ಲ ಶ್ವೇತಪ್ರಿಯ ಗುರುವೆ.

ಈ ವಚನದಲ್ಲಿ ವಚನಕಾರರು, ಕಾಮವೆಂಬುದು ಹೇಗೆ ಹಾದಿ ಬೀದಿಯಲ್ಲಿ ಬಿಕರಿಯಾಗುವ ಸರಕಿನಂತಾಗಿದೆ ಎಂಬುದನ್ನು ಪ್ರಚುರಪಡಿಸುತ್ತಾ ಬೇಸರಗೊಳ್ಳುತ್ತಾರೆ. ’ಕಾಮಾತುರಾಣಾಂ ನಭಯಂ, ನಲಜ್ಜ’ ಎಂಬಂತೆ ಕಣ್ಣಿಲ್ಲದ ಕಾಮಕ್ಕೆ, ಈಗ ಕಿವಿಯೂ ಇಲ್ಲ. ನವರಸಗಳ ಸಂಗಮವಾದ ಈ ದೇಹದಲ್ಲಿ ಕಾಮದ ಭಾವ ಬೆಳೆದುನಿಂತದ್ದೇ ತಡ. ವಯಸ್ಸು, ಸಾಮಾಜಿಕ ಕಟ್ಟಲೆಗಳನ್ನು ಮೀರಿ ಕಾಮ ತನ್ನ ಮಂಗಾಟ ನಡೆಸುತ್ತದೆ. ಜೀವಕ್ಕೆ ತಂಪನ್ನೀಯುತ್ತಾ ಜೀವ ಸೆಲೆಯಾಗಬೇಕಿದ್ದ ಕಾಮ ನಿರ್ಲಜ್ಜತೆಯಿಂದ ಹೇಸಿಗೆಯಾಗುತ್ತಿದೆ ಎಂಬುದನ್ನು ವೇಧ್ಯವಾಗಿಸುತ್ತದೆ ಈ ವಚನ. ನಮ್ಮ ಈಗಿನ ಸಮಾಜದಲ್ಲಿ ಅವ್ಯಾಹತವಾಗಿ ಹೆಚ್ಚಾಗಿರುವ ಅತ್ಯಾಚಾರ, ಲೈಂಗಿಕ ಕಿರುಕುಳದಂಥ ಅಮಾನವೀಯ ನಡವಳಿಕೆಗಳನ್ನು ನೋಡುತ್ತಿದ್ದರೆ ವಚನಕಾರರ ಈ ಅಭಿಪ್ರಾಯ ನಮ್ಮ ಸಾತ್ವಿಕ ಪ್ರಜ್ಞೆಗೆ ವೇಧ್ಯವಾಗುತ್ತದೆ.

ಇಂದಿನ ಆಗುಗಳಿಗೆ ಸಾಹಿತ್ಯಿಕವಾಗಿ ಸ್ಪಂದಿಸುತ್ತಾ, ತನ್ಮೂಲಕ ಸಮಾಜವನ್ನು ತಿದ್ದುತ್ತಾ ಸಾಹಿತ್ಯಿಕ ಜವಾಬ್ದಾರಿ ಮತ್ತು ಸಾಮಾಜಿಕ ಜವಾಬ್ದಾರಿಗಳೆರಡನ್ನೂ ನಿಭಾಯಿಸುತ್ತಿದ್ದಾರೆ ಬೇಲೂರರು. ಹೀಗೆ ವಚನಗಳ ಮೂಲಕ ಕೃಷಿ ಮುಂದುವರೆಸಿರುವ ಬೇಲೂರರು, ಹೆಣ್ಣು ಭ್ರೂಣ ಹತ್ಯೆ, ಆ ಮೂಲಕ ಸಮಾಜದಲ್ಲಿ ಸೃಷ್ಠಿಯಾಗುತ್ತಿರುವ ಲಿಂಗಾನುಪಾತದಲ್ಲಿನ ಅಂಕಿ ಅಂಶಗಳ ಅಸಮತೋಲನದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ಬೂಟಾಟಿಕೆಯ ಭಕ್ತಿಗೆ ಅನ್ನ ಸಂತರ್ಪಣೆ ಏರ್ಪಡಿಸಿ, ಹಸಿವೆಂಬ ಉತ್ಸವ ಮೂರ್ತಿಗೆ ಒಂದು ದಿನದ ಜಾತ್ರೆ ಮಾಡಿ ಬಡವರನ್ನು ಬಡವರಾಗಿಯೇ ಉಳಿಸುವಂಥ ಪಟ್ಟಭದ್ರ ಶಕ್ತಿಗಳ ಬಗ್ಗೆಯೂ ಕಿಡಿ ಕಿಡಿಯಾಗಿದ್ದಾರೆ. ರಾಜಕೀಯ ನಾಯಕರ ಅಶಿಸ್ತಿನ ಮೇಲಾಟಗಳು, ಅತ್ತೆ ಸೊಸೆಯರ ನಡುವಿನ ಸಾಮರಸ್ಯದ ಅಗತ್ಯ, ಪ್ರೀತಿಯ ಆವಿಷ್ಕಾರ, ಸುಂದರ ಸಾಂಸಾರಿಕ ಪ್ರಜ್ಞೆಗಳು ಮತ್ತು ಬದಲಾವಣೆಯ ಮೂಲಗಳೂ ಬೇಲೂರರ ವಚನ ಸಾಹಿತ್ಯ ಕೃಷಿಯ ಹೊರತಾಗಿಲ್ಲ.

ಹಾಗೆ ಅಧ್ಯಾತ್ಮದ ಇಂಬಿನಲ್ಲಿ ನೆಮ್ಮದಿಯನ್ನು ಶೋಧಿಸುವ ವಚನವೊಂದು ನನ್ನ ಗಮನ ಸೆಳೆಯಿತು:

ನೂರೆಂಟು ನೆಲಮಾಳಿಗೆ ಅಗೆದರೂ ನೆಮ್ಮದಿಯ ನಿಧಿಯಿಲ್ಲ.
ದೃಷ್ಟಿಸೂಚಿ ಎತ್ತ ಸಾಗಿದರೂ ನೆಮ್ಮದಿ ಹೊತ್ತು ತರುವ,
ನೌಕೆಗಳಿಲ್ಲ, ವಿಮಾನಗಳಿಲ್ಲ, ಧೂಮಕೇತುಗಳೇ ಎಲ್ಲಾ.
ನೆಮ್ಮದಿ ಮಾರುತ್ತೇವೆಂದ ನಗೆಕೂಟಗಳು ನಗೆಪಾಟಲು.
ಸಮಾಲೋಚನೆ,ಸಾಯುವ ಮುನ್ನ ಒಂದೆರಡು ಮಾತುಕಥೆ.
ನಿತ್ಯ ದೂರದರ್ಶನದಲ್ಲಿ ದಾರಿ ತೋರುತ್ತೇವೆಂದು ನಿತ್ಯಕರ್ಮಕ್ಕೂ
ಮುನ್ನವೇ ಬಂದು ಹಚ್ಚಿದ ಹಸೆಗೆ ಹೆಸರಾಗೋ,
ಜ್ಯೋತಿಷಿಗಳಿಗೇ ಏಳುರಾಡು ಶನಿಯ ವಕ್ರದೃಷ್ಟಿ.
ಅತಿಯಾಸೆಯಂತೂ ಸವತಿಸವತಿಯರ ಮನದ ಗಂಟುಮುದ್ದೆ.
ಹಣವೆಂದರೆ ಸತ್ತ ಹೆಣ ನೆಮ್ಮದಿಯ ಮುಂದೆ ಹಿಂದೆ.
ಮಾರಾಟಕ್ಕೂ ಸಿಗದ ಹಾರಾಟಕ್ಕೂ ಸಿಗದ ಈ ನೆಮ್ಮದಿ
ಕಣ್ಣೆದುರಿಗಿದ್ದರೂ ಅರಿವಿಗೆ ಬಾರದ ಸರ್ವಾಂತರ್ಯಾಮಿ
ಶ್ವೇತಪ್ರಿಯ ಗುರುವೆ.

