ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Sunday, 23 November 2014

ಅವಳ ಧ್ಯಾನ!


ಈ ಕ್ಷಣಕೆ ನಾನು ನೀನಾಗಿ
ಬಿಡಬೇಕೆಂಬ
ಖಾಸಗಿ ಯೋಚನೆಯೊಂದು
ಎದೆಯ ಬಾಣಲೆಯೊಳಗೆ ಬಿದ್ದು
ಕುದಿಯುತ್ತದೆ,
ಮೇಲೆತ್ತಲು ಬರುವ
ನಿನ್ನ ಕೈಯ ಬಿಸಿ ಸ್ಪರ್ಶಕೆ
ಕಾದೇ ಕಾಯುತ್ತದೆ,
ಕನಸುಗಳು ಜಹಂಗೀರು ಕರಿದರೆ
ನಾಲಿಗೆಗೆ ಸಿಹಿ ಸಕ್ಕರೆ!

ನನ್ನ ಕಣ್ಣೋಟಗಳೋ
ನಿನ್ನ ಕುಡಿ ಹುಬ್ಬ ಮೇಲೆ ಕುಣಿದು,
ನೊಸಲ ಬಿಂದಿಯ ಮೇಲೇರಿ
ಮುಂಗುರುಳಿಳಿಜಾರಲಿ ಜಾರಿ,
ನನ್ನ ನೆನಪಿಗೆ ಕೆಂಪೇರಿದ
ನಿನ್ನ ತಂಟ ಕೆನ್ನೆಯ ಮೇಲೆ
ಗುಲಾಬಿ ವರ್ಣ ಕಲೆಸುತ್ತದೆ,
’ಜಾಸ್ತಿ ನಗಬೇಡ ಕಣೇ,
ಕೆನ್ನೆಗಳಿಗೊಳಿತಲ್ಲ’ವೆಂಬ
ನನ್ನೆಚ್ಚರಿಕೆಯೊಳಗೆ
ಸೇಬು ಕಚ್ಚುವ ಆಸೆಯೊಂದನು
ಬೆಚ್ಚಗೆ ತೂಗಿ ಮಲಗಿಸಿದೆ!

ಕಣ್ಣ ಕಾಡಿಗೆಯ ಗೆರೆ ತೀಡಿ
ಗಲ್ಲಕ್ಕೊಂದು ದೃಷ್ಟಿಬೊಟ್ಟು,
ನಿನ್ನ ಐ ಲೈನರುಗಳಿಗಿಂತ
ಚೆಂದದ ಕುಸುರಿ,
ಎದೆಯಾಳದ ಕಣ್ಣ ಕುಂಚ
ಒಲವೆಂಬ ಮಸಿಗದ್ದಿ
ನೀನೆಂಬ ಚಿತ್ರವಾಗಿದೆ,
ನಿನ್ನನೆಷ್ಟೇ
ಕನಸಿ, ನೆನೆಸಿದರೂ
ತೀರದ ಹಸಿವೊಂದು ವಿಚಿತ್ರವಾಗಿದೆ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

ಲಾಲಿ ಹಾಡು!


ಚೆಂದಾನೆ ಚಂದ್ರಮ
ಕಣ್ಣೊಳಗೆ ತುಂಬಲಿ,
ಕಣ್ಮುಚ್ಚಿ ಮಲಗೆ ಚಿನ್ನಾರಿ,
ಬೆಳಕಿನ ಕಂಬಳಿ
ಹೊದ್ಕೊಂಡು ಬರ್ತಾವೆ,
ಸುಖದ ಸಿಂಪಡಿಕೆ
ಹಗಲುಗಳ ಬೆನ್ನೇರಿ...

ಒದ್ದೆಯಾದ ಕರ್ಚೀಫು,
ಹೊದೆಯದ ಕಂಬಳಿ
ಸಾಲ ಕೇಳುವವು ಜೋಕೆ,
ತಿಳಿಗೊಳದ ಬನದೊಳಗೆ,
ಉರಿವಂಥ ಉರಿಯೇಕೆ?
ಕಾಲ ಕಳಿತಾವೆ, ಮಳೆ ಬರುತಾವೆ,
ನಗುವೊಂದು ಮೊಗವರಳಲು ಸಾಕೆ,
ಮತ್ತೇನು ಬೇಕೆ?!