ಈ ವಚನದಲ್ಲಿ ನೆಮ್ಮದಿಯನ್ನು ನಿಧಿ ಎಂದಿರುವ ವಚನಕಾರ, ನಾವು ನೆಮ್ಮದಿಯನ್ನು ಹುಡುಕುತ್ತಾ ಪಡುವ ಪರಿಪಾಟಲುಗಳನ್ನು ಕಟ್ಟಿಕೊಟ್ಟಿದ್ದಾರೆ. ನಾವು ನೆಮ್ಮದಿ ಹರಸುತ್ತಾ ನಗೆಕೂಟಗಳು, ಸಮಾಲೋಚನೆಗಳು ಮತ್ತು ಜ್ಯೋತಿಷ್ಯದ ಮೊರೆ ಹೊಕ್ಕರೂ ನೆಮ್ಮದಿ ಮಾತ್ರ ಕನ್ನಡಿಯೊಳಗಿನ ಗಂಟಾಗಿ, ನಾವು ಮಾಡುವ ಎಲ್ಲಾ ಪ್ರಯತ್ನಗಳೂ ನಗೆಪಾಟಲಾಗುತ್ತಿವೆ ಎಂಬುದನ್ನು ಸಾರಿ ಹೇಳಿದ್ದಾರೆ. ಹೀಗೆ ಹೊರಗೆಲ್ಲಾ ನೆಮ್ಮದಿಯನ್ನು ಹುಡುಕುವ ನಾವು ಅದು ನಮ್ಮೊಳಗೇ ಇದೆ ಎಂಬುದನ್ನು ಅನುಭಾವಿಸಿಯೇ ಇಲ್ಲ ಎಂಬುದನ್ನು ಸಾರುತ್ತದೆ ಈ ರಚನೆ.

ತಮ್ಮ ವಚನಗಳ ಕೃಷಿಯ ಮೂಲಕ ಸಾಹಿತಿಗಳ ಮತ್ತು ಓದುಗರ ಯೋಚನಾಧಾಟಿ ಮತ್ತು ಅಭಿರುಚಿಗಳು ಇಂದಿನ ಆಗುಗಳಿಗೆ ಸ್ಪಂದಿಸಬೇಕು ಎಂದು ದುಡಿಯುತ್ತಿರುವವರು ಬೇಲೂರು ರಘುನಂದನ್ ರವರು. ಮತ್ತೆ ಮತ್ತೆ ಚರಿತ್ರೆಗಳು, ಪುರಾಣಗಳ ಬಗ್ಗೆಯೇ ಬರೆಯುತ್ತಿದ್ದರೆ ಹಿಂದಿನ ಸಾಹಿತ್ಯಗಳು ಹೇಳಿದ್ದಕ್ಕಿಂಥ ಭಿನ್ನವಾಗಿದ್ದೇನನ್ನೋ ಹೇಳಲು ಸಾಧ್ಯವಿಲ್ಲ ಎಂಬುದನ್ನು ಪ್ರಸ್ತುತ ಯುವ ಸಾಹಿತಿಗಳು ಅರ್ಥೈಸಿಕೊಳ್ಳಬೇಕು. ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಾ ಅದೇ ಬಿಂದುವಿನಲ್ಲಿ ಸೇರುವುದರಿಂದ ಯಾವುದೇ ಸಾಹಿತ್ಯಿಕ ಮೌಲ್ಯವನ್ನೂ ದಕ್ಕಿಸಿಕೊಳ್ಳಲಾಗದು. ಹಳಸಲಾದ ಸಾಹಿತ್ಯ ಹೊಲಸಾಗಲು ಸಾಕಷ್ಟು ಸಮಯವೇನೂ ಬೇಕಿಲ್ಲ. ಆದ್ದರಿಂದ ಸಾಹಿತ್ಯಿಕ ಪರಿಕರಗಳ ಆಮೂಲಾಗ್ರ ಬದಲಾವಣೆಯ ಅಗತ್ಯ ಇಂದಿನ ಕನ್ನಡ ಸಾಹಿತ್ಯಕ್ಕೆ ಖಂಡಿತಾ ಇದೆ. ಯಾವುದೇ ಸಾಹಿತ್ಯಿಕ ಕ್ರಾಂತಿಯಾದರೂ ಮೊದಲು ಪ್ರಾರಂಭವಾದದ್ದು ಸಮಾನ ಮನಸ್ಕ ಗುಂಪುಗಳ ಮೂಲಕವೇ. ಹಾಗೆ ಆಗಲು ಈ ವಿಚಾರಗಳು ಸಾಕಷ್ಟು ಚರ್ಚೆಗೆ ಬರಬೇಕು. ಆಗಷ್ಟೇ ಸಾಹಿತ್ಯಿಕ ಬದಲಾವಣೆಗಳನ್ನು ನೋಡಲು ಸಾಧ್ಯ.

ವಚನಕಾರರ ಇಂಥ ಸಾಹಿತ್ಯಿಕ ದಿಕ್ಕನ್ನು ನಿರ್ದೇಶಿಸಬಲ್ಲ ವಚನ ಇದು:

ಚರಿತೆಗಳು ಚಿರತೆಗಳಂತೆ,
ಭಯ ಪಡಿಸಿದ್ದೇ ಪಡಿಸಿದ್ದು.
ತೀರದ ದಾಹ,ಇಂಗದ ಹಸಿವು,
ಹೇಳಿದ್ದನ್ನೇ ಕೇಳಬೇಕೆಂಬ ಮೋಹ ಅದಕೆ.
ನೆನ್ನೆ ಹೇಳಿದ್ದನ್ನೇ ಇಂದು ಕೇಳುತಿದ್ದರೆ,
ಹೊಸ ಮೆದುಳು,ಮನಸೂ 
ಮುಸುರೆಯಲಿ ತೇಲುತ್ತಿದ್ದಂತೆ !
ಹಳೇ ಎಂಜಲಿಗಿಂತ ನಿತ್ಯ ಬರುವ ಗಂಜಲವೇ ಲೇಸು 
ಶ್ವೇತಪ್ರಿಯಗುರುವೆ 

ಇದು ವಚನಕಾರನ ಸಾಹಿತ್ಯದ ಗತಿ ಬದಲಾಯಿಸುವ ತುಡಿತದಿಂದಲೇ ಪಡಿಮೂಡಿದ ವಚನ. ಚರಿತ್ರೆಗಳಿಂದ ಮತ್ತು ಇತಿಹಾಸಗಳಿಂದ ಪ್ರೇರಿತರಾಗಿ ಹೇಳಿದ್ದನ್ನೇ ಹೇಳುವುದರಿಂದ ಇಂದಿನ ಕಾಲಘಟ್ಟದ ಸಾಹಿತ್ಯ ಹಾದಿ ತಪ್ಪುತ್ತದೆ ಮತ್ತು ತನ್ನ ಅಸ್ಥಿತ್ವವನ್ನೇ ಕಳೆದುಕೊಳ್ಳುತ್ತದೆ. ಆದ್ದರಿಂದ ಇಂದಿನ ಆಗುಗಳು ಸಾಹಿತ್ಯದ ದಿಕ್ಕನ್ನು ನಿರ್ಧರಿಸಬೇಕು ಎಂಬುದು ವಚನಕಾರರ ಅಭಿಲಾಷೆ.

ಯಾವ ವಿಷಯವನ್ನೂ ಅನುಭಾವಿಸಿ, ಸಮಾಜಮುಖಿಯಾಗಿ ಬರೆಯುತ್ತಿರುವ ಬೇಲೂರು ರಘುನಂದನ್ ರವರು ಭವಿಷ್ಯತ್ತಿನಲ್ಲಿ ಇನ್ನಷ್ಟು ಮೌಲಿಕ ಸಾಹಿತ್ಯಗಳನ್ನು ಕೊಡಲಿ ಎಂಬ ಅಭಿಲಾಷೆಯೊಂದಿಗೆ ಅವರ ಮಹತ್ವಾಕಾಂಕ್ಷೆಯ ’ದಿನಕ್ಕೊಂದು ವಚನ’ ಸರಣಿಗೆ ಶುಭ ಕೋರುತ್ತೇನೆ.

-  ಪ್ರಸಾದ್.ಡಿ.ವಿ. 