ಕಣ್ಮುಚ್ಚಿ ಮಲಗು ಜೋಜೋಜೋ,
ಆಗಸದ ಜೋಲಿ ಜೋಜೋಜೋ..

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Saturday, 18 October 2014

ಕತ್ತಲಿನ ಕವಿತೆ!


ನಿನ್ನೊಲವಿನ
ದಿವಿನಾದನುಭೂತಿಗಳು
ನನ್ನೆದೆಯನು ಹದವಾಗಿ
ಬೇಯಿಸಲು,
ಹಸಿ ಸೌದೆಯ ಬಿಸಿ ಶಾಖಕೆ
ಕಣ್ಣು ಪಸೆಯಾಡಿ
ಮತ್ತೆ ಮತ್ತೆ ನನ್ನ ಸಾವು,
ಒಲವ ಘೋರಿಯ ಮೇಲೆ
ನನ್ಹೆಸರ ಕೆತ್ತಿಟ್ಟ
ನಿನ್ನ ನುಣುಪು ಕೈ ರೇಖೆಗಳು
ನೆನಪಾಗಲು
ಮತ್ತೆ ಮರು ಹುಟ್ಟು, ಹೊತ್ತಿದ್ದೇನೆ!

ಎದುರಿಗೆ ಕೈ ಕೈ ಬೆಸೆದು
ನಡೆವ ಒಲವ ಜೋಡಿಗಳ ನೋಡಿ,
ಹಿಂದೊಮ್ಮೆ ನಾನೂ
ಒಲವ ಘಮಕ್ಕೆ ಅರಳಿಕೊಳ್ಳುವ
ದಿನಗಳ ನೆನಪು;
ಕತ್ತಲ ರಾತ್ರಿಗಳು ಕಾದ ಹೆಂಚು,
"ನಿಂಗೊತ್ತಲ್ಲ? ನಂಗೆ ಕತ್ತಲಂದ್ರೆ ಭಯ?"
ನೀ ಉಸುರಿದ್ದು ನನ್ನೆದೆಗಂಟಿ
ರಕ್ತದೊಂದಿಗೆ ಕುದ್ದ
ಕಮಟು ಕಮಟಾಗುತ್ತದೆ,
ಪ್ರೀತಿ ಉಳಿಸಿಕೊಳ್ಳಲಾಗದ ಅಸಹಾಯಕತೆ,
ಸಮಾಜದ ಮೇಲಿನ ನಂಬಿಕೆ
ಉರಿದು ಹೋಗುವುದು
ಸಣ್ಣ ಸಮಾಧಾನ ಕೊಡುತ್ತದೆ!

ಈ ರಾತ್ರಿಗಳು ಮಾತ್ರ
ಒಂದು ಸಮವಿರುವುದಿಲ್ಲ ನೋಡು,
ಮೈಯ ಕಣಕಣವೂ ಹುರಿಗೊಂಡು,
ರಕ್ತ ನಾಳಗಳಲಿ ಪಟಪಟ ಮಿಡಿತ,
ನೆರವೇರದ ಪೋಲಿ ಆಸೆಯೊಂದು
ಎದೆಯೊಳಗೆ ಭಗ್ಗನೆ
ಹೊತ್ತಿಕೊಂಡು ಉರಿದು,
ನಾ ಸ್ಖಲನಗೊಳ್ಳದೆ ಮಡುಗಟ್ಟುವಾಗ
ನಿನ್ನ ಮೈಥುನದ ಸವಿಯುಂಡ
ನರಳಿಕೆಗಳಿಗೆ
ಕನ್ನಡಿ ಸಾಕ್ಷಿಯಾಗಿ ನಗುತ್ತದೆ,
ನಾನು ಅಸಹನೆಯಿಂದ ಮುಖ ಮುಚ್ಚಲು,
ಕತ್ತಲಿನ ಕವಿತೆಯೊಂದು
ಆಹಾರ ಸಿಕ್ಕಂತಾಗಿ ಮಿಸುಕಾಡುತ್ತದೆ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Saturday, 4 October 2014

ಪ್ರೇಮದಮಲು!



ಬೆಳದಿಂಗಳ ಕೊಳದ ನಡುವೆ ನಿಂತಿದ್ದೇನೆಂದು ಭಾಸವಾಗುತ್ತದೆ, ಎದುರಿಗೆ ಅವಳಿದ್ದಾಳೆ. ರೂಪವತಿ ಚೆಲುವೆ. ಅವಳ ಬಳಿ ಸುಳಿದಾಡುವ ಗಾಳಿಗೇ ಚಂದನದ ಗಂಧ ತೀಡಿದೆಯೇನೋ! ಮೈಮರೆತು ಮತ್ತನಂತಾಗುವ ನಾನು ಆಳವಾದ ಪ್ರೇಮದ ಸೆಲೆಯೊಳಗೆ ಸಿಲುಕಿದ್ದೇನೆ. ಎಷ್ಟೆಲ್ಲಾ ಹೇಳಬೇಕೆಂದು ಚಡಪಡಿಸುತ್ತೇನೆ, ಸಾಧ್ಯವೇ ಆಗುವುದಿಲ್ಲ! ಮಾತಾಗಿಬಿಡುವ ಮೌನಕ್ಕೆ ಕಾಯುತ್ತೇನೆ. ಹೇಗೋ ಕಷ್ಟಪಟ್ಟು ಹೇಳಬೇಕಾದ್ದನು ಅವಳೆದೆಗೆ ದಾಟಿಸಲು ಬಾಯ್ದೆರೆದೆ

"ವಿನೂ, ನಿನ್ನಲ್ಲೇನೋ ಸಮ್ಮೋಹಿನಿ ವಿದ್ಯೆಯಿರಬಹುದು. ಕ್ಷಣ ಕ್ಷಣಕೂ ನಾನು ನೀನಾಗಿಬಿಡುವ ತವಕ, ನಾವಾಗಿಬಿಡುವ ಕಾತರ. ನೀನು ನಂಬುವುದಿಲ್ಲ, ಯಾರ್ಯಾರ ಕಣ್ಣಲ್ಲೋ ನೀನು ಕಾಣುವುದಿದೆ, ಥರದ ಭ್ರಮೆಗೆ ಅದೇನೆನ್ನುವರೋ? ನನಗೆ ಮಾತ್ರ ತೀರದ ಚಡಪಡಿಕೆ! ಒಮ್ಮೆ ಕನ್ನಡಿಯ ಮುಂದೆ ನಿಲ್ಲುತ್ತೇನೆ, ಕನ್ನಡಿಯೊಳಗಿನ ನನ್ನ  ಪ್ರತಿಫಲನದ ಕಣ್ಣೊಳಗೂ ನೀನೇ ಕಾಣುವಾಗ ನಾನದೆಷ್ಟು ಹಾಳಾಗಿರಬೇಡ? ನೀನೇ ಊಹಿಸು! ನಿನ್ನ ಪ್ರೇಮದಮಲೊಳಗೆ ಮುಳುಗೇಳುವ, ಹುಚ್ಚು ಹೊಳೆಯೊಳಗೆ ತೇಲಿ ಹೋಗುವ ಧ್ಯಾನ ನನಗೆ. ನನ್ನ ಮನಸು, ಭಾವ ಮತ್ತು ಎಲ್ಲವನ್ನೂ ನಿನ್ನೊಂದು ನೋಟ, ಮಾತು, ಸ್ಪರ್ಶ, ಹಾವಭಾವಗಳು ನಿಯಂತ್ರಿಸುತ್ತವೆ. ನಾನು ನನ್ನ ನಿಯಂತ್ರಣದಲ್ಲೇ ಇಲ್ಲ, ಎಂಥ ತಮಾಶೆ ನೋಡು? ಮೋಹದ ಕಾಯಿಲೆಗೆ ನಿನ್ನ ಒಪ್ಪಿಗೆಯೊಂದೇ ದಿವ್ಯೌಷಧವೆಂದು ಮನವರಿಕೆಯಾಗಿದೆ. ನನ್ನನ್ನು ಬಲೆಯಿಂದ ಪಾರು ಮಾಡ್ತೀಯಾ?" ನನ್ನೆಲ್ಲಾ ಮಾತುಗಾರಿಕೆಯನ್ನು ಉಪಯೋಗಿಸಿ ಇಷ್ಟು ಹೇಳಿ ಮುಗಿಸಿದ್ದೆ.