Sunday, 17 February 2013

ಅಸ್ತಿತ್ವ


ಪಂಜು ಅಂತರ್ಜಾಲ ಪತ್ರಿಕೆಯಲ್ಲಿ ಈ ಕಥೆ ಪ್ರಕಟವಾಗಿದ್ದು ಅದರ ಲಿಂಕ್ ಇಲ್ಲಿದೆ:


ಅದೊಂದು ದೊಡ್ಡ ಬಂಗಲೆ, ಸುಮಾರು ಹತ್ತಿಪ್ಪತ್ತು ವರ್ಷಗಳಿಂದ ಯಾರೂ ವಾಸವಿದ್ದಂತೆ ಕಾಣುವುದಿಲ್ಲ! ಅಲ್ಲಲ್ಲಿ ಗಿಡ ಗಂಟಿಗಳು ಬೆಳೆದು, ಆ ಬಂಗಲೆಗೆ ಭೂತ ಬಂಗಲೆಯಂತಹ ಮೆರುಗು ಕೊಟ್ಟಿದ್ದವು! ಆಗೊಮ್ಮೆ, ಈಗೊಮ್ಮೆ ನರಿಯಂತೆ ಕೂಗುವ ಕಿವಿ ಗಡಚಿಕ್ಕುವ ಸದ್ದುಗಳು, ಭಯವನ್ನು ಉತ್ಪಾದಿಸಿ, ತನುವೊಳಗಿನ ಜೀವ ಹಿಡಿಯಷ್ಟಾಗುವಂತೆ ಮಾಡುತ್ತಿದ್ದವು. ಆ ಬಂಗಲೆ ಊರಿನಿಂದ ಸಾಕಷ್ಟು ದೂರದಲ್ಲಿದ್ದುದ್ದರಿಂದ ಹಾಗೆ ಪಾಳು ಬಿದ್ದಿತ್ತೋ, ಇಲ್ಲ ಆ ಮನೆಯ ವಾರಸುದಾರರೆಲ್ಲಾ ಒಟ್ಟಾಗಿ ಯಮನ ಅತಿಥಿಗಳಾಗಿದ್ದರೋ, ಅಥವಾ ಆ ಬಂಗಲೆಯ ವಾಸ್ತು ಸರಿಯಿಲ್ಲದೆ ಅವಗಡಗಳು ಸಂಭವಿಸಿ ಭೂತ ಪ್ರೇತಗಳಾವೋ ಬಂದು ಸೇರಿಕೊಂಡಿದ್ದ ಕಾರಣವೂ ಇರಬಹುದು! ಒಟ್ಟಿನಲ್ಲಿ ಒಂದು ನರ ಪ್ರಾಣಿಯ ಸುಳಿವೂ ಆ ಬಂಗಲೆಯ ಸುತ್ತಾ ಇದ್ದಂತಿರಲಿಲ್ಲ. ನಾನು ಮಾತ್ರ ನಿರ್ಲಿಪ್ತನಾಗಿ, ಧೈರ್ಯವಹಿಸಿ ಆ ಸರಿ ರಾತ್ರಿಯ ಕಗ್ಗತ್ತಲ ನಡುವಲ್ಲಿ ದೀಪವಿಲ್ಲದೆಯೂ ನಿರಾತಂಕವಾಗಿ ಉಸಿರಾಡುತ್ತಾ ನಿಂತಿದ್ದೆ. ನನ್ನುಸಿರ ಉಚ್ಛ್ವಾಸ - ನಿಚ್ಛ್ವಾಸಗಳ ಏರಿಳಿತಗಳು ಅಕ್ಕ ಪಕ್ಕದಲ್ಲಿರುವವರಿಗೂ ಕೇಳಿಸಬಹುದಿತ್ತು, ಆದರೆ ಅಲ್ಲಿ ನನ್ನನ್ನು ಬಿಟ್ಟು ಮತ್ತಾರೂ ಇರಲಿಲ್ಲ!

ನಿಧಾನವಾಗಿ ನನ್ನ ಭಾವಾಂತರಂಗದಲ್ಲಿನ ಭಯಗಳನ್ನು ನಿಗ್ರಹಿಸುತ್ತಾ, ಆಚೀಚೆ ಯಾರಾದರೂ ಇರಬಹುದೇ? ಈ ಸ್ಥಳ ಇರುವುದಾದರೂ ಎಲ್ಲಿ ಎಂಬ ಅರಿವನ್ನು ತಂದುಕೊಳ್ಳುವ ಪ್ರಯತ್ನ ಮಾಡಬೇಕು ಎಂದುಕೊಳ್ಳುತ್ತಿದ್ದೆ! ಅಸಲಿಗೆ ನಾನು ಅಲ್ಲಿಗೆ ಹೇಗೆ ಬಂದೆ ಎಂಬ ನೆನಪೂ ಇದ್ದಂತೆ ತೋರುತ್ತಿರಲಿಲ್ಲ! ತಲೆ ಧಿಂ ಎಂದು ಹಿಡಿದುಕೊಂಡಿದೆ ಎನಿಸುತ್ತಿತ್ತು. ತಲೆ ಒತ್ತಿ ನೋಡಿಕೊಂಡೆ, ತಲೆಯ ಹಿಂಬದಿಗೆ ಯಾರಾದರೂ ಹೊಡೆದಿರಬಹುದು ಎನಿಸುತ್ತಿತ್ತು. ತಲೆಯ ಹಿಂಬಾಗ ಊದಿಕೊಂಡಂತೆನಿಸುತ್ತಿತ್ತು, ಮುಟ್ಟಿದ ಕೈಗಳಿಗೆ. ಸರಿ ಇನ್ನು ಎಷ್ಟು ಹೊತ್ತು ಈ ಅಜ್ಞಾತ ಸ್ಥಳದಲ್ಲಿ ಅಜ್ಞಾತವಾಸ ಅನುಭವಿಸುವುದು, ಇಲ್ಲಿಂದ ಹೇಗಾದರೂ ಹೊರಗೆ ಹೋಗುವ ದಾರಿ ಹುಡುಕಬೇಕು ಎಂದು ಒಳ ಮನಸ್ಸು ಹೇಳುತ್ತಿತ್ತು. ನಾನು ನಿಧಾನವಾಗಿ ನನ್ನ ಕಾಲುಗಳನ್ನೆಳೆದುಕೊಂಡು ಯಾವುದೋ ಒಂದು ದಿಕ್ಕಿನಲ್ಲಿ ಸರಿಯಲು ಪ್ರಾರಂಭಿಸಿದೆ, ಆ ಉಗ್ರ ನರಸಿಂಹನನ್ನು ನೆನೆಯುತ್ತಾ!

ಈಗ ನಾನು ಸಾಗುತ್ತಿರುವುದು ನನ್ನ ಅತೀ ದುರ್ಗಮದ ಹಾದಿಯಿರಬಹುದು ಎನಿಸಿತು! ಆ ಕಡೆ - ಈ ಕಡೆ ನೋಡುತ್ತಾ, ನಿಧಾನವಾಗಿ ಒಂದೊಂದೇ ಹೆಜ್ಜೆಯಿಡುತ್ತಾ ಬೆಳಕನ್ನು ಹುಡುಕುತ್ತಿದ್ದೆ. ಬಂಗಲೆ ಸುಮಾರು ಏಳೆಂಟು ಅಂತಸ್ತಿನದಾಗಿದ್ದು, ನಾನು ಈಗಿರುವುದು ಕಡೆಯ ಅಂತಸ್ತು ಎನಿಸುತ್ತಿತ್ತು. ಸಾವಕಾಶವಾಗಿ ಮೆಟ್ಟಿಲಿಳಿಯುವ ಹಾದಿಯನ್ನು ಹುಡುಕುತ್ತಿದ್ದೆ. ಪ್ರತಿಯೊಂದು ಅಂತಸ್ತೂ ವೃತ್ತಾಕಾರವಾಗಿದ್ದು, ಒಂದು ದಿಕ್ಕಿನಲ್ಲಿ ಪ್ರಾರಂಭಿಸಿದರೆ ಒಂದು ಆವೃತ್ತದ ನಂತರ ಮತ್ತೆ ಪ್ರಾರಂಭಕ್ಕೇ ತಂದು ನಿಲ್ಲಿಸುತ್ತಿತ್ತು. ಮಧ್ಯದಲ್ಲಿ ಕೆಳ ಅಂತಸ್ತನ್ನೂ, ಮೇಲಂತಸ್ತನ್ನೂ ನೋಡಬಹುದಾದ ವೃತ್ತಾಕಾರದ ಪ್ಯಾಸೇಜ್ ಇತ್ತು. ಕೆಳಗೆ ಇಳಿಯುವ ಮೆಟ್ಟಿಲುಗಳ ಕುರುಹೇ ಸಿಗುತ್ತಿರಲಿಲ್ಲ. ಹೇಗೋ ಮೂರು ಸುತ್ತು ಸುತ್ತಿದ ನಂತರ ಆರನೇ ಅಂತಸ್ತಿಗೆ ಇಳಿಯಲು ಒಂದು ಸಣ್ಣ ಕಿಂಡಿಯಾಕಾರದ ದಾರಿ ಸಿಕ್ಕಿತು. ಅದರೊಳಗೆ ಕಷ್ಟ ಪಟ್ಟು ತೂರಿ ಕೆಳಗಿಳಿದೆ. ಆರನೇ ಅಂತಸ್ತು ತಲುಪಿದ ನಾನು ಉಸಿರು ಬಿಡುತ್ತಾ ಹೇಗಾದರೂ ಇಲ್ಲಿಂದ ಬಚಾವಾಗಬಹುದೇನೋ ಎಂದು ಆಶಾಕಿರಣ ಹಚ್ಚಿಟ್ಟೆ, ನನ್ನ ಮನದೊಳಗೆ! ಹಾಗೆ ನನ್ನದೇ ಯೋಚನೆಗಳಲ್ಲಿ ಮೈಮರೆತಿದ್ದ ನನ್ನ ಪಕ್ಕದಲ್ಲಿ ಎಲ್ಲಿಂದಲೋ ತೂರಿಕೊಂಡು ಬಂದು ದೊತ್ತೆಂದು ಅದೇನೋ ಬಿದ್ದ ಸಪ್ಪಳವಾಯ್ತು. ನನ್ನ ಎದೆ ಬಡಿತ ಜೋರಾಯ್ತು! ಹಾಗೆ ದೊತ್ತೆಂದು ಬಿದ್ದ ವಸ್ತು ನಿಧಾನಕ್ಕೆ ಚಲಿಸುವ ಶಬ್ದ ಮಾಡಿತು. ನಾನು ಒಮ್ಮೆಲೇ ಬೆಚ್ಚಿಬಿದ್ದೆ! ನಿಧಾನಕ್ಕೆ ಬಾಲ ಗುಡಿಸಿದಂತಾಗಿ, ತನ್ನ ಹೊಳೆಯುವ ಕಣ್ಣುಗಳನ್ನೊಮ್ಮೆ ಜಳಪಿಸಿದ ಆ ಪ್ರಾಣಿ, 'ಮೀಯಾಂ...' ಎಂದೊಡನೆ ನನಗೆ ಚಳಿ ಜ್ವರ ಬಂದು ಬಿಟ್ಟಂತಾಯ್ತು! "ಥೂ ಹಾಳಾದ್ದು ಬೆಕ್ಕು" ಎಂದು ನನ್ನನ್ನು ನಾನೇ ಸಂತೈಸಿಕೊಂಡೆ.

ಹಾಗೆ ನಡೆಯುತ್ತಾ ನನ್ನ ಕೆಳ ಅಂತಸ್ತಿಗೆ ತಲುಪುವ ಮೆಟ್ಟಿಲುಗಳ ಹುಡುಕಾಟವನ್ನು ಮುಂದುವರೆಸಿದೆ. ಆರನೆಯ ಅಂತಸ್ತಿನಲ್ಲಿ ಕೆಲವು ರೂಮುಗಳಿರುವಂತೆ ಕಂಡುಬಂತು. ನಾನು ಆ ಅಂತಸ್ತನ್ನೂ ಒಂದು ಆವೃತ್ತ ಬಂದ ನಂತರ, ರೂಮುಗಳಲ್ಲಿ ಹೇಗಾದರೂ ಕೆಳಗಿಳಿಯಬಹುದೇನೋ ಎಂದು ಪ್ರತಿಯೊಂದು ರೂಮುಗಳ ಸಂದರ್ಶನವನ್ನು ಶುರು ಮಾಡಿದೆ. ಎರಡನೇ ರೂಮಿನಲ್ಲಿ ಐದನೇ ಅಂತಸ್ತಿಗಿಳಿಯುವ ದಾರಿ ಸಿಕ್ಕಿತು. ಐದನೇ ಅಂತಸ್ತಿಗೆ ಬರುತ್ತಿದ್ದಂತೆ ಅದು ಒಂದು ದೊಡ್ಡ ಹಾಲ್ ನಂತೆ ಕಾಣಿಸಿತು. ಅದನ್ನು ಮನೆಯ ವಾರಸುದಾರರು ಸಮಾರಂಭಗಳನ್ನು ಆಯೋಜಿಸಲು, ಇಲ್ಲವೇ ಪಾರ್ಟಿಗಳನ್ನು ಹಮ್ಮಿಕೊಳ್ಳಲು ಬಳಸುತ್ತಿದ್ದಿರಬಹುದು ಎನಿಸಿತು. ಅಲ್ಲಲ್ಲಿ ದುಂಡನೆಯ ಮೇಜುಗಳು ಮತ್ತು ವೈಭವೋಪೇತ ಕುರ್ಚಿಗಳು ಕಾಣುತ್ತಿದ್ದವು. ಹಾಗೆ ಆ ಅಂತಸ್ತನ್ನು ಪರಿಶೀಲಿಸುತ್ತಿದ್ದಂತೆ ಕೆಲವರ ಓಡಾಟ ಮತ್ತು ಪಿಸುಗುಟ್ಟುವಂತಹ ಮಾತುಗಳು ಕೇಳಿಸಲು ಶುರುವಾದವು. ನನಗೆ ಇನ್ನಿಲ್ಲದ ಭಯ ಶುರುವಾಯ್ತು. ಇದೇನು ಯಾರು ಇಲ್ಲವೆಂದುಕೊಂಡಿದ್ದ ಬಂಗಲೆಯಲ್ಲಿ ಈ ಪಿಸುಮಾತುಗಳು ಎಲ್ಲಿಂದ ಬರುತ್ತಿವೆಯಪ್ಪಾ ಎಂದು ಭಯವಾಗಿ 'ಹನುಮಂತ ಚಾಳೀಸ'ವನ್ನು ಹೇಳಿಕೊಳ್ಳಲು ಶುರುಮಾಡಿದೆ, ಭಯಕ್ಕೆ ನಾಲಿಗೆ ತೊದಲುತ್ತಿತ್ತು! ಆದದ್ದು ಆಗಲಿ ಎಂದು ಪಿಸುಮಾತುಗಳ ಶಬ್ದ ಬರುತ್ತಿದ್ದೆಡೆಗೆ ಹೆಜ್ಜೆ ಹಾಕಿದೆ. ಅದ್ಯಾವುದೋ ರೂಮಿನಲ್ಲಿ ನಾಲಿಗೆ ಚಪ್ಪರಿಸುತ್ತಿರುವ ಶಬ್ಧವಾಗುತ್ತಿತ್ತು! ನಾನು ಆ ಕಡೆಗೆ ನಡೆಯುತ್ತಿದ್ದಂತೆ, ಆಯ ತಪ್ಪಿ ಮೆಟ್ಟಿಲುಗಳ ಮೇಲುರುಳಿ ನಾಲ್ಕನೇ ಅಂತಸ್ತಿಗೆ ಬಿದ್ದಿದ್ದೆ!

ಎದುರಿಗೆ ಯಾರೋ ನನ್ನ ವಿರುದ್ಧ ದಿಕ್ಕಿಗೆ ಮುಖ ಮಾಡಿಕೊಂಡು ಅದೇನನ್ನೋ ತಿನ್ನುತ್ತಿರುವಂತೆನಿಸುತ್ತಿತ್ತು. ನಾನು ನಿಧಾನವಾಗಿ ಹೆಜ್ಜೆಯ ಮೇಲೆ ಹೆಜ್ಜೆಯನಿಡುತ್ತಾ ಆ ಆಕೃತಿಯನ್ನು ಸಮೀಪಿಸಿದೆ. ಆ ಆಕೃತಿ ಯಾವುದೋ ರುಂಡವಿಲ್ಲದ ದೇಹದಿಂದ ಬಾಯಿ ಹಾಕಿ ರಕ್ತ ಕುಡಿಯುತ್ತಿತ್ತು. ನಾನು ಅದನ್ನು ನೋಡಿ ಬೆಚ್ಚಿ ಬಿದ್ದು, ಅಯ್ಯೋ ಎಂದು ಕೂಗಲು ಪ್ರಯತ್ನಿಸಿದೆ, ಮಾತುಗಳು ಮಾತ್ರ ಹೊರಬರಲಿಲ್ಲ! ಆಡಿಸಲು ಪ್ರಯತ್ನಪಟ್ಟ ಕೈಕಾಳುಗಳೂ ಅಲುಗಾಡಲಿಲ್ಲ. ನನಗೆ ಇದು ಕನಸೇ ಅಥವಾ ನನಸೇ ಎಂಬ ಬಗ್ಗೆ ಜಿಜ್ಞಾಸೆ ಶುರುವಾಯ್ತು! ನನ್ನ ಮೈಯ್ಯನ್ನೊಮ್ಮೆ ಚಿವುಟಿ ನೋಡಿಕೊಂಡೆ! ಎಲ್ಲವೂ ನಿಜವೇ ಎನ್ನುವುದು ಖಾತ್ರಿಯಾಯ್ತು! ಇನ್ನೇನು ಮಾಡುವುದು, ಪರಿಣಾಮ ಏನೇ ಆದರೂ ಆ ಕುರೂಪ ಆಕೃತಿಯನ್ನು ಎದುರಿಸುವುದೇ ಈಗ ಉಳಿದಿರುವ ದಾರಿ ಎಂದು ನಿಶ್ಚಯಿಸಿಕೊಂಡೆ. ಕಡೆಗೆ ಧೈರ್ಯ ಮಾಡಿ ಆ ಕುರೂಪ ಆಕೃತಿಯನ್ನುದ್ದೇಶಿಸಿ, "ಹೇ, ಯಾರು ನೀನು? ನಿನಗೆ ತಿನ್ನಲು ಮನುಷ್ಯ ಮಾಂಸವೇ ಬೇಕೇ? ಮನುಷ್ಯರ ಮಾಂಸವನ್ನು ತಿನ್ನಲು ನಿನಗೆ ಹೇಸಿಗೆಯಾಗುವುದಿಲ್ಲವೇ? ನೀನೂ ನೋಡಲು ಹೆಚ್ಚೂ ಕಮ್ಮಿ ಮನುಷ್ಯರಂತೆಯೇ ಇರುವೆ! ಒಬ್ಬ ಮನುಷ್ಯ ಮತ್ತೊಬ್ಬನನ್ನು ಹೀಗೆ ಬಗೆದು ತಿನ್ನುವುದು ಅನಾಗರೀಕತೆಯಲ್ಲವೇಆ ದೇಹವನ್ನು ಅಲ್ಲಿಯೇ ಬಿಟ್ಟು ಮೇಲೆ ಏಳು ಪ್ರಾರಬ್ಧ ಕರ್ಮವೇ!" ಎಂದು ಗದರಿಸಿದೆ. ಅದಕ್ಕೆ ನನ್ನ ಯಾವೊಂದು ಮಾತುಗಳೂ ಮುಟ್ಟಿದಂತೆ ಕಾಣಲಿಲ್ಲ, ಅದು ಅದರ ಪಾಡಿಗೆ ತನ್ನ ಅಮಾನುಷ ಕೆಲಸ ಮುಂದುವರೆಸಿಯೇ ಇತ್ತು! ಆ ಮನುಷ್ಯನ ರಕ್ತವನ್ನು ಸಂಪೂರ್ಣ ಹೀರಿ, ಮಾಂಸವನ್ನು ತಿನ್ನಲು ಶುರು ಮಾಡಿತ್ತು.