ನನ್ನ ಮಾತು ಕೇಳಿ ಅಮಾಯಕಳಂತೆ ನಕ್ಕ ಅವಳು, "ಮನು ನೀ ಏನು ಹೇಳಿದ್ಯೋ ಒಂದೂ ಅರ್ಥ ಆಗ್ಲಿಲ್ಲ. ನೀ ಯಾವ ಭಾಷೆಲೀ ಮಾತಾಡ್ತೀಯೋ?!" ಎನ್ನುತ್ತಾ ಪಿಳಿ ಪಿಳಿ ಕಣ್ಣು ಬಿಟ್ಟು, ಹುಬ್ಬೇರಿಸುತ್ತಾಳೆ.

ಅವಳ ರೀತಿಯ ಪ್ರತಿಕ್ರಿಯೆ ಕಂಡು ಕಂಗಾಲಾಗುವ ನಾನು, ಕಳವಳದಿಂದ ಅವಳ ಮುಖವನ್ನೇ ನೋಡುತ್ತೇನೆ..

ನಿಧಾನವಾಗಿ ನನ್ನ ಬಳಿ ಬರುವ ಅವಳು, ಕಂಗಾಲಾದ ನನ್ನ ಕಂಗಳಲ್ಲಿ ಅವಳ ನೋಟವಿಟ್ಟು, ನನ್ನ ಕೆಳ ತುಟಿಯ ಮೇಲೆ ನವಿರಾಗಿ ಚುಂಬಿಸುತ್ತಾಳೆ. ಕರೆಂಟು ಹೊಡೆದ ಕಾಗೆಯಂತಾಗುವ ನಾನು ಪಿಳಿ ಪಿಳಿ ಕಣ್ಣು ಬಿಟ್ಟು ಅವಳನ್ನೇ ನೋಡುತ್ತೇನೆ. ಅವಳು ಮಾತ್ರ ಎಂದಿನಂತೆ ತುಂಟ ನಗವಾಗುತ್ತಾಳೆ!

ಹೆಣ್ಣು ಹೇಗೆಲ್ಲಾ ನಮ್ಮ ಜೀವನದೊಂದಿಗೆ ಹಾಸು ಹೊಕ್ಕಾಗಿದ್ದಾಳೆ ಕರುಣೆಯಾಗಿ, ಮಮತೆಯಾಗಿ, ಪ್ರೀತಿಯಾಗಿ, ಅಕ್ಕರೆಯಾಗಿ, ಒಲವಾಗಿ, ಪ್ರೇಮವಾಗಿ... ಆದರೆ ನಾವೆಷ್ಟೇ ತಪಸ್ಸು ಮಾಡಿದರೂ, ಅವಳೊಳಗೆ ಸಿಗದೊಂದು ಮರೀಚಿಕೆಯಿದೆ, ಅದರ ಚಲನ ವಲನಗಳರಿವುದು ಸಾಧ್ಯವೇ ಆಗುವುದಿಲ್ಲ. ಯೋಚನಾ ಲಹರಿಯೊಳಗೆ ಸಿಕ್ಕುತ್ತೇನೆ...

ಬಾಗಿಲು ಬಡಿಯುವ ಶಬ್ದ, ದಡಕ್ಕೆನೇಳುವ ನನಗೆ ಮರೆಯದ ಸವಿ ನಿದ್ರೆ ಕಳೆದು ಹೋಗಿದ್ದು ಗೊತ್ತೇ ಆಗುವುದಿಲ್ಲ!

"ಅರೇ ಇದು ಕನಸಾ?" ತಲೆ ಕೊಡವಿಕೊಳ್ಳುತ್ತೇನೆ.