ನನಗೆ ಆ ಅಮಾನವೀಯ ದೃಶ್ಯವನ್ನು ನೋಡಿ, ಅಸಹ್ಯದೊಂದಿಗೆ ರೋಷವೂ ಉಕ್ಕಿ ಬಂತು! ನಾನು ನನ್ನ ಕಾಲನ್ನು ಜಾಡಿಸಿ ಆ ಆಕೃತಿಗೆ ಒದ್ದೆ. ಅದು ಒಂದಿಂಚೂ ಕದಲಲಿಲ್ಲ! ತನ್ನ ಪಾಡಿಗದು ಎದೆಯನ್ನು ಬಗೆದು ಹೃದಯವನ್ನು ಹೊರಗೆಳೆದು, ತಿನ್ನಲು ಶುರು ಮಾಡಿತು. ನಾನು ಅದನ್ನು ಎಚ್ಚರಿಸಲು ಇಷ್ಟೆಲ್ಲಾ ಪ್ರಯತ್ನಪಟ್ಟರೂ ಸಫಲವಾಗದಾದಾಗ, ಅವಮಾನಿತನಾದಂತೆನಿಸಿ ಆ ಆಕೃತಿಯೆಡೆಗೆ ರೋಷದಿಂದ ನೋಡಿದೆ. ಅದರ ಮುಂದೆ ನನ್ನ ತ್ರಿವಿಕ್ರಮ ಪೌರುಷ ಪ್ರದರ್ಶಿಸುವ ಆಸೆಯಿಂದ ಅಕ್ಕಪಕ್ಕ ಏನಾದರೂ ಆಯುಧಗಳು ಸಿಗಬಹುದೇ ಎಂದು ಅತ್ತಿತ್ತ ನೋಡುತ್ತಾ ಹುಡುಕುತ್ತಿದ್ದೆ. ಆ ಕೋಣೆಯ ಬಲಮೂಲೆಯಲ್ಲಿದ್ದ ಒಂದು ಕೊಡಲಿ ತಾನಿರುವುದರ ಸುಳಿವು ಕೊಟ್ಟಿದ್ದೇ ತಡ, ಅದರೆಡೆಗೆ ಧಾವಿಸಿ ಅದನ್ನು ಎರಡೂ ಕೈಗಳಲ್ಲಿ ಸೇರಿಸಿ ಎತ್ತಿ ಜಳಪಿಸುವ ರೀತಿಯಲ್ಲೊಮ್ಮೆ ಬೀಸಿದೆ. ಕೊಡಲಿಯನ್ನು ಕೈಯ್ಯಲ್ಲಿಡಿದದ್ದೇ ತಡ ಆಕ್ರೋಶವನ್ನು ದೇಹದಲ್ಲಿ ಆವಾಹಿಸಿಕೊಂಡವನಂತೆ ಆ ಆಕೃತಿಯೆಡೆಗೆ ಮುನ್ನುಗ್ಗಿ ಕೊಡಲಿಯನ್ನು ಬೀಸಿದೆ! ಅದು ಯಾವ  ಚಲನೆಯನ್ನೂ ತೋರಲಿಲ್ಲ! ಈ ರೀತಿಯಾಗಿ  ಆಕೃತಿ ಪದೇ ಪದೇ ನನ್ನಸ್ಥಿತ್ವವನ್ನು ಕೆಣಕುತ್ತಿರುವುದು ನನ್ನಲ್ಲಿ ಇನ್ನಷ್ಟು ರೋಷ ಉಕ್ಕುವಂತೆ ಮಾಡಿತ್ತು. ಹೇಗಾದರೂ ಮಾಡಿ ಆ ಆಕೃತಿಯ ಗಮನವನ್ನು ನನ್ನೆಡೆಗೆ ಸೆಳೆಯಲು ಯೋಚಿಸುತ್ತಿದ್ದಾಗ, ಅದು ನನ್ನೆಡೆಗೆ ತಿರುಗಿ ತನ್ನ ಬಾಯಿಗೆ ಮೆತ್ತಿಕೊಂಡಿದ್ದ ರಕ್ತವನ್ನು ಒರೆಸಿಕೊಂಡಿತು! ಎದುರಿಗೆ ಕಂಡ ದೃಶ್ಯ ಕಂಡು ಹೌಹಾರಿಬಿಟ್ಟಿದ್ದೆ, ಆ ವಿಕಾರ ಆಕೃತಿ ನಾನೇ ಆಗಿದ್ದೆ! ಅದು ಹೇಗೆ ನಾನಾಗಲು ಸಾಧ್ಯ ಎಂದು ನನ್ನನ್ನೇ ನಾನು ಪರಿಶೀಲಿಸುವ ರೀತಿಯಲ್ಲಿ ನನ್ನ ಮುಖ ಮೂತಿಯನ್ನೆಲ್ಲಾ ಮುಟ್ಟಿ ನೋಡಿಕೊಂಡೆ. ನನ್ನ ಮೈ ಕೈಗಳಲ್ಲಿ ಅಸಾಧ್ಯ ನೋವಿರುವಂತೆಯೂ ಹಿಂಬದಿಯ ತಲೆಯ ಭಾಗದಲ್ಲಿ ಒಡೆದು ರಕ್ತ ಸೋರುತ್ತಿರುವಂತೆಯೂ ಭಾಸವಾಯ್ತು. ಈ ಎಲ್ಲಾ ವ್ಯತಿರಿಕ್ತ ಪರಿಸ್ಥಿತಿಗಳು ಉತ್ಪಾದಿಸಿದ ಭಯವನ್ನು ಪ್ರತಿಭಟಿಸುವ ತೆರದಿ ಆ ಕೋಣೆಯನ್ನು ಬಿಟ್ಟು ಓಡಿ ಹೋಗಲು ಈ ಕಡೆ ತಿರುಗಿದೆ. ದೇಹದಿಂದ ಬೇರ್ಪಡಿಸಿದ ನನ್ನ ರುಂಡ ಅಲ್ಲಿ ಬಿದ್ದು ಒದ್ದಾಡುತ್ತಿತ್ತು! ನನ್ನನ್ನೇ ನಾನೇ ಬಗೆದು ತಿಂದುಕೊಳ್ಳುತ್ತಿದ್ದೆ ಆ ಏಳಂತಸ್ತಿನ ಬಂಗಲೆಯೊಳಗೆ! ನನ್ನ ಹುಚ್ಚು ಆಸೆಗಳೇ ಭೂತವಾಗಿ, ನನ್ನೊಳಗಿನ ಒಳ್ಳೆಯತನಗಳ ಇಂಚಿಂಚನ್ನೂ ತಿನ್ನುತ್ತಿದ್ದೆ! ಹೊರಗಿನ ಜಗತ್ತಿಗೆ ಪ್ರೇತವಾಗಿದ್ದೆ! ಭೌತಿಕವಾಗಿ ಅಸ್ಥಿತ್ವವೇ ಇಲ್ಲದವನಾಗಿದ್ದೆ!

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

Wednesday, 13 February 2013

ತೊರೆಯ ಮೇಲಿನ ಬದುಕು! - ೩





ಒಡಲು ಸೇರಿದ ತೊರೆ!
----------------------

ಬೇರೆಲ್ಲೋ ನೆಲೆಸಿದ್ದಾರೆ ಎಂಬುದು ಗೊತ್ತಾಯಿತು ಆದರೆ ಎಲ್ಲಿ, ಅದನ್ನು ಪತ್ತೆ ಹಚ್ಚುವ ಬಗೆ ಹೇಗೆ? ಹುಡುಕಿದ ಮೇಲೆ ಅವರ ಮನೆಯವರನ್ನು ನಮ್ಮ ಮದುವೆಗೆ ಒಪ್ಪಿಸುವುದು ಹೇಗೆ? ಅಕಸ್ಮಾತ್ ಅವಳಿಗೆ ಈಗಾಗಲೇ ಮದುವೆ ಆಗಿಬಿಟ್ಟಿದ್ದರೆ? ಎಂಬ ಯೋಚನೆಗಳು ಬರುತ್ತಿದ್ದಂತೆಯೇ ಬಾಳು ಬತ್ತಿದಂತೆ ಭಾಸವಾಯ್ತು! ಅವಳಿಲ್ಲದೇ ಈ ರಾಘು ನಡೆದಾಡುವ ಶವವಾಗಿಬಿಡುವ ಅಪಾಯವಿತ್ತು!

ಅಲ್ಲಿಂದ ನನ್ನ ಪ್ರೀತಿಯನ್ನು ಹುಡುಕುವ ಕಾರ್ಯ ಆರಂಭವಾಯ್ತು! ಮಧೂನ ತಂದೆ ಸಿ.ಪಿ.ಸಿ ಪಾಲಿಟೆಕ್ನಿಕ್ ಅಲ್ಲಿ ಹಿರಿಯ ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದುದು ಗೊತ್ತಿತ್ತು. ಅಲ್ಲಿ ಹೋಗಿ ವಿಚಾರಿಸಿದರೆ ಅವರು ಎಲ್ಲಿಗೆ ವರ್ಗವಾದರು ಎಂಬ ಬಗ್ಗೆ ಮಾಹಿತಿ ಸಿಗಬಹುದಿತ್ತು. ಆ ಯೋಚನೆ ನನ್ನ ತಲೆಯಲ್ಲಿ ರೂಪುಗೊಂಡಿದ್ದೇ ತಡ, ಒಂದು ಕ್ಷಣವನ್ನೂ ಕಾಯದೆ ಸಿ.ಪಿ.ಸಿ ಯ ಹಾದಿ ಹಿಡಿದೆ. ಅಲ್ಲಿ ಮ್ಯೆಕಾನಿಕಲ್ ಡಿಪಾರ್ಟ್ಮೆಂಟ್ ಗೆ ಹೋಗಿ, ನಾನು ನಾಗೇಶ್ ಅಯ್ಯರ್ ರವರ ಶಿಷ್ಯ, ಯಾವುದೋ ಬ್ಯಾಚ್ ಎಂದು ಸುಳ್ಳು ಹೇಳಿ, ಅವರ ವರ್ಗಾವಣೆಯ ಸಂಪೂರ್ಣ ಮಾಹಿತಿ ಕೇಳಿ ತಿಳಿದೆ! ಅವರು ಬೆಂಗಳೂರಿನ ಸರ್ಕಾರೀ ಪಾಲಿಟೆಕ್ನಿಕ್ ಗೆ ಆರು ತಿಂಗಳುಗಳ ಹಿಂದಷ್ಟೇ ವರ್ಗವಾದರು ಎಂಬ ಮಾಹಿತಿ ಸಿಕ್ಕಿತು! ಬೆಂಗಳೂರಿನಲ್ಲಿ ಮಧೂನ ಮನೆ ಹುಡುಕುವ ಶ್ರಮ ನೆನಪಿಸಿಕೊಂಡೇ ಬೆವತು ಹೋದೆ!

ಸರಿ ಅಲ್ಲಿಂದ ನನ್ನ ಪಯಣ ಬೆಂಗಳೂರಿನತ್ತ… ನನ್ನ ಬೈಕ್ ಹತ್ತಿ ಕುಳಿತುಕೊಂಡವನೇ ಲಾಂಗ್ ಜರ್ನಿಯಾಗುವುದನ್ನೂ ಲೆಕ್ಕಿಸಿದೆ ಬೆಂಗಳೂರಿನ ಕಡೆ ಹೊರಟೆ! ಆ ನೂರೈವತ್ತು ಪ್ಲಸ್ ಕಿಲೋಮೀಟರುಗಳ ಪ್ರಯಾಣದಲ್ಲಿ ಮನಸ್ಸು ಆಗಬಹುದಾದ ಎಲ್ಲಾ ಸಾಧ್ಯತೆಗಳನ್ನೂ ಚಿಂತಿಸುತ್ತಿತ್ತು!

ನಾನು ಮಾಂಸ ತಿನ್ನುವ ಜಾತಿಯಿಂದ ಬಂದವನು ಅವಳೋ ಮೊಟ್ಟೆ ಕೂಡ ಮಾಂಸಾಹಾರಿ ಎನ್ನುವ ಶುದ್ಧ ಸಸ್ಯಾಹಾರಿ ಬ್ರಾಹ್ಮಣರ ಹುಡುಗಿ, ನಮ್ಮ ವಿಷಯ ತಿಳಿಯುತ್ತಿದ್ದಂತೆ ಅವರ ಮನೆಯಲ್ಲಿ ಮಡಿ ಮೈಲಿಗೆ ಎಂದು ಬಾಯಿ ಬಾಯಿ ಬಡಿದರೆ ಏನು ಮಾಡುವುದು? ನಾನೂ ಅವರಂತೆಯೇ ರಕ್ತ ಮಾಂಸಗಳನ್ನೇ ತುಂಬಿಕೊಂಡಿರುವ ಮನುಷ್ಯನಲ್ಲವೇ? ನನ್ನಲ್ಲೂ ಮನುಷ್ಯ ಸಹಜ ಪ್ರೀತಿ, ಪ್ರೇಮ, ಅನುಬಂಧ, ಸಂವೇಧನೆ, ಆಸೆ - ಆಕಾಂಕ್ಷೆಗಳೆಲ್ಲವೂ ಇಲ್ಲವೇ? ಅವರಿಗಿಂತ ನಾನು ಹೇಗೆ ಭಿನ್ನ? ಕೇವಲ ಆಹಾರ ಪದ್ಧತಿಗಳು ನಮ್ಮೀರ್ವರಲ್ಲಿ ಇಂಥ ಭಿನ್ನತೆಗಳನ್ನೂ ಸೃಷ್ಟಿಸಬಲ್ಲವೆ? ಹಾಗೆ ನೋಡುವುದಾದರೆ ಅವರೂ ಜೀವವಿರುವ ಸಸ್ಯಗಳನ್ನು ಕೊಂದು ತಿಂದೇ ಬದುಕುತ್ತಾರೆ ತಾನೇ? ನಾನು ಮಾಂಸಹಾರಿ ಎಂದ ಮಾತ್ರಕ್ಕೆ ಸಸ್ಯಗಳನ್ನು ತಿಂದು ಬದುಕುವ ಅವರಲ್ಲಿಲ್ಲದ ಕ್ರೂರತೆ ನನ್ನಲ್ಲಿ ಮಾತ್ರ ಬಂದು ಸೇರಲು ಹೇಗೆ ಸಾಧ್ಯ? ಪ್ರೀತಿ ಮಾಡಲು ಅಡ್ಡಬರದ ಈ ಜಾತಿ ಪದ್ಧತಿ ಮತ್ತು ಧರ್ಮಗಳು ಮದುವೆ ಸಮಯದಲ್ಲೇಕೆ ಅಡ್ಡ ಬರುತ್ತವೆ? ಮನುಷ್ಯತ್ವವೂ ಒಂದು ಜಾತಿಯೂ, ಧರ್ಮವೂ ಎಂದೇಕೆ ಈ ಜನ ಭಾವಿಸುವುದಿಲ್ಲ? ಎಂಬಿತ್ಯಾದಿ ಕೇಂದ್ರವಿಲ್ಲದೆ ಗಿರಕಿ ಹೊಡೆಯುವ ತರ್ಕಗಳಲ್ಲಿ ಮನ ಜರ್ಜರಿತವಾದಂತಿತ್ತು! ಇಷ್ಟೆಲ್ಲಾ ತೊಡಕುಗಳ ನಡುವೆ ಒಂದೊಮ್ಮೆ ಇಷ್ಟರಲ್ಲಾಗಲೇ ಮಧೂವಿಗೆ ಮದುವೆ ಆಗಿಬಿಟ್ಟಿದ್ದರೆ? ಎಂಬ ಪ್ರಶ್ನೆ ಹೃದಯದೊಳಕ್ಕೆ ತೂರಿದೊಡನೆ ಹೃದಯಸ್ಥಂಭನವಾಗಿಬಿಡಬಹುದೇನೋ ಎನಿಸಿತು! ಆದರೆ ಮನದ ಗಮ್ಯ ಮಾತ್ರ ಸ್ಪಷ್ಟವಿತ್ತು, ’ಮಧೂನ ಪ್ರೀತಿ’!