ಹಾಲ್ನಲ್ಲಿ ಕೆಂಪು ಬಣ್ಣದ ಸೆಲ್ವಾರ್ನಲ್ಲಿ ಮುದ್ದಾಗಿ ಸಿಂಗರಿಸಿಕೊಂಡು ಬಂದಿರುವ ವಿನೂ ನಿಂತಿದ್ದಾಳೆ. ಈಗಷ್ಟೇ ಏಳುತ್ತಿದ್ದ ನನ್ನ ಕಂಡು,
"ಹೇ ಕೋತಿ, ಈಗ ಏಳ್ತಿದ್ದೀಯೇನೋ? ಎಲ್ಲೋ ಕರೆದುಕೊಂಡು ಹೋಗ್ತೀನಿ ಬೇಗ ಬಾ ಅಂದಿದ್ದೆ?" ಎಂದು ಕೋಪ ನಟಿಸುವಳು.

"ಈಗ ರೆಡಿಯಾಗಿ ಬರ್ತೀನಿ, ಪೇಪರ್ ಓದ್ತಿರು" ಎಂದವನೆ, ಕಡೆ ತಿರುಗಬೇಕು, ಅವಳ ತುಟಿ ಮೇಲಿನ ಕೆಂಪು ಲಿಪ್'ಸ್ಟಿಕ್ ಪಳ ಪಳ ಎಂದು ಹೊಳೆಯುತ್ತದೆ.

--> ಮಂಜಿನ ಹನಿ


ಕಲೆ ಮತ್ತು ಧ್ವನಿ: ನಮ್ರತ ಸಿ ಸ್ವಾಮಿ

Wednesday, 1 October 2014

ಹೇ ಬಾಪು...


ಮಹಾತ್ಮನೆನಿಸಿಕೊಳ್ಳುವ ಗಾಂಧಿ,
ಆಗಾಗ ಮನದ ಬಾಗಿಲವರೆಗೆ
ಬರುತ್ತಾರೆ, ಕದ ಬಡಿಯುತ್ತಾರೆ,
ಬಾಗಿಲ ಮುಂದಿಳಿಬಿಟ್ಟ
ಬಿಳಿ ಪರದೆಯ ಕಂಡು ಪುಳಕಿತರಾದಂತೆ
ತೋರುತ್ತಾರೆ...
ತಾನು ಬಿತ್ತಿ ಹೋದ ಶಾಂತಿ ಮಂತ್ರ
ಸಫಲವಾಗಿದೆ ಎಂದವರಿಗೆ ಹಿಗ್ಗೋ ಹಿಗ್ಗೋ..

ಪರದೆಯೊಳಗೆ ಸಮಾನತೆಗೆ ವಿಷವಿಕ್ಕಿ,
ಜನರ ಹುಟ್ಟಿಗೇ ಹಿಂದೂ, ಮುಸ್ಲೀಂ, ಕ್ರೈಸ್ತನೆಂಬ
ನಂಜು ಬೆರೆಸಿ, ಪ್ರಶಾಂತತೆ ಕಾಪಾಡಲಾಗಿದೆ,
ಗಣೇಶ ಚತುರ್ಥಿಗೆ ಗೋಲಿಬಾರ್ ಆದರೆ,
ರಂಜಾನ್ ಗೆ ಕರ್ಫ್ಯೂ ಹೇರಲಾಗಿದೆ,
ಚರ್ಚ್ ಗೆ ಕಲ್ಲು ಹೊಡೆದು ಜಕಂ ಮಾಡಲಾಗಿದೆ,
ಇಲ್ಲೇ ಕೇಳುತ್ತದೆ ಕೇಳಿಸಿಕೊಳ್ಳಿ...
"ಸರ್ವಜನಾಂಗದ ಶಾಂತಿಯ ತೋಟ.."
ಅದನೇ ಕೇಳಿಸಿಕೊಳ್ಳುವ ಗಾಂಧಿ
ತನ್ನ ಎದೆಯುಬ್ಬಿಸಿ ಹೆಮ್ಮೆಯಾಗುತ್ತಾರೆ!

ಮೇಲ್ನೋಟಕ್ಕೆ ವೈಭವದ ಸೋಗು ಹೊದ್ದ
ಮನದೊಳಗೆ ಬಿಲ ಕೊರೆದು
ಕನ್ನ ಹಾಕುವ ಹೆಗ್ಗಣಗಳಿವೆ,
ಹೇ ಬಾಪು ನೋಡು,
ನೀ ಕೊಡಿಸಿದ ಸ್ವಾತಂತ್ರ್ಯ ಇವರಿಗೆಷ್ಟು ಪ್ರಯೋಜನಕಾರಿ?
ದುಡ್ಡನ್ನೇ ತಿಂದುಂಡು ಗುಡಾಣ ಬೆಳೆಯುತ್ತದೆ,
ಕೆಲವರು ಪೇಚಾಡಿಕೊಳ್ಳುತ್ತಾರೆ,
ಗಾಂಧಿ ಇನ್ನೂ ತನ್ಹಳೇ ಮಂತ್ರವನ್ನೇ ಪಠಿಸುತ್ತಾರೆ,
"ಈಶ್ವರ ಅಲ್ಲಾ ತೇರೇ ನಾಮ್,
ಸಬ್ ಕೋ ಸನ್ಮತಿ ದೇ ಭಗವಾನ್..."

ಪಾಪ ವಯಸ್ಸಾದ ಗಾಂಧಿ
ಇನ್ನಷ್ಟು ಹೊತ್ತು ತಮ್ಮ ಕಾತರದ
ಮೂಟೆಯನ್ಹೊರಲಾಗದೆ,
ಒಳ ಪ್ರವೇಶ ಮಾಡಲು ಉತ್ಸುಕರಾಗಿ
ಪರದೆ ಸರಿಸಿ ನೋಡುತ್ತಾರೆ,
ಚಿಲಕವಿರದ ಬಾಗಿಲ ಮೇಲೆ
"ನಾಳೆ ಬಾ" ಎಂದು ಬರೆಯಲಾಗಿದೆ,
ನಿರೀಕ್ಷೆಗಳ ಭಾರಕ್ಕೆ ಕುಗ್ಗಿಹೋದ ಗಾಂಧಿ,
"ಹೇ ರಾಮ್" ಎನ್ನುತ್ತಾ ಕುಸಿದು ಬಿದ್ದವರು
ಸತ್ತೇ ಹೋದರೆ?!
ಭ್ರಮೆಯಾವರಿಸಿಬಿಟ್ಟಿದೆ!!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Thursday, 11 September 2014

ವಿರಹಿಯ ಸಾಲುಗಳು!


ಮಧುಶಾಲೆಯ
ಮೂಲೆಕೊನೆಯ ಟೇಬಲ್ಲೊಂದರಲಿ
ಕುಡಿದು ಬಿದ್ದವನು
ಸತ್ತುಹೋಗಿ ವರ್ಷಗಳೇ ಕಳೆದಿವೆ,
ಕುಯ್ಯದೆ, ಕತ್ತರಿಸದೆ
ಅವನ ಹೃದಯದ ಬಿಸಿರಕ್ತ ಕುಡಿದ
ನಿನ್ನ ಕಣ್ಣೋಟಗಳಿಗೆ
ತೃಪ್ತಿಯಾಗಿರಬಹುದಲ್ಲವೇ ಹುಡುಗಿ?
ನಿನಗೆ ನೆನಪಿರಬಹುದು, ಇಲ್ಲದೆಯೂ ಇರಬಹುದು!