ನಾಗೇಶ್ ಅಯ್ಯರ್ ರವರ ಸರ್ಕಾರಿ ಪಾಲಿಟೆಕ್ನಿಕ್ ಪತ್ತೆ ಹಚ್ಚಿದವನೇ ನೇರ ಅವರಲ್ಲಿಗೆ ಹೋಗಿ ಮಾತನಾಡಲೇ? ಎಂದು ಒಮ್ಮೆ ಯೋಚಿಸಿದೆ. ಮೊದಲು ಮಧೂನೊಂದಿಗೆ ಮಾತನಾಡಿ ನಂತರ ಮುಂದುವರೆದರೆ ಒಳ್ಳೆಯದೇನೋ ಎಂಬ ಯೋಚನೆಯೂ ಬಂತು! ಆದರೆ ನನಗೆ ನನ್ನ ಪ್ರೀತಿಯ ಮೇಲಿದ್ದ ಅದಮ್ಯ ವಿಶ್ವಾಸ ನೇರವಾಗಿ ನಾಗೇಶ್ ಅಯ್ಯರ್ ರವರ ಮುಂದೆಯೇ ನಿಲ್ಲಿಸಿತು. ನಾನು ನೇರವಾಗಿ ಮ್ಯಾಕಾನಿಕಲ್ ಅಧ್ಯಾಪಕರ ಕೊಠಡಿ ಹುಡುಕಿ ನಾಗೇಶ್ ರವರ ಮುಂದೆ ನಿಂತಿದ್ದೆ! ನನ್ನನ್ನು ಕಂಡ ಅವರ ಕಣ್ಣುಗಳಲ್ಲಿದ್ದ ಅಸಹನೆಯನ್ನು ಗುರ್ತಿಸಬಲ್ಲ ಸಂವೇಧನಾಶೀಲತೆ ನನ್ನಲ್ಲಿತ್ತು ಅನ್ನೀ! ಯಾರಿಗೆ ತಾನೇ ತನ್ನ ಮಗಳನ್ನು ಯಾವನೋ ಅನ್ಯ ಜಾತಿಯವನಿಗೆ ಕೊಟ್ಟು ಮದುವೆ ಮಾಡುವಷ್ಟು ಸಹನೆ ಇರುತ್ತದೆ?! ಅವರು ತಮ್ಮ ಕಡೆಯ ಕ್ಲಾಸ್ ಮುಗಿಸಿ ಹೊರಡುವ ತರಾತುರಿಯಲ್ಲಿದ್ದಂತೆ ಕಾಣುತ್ತಿತ್ತು! ಅವರ ಮುಂದೆ ನಿಂತಿದ್ದ ನಾನು,

“ಹಲೋ ಸರ್, ನಾನು ರಾಘವಾ… ಮಧುವಂತಿಯ ಗೆಳೆಯ, ನಿಮಗೆ ನೆನಪಿರಬಹುದೆಂದು ಭಾವಿಸುವೆ” ಎಂದೆ.

ಅವರಿಗೆ ಅಲ್ಲಿ ಎಲ್ಲಾ ಸ್ಟಾಫ್ ಗೂ ನಮ್ಮ ಮಾತೂಕತೆ ತಿಳಿಯುವುದು ಬೇಕಿರಲಿಲ್ಲ, ಅದನ್ನು ತಮ್ಮ ಮುಖಭಾವದಿಂದಲೇ ಸಂವಹನಗೈಯ್ಯುತ್ತಿದ್ದರು! ಪರಿಸ್ಥಿತಿಯನ್ನು ಗಮನಿಸಿದ ನಾನು ಹೊರಗೆ ಪಾರ್ಕ್ ಇದೆ, ಅಲ್ಲಿ ಸಾವಕಾಶವಾಗಿ ಮಾತನಾಡೋಣ ಎಂದು ಕರೆದುಕೊಂಡು ಹೋದೆ. ಅಲ್ಲಿ ಅವರೇ ನಾನು ಅವರಲ್ಲಿಗೆ ಬಂದುದರ ಬಗ್ಗೆ ವಿಚಾರಿಸಿದರು. ನಾನು ಮುಂದುವರೆಸುತ್ತಾ,

“ಸರ್ ನೀವು ಹೇಳಿದ್ದಿರಿ, ’ಮೊದಲು ನಿನ್ನ ಕಾಲ ಮೇಲೆ ನೀನು ನಿಲ್ಲು’ ಎಂದು, ಈಗ ನಾನು ಪ್ರತಿಷ್ಠಿತ ’ಎಕ್ಸಲೆಂಟ್ ಎಲೆಕ್ಟ್ರಾನಿಕ್ಸ್’ ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ಜವಾಬ್ದಾರಿಯಂತಿದ್ದ ನನ್ನ ತಂಗಿಯ ಮದುವೆಯನ್ನೂ ಮಾಡಿ ಮುಗಿಸಿದ್ದೇನೆ! ನಾನು ಮಧುವಂತಿಯನ್ನು ಮನಸಾರೆ ಪ್ರೀತಿಸುತ್ತೇನೆ, ಅವಳನ್ನು ನನಗೆ ಕೊಟ್ಟು ಮದುವೆ ಮಾಡುತ್ತೀರಾ?” ಎಂದು ಕೇಳಿದೆ.

ನನ್ನ ನೇರ ಪ್ರಶ್ನೆಯಿಂದ ಸ್ವಲ್ಪ ವಿಚಲಿತರಾದಂತೆ ಕಂಡು ಬಂದ ಅವರು, “ಮಧೂನೊಂದಿಗೆ ಈ ವಿಷಯದ ಬಗ್ಗೆ ಮಾತನಾಡಿದ್ದೀಯಾ? ಅವಳ ಅಭಿಪ್ರಾಯವೇನು ಎಂಬ ಬಗ್ಗೆ ನಿನ್ನಲ್ಲಿ ಸ್ಪಷ್ಟತೆ ಇದೆಯೇ?” ಎಂದರು.

ನಾನು, “ಮಧೂಗೆ ನಾನು ಅವಳನ್ನು ಪ್ರೀತಿಸುತ್ತೇನೆ ಎಂಬುದು ಗೊತ್ತು, ಅವಳೂ ನನ್ನನ್ನು ಪ್ರೀತಿಸುತ್ತಾಳೆ! ನಿಮಗೆ ಗೊತ್ತಿರಲಿಕ್ಕಿಲ್ಲ ನೀವು ನನಗೆ ಅಂದು ಕರೆ ಮಾಡಿದಾಗಿನಿಂದ ನಾನು ಮತ್ತು ಮಧೂ ಮತ್ತೆಂದೂ ಮಾತನಾಡಲಿಲ್ಲ! ಯಾವುದೇ ರೀತಿಯ ಕಮ್ಯುನಿಕೇಶನ್ ಇಲ್ಲ! ಈ ಎರಡು ವರ್ಷಗಳ ನಮ್ಮ ನಡುವಿನ ಮೌನ ನಮ್ಮ ಪ್ರೀತಿಯನ್ನು ಕಡಿಮೆ ಮಾಡಿರುತ್ತದೆ ಎಂದು ನನಗನ್ನಿಸುವುದಿಲ್ಲ” ಎಂದೆ.