ಎದುರು ಸಿಕ್ಕರೂ ಪರಿಚಯದ ನಗೆ ನಕ್ಕು
ಕೊಂದೇ ಬಿಡಬೇಡ ಪಾಪ,
ಅವನ ಸ್ಮೃತಿ, ವಿಸ್ಮೃತಿಯ ಪ್ರಜ್ಞೆಗಳೆಲ್ಲ
ನೀ ಬಿಟ್ಟು ಹೋದಷ್ಟೇ ಹಿಂದಿನವು,
ಹೆಸರು ಕರೆದಾನು ಜೋಕೆ?!
ತಲೆ ತಪ್ಪಿಸಿಕೊಂಡೋಡಿ ಬಿಡು,
ನಿನಗೆಂದೇ ಇಟ್ಟು ಕರೆದ ಹೆಸರುಗಳನ್ನು
ಕರೆದರಂತೂ,
ನಿನ್ನ ಕೊಂದ ಪಾಪ ತಟ್ಟುತ್ತದೆ,
ಮೊದಲೇ ಪ್ರೇಮಿಸಿ ಪಾಪಿಯಾಗಿದ್ದಾನೆ,
ಉಸಿರಾಡಿಕೊಂಡಿರಲಿ ಬಿಡು!

ಸದ್ದುಗಳಬ್ಬರದ ಸಂತೆಯಲಿ
ಕಳೆದುಹೋಗುವ ಒಂಟಿಪಯಣಿಗನಿಗೆ
ಶುದ್ಧ ಮೌನವೆಂದರೆ ತೀರದ ಅಸಹ್ಯ!
ನಿನ್ನ ನೆನಪುಗಳಾವಳಿಯಲಿ
ಶುದ್ಧ ಪಾಪಿಯಾಗುವವನು,
ನಕ್ಕಾಗ ಮುದ್ದು ಪಾಪುವಾಗುತ್ತಾನೆ,
ನೀನಿಟ್ಟ ಆಣೆ, ಪ್ರಮಾಣಗಳನು
ಮರೆತಂತೆ ಮಾಡಿ ಕ್ಷಮಿಸುವಾಗ
ನೋವುಗಳನು ನುಂಗಿ ನಡೆದ
ಬುದ್ಧನಾಗುತ್ತಾನೆ,
ಆದರೆ ವಿಪರ್ಯಾಸ ನೋಡು,
ಕಂಡವರಿಗೆ ಕುಡುಕನಾಗಿದ್ದಾನೆ,
ಬರಿಯ ಕುಡುಕನಾಗಿದ್ದಾನೆ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Tuesday, 2 September 2014

ನಮ್ಮೂರಿನ ರಸ್ತೆಗಳಿಗೆ ಬಸ್ಸು ಬರಬೇಕು!


ನಮ್ಮೂರಿನ ರಸ್ತೆಗಳಿಗೆ
ಬಸ್ಸು ಬರುತ್ತದೆ,
ಮುಂಚೆಯೆಲ್ಲಾ ಕೆಂಪು ಬಣ್ಣದ
ಲೈಫ್ಬಾಯ್ ಸೋಪಿನ ಬಸ್ಸುಗಳಿಗೆ
ಕಾದಂತಹ ಜನರ ಚಡಪಡಿಕೆಯ ನೋಟಗಳು,
ಈಗಲೂ ನಮ್ಮೂರಿನ ಲಡ್ಡು ಬಿದ್ದ ರಸ್ತೆಗಳ ಮೇಲೆ
ಆಸೆಗಳನ್ನು ಹೊದ್ದು ಮಲಗಿವೆ...
ಅವು ಒಮ್ಮೆಯೂ ನಿದ್ರೆ ಮಾಡಿದ್ದನ್ನು ನೋಡಿಲ್ಲ,
ನಿದ್ರಾಹೀನ ಆಸೆಗಳು, ಅರೆತುಂಬಿದ ಹೊಟ್ಟೆಗಳು,
ಇಲ್ಲಿ ಸರ್ವೇ ಸಾಮಾನ್ಯ, ಸಿಕ್ಕುತ್ತವೆ...

ಮೇಲೆ ನೋಡಲೊಂದೇ ಊರು,
ಎಣಿಸಿದರೂ ಇನ್ನೂರು ಒಕ್ಕಲಿಲ್ಲ,
ಮಾರಿ-ಮಸಣಿಯರ ಹಬ್ಬಗಳೂ ಒಟ್ಟಿಗೇ ಆಗುತ್ತವೆ,
ಸಮಾನತೆ ಸಮಾನವಾಗಿ ಹಂಚಿಹೋಗಿದೆ,
ಹೊಲಗೇರಿಗೆ ಹೊಲಗೇರಿ ಎನ್ನುವುದಿಲ್ಲ,
ಒಕ್ಕಲುಗೇರಿಗೆ ಒಕ್ಕಲುಗೇರಿಯೆನ್ನುತ್ತಾರೆ,
ಆ ಜನಗಳಿಗೆ ಇವರ ಪಡಸಾಲೆಗಷ್ಟೇ ಪ್ರವೇಶ,
ಬೋರ್ಡು ಬರೆಸಲಾಗಿಲ್ಲ,
ಆದರೂ ಅಧಿಕೃತ ಪ್ರವೇಶ ನಿಷಿದ್ಧ,
ತುಟಿ ಬಿಚ್ಚುವಂತಿಲ್ಲ, ಬಾಯಿ ಹೊಲೆಯಲಾಗಿದೆ,
ಕೆಲವರಂತೂ ಸಮಾನತೆಯ ಕನಸು ಕಾಣುವುದು ಬಿಟ್ಟಿಲ್ಲ,
ಆದರೂ ಹೂವು ಅರಳಿಲ್ಲ...

ಬೀಳುವ ಕನಸುಗಳಿಗೆ,
ಸಾಮಾರ್ಥ್ಯಕ್ಕೆ ತಕ್ಕಂತೆಯೇ ಬೀಳೆಂದರೆ ಆದೀತೆ?
ಬಡವ, ಬಲ್ಲಿದರೆನ್ನದೆ
ಕನಸುಗಳನು ಬೀಳಿಸಿಕೊಳ್ಳುವ ಜನರನ್ನು ಕಂಡಿದ್ದೇನೆ,
ಅವರ ಕನಸುಗಳಲ್ಲಿ,
ಇರುವ ಸೋರುವ ಹೆಂಚಿನ ಮನೆಗಳು
ಆರ್ಸೀಸಿ ಮನೆಗಳಾಗುತ್ತವೆ,
ಬೆಳೆದ ಮಗಳಿಗೆ ಸಾಲವಿಲ್ಲದೆ ಮದುವೆಯಾಗುತ್ತದೆ,
ಮಗ ಕುಡಿತ ಬಿಟ್ಟು ಗೇಯುವುದಕ್ಕೆ ನಿಲ್ಲುತ್ತಾನೆ,
ಗೇಣುದ್ದದ ನೆಲ ಬಂಗಾರ ಬೆಳೆಯುತ್ತದೆ,
ಜನ ಹುಟ್ಟಿನೊಂದಿಗೆ ಅಂಟಿಸಿಕೊಳ್ಳುವ
ರಾಜಕೀಯ ಬಿಟ್ಟುಬಿಡುತ್ತಾರೆ, ಹೀಗೆ ನೂರಾರು...

ಈ ಎಲ್ಲಾ ಆಸೆ, ಕನಸುಗಳನ್ನು ಹೊತ್ತು,
ನಮ್ಮೂರಿಗೆ ಬಸ್ಸು ಬರುತ್ತದೆ,
ಇದುವರೆಗೂ ಊರಿಗೆ ಮೂರು ಕಿ.ಮೀ. ದೂರದಲ್ಲಿ
ತಲುಪಲಾರದ ದಾಹ ಉಳಿಸಿ
ನಿಲ್ಲುವ ಬಸ್ಸು, ಊರೊಳಗೆ ಬರುತ್ತದೆ,
ಬಂದೇ ಬಿಡುತ್ತದೆ ಎಂಬ ಕನಸು ಹೊತ್ತವರು ಕಾಯತ್ತಲೇ ಇದ್ದಾರೆ,
ಮುಂದೆ ಎಂದಾದರೂ ಬಸ್ಸು ಬರಬೇಕು,
ಆದರೆ ಈ ಕನಸುಗಳು ಮತ್ತು ಆಸೆಗಳಿಗೆ
ನಿಲ್ದಾಣ ಮಾತ್ರ ಇಲ್ಲೆಲ್ಲಿದೆಯೋ? ಕಾಯಬೇಕು...

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