“ಸರಿ ನಡಿ, ಮನಗೆ ಹೋಗಿ ಅಲ್ಲಿಯೇ ಮಾತನಾಡೋಣ” ಎಂದು ನನ್ನನ್ನು ಅವರೊಂದಿಗೆ ಅವರ ಮನೆಗೆ ಕರೆದೊಯ್ದರು. ನಾನು ಅವರ ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ನನ್ನನ್ನು ಕಂಡ ಮಧೂ ತನಗೆ ಸಂಬಂಧವೇ ಇಲ್ಲದಂತೆ ಒಳಗೆ ಹೋದಳು! ನನ್ನ ಮನಸ್ಸಿಗೆ ಸ್ವಲ್ಪ ಕಸಿವಿಸಿಯಾಯ್ತು ಆದರೆ ಅವಳ ಕಾಲುಗಳಲ್ಲಿ ಕಾಲುಂಗರವಿಲ್ಲದ್ದು ಕಂಡು ಸ್ವಲ್ಪ ನಿರಾಳನಾದೆ. ನಂತರ ನಾಗೇಶ್ ರವರೇ ಮಧೂವನ್ನೂ, ಅವರ ಮಡದಿಯನ್ನೂ ಹೊರಗೆ ಕರೆದು, ನಾನು ಅವರಿಗೆ ಏನೆಲ್ಲಾ ಹೇಳಿದ್ದೆನೋ ಅದನ್ನೆಲ್ಲಾ ಹೇಳಿ, ಮಧೂನ ಅಭಿಪ್ರಾಯಕ್ಕೆ ಕಾದು ಕುಳಿತವರಂತೆ ಅವಳೆಡೆಗೆ ತಿರುಗಿದರು! ಅವಳು ನನ್ನನ್ನು ಕಣ್ಣಿನಾಳದಿಂದ ನೋಡುವಂತೆ ಸೂಕ್ಷ್ಮವಾಗಿ ನೋಡಿ,

“ನಾನು ಇಂಥಹ ಸಾತ್ವಿಕ ಕುಟುಂಬದಲ್ಲಿ ಹುಟ್ಟಿ ನಿಮ್ಮಂಥ ಸಂಸ್ಕಾರವಂತ ತಂದೆ ತಾಯಿಗಳ ಆರೈಕೆಯಲ್ಲಿ ಬೆಳೆದಿದ್ದರ ಬಗ್ಗೆ ಹೆಮ್ಮೆ ಇದೆ. ನೀವು ನನಗೆ ಕೊಟ್ಟ ಸಂಸ್ಕಾರದಲ್ಲಿ ನಾನು ಗುರ್ತಿಸಿದ್ದು ’ಮನುಷ್ಯತ್ವ ಎಂಬುದು ಜಾತಿ, ಧರ್ಮ ಎಲ್ಲವುಗಳಿಗಿಂತಲೂ ದೊಡ್ಡದು’ ಎಂಬುದನ್ನೇ! ನಾನು ರಾಘುವನ್ನು ಪ್ರೀತಿಸುತ್ತೇನೆ, ನೀವು ಒಪ್ಪುವುದಾದರೆ ಅವನನ್ನು ಮದುವೆ ಆಗುತ್ತೇನೆ, ಆದರೆ ನನ್ನ ಎಮ್.ಟೆಕ್ ಪೂರ್ಣಗೊಂಡ ನಂತರವೇ!” ಎಂದಳು.

ನನಗೆ ಅಲ್ಲಿಯವರೆಗೆ ಅವಳು ಎಮ್.ಟೆಕ್ ಓದುತ್ತಿರುವುದೇ ಗೊತ್ತಿರಲಿಲ್ಲ! ನನಗೆ ಅವಳಲ್ಲಿ ನನ್ನ ಮೇಲಿದ್ದ ಪ್ರೀತಿಯನ್ನು ಕಂಡು ಹೆಮ್ಮೆ ಎನಿಸಿ ಅವಳನ್ನೇ ನೋಡುತ್ತಿದ್ದೆ! ಇತ್ತ ಮಧೂನ ಅಪ್ಪ ಅಮ್ಮನ ನಡುವೆ ಕಣ್ಸನ್ನೆಯ ಸಂವಹನ ನಡೆದಿತ್ತು! ಒಂದೈದು ನಿಮಿಷಗಳ ದೀರ್ಘ ಮೌನದ ನಂತರ ನಾಗೇಶ್ ರವರು,

“ನಮಗೂ ನಮ್ಮ ಮಗಳ ಸಂತೋಷವೇ ಮುಖ್ಯ. ನೀನು ಹಿರಿಯರಿಗೆ ಗೌರವ ಕೊಟ್ಟು ಒಂದೊಳ್ಳೇ ಕೆಲಸ ಹಿಡಿದ ನಂತರವೇ ಮದುವೆಯ ಬಗ್ಗೆ ನನ್ನೊಂದಿಗೆ ಪ್ರಸ್ಥಾಪಿಸಿದ್ದು ಹಿಡಿಸಿತು. ನೀನು ನಿಮ್ಮ ಅಪ್ಪಾ – ಅಮ್ಮನ ಒಪ್ಪಿಗೆಯನ್ನೂ ಪಡೆದುಕೋ, ಒಂದು ವರ್ಷದ ನಂತರ ನಿನ್ನ ಮತ್ತು ಮಧೂಳ ಮದುವೆಯನ್ನು ಮಾಡೋಣ” ಎಂದರು.

ನನಗೆ ಆಕಾಶಕ್ಕೆ ಎಷ್ಟೂ ಗೇಣುಗಳ ಅಂತರವೂ ಇಲ್ಲ ಎನಿಸಿತು. ಮಧೂನ ಕೈ ಹಿಡಿದು ಹಾರಿ ಕುಣಿಯಬೇಕು ಎನಿಸಿತು. ಮಗನ ಸಂತೋಷವನ್ನೇ ಬಯಸುವ ನನ್ನಪ್ಪ ಅಮ್ಮಾ ಸಂತೋಷದಿಂದ ನಮ್ಮ ಮದುವೆಗೆ ಒಪ್ಪಿಕೊಂಡರು! ಒಂದು ವರ್ಷದ ನಂತರ ನಮ್ಮ ಮದುವೆಯೂ ಆಯ್ತು, ಇನ್ನೊಂದು ವರ್ಷದೊಳಗೆ ನನ್ನ ಮುದ್ದು ಶಾರೀಯೂ ನಮ್ಮ ಕುಟುಂಬಕ್ಕೆ ಸೇರಿಕೊಂಡಳು! ನಮ್ಮ ಅಪ್ಪಾ ಅಮ್ಮನನ್ನು ಮಧೂ ತನ್ನ ತಂದೆ-ತಾಯಿಯರಂತೆ ನೋಡಿಕೊಳ್ಳುತ್ತಾಳೆ, ನನ್ನ ಮಾವ-ಅತ್ತೆಯನ್ನು ನಾನು ನನ್ನ ಅಪ್ಪ-ಅಮ್ಮನಂತೆಯೇ ಗೌರವಿಸುತ್ತೇನೆ! ಆಹಾರ ಪದ್ಧತಿಗಳು, ಜಾತಿಗಳು ಮತ್ತು ನಂಬಿಕೆಗಳು ಬೇರೆಬೇರೆಯಾಗಿದ್ದರೂ ನಮ್ಮದು ಸುಖೀ ಕುಟುಂಬ! ಹಳ್ಳ ಕೊಳ್ಳಗಳು, ಕೊರಕಲು ಕಲ್ಲುಗಳು, ಉದ್ದದ ಜಲಪಾತಗಳ ಮೇಲೆಲ್ಲ ಹರಿದ ತೊರೆಯಂಥ ನಮ್ಮ ಪ್ರೀತಿ ಈಗ ನಿರ್ಮಲ ಒಡಲನ್ನು ತಲುಪಿದೆ, ಒಂಬತ್ತು ವರ್ಷಗಳ ನಂತರವೂ ಹರಿಯುತ್ತಲೇ ಇದೆ, ನಮ್ಮೊಳಗಿನ ಅಂತರ್ಮುಖಿಯಾಗಿ!

ಈ ಫೆಬ್ರವರಿಯ ಹದಿನಾಲ್ಕರ ಪ್ರೇಮಿಗಳ ದಿನಕ್ಕೆ ನನ್ನ ಪುಟ್ಟ ಸಂಸಾರವನ್ನು ನಿಮಗೆ ಪರಿಚಯಿಸುತ್ತಿದ್ದೇನೆ! ನಾನು ರಾಘವ ಮಧುವಂತಿಯ ಪ್ರೇಮಿ, ಅವಳು ನನ್ನರ್ಧಾಂಗಿ ಮಧುವಂತಿ, ಇವಳು ನಮ್ಮಿಬ್ಬರ ಪ್ರೀತಿಯ ಬಿಂದು ಶಾರ್ವಾರಿ!

- ಪ್ರಸಾದ್.ಡಿ.ವಿ.